ಭಟ್ಟರ ಟೀಂಗೆ 'ವಾಸ್ತುಪ್ರಕಾರ' ಅಡಿಯಿಟ್ಟ ಹುಚ್ಚು ವೆಂಕಟ
ಹುಚ್ಚ ವೆಂಕಟ ಚಿತ್ರ ಒಂದು ವಾರವೂ ಓಡಲಿಲ್ಲ. ಆದರೆ ಆ ಚಿತ್ರದ ನಿರ್ದೇಶಕ, ನಾಯಕನಟ ವೆಂಕಟ ಮಾತ್ರ ರಾತ್ರೋರಾತ್ರಿ ಜನಪ್ರಿಯನಾಗಿ ಬಿಟ್ಟ. ಮುಂದೆ ಅವರು ಸಿನಿಮಾ ಮಾಡ್ತಾರೋ ಇಲ್ವೋ ಗೊತ್ತಿಲ್ಲ. ಆದರೆ ಈಗ ಅವರನ್ನು ಅನುಕರಿಸುತ್ತಾ ಡೈಲಾಗ್ ಹೇಳುವವರು ಬಹಳಷ್ಟು ಮಂದಿ ಹುಟ್ಟುಕೊಂಡಿದ್ದಾರೆ.
ಯೂಟ್ಯೂಬ್ ನಲ್ಲಿ ಅವರ ಶೈಲಿಯಲ್ಲಿ ಡೈಲಾಗ್ ಹೇಳುತ್ತಾ ಪ್ರಚಾರ ಗಿಟ್ಟಿಸುವರು ಜಾಸ್ತಿಯಾಗಿದ್ದಾರೆ. ಈ ಹಿಂದೆ 'ಸ್ವತಂತ್ರಪಾಳ್ಯ' ಎಂಬ ಚಿತ್ರ ಸಿನಿಮಾ ನಿರ್ದೇಶಿಸಿ ಸೋತಿದ್ದ ವೆಂಕಟ ಸಾಕಷ್ಟು ಗ್ಯಾಪ್ ತೆಗೆದುಕೊಂಡು ಬಂದ ಚಿತ್ರ 'ಹುಚ್ಚು ವೆಂಕಟ'. ಆದರೆ ಈ ಚಿತ್ರವೂ ಒಂದೇ ವಾರಕ್ಕೆ ಮಕಾಡೆ ಮಲಗಿತು. [ವೆಂಕಟನ 'ಹುಚ್ಚಾ'ಟಕ್ಕೆ ದಿಗಿಲು ಬಿದ್ದ ಹರ್ಷಿಕಾ-ರಿಷಿಕಾ]

ಈಗವರ ಕೈಯಲ್ಲಿ ಚಿತ್ರಗಳಿಲ್ಲದಿದ್ದರೂ ಪ್ರಚಾರಕ್ಕಾಗಿ ಅವರನ್ನು ಬಳಸಿಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿದೆ. ಇತ್ತೀಚೆಗೆ ಅವರು ಜೀ ಕನ್ನಡ ವಾಹಿನಿಯ 'ಡಿವೈಡೆಡ್' ಗೇಮ್ ಶೋನಲ್ಲಿ ಹರ್ಷಿಕಾ ಪೂಣಚ್ಚ ಹಾಗೂ ರಿಷಿಕಾ ಸಿಂಗ್ ಜೊತೆ ಭಾಗವಹಿಸಿದ್ದರು.
ಈಗ ಯೋಗರಾಜ್ ಭಟ್ಟರ 'ವಾಸ್ತುಪ್ರಕಾರ' ಚಿತ್ರತಂಡ ಹುಚ್ಚು ವೆಂಕಟನನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ. ಹುಚ್ಚು ವೆಂಕಟನ ಜೊತೆಗಿನ ರಕ್ಷಿತ್ ಶೆಟ್ಟಿ ಫೋಟೋವನ್ನು 'ವಾಸ್ತು ಪ್ರಕಾರ' ಚಿತ್ರತಂಡ ಬಿಡುಗಡೆ ಮಾಡಿದೆ.

ಒಟ್ಟಾರೆ ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎಂಬಂತೆ ಹುಚ್ಚು ವೆಂಕಟನಿಗೂ ಒಂದು ಕಾಲ ಬಂದಿದೆ. 'ವಾಸ್ತುಪ್ರಕಾರ' ಚಿತ್ರವನ್ನು ನೋಡ್ಲಿಲ್ಲ ಎಂದರೆ ನಿಮ್ಮನ್ನೆಲ್ಲಾ ಶೂಟ್ ಮಾಡ್ ಬಿಡ್ತೀನಿ ಎಂದು ವೆಂಕಟ ಹೇಳಿದರೂ ಅಚ್ಚರಿಯಿಲ್ಲ.
ಯೋಗರಾಜ್ ಭಟ್ ನಿರ್ದೇಶಿಸುತ್ತಿರುವ ಚಿತ್ರದಲ್ಲಿ ನಾಯಕನಾಗಿ ಉಳಿದವರು ಕಂಡಂತೆ ಖ್ಯಾತಿಯ ರಕ್ಷಿತ್ ಶೆಟ್ಟಿ ಇದ್ದಾರೆ, ಮಂಗಳೂರಿನ ಐಶಾನಿ ಶೆಟ್ಟಿ ನಾಯಕಿಯಾಗಿದ್ದಾರೆ ಉಳಿದಂತೆ ಜಗ್ಗೇಶ್ ಮತ್ತು ಪರುಲ್ ಯಾದವ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಾಸ್ತುಪ್ರಕಾರ ಬಿಡುಗಡೆ ದಿನಾಂಕ ಮಾತ್ರ ಇನ್ನೂ ಪಕ್ಕಾ ಆಗಿಲ್ಲ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











