ಉಠಾ ಲೇ ರೇ ಬಾಬಾ ; 'ಹೇರಾಫೇರಿ 3'ಯಿಂದ ಮತ್ತೆ ಹೊರ ಬಂದ್ರಾ ಪರೇಶ್ ರಾವಲ್ ?15% ಬಡ್ಡಿ ಸಮೇತ ಅಡ್ವಾನ್ಸ್ ವಾಪಸ್ ನೀಡಿದ ಬಾಬುರಾವ್?
ಕೆಲವು ಚಿತ್ರಗಳ ಪಾತ್ರಗಳಲ್ಲಿ ಸಮ್ಮೋಹಕ ಶಕ್ತಿ ಇರುತ್ತೆ. ಆ ಪಾತ್ರಗಳು ಪ್ರೇಕ್ಷಕರನ್ನು ಆವರಿಸಿಕೊಂಡಿರುತ್ತವೆ. ಹೃದಯವನ್ನು ಗೆದ್ದಿರುತ್ತವೆ. ವರ್ಷಾನು ವರ್ಷಗಳಾದರೂ ಕೂಡಾ ಆ ಪಾತ್ರಗಳನ್ನು ಜನ ಮರೆಯುವುದಿಲ್ಲ. ಬದಲಿಗೆ ಮತ್ತೆ ಮತ್ತೆ ಅದೇ ಪಾತ್ರದಲ್ಲಿ ಅದೇ ಕಲಾವಿದರನ್ನು ನೋಡಲು ಜನ ಬಯಸುತ್ತಾರೆ. ಚಿತ್ರದ ಮುಂದುವರೆದ ಭಾಗಗಳನ್ನು ಮಾಡಿ ಎನ್ನುವ ಒತ್ತಾಯವನ್ನು ಮಾಡುತ್ತಾರೆ. ಉದಾಹರಣೆಗೆ ''ಹೇರಾ ಫೇರಿ'' ಚಿತ್ರದ ರಾಜು-ಶ್ಯಾಮ್ ಮತ್ತು ಬಾಬು ಭಯ್ಯಾ ಪಾತ್ರಗಳು.
ಹೌದು. ''ಹೇರಾ ಫೇರಿ'' ಚಿತ್ರ ತೆರೆಗೆ ಬಂದು 26 ವರ್ಷಗಳಾಗಿವೆ. ಆದರೆ ಇವತ್ತು ಕೂಡಾ ಅಕ್ಷಯ್ ಕುಮಾರ್.. ಸುನಿಲ್ ಶೆಟ್ಟಿ ಮತ್ತು ಪರೇಶ್ ರಾವಲ್ ನಿರ್ವಹಿಸಿರುವ ಈ ಪಾತ್ರಗಳನ್ನು ಚಿತ್ರ ರಸಿಕರು ಮರೆತಿಲ್ಲ. ಇವತ್ತು ಕೂಡಾ ಈ ಚಿತ್ರ ಕಿರುತೆರೆಯಲ್ಲಿ ಪ್ರಸಾರವಾದಾಗ ಅಥವಾ ಓಟಿಟಿಯಲ್ಲಿ ನೋಡಿದಾಗ ಅನೇಕ ಪ್ರೇಕ್ಷಕರು ಉಳ್ಳಾಡಿ ನಗುತ್ತಾರೆ.

ನಿಜ..''ಹೇರಾ ಫೇರಿ''ಗೆ ಹೋಲಿಸಿದರೆ 2006ರಲ್ಲಿ ತೆರೆಗೆ ಬಂದ ''ಫಿರ್ ಹೇರಾ ಪೇರಿ''ಯ ಕಥೆ ಪೇಲವವಾಗಿತ್ತು. ಆದರೂ ಕೂಡ ಆ ಚಿತ್ರದ ಗೆಲುವಿನ ಹಿಂದೆ ಇದೇ ಪಾತ್ರಗಳ ಮ್ಯಾಜಿಕ್ ಇತ್ತು. ಆದರೆ ಈಗ ಈ ಮ್ಯಾಜಿಕ್ ಮಾಯವಾಗಿದೆ. ಯಾಕೆಂದರೆ ತ್ರಿವಳಿ ಜೋಡಿ ಬೇರ್ಪಟ್ಟಿದೆ ಎನ್ನುವ ಸುದ್ದಿ ಮತ್ತೊಮ್ಮೆ ಹಬ್ಬಿದೆ.
ಹೌದು ಅಸಲಿಗೆ ಭಾರೀ ಜನಾಭಿಪ್ರಾಯದ ಮೇರೆಗೆ ಕಳೆದ ವರ್ಷದ ಜನವರಿಯಲ್ಲಿ ನಿರ್ದೇಶಕ ಪ್ರಿಯದರ್ಶನ್ ''ಹೇರಾಫೇರಿ'' ಚಿತ್ರದ ಮೂರನೇ ಭಾಗವನ್ನು ಘೋಷಿಸಿದ್ದರು. ಅಕ್ಷಯ್ ಕುಮಾರ್ . ಸುನಿಲ್ ಶೆಟ್ಟಿ ಮತ್ತು ಪರೇಶ್ ರಾವಲ್ ಈ ಚಿತ್ರದಲ್ಲಿ ಕೂಡ ಮುಂದುವರೆಯಲಿದ್ದಾರೆ ಎಂದು ಹೇಳಿದ್ದರು.
ಆದರೆ, ಚಿತ್ರದ ಚಿತ್ರೀಕರಣ ಇನ್ನೇನು ಶುರುವಾಗಬೇಕು ಎನ್ನುವಷ್ಟರಲ್ಲಿ ಚಿತ್ರತಂಡದಿಂದ ಪರೇಶ್ ರಾವಲ್ ಏಕಾಏಕಿ ಕಳೆದ ವರ್ಷ ಇದೇ ಸಮಯದಲ್ಲಿ ಹೊರ ಬಂದಿದ್ದರು. ಈ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದರು.
ಪರೇಶ್ ರಾವಲ್ ಅವರ ಈ ನಿರ್ಧಾರದಿಂದ ಆಘಾತಕ್ಕೊಳಗಾದ ಅಕ್ಷಯ್ ಕುಮಾರ್ ಕಾನೂನು ಸಮರ ಸಾರಲು ಮುಂದಾಗಿದ್ದರು. ಆದರೆ, ಆ ನಂತರ ಈ ವಿವಾದ ಸೌಹಾರ್ದಯುತವಾಗಿ ಬಗೆಹರಿಯಿತು. ಪರೇಶ್ ರಾವಲ್ ಮನ ಒಲಿಸುವಲ್ಲಿ ತಂಡ ಯಶಸ್ವಿಯಾಯ್ತು.

ಆದರೆ, ಚಿತ್ರದ ಚಿತ್ರೀಕರಣ ಮಾತ್ರ ಶುರುವಾಗಲೇ ಇಲ್ಲ. ಹೀಗಿರುವಾಗ ಈಗ ಪರೇಶ್ ರಾವಲ್ ''ಹೇರಾಫೇರಿ 3'' ದಿಂದ ಮತ್ತೆ ಹೊರ ಬಂದಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ತಮ್ಮ ಸಂಭಾವನೆಯನ್ನು ಬಡ್ಡಿ ಸಮೇತ ಅಕ್ಷಯ್ ಕುಮಾರ್ ಗೆ ಪರೇಶ್ ರಾವಲ್ ಮರಳಿ ನೀಡಿದ್ದಾರೆ ಎಂದು ''ಬಾಲಿವುಡ್ ಹಂಗಾಮ'' ವರದಿ ಮಾಡಿದೆ.
''ಬಾಲಿವುಡ್ ಹಂಗಾಮ'' ವರದಿಯ ಪ್ರಕಾರ ಬಾಬು ಭಯ್ಯಾ ಪಾತ್ರ ನಿರ್ವಹಿಸಲು ಪರೇಶ್ ರಾವಲ್ 15 ಕೋಟಿ ಸಂಭಾವನೆಯನ್ನು ಕೇಳಿದ್ದರು, ಆ ಪೈಕಿ 11 ಲಕ್ಷ ಹಣವನ್ನು ಅವರಿಗೆ ಅಡ್ವಾನ್ಸ್ ರೂಪದಲ್ಲಿ ನೀಡಲಾಗಿತ್ತು ಕೂಡ.
ಈ ಸಮಯದಲ್ಲಿ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಅಕ್ಷಯ್ ಕುಮಾರ್ ಬಾಕಿ ಉಳಿದ 14.89 ಕೋಟಿ ಹಣವನ್ನು ಚಿತ್ರ ಬಿಡುಗಡೆಯಾದ ಒಂದು ತಿಂಗಳ ನಂತರ ಕೊಡುವುದಾಗಿ ಒಪ್ಪಂದ ಮಾಡಿಕೊಂಡಿದ್ದರು. ಮುಂದಿನ ವರ್ಷದ ಆರಂಭದಲ್ಲಿ ಚಿತ್ರದ ಚಿತ್ರೀಕರಣವನ್ನು ಶುರು ಮಾಡಿ 2026ರ ಕೊನೆಯಲ್ಲಿ ಅಥವಾ 2027ರಲ್ಲಿ ಬಿಡುಗಡೆ ಮಾಡಲು ಬಯಸಿದ್ದರು.
ಆದರೆ.. 2026ರ ಅರ್ಧ ವರ್ಷ ಮುಕ್ತಾಯವಾಯ್ತೇ ಹೊರತು ಚಿತ್ರದ ಚಿತ್ರೀಕರಣ ಇನ್ನೂ ಪ್ರಾರಂಭವಾಗಿಲ್ಲ. 14.89 ಕೋಟಿ ಹಣಕ್ಕೆ ಪರೇಶ್ ರಾವಲ್ ಇನ್ನೂ ಹೆಚ್ಚು ಕಾಯಲು ಸುತಾರಾಂ ತಯಾರಿಲ್ಲ. ಹೀಗಾಗಿ ತಾವು ತೆಗೆದುಕೊಂಡಿದ್ದ ಹನ್ನೊಂದು ಲಕ್ಷ ಹಣಕ್ಕೆ 15% ಬಡ್ಡಿ ಸೇರಿಸಿ ಪರೇಶ್ ರಾವಲ್ ಮರಳಿ ನೀಡಿದ್ದಾರೆ ಎಂದು ''ಬಾಲಿವುಡ್ ಹಂಗಾಮ'' ವರದಿ ಮಾಡಿದೆ.
ಆದರೆ ಈ ವರದಿಯಲ್ಲಿ ಹುರುಳಿಲ್ಲ ಎನ್ನುವ ವಾದವನ್ನು ಪತ್ರಕರ್ತ ವಿಕ್ಕಿ ಲಾಲ್ವಾನಿ ಮಾಡಿದ್ದಾರೆ. ಆಧಾರ ರಹಿತ ಸುದ್ದಿ ಎಂದಿದ್ಧಾರೆ. ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿರುವ ವಿಕ್ಕಿ ಲಾಲ್ವಾನಿ, ಪರೇಶ್ ರಾವಲ್ ''ಹೇರಾ ಫೇರಿ 3'' ಚಿತ್ರದಿಂದ ಹೊರ ಬಂದಿದ್ದಾರೆ, ಮುಂಗಡ ಹಣ ಮರಳಿ ನೀಡಿದ್ದಾರೆ ಎನ್ನುವ ಸುದ್ದಿ ಸಂಪೂರ್ಣ ಸುಳ್ಳು, ಈ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಖುದ್ದು ಪರೇಶ್ ರಾವಲ್ ಅವರ ಜೊತೆ ಮಾತನಾಡಿದ್ದು ಅವರು ಈ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ, ನಾನು ''ಹೇರಾ ಫೇರಿ 3''ರಲ್ಲಿ ಇನ್ನೂ ಇದ್ದೇನೆ ಎಂದು ಖಚಿತ ಪಡಿಸಿದ್ದಾರೆ ಎಂದು ಹೇಳಿದ್ದಾರೆ.
ವಿಕ್ಕಿ ಲಾಲ್ವಾನಿ ಅವರ ಈ ಹೇಳಿಕೆಯಿಂದ ಸದ್ಯದ ಪರಿಸ್ಥಿತಿಯಲ್ಲಿ, ಫ್ರಾಂಚೈಸಿಯ ಅಭಿಮಾನಿಗಳು ಪರೇಶ್ ರಾವಲ್ ''ಹೇರಾ ಫೇರಿ 3''ಯಲ್ಲಿ ಇನ್ನೂ ಇದ್ದಾರೆ ಎಂದುಕೊಂಡು ಸಮಾಧಾನಗೊಳ್ಳಬಹುದು. ಆದರೆ, ಚಿತ್ರದ ನಿರ್ಮಾಣದ ಕುರಿತು ಮತ್ತೊಂದು ಯಕ್ಷ ಪ್ರಶ್ನೆ ಇರುವ ಹಿನ್ನೆಲೆ ಈ ಸೀಕ್ವೆಲ್ಗೆ ಇನ್ನು ಕೆಲ ದಿನ ಕಾಯಬೇಕಾಗಬಹುದು. ಚಿತ್ರತಂಡ ''ಹೇರಾ ಫೇರಿ 3'' ಸುತ್ತ ಇರುವ ಈ ಗೊಂದಲಗಳನ್ನು ದೂರ ಮಾಡುತ್ತಾ..? ಎನ್ನುವುದನ್ನು ಕಾದು ನೋಡಬೇಕಾಗಿದೆ.


Click it and Unblock the Notifications