ಸಂಪೂರ್ಣ ರಾಮಾಯಣ ಆಧರಿಸಿ 'ಆದಿಪುರುಷ್' ಸೀಕ್ವೆಲ್? ಪ್ರಭಾಸ್ ಹೇಳಿದ್ದೇನು?
ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾ ಬಾಕ್ಸಾಫೀಸ್ನಲ್ಲಿ ತಿಣುಕಾಡುವಂತಾಗಿದೆ. ನೆಗೆಟಿವ್ ಟಾಕ್ ಹೆಚ್ಚಾಗಿ ಕಲೆಕ್ಷನ್ ಡಲ್ಲಾಗಿದೆ. ಟಿಕೆಟ್ ದರ ಇಳಿಸಿದರೂ ದೊಡ್ಡ ಪ್ರಮಾಣದಲ್ಲಿ ಲಾಭ ಏನು ಆಗಲಿಲ್ಲ. ಪರಿಸ್ಥಿತಿ ನೋಡುತ್ತಿದ್ದರೆ ನಿರ್ಮಾಪಕರಿಗೆ ಚಿತ್ರ ಭಾರೀ ನಷ್ಟ ತಂದೊಡ್ಡುವ ಸುಳಿವು ಸಿಗುತ್ತಿದೆ. ಇದೆಲ್ಲದರ ನಡುವೆ ಯಂಗ್ ರೆಬಲ್ ಸ್ಟಾರ್ ಕೈಗೊಂಡ ಅದೊಂದು ನಿರ್ಧಾರದಿಂದ ಚಿತ್ರತಂಡ ಬಚಾವಾಗಿದೆಯಂತೆ.
ರಿಲೀಸ್ಗೂ ಮೊದಲಿನಿಂದಲೂ 'ಆದಿಪುರುಷ್' ಸಿನಿಮಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಿದೆ. ಸಾಕಷ್ಟು ವಿವಾದ ಹುಟ್ಟಿ ಹಾಕಿತ್ತು. ಇನ್ನು ಸಿನಿಮಾ ರಿಲೀಸ್ ನಂತರ ವಿವಾದ ಮತ್ತಷ್ಟು ತಾರಕಕ್ಕೇರಿತು. ಸಿನಿಮಾ ಬ್ಯಾನ್ ಮಾಡುವಂತೆ ದೆಹಲಿ ಹೈಕೋರ್ಟ್ನಲ್ಲಿ ಪಿಟಿಷನ್ ದಾಖಲಾಗಿದೆ. ಈಗಾಗಲೇ ವರ್ಲ್ಡ್ ವೈಡ್ 400 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದೆ. ಆದರೂ ಬಂಡವಾಳ ಸಂಪೂರ್ಣವಾಗಿ ವಾಪಸ್ ಬಂದಿಲ್ಲ. ಪ್ರೇಕ್ಷಕರು ಸಿನಿಮಾ ನೋಡಲು ಭಾರೀ ನಿರಾಸಕ್ತಿ ತೋರುತ್ತಿರೋದು ಮುಳುವಾಗಿದೆ.

ಟೀಕೆಗಳ ಬಗ್ಗೆ ಪ್ರಭಾಸ್ ಆಗಲಿ ನಿರ್ಮಾಪಕರು, ನಿರ್ದೇಶಕರು ಯಾರೊಬ್ಬರು ಪ್ರತಿಕ್ರಿಯೆ ನೀಡಿಲ್ಲ. ಆದರೆ ಚಿತ್ರದ ಹಿಂದಿ ಸಂಭಾಷಣೆಕಾರ ಮನೋಜ್ ಮುಂತಶೀರ್ ಶುಕ್ಲಾ ಮಾತ್ರ ಮತ್ತಷ್ಟು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆತನಿಗೆ ಬೆದರಿಕೆಗಳು ಶುರುವಾದ ಹಿನ್ನಲೆಯಲ್ಲಿ ಮುಂಬೈ ಪೊಲೀಸರು ಭದ್ರತೆ ನೀಡಿದ್ದಾರೆ. ಇದೆಲ್ಲದರ ನಡುವೆ ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ ಕೇಳಿಬರ್ತಿದೆ.
2 ಭಾಗಗಳಾಗಿ ಸಿನಿಮಾ?
ಭಾರತೀಯ ಚಿತ್ರರಂಗದಲ್ಲೀಗ ಸೀಕ್ವೆಲ್ ಸಿನಿಮಾಗಳ ಟ್ರೆಂಡ್ ನಡೀತಿದೆ. ಅಂದ್ರೆ ಒಂದೇ ಕಥೆಯನ್ನು 2 ಭಾಗಗಳಾಗಿ ಹೇಳುವ ಪ್ರಯತ್ನ. ಅದೃಷ್ಟ ಚೆನ್ನಾಗಿದ್ದರೆ ಒಳ್ಳೆ ಲಾಭ ಮಾಡಬಹುದು. ಬಾಹುಬಲಿ, ಕೆಜಿಎಫ್ ಸಿನಿಮಾಗಳು ಇದೇ ರೀತಿ ಬಾಕ್ಸಾಫೀಸ್ ಕೊಳ್ಳೆ ಹೊಡೆದಿದ್ದವು. ಇದೀಗ 'ಪುಷ್ಪ' ಸಿನಿಮಾ ಕೂಡ ಅದೇ ಹಾದಿಯಲ್ಲಿದೆ. ನಿರ್ದೇಶಕ ಓಂ ರಾವುತ್ 'ಆದಿಪುರುಷ್' ಚಿತ್ರವನ್ನು ಕೂಡ 2 ಭಾಗಗಳಾಗಿ ತೆರೆಗೆ ತರುವ ಮನಸ್ಸು ಮಾಡಿದ್ದರಂತೆ. ಆದರೆ ಅದಕ್ಕೆ ಪ್ರಭಾಸ್ ಮಾತ್ರ ಒಪ್ಪಲಿಲ್ಲ ಎನ್ನಲಾಗುತ್ತಿದೆ.

ಪ್ರಭಾಸ್ ನಿರ್ಧಾರದಿಂದ ಬಚಾವ್?
ರಾಮಾಯಣ ಕಾವ್ಯವನ್ನು ಸಂಪೂರ್ಣವಾಗಿ 2 ಗಂಟೆ ಸಿನಿಮಾದಲ್ಲಿ ಹೇಳಲು ಸಾಧ್ಯವಿಲ್ಲ. ಸೀತಾಪಹರಣ ಪ್ರಸಂಗದಿಂದ ಮುಂದಿನ ಕಥೆಯನ್ನು ಮಾತ್ರ ಚಿತ್ರದಲ್ಲಿ ಹೇಳಲಾಗಿದೆ. ಶೂಟಿಂಗ್ ನಡುವೆ ರನ್ಟೈಮ್ ಜಾಸ್ತಿ ಆಗಿತ್ತಂತೆ. ಹಾಗಾಗಿ ನಿರ್ದೇಶಕ ಓಂ ರಾವುತ್ ಹೋಗಿ ಪ್ರಭಾಸ್ ಬಳಿ ಸೀಕ್ವೆಲ್ ಸಿನಿಮಾ ಐಡಿಯಾ ಕೊಟ್ಟರಂತೆ. ಮತ್ತೊಂದು ತಿಂಗಳು ಕಾಲ್ಶೀಟ್ ಕೊಡಿ ಎಂದರಂತೆ. ಆದರೆ 2 ಭಾಗಗಳಾಗಿ ಮಾಡುವ ಸ್ಟ್ರಾಟಜಿ 'ಆದಿಪುರುಷ್' ಚಿತ್ರಕ್ಕೆ ವರ್ಕ್ ಆಗಲ್ಲ ಎಂದು ಪ್ರಭಾಸ್ ಹೇಳಿದ್ದರಂತೆ. ಇಡೀ ತಂಡವನ್ನು ಒಪ್ಪಿಸಿದರು ಎನ್ನಲಾಗ್ತಿದೆ.
ಭಾರೀ ನಷ್ಟವಾಗುತ್ತಿತ್ತು!
ಒಂದು ವೇಳೆ 'ಆದಿಪುರುಷ್' ಎರಡು ಭಾಗಗಳಾಗಿ ಬಂದಿದ್ದರೆ ಭಾರೀ ನಷ್ಟವನ್ನೇ ಚಿತ್ರತಂಡ ಎದುರಿಸಬೇಕಾಗುತ್ತಿತ್ತು. ಇದಕ್ಕಿಂತಲೂ ಹೆಚ್ಚಿನ ಟೀಕೆ ಶುರುವಾಗುತ್ತಿತ್ತು. ಒಂದು ವೇಳೆ 2 ಭಾಗಗಳಾಗಿ ಸಿನಿಮಾ ಬಂದಿದ್ದರೆ ಫಸ್ಟ್ ಪಾರ್ಟ್ ಫ್ಲಾಪ್ ಆಗಿ ಎರಡನೇ ಭಾಗ ನೋಡಲು ಯಾರು ಥಿಯೇಟರ್ಗೆ ಬರುತ್ತಿರಲಿಲ್ಲ. ಹೆಚ್ಚು ಕಡಿಮೆ 3 ಗಂಟೆಗಳ ಕಾಲಾವಧಿಯ ಸಿನಿಮಾ ಒಂದು ಹಂತಕ್ಕೆ ಈಗ ಪ್ರೇಕ್ಷಕರನ್ನು ರಂಜಿಸಿದೆ. ಆದರೆ 2 ಭಾಗಗಳಾಗಿ ಬಂದಿದ್ದರೆ ಪರಿಸ್ಥಿತಿ ಇನ್ನು ಹೀನಾಯವಾಗಿ ಇರುತ್ತಿತ್ತು ಅನಿಸುತ್ತದೆ.
ವೀಕೆಂಡ್ ಭಾರೀ ಕಲೆಕ್ಷನ್
ಶುಕ್ರವಾರ ಫಸ್ಟ್ ಶೋನಿಂದಲೇ ಸಿನಿಮಾ ನೆಗೆಟಿವ್ ಟಾಕ್ ಪಡೆದುಕೊಂಡಿತ್ತು. ಖುದ್ದು ಪ್ರಭಾಸ್ ಅಭಿಮಾನಿಗಳಿಗೂ ಸಿನಿಮಾ ಇಷ್ಟವಾಗಲಿಲ್ಲ. ಇನ್ನು ರಾಮ, ರಾವಣ, ಹನುಮಂತನ ಪಾತ್ರಗಳನ್ನು ಚಿತ್ರಿಸಿರುವ ಬಗೆ, ಪುಷ್ಪಕ ವಿಮಾನದ ಬದಲು ಬಾವಲಿ ತೋರಿಸಿರುವುದು, ಲಂಕೆಯನ್ನು, ರಾಕ್ಷಸರನ್ನು, ವಾನರರನ್ನು ಚಿತ್ರಿಸಿರುವ ರೀತಿ, ಗ್ರಾಫಿಕ್ಸ್ ಎಲ್ಲದರ ಬಗ್ಗೆಯೂ ಟೀಕೆ ವ್ಯಕ್ತವಾಗುತ್ತಿದೆ. ಆದರೂ ಫಸ್ಟ್ ವೀಕೆಂಡ್ ಸಿನಿಮಾ 300 ಕೋಟಿ ರೂ. ಕಲಕ್ಷನ್ ಮಾಡಿತ್ತು. ಆದರೆ ಸೋಮವಾರದಿಂದ ಕಲೆಕ್ಷನ್ ಡ್ರಾಪ್ ಆಗಲು ಶುರುವಾಯಿತು.


Click it and Unblock the Notifications











