ಯಾರಿಗೂ ಬೆದರದ ನಿರ್ಭೀತ ಮಾತಿನ ಮಲ್ಲ, ಶರಣಾದರಲ್ಲಯ್ಯ....
‘ಅಭಿಮಾನಿ ಅನ್ನದಾತರಿಗೆಲ್ಲ ಅನಂತ ವಂದನೆಗಳು’ ಎಂದು ಮಾತಿಗಾರಂಭಿಸಿದರೆ, ಓತಪ್ರೋತವಾಗಿ ಭ್ರಷ್ಟರು, ರಾಜಕಾರಣಿಗಳು, ಮಠಾಧಿಕಾರಿಗಳ ಗ್ರಹಚಾರ ಬಿಡಿಸಿ ಚಪ್ಪಾಳೆಯ ಸುರಿಮಳೆ ಗಿಟ್ಟಿಸುವ ನಿರ್ಭೀತ ಮಾತುಗಾರ, ನಟರತ್ನಾಕರ ಈ ಹೊತ್ತು ಶರಣಾಗತರಾಗಿದ್ದಾರೆ.
ಕೈಜೋಡಿಸಿ ಕ್ಷಮೆ ಕೋರಿದ್ದಾರೆ. ತಮ್ಮ ಕೈಯಾರೆ ಕ್ಷಮಾಪಣೆ ಪತ್ರ ಬರೆದು ಎಲ್ಲರನ್ನೂ ಅಚ್ಚರಿಪಡಿಸಿದ್ದಾರೆ. ‘ಮನುಷ್ಯನಿಗೆ ಸಂತೋಷ ನೀಡಲು ಕಲೆ, ಮನೆಗೊಂದು ಒಲೆ, ಮನುಷ್ಯನಿಗೆ ತಲೆ, ಆಡುವ ಮಾತಿಗೆ ಬೆಲೆ’ ಇರಬೇಕು ಎಂದು ಸದಾ ಹೇಳುತ್ತಿದ್ದ ಮಾಸ್ಟರ್ ಹಿರಣ್ಣಯ್ಯ ಅವರಿಂದ ಬೈಸಿಕೊಂಡವರ ಪಟ್ಟಿ ಅತಿದೊಡ್ಡದು.
ಚುರುಕಾದ, ಹರಿತವಾದ ತಮ್ಮ ನಾಲಿಗೆಯಿಂದಲೇ ಛಡಿ ಏಟು ನೀಡುವ ಈ ಮಾತುಗಾರ ಎಂದೂ ಎಚ್ಚರ ತಪ್ಪಿ ಮಾತಾಡಿದ್ದಿಲ್ಲ. ತಮ್ಮ ಮಾತಿಗೆ ಬೆಲೆ ಇರಬೇಕೆಂದೇ ಸದಾ ಕಟ್ಟೆಚ್ಚರವಹಿಸಿಯೇ ಮಾತನಾಡುತ್ತಿದ್ದುದು. ಬೈಗುಳದಲ್ಲಿ ಕೆಲವು ಅವಾಚ್ಯ ಪದಗಳ ಬಳಕೆಯಾದರೂ ಅದನ್ನು ಸಮರ್ಥಿಸಿಕೊಳ್ಳುವ ಶಕ್ತಿ ಹಿರಣ್ಣಯ್ಯ ಅವರಿಗಿತ್ತು.
ಆದರೆ, ಈಹೊತ್ತು ಹಿರಣ್ಣಯ್ಯ ಅವರಿಗೆ ಸಂಘರ್ಷ ಬೇಕಿಲ್ಲ. ಅವರು ‘ಶಾಂತಿ ಪ್ರಿಯ’ರಾಗಿದ್ದಾರೆ. ಸಲ್ಲದ ಸಂಘರ್ಷ ಬೇಡ ಎಂದು ಶರಣಾಗಿದ್ದಾರೆ. ಕೈಜೋಡಿಸಿ ಕ್ಷಮೆ ಯಾಚಿಸಿದ್ದಾರೆ. ಏನು ಹಿರಣ್ಣಯ್ಯ ತಲೆ ತಗ್ಗಿಸುವಂಥ ಅಪರಾಧ ಮಾಡಿದ್ದಾದರೂ ಏನು? ಅವರು ಯಾರ ಕ್ಷಮೆ ಕೋರಿದರೆಂದು ಯೋಚಿಸುತ್ತಿದ್ದೀರಾ? ಖಂಡಿತಾ ಹೇಳ್ತೀವಿ...
ಕಳೆದ ವರ್ಷಾಂತ್ಯದಲ್ಲಿ ಕನ್ನಡ ಚಿತ್ರರಂಗದ ನವರಸ ನಾಯಕ ಜಗ್ಗೇಶ್ ಆಡಿದರೆಂಬ ಮಾತಿನಿಂದ ಉಂಟಾದ ಕಾಂಟ್ರವರ್ಸಿ ಗೊತ್ತಲ್ಲಾ... ಸಿನಿಮಾ ನಟರು - ಕಿರುತೆರೆಗೂ - ಕಿರುತೆರೆಯ ಕಲಾವಿದರು - ರಜತಪರದೆಗೂ ಹಾರಾಡುವ ಬಗ್ಗೆ ಅವರು ನೀಡಿದರೆಂಬ ಹೇಳಿಕೆ ಭಾರಿ ವಿವಾದವನ್ನೇ ಹುಟ್ಟುಹಾಕಿತು. ಪ್ರಕರಣ ಎತ್ತೆತ್ತಲೋ ಸಾಗಿತು. ಎಲ್ಲೋ ಹೋಗಿ ಮುಟ್ಟಿತು.
ಜಗ್ಗೇಶರ ಹೇಳಿಕೆಯನ್ನು ಖಂಡಿಸಲು ಹೊಸದೊಂದು ಸಂಘವೂ ಹುಟ್ಟಿಕೊಂಡಿತು. ಜಗ್ಗೇಶ್ ವಿರುದ್ಧ ಸಿಡಿದೆದ್ದಿತು... ಈ ಸಭೆಯಲ್ಲಿ ಪಾಲ್ಗೊಂಡವರನ್ನು ಜಗ್ಗೇಶ್ ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡರು. ಟಿ.ವಿ. ವಿರುದ್ಧ ಮಹಾ ಯುದ್ಧವನ್ನೇ ಮಾಡುವುದಾಗಿಯೂ ಘೋಷಿಸಿದರು.
ಕ್ಷಮೆ ಕೋರಿದ ಪ್ರಸಂಗ : ಈ ಮಧ್ಯೆ ಡಿಸೆಂಬರ್ 20ರಂದು ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಮಾಸ್ಟರ್ ಹಿರಣ್ಣಯ್ಯ ತಮ್ಮ ವಾಗ್ಝರಿಯ ನಡುವೆ, ಕಲಾವಿದ ಸೀಮಾತೀತ. ‘ನಟನೆಯೇ ಗೊತ್ತಿಲ್ಲದ ಮಂಗನಹಾಗೆ ಹಾಗೆ ಕಪಿಚೇಷ್ಟೇ ಮಾಡುವ ಜಗ್ಗೇಶನಿಗೆ ಈ ರೀತಿ ಹೇಳುವ ರೈಟ್ಸ್ ಇಲ್ಲ. ಮೊದಲು ಜಗ್ಗೇಶ ಹಾಗೂ ಸಾಧುಕೋಕಿಲಾ ತಾವು ಕಲಾವಿದರು ಎಂಬುದನ್ನು ಸಾಬೀತು ಮಾಡಲಿ’ ಎಂದು ಬಿಟ್ಟರು.
ಈ ಸುದ್ದಿ ಪತ್ರಿಕೆಗಳಲ್ಲೂ ಪ್ರಕಟವಾಯಿತು. ತಮ್ಮ ನೆಚ್ಚಿನ ನಾಯಕನ ಬಗ್ಗೆ ಹಿರಣ್ಣಯ್ಯ ಆಡಿದ ಮಾತುಗಳು ನವರಸನಾಯಕನ ಅಭಿಮಾನಿಗಳನ್ನು ಕೆಣಕಿತು. ಸರಿ ಹೊಸವರ್ಷದ ಮೊದಲ ದಿನ ಬನಶಂಕರಿ ಎರಡನೇ ಹಂತದಲ್ಲಿರುವ ಮಾಸ್ಟರ್ ಹಿರಣ್ಣಯ್ಯನವರ ಮನೆಮುಂದೆ ಸೇರಿದ ಅಖಿಲ ಕರ್ನಾಟಕ ಜಗ್ಗೇಶ್ ಅಭಿಮಾನಿಗಳ ಸಮಾಜಾ ಸೇವಾ ಸಂಘ (ರಿ) ಕೇಂದ್ರ ಸಮಿತಿ ಕಾರ್ಯಕರ್ತರು ಹಿರಣ್ಣಯ್ಯ ವಿರುದ್ಧ ಘೋಷಣೆ ಕೂಗಿದರು, ಬ್ಯಾನರ್ - ಪೋಸ್ಟರ್ ಹಿಡಿದು ಪ್ರತಿಭಟಿಸಿದರು.
ದಂಡಿಗೆ ಹೆದರದೆ, ದಾಳಿಗೆ ಹೆದರದೆ ತುಂಬಿದ ರಂಗಮಂದಿರದಲ್ಲಿ ವೇದಿಕೆಯೇರಿ ಹಿಗ್ಗಾಮುಗ್ಗ ಬೈದೂ ಬಚಾಯಿಸಿಕೊಂಡಿದ್ದ ಹಿರಣ್ಣಯ್ಯ ಕೊನೆಗೂ ಸೋಲನ್ನು ಒಪ್ಪಿಕೊಂಡರು. ಜಗ್ಗೇಶ್ ಅಭಿಮಾನಿಗಳ ಕ್ಷಮೆ ಕೋರಿದರು. ಜಗ್ಗೇಶ್ ಅಭಿಮಾನಿಗಳ ಸಂಘಕ್ಕೂ ಪತ್ರಬರೆದು ‘ನನ್ನ ಮಾತುಗಳಿಂದ ನಿಮಗಾದ ನೋವಿಗೆ ವಿಷಾದಿಸುತ್ತೇನೆ. ಕ್ಷಮೆ ಕೋರುತ್ತೇನೆ’ ಎಂದು ತಿಳಿಸಿದರು.
ಜಗ್ಗೇಶ್ ಹೇಳಿಕೆ : ಈ ಮಧ್ಯೆ ಹಿರಣ್ಣಯ್ಯ ಅವರು ಕೇವಲ ಮಾಸ್ಟರ್ ಅಲ್ಲ, ಅವರು ಸೂಪರ್ ಸ್ಟಾರ್. ಅವರು ಹಿರಿಯರು, ನಮ್ಮ ತಂದೆಯ ಸ್ಥಾನದಲ್ಲಿದ್ದಾರೆ. ನಾವು ತಪ್ಪು ಮಾಡಿದರೆ, ಕರೆದು ಕೆನ್ನೆಗೆ ಹೊಡೆದು ಬುದ್ಧಿ ಹೇಳುವ ಹಕ್ಕು ಅವರಿಗೆ ಆದರೆ, ಅವರು ಹೀಗೆ ಮಾತಾಡುತ್ತಾರೆ ಎಂದು ನಂಬಲೂ ಸಾಧ್ಯವಿಲ್ಲ. ಅವರು ಮಾತಿನಲ್ಲಿ ಆದ ತಪ್ಪನ್ನು, ಬರಹದಲ್ಲಿ ತಿದ್ದಿಕೊಂಡಿದ್ದಾರೆ. ಆಗಿದ್ದು ಆಗಿ ಹೋಯಿತು ಹೋಗಲಿ ಬಿಡಿ ಎಂದು ಜಗ್ಗೇಶ್ ಅಭಿಮಾನಿಗಳ ಸಮಾಧಾನ ಮಾಡಿದ್ದಾರೆ ಎಂಬಲ್ಲಿಗೆ ಹೊಸವರ್ಷದ ಮೊದಲ ವಿವಾದ ಕ್ಷಮೆಯಾಂದಿಗೆ ಕೊನೆಗೊಂಡಿದೆ.
">
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications











