Thalaivar 171: ತಲೈವಾ ಎದುರು ಬ್ಲ್ಯಾಕ್ ಕೋಬ್ರಾ: ಸ್ಯಾಂಡಲ್ವುಡ್ ಬಲ 'ಭೀಮ'ನಿಗೆ ಲೋಕೇಶ್ ಕನಕರಾಜ್ ಬುಲಾವ್
'ಜೈಲರ್' ಸಕ್ಸಸ್ ಸಂಭ್ರಮದಲ್ಲೇ ಸೂಪರ್ ಸ್ಟಾರ್ ರಜನಿಕಾಂತ್ ಮತ್ತೆರಡು ಸಿನಿಮಾಗಳು ಬ್ಯುಸಿಯಾಗಿದ್ದಾರೆ. 'ಲಾಲ್ ಸಲಾಂ' ಚಿತ್ರದ ಮುಖ್ಯ ಪಾತ್ರದಲ್ಲಿ ತಲೈವಾ ನಟಿಸಿದ್ದಾರೆ. ಇದೀಗ ಜ್ಞಾನವೇಲ್ ನಿರ್ದೇಶನದ ಚಿತ್ರದ ಚಿತ್ರೀಕರಣವೂ ನಡೀತಿದೆ. ಇದೆಲ್ಲದರ ನಡುವೆ ತಲೈವಾ 171 ಸಿನಿಮಾ ಸುದ್ದಿಯಲ್ಲಿದೆ.
'ಲಿಯೋ' ಸಿನಿಮಾ ಸಕ್ಸಸ್ ಬೆನ್ನಲ್ಲೇ ಲೋಕೇಶ್ ಕನಕರಾಜ್ ಮುಂದಿನ ಸಿನಿಮಾ ಕಡೆ ಮುಖ ಮಾಡುತ್ತಿದ್ದಾರೆ. ಸನ್ ಪಿಕ್ಚರ್ಸ್ ಬ್ಯಾನರ್ನಲ್ಲಿ ತಲೈವಾ 171 ಚಿತ್ರಕ್ಕೆ ಲೋಕೇಶ್ ಆಕ್ಷನ್ ಕಟ್ ಹೇಳುವುದು ಪಕ್ಕಾ ಆಗಿದೆ. ಸಂದರ್ಶನಗಳಲ್ಲಿ ಆ ಸಿನಿಮಾ ಬಗ್ಗೆ ಕಾಲಿವುಡ್ ಕ್ರೇಜಿ ಡೈರೆಕ್ಟರ್ ಮಾತನಾಡುತ್ತಿದ್ದಾರೆ. ಇದೆಲ್ಲದರ ನಡುವೆ ತಲೈವಾ 171 ಚಿತ್ರದಲ್ಲಿ ದುನಿಯಾ ವಿಜಯ್ ನಟಿಸುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ.

ರಜನಿಕಾಂತ್ ಜೊತೆ ದುನಿಯಾ ವಿಜಯ್ ನಟಿಸುತ್ತಾರೆ ಎನ್ನುವ ಸುದ್ದಿ ಕಳೆದೆರಡು ದಿನಗಳಿಂದ ಭಾರೀ ಸದ್ದು ಮಾಡ್ತಿದೆ. ಹೇಳಿ ಕೇಳಿ ಸೂಪರ್ ಸ್ಟಾರ್ ದೊಡ್ಡ ಅಭಿಮಾನಿ ದುನಿಯಾ ವಿಜಯ್. ನೆಚ್ಚಿನ ನಟನ ಸಿನಿಮಾದಲ್ಲಿ ನಟಿಸೋ ಅವಕಾಶ ಸಿಕ್ಕರೆ ಸ್ಯಾಂಡಲ್ವುಡ್ ಬ್ಲ್ಯಾಕ್ ಕೋಬ್ರಾ ಬಿಡೋ ಮಾತೇಯಿಲ್ಲ. ಈಗಾಗಲೇ ಲೋಕೇಶ್ ಕನಕರಾಜ್ ಟೀಂ, ದುನಿಯಾ ವಿಜಯ್ ಅವರನ್ನು ಸಂಪರ್ಕಿಸಿದೆ, ತಲೈವಾ 171 ಚಿತ್ರದಲ್ಲಿ ನಟಿಸೋ ಬಗ್ಗೆ ಚರ್ಚೆ ನಡೆಸಿದೆ ಎನ್ನುವ ಮಾತುಗಳು ಕೇಳಿಬರ್ತಿದೆ.
'ದುನಿಯಾ' ಸಿನಿಮಾ ಬಂದಾಗ ಸ್ವತಃ ರಜನಿಕಾಂತ್, ವಿಜಯ್ ಅವರನ್ನು ಮನೆಗೆ ಕರೆಸಿ ಬೆನ್ನು ತಟ್ಟಿದ್ದರು. ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಇನ್ನು ದುನಿಯಾ ವಿಜಯ್ 'ರಜನಿಕಾಂತ' ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಡಬಲ್ ರೋಲ್ನಲ್ಲಿ ಕಾಣಿಸಿಕೊಂಡು ಪ್ರೇಕ್ಷಕರನ್ನು ರಂಜಿಸಿದ್ದರು. ಮೂರು ವರ್ಷಗಳ ಹಿಂದೆ 'ಸಲಗ' ಚಿತ್ರತಂಡ ಮಧ್ಯರಾತ್ರಿ ರಜನಿಕಾಂತ್ ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿತ್ತು.

ನಟ ದುನಿಯಾ ವಿಜಯ್ಗೆ ಸೂಪರ್ ಸ್ಟಾರ್ ರಜನಿಕಾಂತ್ ಆರಾಧ್ಯ ದೈವ. ಸದ್ಯ ಪ್ಯಾನ್ ಇಂಡಿಯಾ ಟ್ರೆಂಡ್ ನಡೀತಿದೆ. ಬೇರೆ ಬೇರೆ ಭಾಷೆಯ ಸ್ಟಾರ್ ನಟರನ್ನು ಒಂದೇ ಸಿನಿಮಾದಲ್ಲಿ ತೋರಿಸಿ ಪ್ರೇಕ್ಷಕರನ್ನು ಸೆಳೆಯುವ ತಂತ್ರ ನಡೀತಿದೆ. 'ಜೈಲರ್' ಚಿತ್ರದಲ್ಲಿ ಶಿವರಾಜ್ಕುಮಾರ್, ಮೋಹನ್ ಲಾಲ್, ಜಾಕಿಶ್ರಾಫ್ ನಟಿಸಿದ್ದರು. ಅದೇ ರೀತಿ ತಲೈವಾ 171 ಚಿತ್ರದಲ್ಲಿ ಸ್ಟಾರ್ ನಟರನ್ನು ಆಯ್ಕೆ ಮಾಡುವ ಪ್ರಯತ್ನ ನಡೀತಿದೆ.
ತೆಲುಗಿನ 'ವೀರಸಿಂಹ ರೆಡ್ಡಿ' ಚಿತ್ರದಲ್ಲಿ ದುನಿಯಾ ವಿಜಯ್ ನಟಿಸಿದ್ದರು. ಟಾಲಿವುಡ್ನಲ್ಲಿ ವಿಜಯ್ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಕಾಲಿವುಡ್ನಿಂದಲೂ ಸ್ಯಾಂಡಲ್ವುಡ್ 'ಭೀಮ'ನಿಗೆ ಬುಲಾವ್ ಬಂದಿರುವ ಸುದ್ದಿ ಭಾರೀ ಸದ್ದು ಮಾಡ್ತಿದೆ. ಶೀಘ್ರದಲ್ಲೇ ಅಭಿಮಾನಿಗಳಿಗೆ ವಿಜಿ ಸಿಹಿಸುದ್ದಿ ಕೊಡುವ ಸಾಧ್ಯತೆಯಿದೆ. ಮತ್ತೊಂದು ಕಡೆ 'ಭೀಮ' ಸಿನಿಮಾ ಕೆಲಸಗಳಲ್ಲಿ ವಿಜಯ್ ಬ್ಯುಸಿಯಾಗಿದ್ದಾರೆ.
'ಸಲಗ' ಬಳಿಕ ದುನಿಯಾ ವಿಜಯ್ 'ಭೀಮ' ಚಿತ್ರವನ್ನು ನಿರ್ದೇಶಿಸಿ ನಟಿಸಿದ್ದಾರೆ. ಖಡಕ್ ಟೈಟಲ್ನಿಂದ್ಲೇ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸ ಭರದಿಂದ ಸಾಗುತ್ತಿದೆ. ಇದು ಪಕ್ಕಾ ಮಾಸ್ ಮಸಾಲಾ ಸಿನಿಮಾ ಅನ್ನೋದು ಗೊತ್ತಾಗುತ್ತಿದೆ. ಈಗಾಗಲೇ ಚಿತ್ರದ ಸಾಂಗ್ ರಿಲೀಸ್ ಆಗಿ ಕೇಳುಗರನ್ನು ಸೈಕ್ ಮಾಡಿದೆ. ಹೊಸ ವರ್ಷದಲ್ಲಿ 'ಭೀಮ' ಥಿಯೇಟರ್ಗಳಿಗೆ ದಾಂಗುಡಿ ಇಡಲಿದ್ದಾನೆ.
ಒಂದೊಳ್ಳೆ ಸಂದೇಶವನ್ನು 'ಭೀಮ' ಚಿತ್ರದಲ್ಲಿ ದುನಿಯಾ ವಿಜಯ್ ಹೊತ್ತು ಬರುತ್ತಿದ್ದಾರೆ. ಸಾಕಷ್ಟು ಹೊಸ ಕಲಾವಿದರಿಗೆ ಚಿತ್ರದಲ್ಲಿ ಅವಕಾಶ ಕೊಟ್ಟಿದ್ದಾರೆ. 'ಸಲಗ' ಚಿತ್ರಕ್ಕೆ ಕೆಲಸ ಮಾಡಿದ ತಂತ್ರಜ್ಞರೇ 'ಭೀಮ'ನನ್ನು ಹುರಿಗೊಳಿಸುತ್ತಿದ್ದಾರೆ. ಮಾಸ್ತಿ ಸಂಭಾಷಣೆ, ಚರಣ್ ರಾಜ್ ಸಂಗೀತ, ಶಿವಸೇನಾ ಛಾಯಾಗ್ರಹಣ ಮತ್ತು ದೀಪು ಎಸ್. ಕುಮಾರ್ ಸಂಕಲನ ಚಿತ್ರಕ್ಕಿದೆ.


Click it and Unblock the Notifications











