'ಮಳೆ 2' ಕಲೆಕ್ಷನ್: 2 ದಿನದಲ್ಲಿ ಗಣೇಶ್ ಗೆ ಒಳ್ಳೆ ಬೆಳೆ ಬಂತು ಮಾರ್ರೆ..
ಸೆಪ್ಟೆಂಬರ್ 9ರಂದು ತೆರೆ ಕಾಣಬೇಕಿದ್ದ 'ಮುಂಗಾರು ಮಳೆ 2' ಒಂದು ದಿನ ಡಿಲೇ ಆಗಿ ಶನಿವಾರ (ಸೆಪ್ಟೆಂಬರ್ 10) ದಂದು, ಇಡೀ ಕರ್ನಾಟಕದಾದ್ಯಂತ ಮತ್ತು ವಿದೇಶದಲ್ಲಿ ಮಾತ್ರ ತೆರೆಕಂಡಿತ್ತು. 10 ವರ್ಷಗಳ ಹಿಂದೆ ಯೋಗರಾಜ್ ಭಟ್ರ ಮೋಡಿಗೆ ಒಳಗಾಗಿದ್ದ ಪ್ರೇಕ್ಷಕರು 'ಭಾಗ 2'ರ ಮೇಲೂ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು.
ಆದರೆ ಅಭಿಮಾನಿಗಳ ನಿರೀಕ್ಷೆಯನ್ನು ತಲುಪುವಲ್ಲಿ ಸಿನಿಮಾ ನಿರ್ಮಾಪಕರು ಸ್ವಲ್ಪ ಮಟ್ಟಿಗೆ ಸೋತರೂ ಕೂಡ, ಬಾಕ್ಸಾಫೀಸ್ ಕಲೆಕ್ಷನ್ ವಿಚಾರದಲ್ಲಿ ಸಾಧಾರಣ ಮಟ್ಟಿಗೆ ಯಶಸ್ವಿಯಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನೇಹಾ ಶೆಟ್ಟಿ ಜೋಡಿಯಾಗಿ ಕಾಣಿಸಿಕೊಂಡಿದ್ದ 'ಮುಂಗಾರು ಮಳೆ 2' ಎರಡು ದಿನದಲ್ಲಿ ಮಾಡಿದ ಕಲೆಕ್ಷನ್ ರಿಪೋರ್ಟ್ ಹೊರಬಿದ್ದಿದೆ.[ವಿಮರ್ಶೆ: 'ಮುಂಗಾರು ಮಳೆ' ಅಮರ, 'ಮುಂಗಾರು ಮಳೆ-2' ಒಂಥರಾ.!]
'ಕೃಷ್ಣ ಲೀಲಾ' ಖ್ಯಾತಿಯ ನಿರ್ದೇಶಕ ಶಶಾಂಕ್ ಅವರು ಆಕ್ಷನ್-ಕಟ್ ಹೇಳಿದ್ದ 'ಮುಂಗಾರು ಮಳೆ 2' ಎರಡು ದಿನದಲ್ಲಿ, ಎಷ್ಟು ಬೆಳೆ (ಬಾಕ್ಸಾಫೀಸ್ ಕಲೆಕ್ಷನ್) ತಂದುಕೊಟ್ಟಿದೆ, ಎಂಬುದನ್ನು ತಿಳಿಯಲು ಮುಂದೆ ಓದಿ......

ಎರಡು ದಿನದಲ್ಲಿ ಮಳೆಯಿಂದ ಬಂದ ಬೆಳೆ ಎಷ್ಟು.?
ಇಡೀ ಕರ್ನಾಟಕದಾದ್ಯಂತ ಸುಮಾರು 260 ಸ್ಕ್ರೀನ್ ಗಳಲ್ಲಿ ಸುರಿದ 'ಮುಂಗಾರು ಮಳೆ 2', ಶನಿವಾರ ಮತ್ತು ಭಾನುವಾರ ಎರಡು ದಿನದಲ್ಲಿ ಒಟ್ಟು 11 (ಗ್ರಾಸ್) ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಭಾರತದಾದ್ಯಂತ 22 ತೆರೆಗಳಲ್ಲಿ ಹಾಗೂ ಇಡೀ ವಿಶ್ವದಾದ್ಯಂತ ಭರ್ಜರಿ 27 ತೆರೆಗಳಲ್ಲಿ 'ಮುಂಗಾರು ಮಳೆ 2' ಸುರಿದಿದೆ.
['ದೇವದಾಸ'ನಿಲ್ಲದ 'ಮುಂಗಾರು ಮಳೆ 2'ಗೆ ವಿಮರ್ಶಕರು ಹೇಳಿದ್ದೇನು.?]

ಮೊದಲ ದಿನ ಎಷ್ಟು.?
ಮೊದಲ ದಿನವಾದ ಶನಿವಾರದಂದು (ಸೆಪ್ಟೆಂಬರ್ 10) ಸುಮಾರು 5 ಕೋಟಿ (ಗ್ರಾಸ್) ರೂಪಾಯಿ ಕಲೆಕ್ಷನ್ ಮಾಡಿತ್ತು. ಎರಡನೇ ದಿನ ಸುಮಾರು 6 ಕೋಟಿ ರೂಪಾಯಿ ಕಮಾಯಿಸಿತ್ತು. ಇದು ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರ ಸಿನಿಮಾ ಜರ್ನಿಯಲ್ಲಿ, ಹಿಂದಿನ ಎಲ್ಲಾ ಸಿನಿಮಾಗಳಿಗಿಂತ 2 ದಿನದಲ್ಲಿ ಇಷ್ಟೊಂದು ಕಲೆಕ್ಷನ್ ಮಾಡಿದ ಮೊದಲ ಸಿನಿಮಾ ಇದೆ ಎನ್ನಲಾಗುತ್ತಿದೆ.[ಮುಂಗಾರು ಮಳೆ-2 : ಟ್ವಿಟ್ಟರಲ್ಲಿ ಯಾರು ಏನು ಹೇಳಿದ್ದಾರೆ?]

ಸೋಮವಾರ, ಮಂಗಳವಾರ ಪ್ರದರ್ಶನ ಇಲ್ಲ
ಚಿತ್ರಮಂದಿರಗಳಲ್ಲಿ ಜೋರಾಗಿ ಸುರಿಯುತ್ತಿದ್ದ 'ಮಳೆ'ಗೆ, 'ಕಾವೇರಿ ವಿವಾದ'ದ ಹಿನ್ನಲೆಯಲ್ಲಿ ಸೋಮವಾರ ಮತ್ತು ಮಂಗಳವಾರ (ಸೆಪ್ಟೆಂಬರ್ 12, 13) ಭಾರಿ ಹೊಡೆತ ಬಿತ್ತು. ಸೋಮವಾರ ಮಧ್ಯಾಹ್ನ ಹೋರಾಟಗಾರರ ಆಕ್ರೋಶಕ್ಕೆ ಎಲ್ಲಾ ಚಿತ್ರಮಂದಿರಗಳಿಗೆ ಬೀಗ ಬಿತ್ತು. ಮಂಗಳವಾರ ಕೂಡ ಯಾವ ಚಿತ್ರಮಂದಿರಗಳು ಕಾರ್ಯ ನಿರ್ವಹಿಸಿಲ್ಲ. ಆದ್ದರಿಂದ ಕಲೆಕ್ಷನ್ ವಿಚಾರದಲ್ಲೂ 'ಮಳೆ' ಹಿಂದೇಟು ಹಾಕಿತ್ತು.['ಮುಂಗಾರು ಮಳೆ 2' ನಲ್ಲಿ ಗಣಿಗೆ ಎಷ್ಟು ಜನ ನಾಯಕಿಯರು.?]

'ಇರುಮುಗನ್' ಬದಲು 'ಮುಂಗಾರು ಮಳೆ 2'
ಬೆಂಗಳೂರಿನ ಪಿವಿಆರ್ ಮತ್ತು ಇನ್ನೂ ಕೆಲವು ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ತಮಿಳು ನಟ ವಿಕ್ರಮ್ ಅವರ 'ಇರುಮುಗನ್' ಪ್ರದರ್ಶನ ಆಗುತ್ತಿತ್ತು. ಅದರೆ ಕಾವೇರಿ ವಿವಾದದ ಹಿನ್ನಲೆಯಲ್ಲಿ 'ಇರುಮುಗುನ್' ತೆಗೆಸಿ 'ಮುಂಗಾರು ಮಳೆ 2' ಪ್ರದರ್ಶನ ಇಂದಿನಿಂದ ಆಗಲಿದೆ.

ವಿದೇಶದಲ್ಲಿ 'ಮಳೆ'ಗೆ ಒಳ್ಳೆ ರೆಸ್ಪಾನ್ಸ್
ವಿದೇಶದಲ್ಲಿ ಕೂಡ 'ಮುಂಗಾರು ಮಳೆ 2' ಆರ್ಭಟ ಜೋರಾಗಿದ್ದು, ಕರ್ನಾಟಕಕ್ಕಿಂತ ವಿದೇಶದಲ್ಲಿ 'ಮಳೆ'ಗೆ ಅತ್ಯುತ್ತಮ ರೆಸ್ಪಾನ್ಸ್ ವ್ಯಕ್ತವಾಗಿದೆಯಂತೆ.

ಮೈಸೂರಿನಲ್ಲಿ ಉತ್ತಮ ಪ್ರದರ್ಶನ
ಮಂಡ್ಯ-ಮೈಸೂರಿನಲ್ಲಿ ಕಳೆದ ವಾರದಿಂದ ಕೂಡ ಕಾವೇರಿ ನೀರಿನ ಹೋರಾಟ ನಡೆಯುತ್ತಿದ್ದರೂ ಕೂಡ, 'ಮುಂಗಾರು ಮಳೆ 2' ಪ್ರದರ್ಶನಕ್ಕೆ ಯಾವುದೇ ಅಡ್ಡಿ-ಅತಂಕ ಉಂಟಾಗಿರಲಿಲ್ಲ. ಮೈಸೂರಿನಲ್ಲಂತೂ 'ಮಳೆ' ಸ್ವಲ್ಪ ಜೋರಾಗೇ ಪ್ರದರ್ಶನ ಕಂಡಿದೆ.

ಇಂದಿನಿಂದ ಸಿನಿಮಾ ಪ್ರದರ್ಶನ
'ಕಾವೇರಿ ವಿವಾದ' ದಿಂದ ಬೆಂಗಳೂರಿನ ಜನಜೀವನ ಅಸ್ತವ್ಯಸ್ತವಾಗಿದ್ದು, ಇಂದು ಎಲ್ಲಾ ಸಹಜ ಸ್ಥಿತಿಗೆ ಮರಳಿದೆ. ಆದ್ದರಿಂದ ಎಲ್ಲಾ ಕಡೆ ಸಿನಿಮಾ ಪ್ರದರ್ಶನ ಆರಂಭವಾಗಿದೆ. ಅಂತೂ ಈ ವೀಕೆಂಡ್ ನಲ್ಲಿ 'ಮಳೆ' ಇನ್ನೂ ಹೆಚ್ಚು ಕಲೆಕ್ಷನ್ ಮಾಡುವ ಭರವಸೆ ಇದೆ.


Click it and Unblock the Notifications











