'ರಾಮಾಯಣ' ಚಿತ್ರದಲ್ಲಿ ಆ ನೆಗೆಟಿವ್ ರೋಲ್ ರಿಜೆಕ್ಟ್ ಮಾಡಿದ್ರಾ ಪ್ರಿಯಾಂಕ?
ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಶ್ರೀರಾಮನಾಗಿ ರಣ್ಬೀರ್, ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ಯಶ್ ನಟಿಸುತ್ತಿದ್ದಾರೆ. ಘಟಾನುಘಟಿ ಕಲಾವಿದರು ಚಿತ್ರದ ತಾರಾಗಣದಲ್ಲಿದ್ದಾರೆ.
'ರಾಮಾಯಣ' ಕಾವ್ಯದಲ್ಲಿ ಒಂದಕ್ಕಿಂತ ಒಂದು ಅದ್ಭುತ ಪಾತ್ರಗಳಿವೆ. ಅದಕ್ಕೆ ತಕ್ಕಂತೆ ಕಲಾವಿದರ ಆಯ್ಕೆ ನಡೆದಿದೆ. ರಾಮ, ಸೀತೆ, ರಾವಣ ಬಿಟ್ಟರೆ ಇನ್ನುಳಿದ ಪಾತ್ರಗಳಲ್ಲಿ ಯಾರೆಲ್ಲಾ ನಟಿಸುತ್ತಿದ್ದಾರೆ ಎನ್ನುವ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ. ಆದರೆ ಚಿತ್ರದ ಪಾತ್ರವರ್ಗದ ಬಗ್ಗೆ ದಿನಕ್ಕೊಂದು ಸುದ್ದಿ ಹರಿದಾಡುತ್ತಿದೆ. ಮಂಡೋದರಿ ಪಾತ್ರದಲ್ಲಿ ಕಾಜಲ್ ಅಗಲ್ವಾಲ್ ನಟಿಸುತ್ತಾರೆ ಎನ್ನಲಾಗ್ತಿದೆ.

ಬಿಡುಗಡೆ ದಿನಾಂಕ ಬಿಟ್ಟರೆ ಅಧಿಕೃತವಾಗಿ ಚಿತ್ರದ ಯಾವುದೇ ಮಾಹಿತಿ ಸಿಕ್ಕಿಲ್ಲ. ಎರಡು ಭಾಗಗಳಾಗಿ ಸಿನಿಮಾ ನಿರ್ಮಾಣವಾಗುತ್ತಿದೆ. ಹಾಲಿವುಡ್ ತಂತ್ರಜ್ಞರು ಕೂಡ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಮುಂಬೈನಲ್ಲಿ ನಡೆದ 'ರಾಮಾಯಣ' ಸಿನಿಮಾ ಚಿತ್ರೀಕರಣದಲ್ಲಿ ಯಶ್ ನಟಿಸಿದ್ದರು. ರಾವಣನ ಪಾತ್ರದಲ್ಲಿ ನಟಿಸುವುದರ ಜೊತೆಗೆ ರಾಕಿಂಗ್ ಸ್ಟಾರ್ ಸಹ ನಿರ್ಮಾಪಕರು ಆಗಿದ್ದಾರೆ. ಈಗಾಗಲೇ ಸಿನಿಮಾ ಅನೌನ್ಸ್ಮೆಂಟ್ ಟೀಸರ್ ಕೂಡ ಸೆನ್ಸಾರ್ ಆಗಿದೆ.
ಚಿತ್ರದ ಪ್ರಮುಖ ಪಾತ್ರಕ್ಕೆ ಪ್ರಿಯಾಂಕ ಚೋಪ್ರಾ ಆಯ್ಕೆ ಆಗಿದ್ದರು ಎನ್ನಲಾಗ್ತಿದೆ. ಇದೇ ಈಗ ಭಾರೀ ಸುದ್ದಿ ಆಗುತ್ತಿದೆ. ಪಿಗ್ಗಿ ಇತ್ತೀಚೆಗೆ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುವುದು ಕಮ್ಮಿ ಆಗಿದೆ. ರಾಜಮೌಳಿ ನಿರ್ದೇಶನ ಚಿತ್ರದಲ್ಲಿ ಮಹೇಶ್ ಬಾಬು ಜೊತೆ ನಟಿಸುತ್ತಿದ್ದಾರೆ. ಇನ್ನುಳಿದಂತೆ ದೊಡ್ಡ ಅವಕಾಶಗಳು ಆಕೆಯ ಕೈಯಲ್ಲಿಲ್ಲ. ಇನ್ನು 'ರಾಮಾಯಣ' ಚಿತ್ರದ ಪಾತ್ರವೊಂದಕ್ಕೆ ಆಕೆಯನ್ನು ಸಂಪರ್ಕಿಸಿದಾಗ ನಟಿಸೋಕೆ ನಿರಾಕರಿಸಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ.

ನಿಮಿತ್ ಮಲ್ಹೋತ್ರಾ ನಿರ್ಮಾಣದ 'ರಾಮಾಯಣ' ಚಿತ್ರದಲ್ಲಿ ಶೂರ್ಪನಖಿಯಾಗಿ ರಕುಲ್ ಪ್ರೀತ್ ಸಿಂಗ್ ನಟಿಸುತ್ತಿದ್ದಾರೆ ಎನ್ನಲಾಗ್ತಿದೆ. ಅಂದಹಾಗೆ ಈ ಪಾತ್ರದಲ್ಲಿ ನಟಿಸೋಕೆ ಪ್ರಿಯಾಂಕ ಚೋಪ್ರಾ ಅವರನ್ನು ಕೇಳಿದ್ದರು. ಆದರೆ ಡೇಟ್ಸ್ ಸಮಸ್ಯೆ ನೆಪವೊಡ್ಡಿ ಪಿಗ್ಗಿ ನಟಿಸೋಕೆ ಹಿಂದೇಟು ಹಾಕಿದರು ಎಂದು ಹೇಳಲಾಗುತ್ತಿದೆ. 'ರಾಮಾಯಣ' ಕಥೆಯಲ್ಲಿ ಶೂರ್ಪನಖಿ ಪಾತ್ರ ಚಿಕ್ಕದು, ಹಾಗಾಗಿ ಪ್ರಿಯಾಂಕ ನೋ ಎಂದಿರಬಹುದು ಎನ್ನಲಾಗ್ತಿದೆ.
ಇನ್ನುಳಿದಂತೆ ಲಕ್ಷ್ಮಣನಾಗಿ ರವಿ ದುಬೆ, ಹನುಮಂತನಾಗಿ ಸನ್ನಿ ಡಿಯೋಲ್, ಇಂದ್ರದೇವನಾಗಿ ಕುನಾಲ್ ಕಪೂರ್, ಕೈಕೇಯಿಯಾಗಿ ಲಾರಾ ದತ್ತಾ, ಮಂಥರಾ ಆಗಿ ಶಿಬಾ ಚಡ್ಡಾ, ದಶರಥನಾಗಿ ಅರುಣ್ ಗೋವಿಲ್, ವಿದ್ಯುತ್ಜಿವನಾಗಿ ವಿವೇಕ್ ಒಬೆರಾಯ್ ನಟಿಸುತ್ತಿದ್ದಾರೆ ಎನ್ನಲಾಗ್ತಿದೆ. ಆದರೆ ಅಧಿಕೃತ ಮಾಹಿತಿ ಮುಂದಿನ ದಿನಗಳಲ್ಲಿ ಸಿಗಲಿದೆ.
ದೇಶ ವಿದೇಶ ಭಾಷೆಗಳಲ್ಲಿ 'ರಾಮಾಯಣ' ಸಿನಿಮಾ ಡಬ್ ಆಗಿ ತೆರೆಗೆ ಬರಲಿದೆ. ಈಗಾಗಲೇ ಕಾವ್ಯ, ನಾಟಕ, ಸಿನಿಮಾ, ಧಾರಾವಾಹಿಯಾಗಿ ಬಂದಿರುವ ಕಥೆಯನ್ನು ದೊಡ್ಡಮಟ್ಟದಲ್ಲಿ ಪ್ರಪಂಚದ ಮುಂದಿಡುವ ಪ್ರಯತ್ನ ನಡೀತಿದೆ. ತಂತ್ರಜ್ಞಾನ ಬಳಸಿ ಬೇರೆ ಭಾಷೆಗಳಿಗೆ ಡಬ್ ಮಾಡದೇ ಆಯಾ ಭಾಷೆಯಲ್ಲೇ ಕಲಾವಿದರು ಮಾತನಾಡಿದಂತೆ ಡಬ್ಬಿಂಗ್, ಲಿಪ್ಸಿಂಕ್ ಮಾಡಲಾಗುತ್ತಿದೆ. ಇದು ಚಿತ್ರರಂಗದಲ್ಲೇ ಹೊಸ ಪ್ರಯತ್ನ ಎನ್ನುವಂತಾಗಿದೆ.
ಎರಡು ಭಾಗಗಳಾಗಿ 'ರಾಮಾಯಣ' ಸಿನಿಮಾ ತೆರೆಗೆ ಬರಲಿದೆ. ಮೊದಲ ಭಾಗದಲ್ಲಿ ಸೀತಾಪಹರಣವರೆಗಿನ ಕಥೆಯನ್ನು ಹೇಳಲಾಗ್ತಿದೆ. ಮುಂದಿನ ವರ್ಷ ದೀಪಾವಳಿಗೆ ಮೊದಲ ಭಾಗ ಹಾಗೂ 2027ರ ದೀಪಾವಳಿಗೆ 2ನೇ ಭಾಗ ತೆರೆಗೆ ಬರಲಿದೆ. 500 ಕೋಟಿ ರೂ.ಗೂ ಅಧಿಕ ಬಜೆಟ್ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. 'ಮ್ಯಾಡ್ ಮ್ಯಾಕ್ಸ್' ಖ್ಯಾತಿಯ ಸ್ಟಂಟ್ ನಿರ್ದೇಶಕ ಗೈ ನೋರಿಸ್ (guy Norris) ಚಿತ್ರದ ಆಕ್ಷನ್ ಸನ್ನಿವೇಶಗಳನ್ನು ಕೊರಿಯೋಗ್ರಫಿ ಮಾಡುತ್ತಿದ್ದಾರೆ.


Click it and Unblock the Notifications











