ಪಾರ್ಟಿ ಕಟ್ಟಿ ಪಾತಾಳಕ್ಕಿಳಿದ ಪವನ್ ಕಲ್ಯಾಣ್!; 100 ಕೋಟಿ ರೂ. ಆಸ್ತಿ ಮಾರಾಟಕ್ಕಿಟ್ರಾ ಪವರ್ ಸ್ಟಾರ್?
ತೆಲುಗು ನಟ ಪವನ್ ಕಲ್ಯಾಣ್ ಆಂಧ್ರ ರಾಜಕೀಯದಲ್ಲೂ ಗುರ್ತಿಸಿಕೊಂಡಿದ್ದಾರೆ. ತಮ್ಮದೇ ಜನಸೇನಾ ಪಕ್ಷ ಕಟ್ಟಿ ಜನ ಸೇವೆ ಮಾಡುವ ಮಹದಾಸೆ ಹೊಂದಿದ್ದಾರೆ. ಆದರೆ ಕಳೆದ ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಪವನ್ ಹೀನಾಯವಾಗಿ ಸೋತಿದ್ದರು. ಇದೀಗ ಮತ್ತೊಂದು ಚುನಾವಣೆಗೆ ಸಜ್ಜಾಗುತ್ತಿದ್ದಾರೆ. ಅದಕ್ಕಾಗಿ ತಮ್ಮ ಆಸ್ತಿಯನ್ನು ಮಾರಾಟಕ್ಕಿದ್ದಾರೆ ಎನ್ನಲಾಗ್ತಿದೆ.
ಚಿತ್ರರಂಗದಲ್ಲಿ ಸಿಕ್ಕ ಜನಪ್ರಿಯತೆ ಬಳಸಿಕೊಂಡು ರಾಜಕೀಯರಂಗ ಪ್ರವೇಶಿಸಿದವರು ಸಾಕಷ್ಟು ಜನ ಇದ್ದಾರೆ. ಆಂಧ್ರ, ತಮಿಳುನಾಡಿನಲ್ಲಿ ಸಿಎಂ ಪಟ್ಟಕ್ಕೇರಿದ ಸಿನಿಮಾ ಕಲಾವಿದರು ಇದ್ದಾರೆ. ಇಂದಿಗೂ ಸಿನಿಮಾ ಕ್ಷೇತ್ರದಿಂದ ರಾಜಕೀಯ ಪ್ರವೇಶಿಸುವವರು ಕಮ್ಮಿ ಏನು ಇಲ್ಲ. ಇತ್ತೀಚೆಗೆ ತಮಿಳು ನಟ ದಳಪತಿ ವಿಜಯ್ ಹೊಸ ಪಕ್ಷ ಸ್ಥಾಪಿಸುವುದಾಗಿ ಘೋಷಣೆ ಮಾಡಿದ್ದಾರೆ.

ಹಣವಿಲ್ಲದೇ ರಾಜಕೀಯ ಸಾಧ್ಯವಿಲ್ಲ ಎಂದು ಎಲ್ಲರೂ ಹೇಳುತ್ತಿರುತ್ತಾರೆ. ಇತ್ತೀಚೆಗೆ ಖುದ್ದು ಪವನ್ ಕಲ್ಯಾಣ್ ಈ ಮಾತು ಹೇಳಿದ್ದರು. ಇನ್ನು ಆಂಧ್ರದಲ್ಲಿ ಸಿನಿಮಾ ನಟ ಎನ್ಟಿಆರ್ ಹೊಸ ಪಕ್ಷ ಕಟ್ಟಿ ಸಿಎಂ ಗಾದಿ ಅಲಂಕರಿಸಿದ್ದರು. ಇದೇ ಹಾದಿಯಲ್ಲಿ ಚಿರಂಜೀವಿ ಸೇರಿದಂತೆ ಹಲವು ಕಲಾವಿದರು ರಾಜಕೀಯರಂಗದಲ್ಲಿ ಅದೃಷ್ಟ ಪರೀಕ್ಷಿಸಿಕೊಂಡಿದ್ದರು. ಪ್ರಜಾರಾಜ್ಯಂ ಪಕ್ಷ ಕಟ್ಟಿ ಮುಖಭಂಗ ಅನುಭವಿಸಿದ್ದ ಚಿರು ಕೊನೆಗೆ ತನ್ನ ಪಕ್ಷವನ್ನು ಕಾಂಗ್ರೆಸ್ ಜೊತೆ ವಿಲೀನ ಮಾಡಿದ್ದರು. ಇದೂ ಪಾಲಿಟಿಕ್ಸ್ ಬಿಟ್ಟು ಚಿತ್ರರಂಗ ಸೇರಿದ್ದಾರೆ.
ಅಣ್ಣ ಸೋತರೂ ನಾನು ಗೆದ್ದು ತೋರಿಸುತ್ತೇನೆ ಎಂದು ಪವನ್ ಕಲ್ಯಾಣ್ ರಾಜಕೀಯರಂಗಕ್ಕೆ ಧುಮುಕಿದ್ದರು. 2014ರಲ್ಲಿ ಪವನ್ ಕಲ್ಯಾಣ್ 'ಜನಸೇನಾ ಪಕ್ಷ' ಸ್ಥಾಪಿಸಿದರು. ಆದರೆ ಆ ವರ್ಷ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ. 2019ರಲ್ಲಿ ರಾಜ್ಯಾದ್ಯಂತ ಪರ್ಯಟನೆ ನಡೆಸಿ ಪವನ್ ಚುನಾವಣೆಗೆ ಸ್ಪರ್ಧಿಸಿ ಹೀನಾಯವಾಗಿ ಸೋಲುಂಡರು. ಖುದ್ದು ಪವನ್ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಸೋತಿದ್ದರು.
ಸಿನಿಮಾ ಬೇರೆ ರಾಜಕೀಯ ಬೇರೆ ಎನ್ನುವುದು ಅಷ್ಟರಲ್ಲಾಗಲೇ ಅರ್ಥವಾಗಿತ್ತು. ಪವನ್ ಕಲ್ಯಾಣ್ ಪ್ರಚಾರಕ್ಕೆ ಹೋದ ಕಡೆಯೆಲ್ಲಾ ಅಭಿಮಾನಿಗಳು ಸಾಗರದಂತೆ ಸೇರಿದ್ದರು. ಪವರ್ ಸ್ಟಾರ್ ಗೆದ್ದು ಬಿಡ್ತಾರೆ, ಕಿಂಗ್ ಆಗದಿದ್ದರೂ ಕಿಂಗ್ ಮೇಕರ್ ಆಗುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ದಯನೀಯವಾಗಿ ಸೋತಿದ್ದರು. ಇದೀಗ ಮತ್ತೆ ಆಂಧ್ರ ವಿಧಾನ ಸಭೆ ಚುನಾವಣೆ ಸಮೀಪಿಸುತ್ತಿದೆ. ಈ ಬಾರಿ ಕೂಡ ಚುನಾವಣೆ ಸ್ಪರ್ಧೆಗೆ ಪವನ್ ಮುಂದಾಗಿದ್ದಾರೆ.

ಸದ್ಯ ಸಿನಿಮಾ ಚಿತ್ರೀಕರಣ ಪಕ್ಕಕ್ಕಿಟ್ಟು ಪವನ್ ಕಲ್ಯಾಣ್ ಚುನಾವಣೆ ಕಡೆ ಮುಖ ಮಾಡಿದ್ದಾರೆ. ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಚುನಾವಣೆಗೆ ಸಜ್ಜುಗೊಳಿಸುತ್ತಿದ್ದಾರೆ. ಈ ಬಾರಿ ಟಿಡಿಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಮೈತ್ರಿಯ ಭಾಗವಾಗಿ, ಜನಸೇನಾ 24 ವಿಧಾನಸಭೆ ಮತ್ತು 3 ಲೋಕಸಭೆ ಸ್ಥಾನಗಳಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿದೆ. ಹಾಗಾಗಿ ಪವನ್ ಕಲ್ಯಾಣ್ ಎಲ್ಲಾ ಸ್ಥಾನಗಳಲ್ಲಿ ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ. ಜನಸೇನಾ ಪಕ್ಷದ ಚುನಾವಣಾ ವೆಚ್ಚ ಹಾಗೂ ಅಭ್ಯರ್ಥಿ ಪ್ರಚಾರಕ್ಕೆ ಪವನ್ ಗಟ್ಟಿ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ.
ಇನ್ನು ಜನಸೇನಾ ಪಕ್ಷಕ್ಕೆ ಫಂಡ್ ಇಲ್ಲದೇ ಜನಸೇನಾನಿ ತಲೆ ಕೆಡಿಸಿಕೊಂಡಿದ್ದಾರೆ. ಚುನಾವಣಾ ಪ್ರಚಾರಕ್ಕೆ ಬಹಳ ಹಣ ಬೇಕಾಗುತ್ತದೆ. ಇತ್ತೀಚೆಗಷ್ಟೇ ಪವನ್ ಹೆಲಿಕಾಪ್ಟರ್ ಕೂಡ ಬಾಡಿಗೆಗೆ ಪಡೆದಿದ್ದರು. ಹೀಗೆ ಎಲ್ಲಾ ಖರ್ಚು ಭರಿಸಲು ಜನಸೇನಾ ಪಕ್ಷದ ನಿಧಿ ಸಾಕಾಗುತ್ತಿಲ್ಲ. ಇದೇ ಕಾರಣಕ್ಕೆ ಪವನ್ ತಮ್ಮ ಆಸ್ತಿಗಳನ್ನು ಮಾರಾಟ ಮಾಡಲು ನಿರ್ಧರಿಸಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ. ಚುನಾವಣೆಗಾಗಿ 100 ಕೋಟಿ ರೂ. ಖರ್ಚು ಮಾಡಲು ನಿರ್ಧರಿಸಿದ್ದಾರಂತೆ. ಅದಕ್ಕಾಗಿ 100 ಕೋಟಿ ರೂ. ಮೌಲ್ಯದ ತಮ್ಮ ಆಸ್ತಿಯನ್ನು ಮಾರಾಟಕ್ಕೆ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ಈಗ ಫಿಲ್ಮ್ ನಗರ್ನಲ್ಲಿ ಹಾಟ್ ಟಾಪಿಕ್ ಆಗಿದೆ.
ಈಗಾಗಲೇ ಪವನ್ ಕಲ್ಯಾಣ್ ಹೈದರಾಬಾದಿನಲ್ಲಿರುವ ಜಮೀನು, ಬೆಂಗಳೂರಿನಲ್ಲಿ ಮನೆ ಮಾರಾಟ ಮಾಡಿದ್ದಾರೆ ಎನ್ನಲಾಗುತ್ತಿದೆ. ಬರೀ ತಮ್ಮ ಕ್ಷೇತ್ರದ ಚುನಾವಣೆ ಪ್ರಚಾರಕ್ಕೆ ಮಾತ್ರವಲ್ಲ ತಮ್ಮ ಪಕ್ಷ ಅಭ್ಯರ್ಥಿಗಳ ಕ್ಷೇತ್ರದ ಪ್ರಚಾರಕ್ಕೂ ಪವನ್ ಕಲ್ಯಾಣ್ ಖರ್ಚು ಮಾಡಬೇಕಿದೆ. ಇತ್ತೀಚೆಗೆ ನಟಿಸಿದ ಚಿತ್ರಗಳ ಸಂಭಾವನೆಯಿಂದ 10 ಕೋಟಿ ರೂ.ಯನ್ನು ಪವನ್ ಜನಸೇನಾ ಪಕ್ಷಕ್ಕೆ ಮೀಸಲಿಟ್ಟಿದ್ದರು. ಇನ್ನು ಹೆಲಿಕಾಪ್ಟರ್ ಬಾಡಿಗೆ ಹಾಗೂ ಇತರೆ ವೆಚ್ಚಕ್ಕಾಗಿ 20 ಕೋಟಿ ರೂ. ಆಸ್ತಿ ಮಾರಾಟ ಮಾಡಿದ್ದಾರೆ ಎನ್ನಲಾಗುತ್ತಿದೆ.


Click it and Unblock the Notifications











