'ಗೇಮ್ ಚೇಂಜರ್' ಚಿತ್ರದಿಂದ ಹೊರ ಬಂದ್ರಾ ನಿರ್ದೇಶಕ ಶಂಕರ್? ದಿಲ್ ರಾಜು ನಿರ್ಧಾರಕ್ಕೆ ಕಾರಣ ಏನು?
ಟಾಲಿವುಡ್ ನಟ ರಾಮ್ಚರಣ್ 'ಗೇಮ್ ಚೇಂಜರ್' ಚಿತ್ರದಲ್ಲಿ ನಟಿಸ್ತಿರೋದು ಗೊತ್ತೇಯಿದೆ. 'ಅನ್ನಿಯನ್', 'ಇಂಡಿಯನ್' ರೀತಿಯ ಹಿಟ್ ಸಿನಿಮಾಗಳನ್ನು ಕೊಟ್ಟ ತಮಿಳು ನಿರ್ದೇಶಕ ಶಂಕರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ದಿಲ್ ರಾಜು ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಆದರೆ ಈಗ ಚಿತ್ರಕ್ಕೆ ಹೊಸ ನಿರ್ದೇಶಕನ ಆಗಮನವಾಗಿದೆ ಎನ್ನುವ ಗುಸುಗುಸು ಶುರುವಾಗಿದೆ.
ಚಿತ್ರವೊಂದಕ್ಕೆ ನಾಯಕ ಬದಲಾಗುವುದು, ನಾಯಕಿ ಬದಲಾಗುವುದು, ನಿರ್ದೇಶಕರೇ ಹೊರ ಬಂದು ಹೊಸ ನಿರ್ದೇಶಕರು ಸಿನಿಮಾ ಪೂರ್ಣಗೊಳಿಸೋದು ಹೊಸ ವಿಚಾರ ಏನಲ್ಲ. ಕೆಲ ಭಿನ್ನಾಭಿಪ್ರಾಯಗಳಿಂದ ಇಂತಹ ಸನ್ನಿವೇಶಗಳು ಎದುರಾಗುತ್ತಿರುತ್ತದೆ. ನಿರ್ದೇಶಕ ಶಂಕರ್ ಸದ್ಯ ಕಮಲ್ ಹಾಸನ್ ನಟನೆಉ ಇಂಡಿಯನ್- 2 ಚಿತ್ರವನ್ನು ಕೂಡ ನಿರ್ದೇಶನ ಮಾಡುತ್ತಿದ್ದಾರೆ. ಏಕಕಾಲಕ್ಕೆ 2 ದೊಡ್ಡ ಸಿನಿಮಾಗಳನ್ನು ಒಬ್ಬರೇ ನಿರ್ದೇಶಕರು ಹ್ಯಾಂಡಲ್ ಮಾಡುತ್ತಿರುವುದು ಇದೇ ಮೊದಲು. ಹಾಗಾಗಿನೇ ಈಗ 'ಗೇಮ್ ಚೇಂಜರ್' ಚಿತ್ರದ ಕೆಲ ಸನ್ನಿವೇಶಗಳನ್ನು ಮತ್ತೊಬ್ಬ ನಿರ್ದೇಶಕ ಚಿತ್ರೀಕರಣ ಮಾಡ್ತಾರೆ ಎನ್ನಲಾಗ್ತಿದೆ.

ಸತತ ಸೋಲುಗಳಿಂದ ಕಂಗೆಟ್ಟ ಶಂಕರ್ ಈ ಬಾರಿ ರಾಮ್ಚರಣ್ ಜೊತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಿಯಾರಾ ಅದ್ವಾನಿ 'ಗೇಮ್ ಚೇಂಜರ್' ಚಿತ್ರದಲ್ಲಿ ನಾಯಕಿಯಾಗಿ ನಟಿಸ್ತಿದ್ದಾರೆ. ಚಿತ್ರದಲ್ಲಿ ರಾಮ್ಚರಣ್ ಡಬಲ್ ರೋಲ್ ಪ್ಲೇ ಮಾಡ್ತಿದ್ದಾರೆ ಎನ್ನಲಾಗ್ತಿದೆ. ಯುವ ನಿರ್ದೇಶಕ ಶೈಲೇಶ್ ಕೊಲನು ಚಿತ್ರದ ಕೆಲ ಸನ್ನಿವೇಶಗಳಿಗೆ ಆಕ್ಷನ್ ಕಟ್ ಹೇಳ್ತಾರಂತೆ. ತೆಲುಗಿನಲ್ಲಿ 'ಹಿಟ್' ಸರಣಿ ಸಿನಿಮಾಗಳನ್ನು ಶೈಲೇಶ್ ಕಟ್ಟಿಕೊಟ್ಟಿದ್ದರು. ಕಾರಣಾಂತರಗಳಿಂದ 'ಗೇಮ್ ಚೇಂಜರ್' ಸಿನಿಮಾ ತಡವಾಗುತ್ತಾ ಬರ್ತಿದೆ.
ವೈಯಕ್ತಿಕ ಹಾಗೂ ವೃತ್ತಿಪರ ಕಾರಣಗಳಿಂದ ರಾಮ್ಚರಣ್ 'ಗೇಮ್ ಚೇಂಜರ್' ಚಿತ್ರದಲ್ಲಿ ನಟಿಸೋಕೆ ಸಮಸ್ಯೆ ಆಗಿತ್ತು. RRR ಪ್ರಮೋಷನ್ಗಾಗಿ ದೇಶ, ವಿದೇಶ ಸುತ್ತಾಡಿದ್ದು, ಜೊತೆಗೆ ಪತ್ನಿ ಉಪಾಸನಾ ಗರ್ಭಿಣಿ ಎಂದು ಗೊತ್ತಾದ ಮೇಲೆ ಫ್ಯಾಮಿಲಿಗೆ ಹೆಚ್ಚಿನ ಸಮಯ ಮೀಸಲಿಟ್ಟರು. ಈ ಎಲ್ಲಾ ಕಾರಣಗಳಿಂದ ಶೂಟಿಂಗ್ ತಡವಾಗುತ್ತಾ ಬಂತು. ಅತ್ತ ನಿಂತು ಹೋಗಿದ್ದ ಕಮಲ್ ಹಾಸನ್ ನಟನೆಯ 'ಇಂಡಿಯನ್'- 2 ಚಿತ್ರವನ್ನು ಶಂಕರ್ ಪುನರಾರಂಭಿಸಿದರು. ಎರಡೂ ಸಿನಿಮಾಗಳನ್ನು ಒಟ್ಟೊಟ್ಟಿಗೆ ಶೂಟಿಂಗ್ ಮಾಡುವುದು ಸಹಜವಾಗಿಯೇ ಕಷ್ಟವಾಗುತ್ತಿದೆ.

ಅಂದಹಾಗೆ ಶೈಲೇಶ್ ಕೊಲನು 'ಗೇಮ್ ಚೇಂಜರ್' ಚಿತ್ರದ ಕೆಲ ಸಣ್ಣ ದೃಶ್ಯಗಳಿಗೆ ಮಾತ್ರ ಆಕ್ಷನ್ ಕಟ್ ಹೇಳ್ತಾರಂತೆ. ರಘುಬಾಬು ಹಾಗೂ ಕೆಲ ಹಾಸ್ಯ ನಟರ ಸನ್ನಿವೇಶಗಳನ್ನು ಮಾತ್ರ ಸೆರೆ ಹಿಡಿಯುಲು ಮುಂದಾಗಿದ್ದಾರೆ. ರಾಮ್ಚರಣ್ ಈ ಚಿತ್ರೀಕರಣದಲ್ಲಿ ಭಾಗವಹಿಸಲ್ಲ ಎನ್ನಲಾಗ್ತಿದೆ. 'ಗೇಮ್ ಚೇಂಜರ್' ಸಿನಿಮಾ ರಿಲೀಸ್ ಡೇಟ್ ಹತ್ತಿರವಾಗುತ್ತಿರುವ ಕಾರಣ ದಿಲ್ ರಾಜು ಈ ನಿರ್ಣಯಕ್ಕೆ ಬಂದಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಸಣ್ಣ ಪುಟ್ಟ ಪ್ಯಾಚ್ ವರ್ಕ್ ಮಾತ್ರ ಶೈಲೇಶ್ ನೋಡಿಕೊಳ್ಳುತ್ತಾರೆ. ಮುಖ್ಯವಾದ ಸನ್ನಿವೇಶಗಳನ್ನು ಶಂಕರ್ ಕೈಗೆತ್ತಿಕೊಳ್ಳುತ್ತಾರೆ.
ಸಮಯದ ಅಭಾವದಿಂದ ನಿರ್ಮಾಪಕ ದಿಲ್ ರಾಜು ಎಲ್ಲರೊಟ್ಟಿಗೂ ಚರ್ಚಿಸಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗ್ತಿದೆ. ಶಂಕರ್ಗೆ 'ಇಂಡಿಯನ್'- 2 ಸಿನಿಮಾ ಕೂಡ ಬಹಳ ಮುಖ್ಯ. ಲೈಕಾ ಸಂಸ್ಥೆ ಈ ಸಿನಿಮಾ ನಿರ್ಮಾಣ ಮಾಡ್ತಿದೆ. ಶೂಟಿಂಗ್ ವೇಳೆ ದುರಂತ ಸಂಭವಿಸಿ ಕೆಲ ದಿನಗಳ ಹಿಂದೆ ಸಿನಿಮಾ ನಿಂತು ಹೋಗಿತ್ತು. ಹಾಗಾಗಿ ಶಂಕರ್ ಆ ಸಿನಿಮಾ ಸಹವಾಸ ಸಾಕು ಎಂದು ರಾಮ್ಚರಣ್ ಜೊತೆ ಸಿನಿಮಾ ಆರಂಭಿಸಿದರು. ಆದರೆ 'ಇಂಡಿಯನ್'- 2 ಚಿತ್ರದ ಎಲ್ಲಾ ಸಮಸ್ಯೆ ಬಗೆಹರಿದ ಮೇಲೆ ಶಂಕರ್ ಸಿನಿಮಾ ನಿರ್ದೇಶನ ಮಾಡಲು ಒಪ್ಪುತ್ತಿಲ್ಲ ಎಂದು ಸಂಸ್ಥೆ ಕೋರ್ಟ್ ಮೆಟ್ಟಿಲೇರಿತ್ತು. ಹಾಗಾಗಿ ಶಂಕರ್ ಮತ್ತೆ ಆ ಸಿನಿಮಾ ಕೈಗೆತ್ತಿಕೊಳ್ಳುವಂತಾಯಿತು.
ಒಂದ್ಕಡೆ ರಾಮ್ಚರಣ್ 'ಗೇಮ್ ಚೇಂಜರ್' ಸಿನಿಮಾ ಮುಗಿಸಿ ಬುಚ್ಚಿಬಾಬು ನಿರ್ದೇಶನದ ಚಿತ್ರ ಆರಂಭಿಸಬೇಕಿದೆ. ಅತ್ತ ಕಮಲ್ ಹಾಸನ್ 'ಇಂಡಿಯನ್- 2' ಮಣಿರತ್ನಂ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಜೊತೆಗೆ ಪ್ರಾಜೆಕ್ಟ್ ಕೆ ಸಿನಿಮಾದಲ್ಲಿ ನಟಿಸ್ತಿದ್ದಾರೆ. ಹಾಗಾಗಿ ಎಲ್ಲರಿಗೂ ಡೇಟ್ಸ್ ಸಮಸ್ಯೆ ಆಗುತ್ತದೆ. ಅಷ್ಟೇ ಅಲ್ಲ ಶೂಟಿಂಗ್ ತಡವಾದಂತೆ 2 ಸಿನಿಮಾಗಳು ಪ್ರೇಕ್ಷಕರ ಮುಂದೆ ಬರುವುದು ತಡವಾಗುತ್ತದೆ. ಅದೇ ಕಾರಣಕ್ಕೆ ಇಂತಾದೊಂದು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ.


Click it and Unblock the Notifications











