ಕಿಚ್ಚ ಸುದೀಪ್ ಬದಲು ರಿಷಬ್ ಶೆಟ್ಟಿ ಬಿಗ್ಬಾಸ್ ಹೊಸ ಸೀಸನ್ ನಿರೂಪಣೆ?
ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್. ಹಿಂದಿ ಬಳಿಕ ಕನ್ನಡದಲ್ಲಿ ಈ ಶೋ ಸೂಪರ್ ಸಕ್ಸಸ್ ಕಂಡಿದೆ. ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಶೋ ಅದ್ಭುತವಾಗಿ ಮೂಡಿ ಬರುತ್ತಿದೆ. ಈಗಾಗಲೆ 10 ಸೀಸನ್ ಯಶಸ್ವಿಯಾಗಿ ಮುಕ್ತಾಯವಾಗಿದೆ. 11 ಸೀಸನ್ಗೆ ವೇದಿಕೆ ಸಿದ್ಧವಾಗ್ತಿದೆ.
ವಿಭಿನ್ನ ಕ್ಷೇತ್ರಗಳ ವಿಭಿನ್ನ ಮನಸ್ಥಿತಿಯ 15 ಜನ ವ್ಯಕ್ತಿಗಳನ್ನು ಒಂದೇ ಮನೆಯಲ್ಲಿ ಕೂಡಿ ಹಾಕುವುದು. ಅವರಿಗೆ ಮೊಬೈಲ್ ಫೋನ್ ಇಲ್ಲದೇ ಹೊರಗಿನ ಪ್ರಪಂಚದ ಸಂಪರ್ಕ ಇಲ್ಲದೇ 100 ದಿನಗಳ ಕಾಲ ಒಂದೇ ಮನೆಯಲ್ಲಿ ಇರುವಂತೆ ಮಾಡುವುದು. ಮನೆ ಒಳಗೆ ಟಾಸ್ಕ್ಗಳನ್ನು ಕೊಟ್ಟು ಆಟ ಆಡಿಸಲಾಗುತ್ತದೆ. ವಾರಕ್ಕೊಬ್ಬರು ಎಲಿಮಿನೇಟ್ ಆಗಿ ಹೊರ ಬರುತ್ತಾರೆ. 100 ದಿನಗಳ ಕಾಲ ಯಶಸ್ವಿಯಾಗಿ ದೊಡ್ಮನೆಯಲ್ಲಿ ಉಳಿದುಕೊಂಡವರಲ್ಲಿ ಒಬ್ಬರಿಗೆ ಭಾರೀ ಬಹುಮಾನ ಸಿಗಲಿದೆ.

ಬಾಲಿವುಡ್ನಲ್ಲಿ ಸಲ್ಮಾನ್ ಖಾನ್ ಬಿಗ್ಬಾಸ್ ಶೋ ನಿರೂಪಣೆ ಮಾಡಿ ಗಮನ ಸೆಳೆದರು. ಆದರೆ ಸಲ್ಲುನ ಮೀರಿಸುವಂತೆ ಹೋಸ್ಟ್ ಆಗಿ ಗೆದ್ದವರು ಕಿಚ್ಚ ಸುದೀಪ್. ಕನ್ನಡ ಬಳಿಕ ತೆಲುಗು, ತಮಿಳು, ಮಲಯಾಳಂನಲ್ಲಿ ಶೋ ಶುರುವಾಯಿತು. ಆದರೆ ಕನ್ನಡದಲ್ಲಿ ಸಿಕ್ಕ ಜನಪ್ರಿಯತೆ ಯಶಸ್ಸು ಬೇರೆ ಭಾಷೆಗಳಲ್ಲಿ ಸಿಗಲಿಲ್ಲ. ಅಕ್ಟೋಬರ್ ಮೊದಲ ವಾರದಲ್ಲಿ ಬಿಗ್ಬಾಸ್ ಕನ್ನಡ ಸೀಸನ್-11 ಶುರುವಾಗಲಿದೆ.
ಈಗಾಗಲೇ ಸ್ಪರ್ಧಿಗಳ ಆಯ್ಕೆ ನಡೆಯುತ್ತಿದೆ. ಇತ್ತೀಚೆಗೆ ಕಿರುತೆರೆ ನಟಿ ಜ್ಯೋತಿರೈ ತಮಗೆ ಆಫರ್ ಬಂದಿತ್ತು. ಆದರೆ ನನಗೆ ಬೇರೆ ಕಮೀಟ್ಮೆಂಟ್ಸ್ ಇರುವುದರಿಂದ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಬಹಿರಂಗವಾಹಿ ಹೇಳಿಕೊಂಡಿದ್ದಾರೆ. ಇನ್ನುಳಿದಂತೆ ಈ ಬಾರಿ ಬಿಗ್ಬಾಸ್ ಮನೆ ಒಳಗೆ ಹೋಗಲು ಹಲವರ ಹೆಸರುಗಳು ಕೇಳಿಬರ್ತಿದೆ. ಅದರಲ್ಲಿ ಒಂದಷ್ಟು ಜನ ಕಿರುತೆರೆ ಕಲಾವಿದರು ಇದ್ದಾರೆ.
ಸ್ಪರ್ಧಿಗಳ ವಿಚಾರ ಪಕ್ಕಕ್ಕಿಟ್ಟರೆ ಈ ಬಾರಿ ಶೋ ನಿರೂಪಣೆ ಮಾಡುವುದು ಯಾರು? ಎನ್ನುವ ಚರ್ಚೆ ಶುರುವಾಗಿದೆ. ಅರೇ, ಕಿಚ್ಚ ಸುದೀಪ್ ಅಲ್ಲವೇ? ಅದರಲ್ಲಿ ಚರ್ಚೆ ಮಾಡಲು ಏನಿದೆ? ಎಂದು ಕೆಲವರು ಕೇಳಬಹುದು. ಆದರೆ ನಿರೂಪಕರು ಬದಲಾಗಬಾರದು ಎನ್ನುವ ನಿಯಮ ಇಲ್ಲ ಅಲ್ಲವೇ? ಇತ್ತೀಚೆಗೆ ತಮಿಳು ನಟ ಕಮಲ್ ಹಾಸನ್ ಬಿಗ್ಬಾಸ್ ಶೋ ನಿರೂಪಣೆಗೆ ಹಿಂದೇಟು ಹಾಕಿದ್ದರು. ಬೇರೆ ಕೆಲಸಗಳ ಕಾರಣ ಕೊಟ್ಟಿದ್ದರು.

ಕನ್ನಡದಲ್ಲಿ ಸುದೀಪ್ ಬದಲು ರಿಷಬ್ ಶೆಟ್ಟಿ ಶೋ ನಡೆಸಿಕೊಡುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ. ಈ ಬಾರಿ ಸುದೀಪ್ ಶೋ ನಿರೂಪಣೆಯಿಂದ ಹಿಂದೆ ಸರಿದಿದ್ದಾರೆ. ಹಾಗಾಗಿ ರಿಷಬ್ ಶೆಟ್ಟಿ ಅಥವಾ ರಮೇಶ್ ಅರವಿಂದ್ ನಿರೂಪಕರಾಗಬಹುದು ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಇದು ಅಭಿಮಾನಿಗಳ ಬೇಸರಕ್ಕೂ ಕಾರಣವಾಗಿದೆ. ಆದರೆ ಕಲರ್ಸ್ ಕನ್ನಡ ಆಪ್ತ ಮೂಲಗಳ ಪ್ರಕಾರ ಇದು ಸತ್ಯಕ್ಕೆ ದೂರವಾದ ಮಾತು.
ನಟ ಸುದೀಪ್ ಯಶಸ್ವಿಯಾಗಿ 10 ಸೀಸನ್ ನಡೆಸಿಕೊಟ್ಟಿದ್ದಾರೆ. 11ನೇ ಸೀಸನ್ಗೂ ಅವರೇ ನಿರೂಪಕರು. ಇದರಲ್ಲಿ ಯಾವುದೇ ಗೊಂದಲ ಬೇಡ. ಸುದೀಪ್ ಬಹಳ ಇಷ್ಟಪಟ್ಟು ಶೋ ನಡೆಸಿಕೊಡುತ್ತಿದ್ದಾರೆ. ಹಿಂದಿನ ಸೀಸನ್ಗಳ ವೇಳೆ ಶೂಟಿಂಗ್ ನಿಮಿತ್ತ ಬೇರೆ ಬೇರೆ ಊರಿನಲ್ಲಿ ಇದ್ದರೂ ವೀಕೆಂಡ್ನಲ್ಲಿ ದೊಡ್ಮನೆ ವೇದಿಕೆ ಏರುತ್ತಿದ್ದರು. ಕಳೆದ ಸೀಸನ್ ವೇಳೆ 'ಮ್ಯಾಕ್ಸ್' ಚಿತ್ರೀಕರಣಕ್ಕಾಗಿ ಚೆನ್ನೈನಲ್ಲಿ ಇರುತ್ತಿದ್ದರು. ಆದರೂ ವೀಕೆಂಡ್ನಲ್ಲಿ ವಿಮಾನ ಏರಿ ಬೆಂಗಳೂರಿಗೆ ಬಂದುಬಿಡುತ್ತಿದ್ದರು.
ಬಿಗ್ಬಾಸ್ ಶೋ ನಿರೂಪಣೆಗಾಗಿ ಸುದೀಪ್ ಒಳ್ಳೆ ಸಂಭಾವನೆ ಕೂಡ ಪಡೆಯುತ್ತಿದ್ದಾರೆ. ಸೀಸನ್ನಿಂದ ಸೀಸನ್ಗೆ ಅದು ಹೆಚ್ಚಾಗುತ್ತಿದೆ. ಹಾಗಾಗಿ ಶೋ ಬಿಡುವ ಯಾವುದೇ ಆಲೋಚನೆ ಅವರಿಗಿಲ್ಲ. ಸದ್ಯ 'ಮ್ಯಾಕ್ಸ್' ಶೂಟಿಂಗ್ ಮುಗಿದಿದೆ. ಈ ಬಾರಿ ಬಿಗ್ಬಾಸ್ -11 ಮುಗಿಸಿ ಹೊಸ ಸಿನಿಮಾ ಚಿತ್ರೀಕರಣಕ್ಕೆ ಹೋಗುವ ನಿರೀಕ್ಷೆಯಿದೆ. ಮತ್ತೊಂದು ಕಡೆ ರಿಷಬ್ ಶೆಟ್ಟಿ 'ಕಾಂತಾರ-1' ಚಿತ್ರದಲ್ಲಿ ಮುಳುಗಿದ್ದಾರೆ. ಅವರು ಬಿಗ್ಬಾಸ್ ಕಡೆ ಮುಖಮಾಡುವುದು ಸಾಧ್ಯವೇಯಿಲ್ಲ.


Click it and Unblock the Notifications











