'ಶಿವಾಜಿ' ಕತೆ ನಿಜ ಮಾಡ್ತಾರಾ ರಜನಿಕಾಂತ್? 12 ಎಕರೆ ಜಾಗದಲ್ಲಿ ಆಸ್ಪತ್ರೆ ನಿರ್ಮಾಣ?
'ಜೈಲರ್' ಸಕ್ಸಸ್ ಸಂಭ್ರಮದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾ ಮಾಡುವ ಸ್ಪೀಡ್ ಹೆಚ್ಚಿಸಿದ್ದಾರೆ. ಇತ್ತೀಚೆಗೆ ಬಂದ 'ಲಾಲ್ ಸಲಾಂ' ಚಿತ್ರದ ವಿಶೇಷ ಪಾತ್ರದಲ್ಲಿ ತಲೈವಾ ನಟಿಸಿದ್ದರು. ಆದರೆ ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ. ಸದ್ಯ 'ವೆಟ್ಟೈಯಾನ್' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
ಜೀರೊ ಇಂದ ಹೀರೋ ಆದವರು, ಸ್ಟಾರ್, ಸೂಪರ್ ಸ್ಟಾರ್ ಆದವರು ರಜನಿಕಾಂತ್. ಸಾಕಷ್ಟು ಏಳುಬೀಳು ಕಂಡು ಇದೀಗ ಭಾರತೀಯ ಚಿತ್ರರಂಗದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಟನಾಗಿ ರಜನಿಕಾಂತ್ ನಮ್ಮ ಮುಂದಿದ್ದಾರೆ. ಆದರೂ ತಲೈವಾ ಹಳೆಯದನ್ನು ಮರೆತ್ತಿಲ್ಲ. ಸಾಕಷ್ಟು ಜನರಿಗೆ ಕೈಲಾದ ಸಹಾಯ ಮಾಡುತ್ತಾ ಬರುತ್ತಿದ್ದಾರೆ. ಆದರೆ ಬಲಗೈಲಿ ಮಾಡಿದ್ದು ಎಡಗೈಗೂ ಗೊತ್ತಾಗದಂತೆ ಎಚ್ಚರ ವಹಿಸುತ್ತಾರೆ.

ಏನು ಇಲ್ಲದೇ ಬಂದ ನನಗೆ ತಮಿಳುನಾಡಿನ ಜನ ಸಾಕಷ್ಟು ಕೊಟ್ಟಿದ್ದರು. ಅವರಿಗೆ ಮರಳಿ ಏನಾದರೂ ಕೊಡಬೇಕು. ಜನಸೇವೆ ಮಾಡಬೇಕು ಎನ್ನುವುದು ರಜನಿಕಾಂತ್ ಕನಸಾಗಿತ್ತು. ಅದೇ ಕಾರಣಕ್ಕೆ ಪೊಲಿಟಿಕಲ್ ಎಂಟ್ರಿಗೆ ಸಿದ್ಧರಾಗಿದ್ದರು. ಹೊಸ ಪಕ್ಷ ಕಟ್ಟಿ ಸಿಎಂ ಆಗುವ ಮನಸ್ಸು ಮಾಡಿದ್ದರು. ಆದರೆ ಕೊನೆ ಕ್ಷಣದಲ್ಲಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು. ಆರೋಗ್ಯದ ನೆಪವೊಡ್ಡಿ ತಮ್ಮ ನಿರ್ಧಾನ ವಾಪಸ್ ಪಡೆದಿದ್ದರು.
ರಾಜಕೀಯರಂಗಕ್ಕೆ ಬರಲ್ಲ ಎಂದು ಘೋಷಿಸಿದ ರಜನಿಕಾಂತ್ ಸದ್ಯ ಸಿನಿಮಾಗಳಲ್ಲಿ ಮುಂದುವರೆಯುತ್ತಿದ್ದಾರೆ. ಜೊತೆಗೆ ಜನರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಇದೀಗ 12 ಎಕರೆ ಜಾಗದಲ್ಲಿ ದೊಡ್ಡ ಆಸ್ಪತ್ರೆ ನಿರ್ಮಾಣಕ್ಕೆ ತಲೈವಾ ಮುಂದಾಗಿದ್ದಾರೆ ಎನ್ನುಚ ಗುಸುಗುಸು ಶುರುವಾಗಿದೆ. ಇತ್ತೀಚೆಗೆ ಸೂಪರ್ ಸ್ಟಾರ್ 12 ಎಕತೆ ಜಾಗ ಖರೀದಿಸಿದ್ದು ಇದು ಆಸ್ಪತ್ರೆ ನಿರ್ಮಾಣಕ್ಕೆ ಎನ್ನಲಾಗುತ್ತಿದೆ.
ಶಂಕರ್ ನಿರ್ದೇಶನದ 'ಶಿವಾಜಿ' ಸಿನಿಮಾ ಸೂಪರ್ ಹಿಟ್ ಆಗಿತ್ತು. ರಜನಿಕಾಂತ್ ಹೀರೊ ಆಗಿ ನಟಿಸಿದ್ದರು. ಚಿತ್ರದಲ್ಲಿ ಎನ್ಆರ್ಐ ಶಿವಾಜಿ ಆರುಮುಗಂ ಪಾತ್ರದಲ್ಲಿ ರಜನಿಕಾಂತ್ ಕಾಣಿಸಿಕೊಂಡಿದ್ದರು. ಅಮೆರಿಕಾದಲ್ಲಿ ಕೋಟಿ ಕೋಟಿ ದುಡಿದು ಆ ಹಣ ತಂದು ತನ್ನ ಊರಲ್ಲಿ ಬಡವರಿಗಾಗಿ ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು ನಿರ್ಮಿಸಿ ಜನಸೇವೆ ಮಾಡುವ ನಾಯಕನ ಕತೆ ಅದು. ಆದರೆ ಆತನ ಪ್ರಯತ್ನಕ್ಕೆ ಎದುರಾಳಿಗಳು ಹೇಗೆಲ್ಲಾ ಅಡ್ಡಗಾಲು ಹಾಕುತ್ತಾರೆ ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿತ್ತು.
ಬಡವರಿಗೆ ಕಡಿಮೆ ವೆಚ್ಚ ಅಥವಾ ಉಚಿತವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ, ಶಾಲಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಸಿಗಬೇಕು ಎಂದು ಕನಸು ಕಾಣುವ ನಾಯಕನಾಗಿ ರಜನಿಕಾಂತ್ ಸಿನಿರಸಿಕರ ಮನಗೆದ್ದಿದ್ದರು. ಇದೀಗ ನಿಜ ಜೀವನದಲ್ಲಿ ಕೂಡ ರಜನಿಕಾಂತ್ ಬಡವರಿಗಾಗಿ ಆಸ್ಪತ್ರೆ ನಿರ್ಮಿಸುತ್ತಾರೆ ಎನ್ನುವ ಚರ್ಚೆ ಶುರುವಾಗಿದೆ. ಅದರ ಬೆನ್ನಲ್ಲೇ ಕೆಲವರು 'ಶಿವಾಜಿ' ಸಿನಿಮಾ ಕಥೆ ನೆನಪಿಸಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ರಜನಿಕಾಂತ್ ಚೆನ್ನೈನ ತಿರುಪ್ಪೋರೂರಿನ ರಿಜಿಸ್ಟ್ರಾರ್ ಕಚೇರಿಗೆ ಹೋಗಿದ್ದರು. ಅಲ್ಲಿ ಹೊಸದಾಗಿ ಖರೀದಿಸಿದ ಜಮೀನಿನ ನೋಂದಣಿಯನ್ನು ಪೂರ್ಣಗೊಳಿಸಿದರು. ರಜನಿಕಾಂತ್ ಬರ್ತಾರೆ ಎಂದು ತಿಳಿದ ಅಭಿಮಾನಿಗಳು ಅವರನ್ನು ನೋಡಲು ಜಮಾಯಿಸಿದ್ದರು. ಇದರಿಂದ ಕೆಲವೊತ್ತು ಅಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಚೆನ್ನೈ ಒಎಂಆರ್ ರಸ್ತೆಯಿಂದ ದಲ್ಹಾಂಪುರಕ್ಕೆ ಹೋಗುವ ಮಾರ್ಗದಲ್ಲಿ ರಜನಿ 12 ಎಕರೆ ಜಮೀನು ಖರೀದಿಸಿದ್ದಾರೆ. ಡಿಡಿ ದಾಖಲಿಸಲು ರಜನಿ ತಿರುಪೋರೂರು ರಿಜಿಸ್ಟ್ರಾರ್ ಕಚೇರಿಗೆ ಬಂದಿದ್ದರು ಎನ್ನು ಚರ್ಚೆ ಈಗ ಶುರುವಾಗಿದೆ.

ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ರಜನಿಕಾಂತ್ ಆಪ್ತರಿಗೆ ಆಸ್ಪತ್ರೆ ನಿರ್ಮಾಣದ ಜವಾಬ್ದಾರಿ ವಹಿಸುತ್ತಾರೆ ಎನ್ನಲಾಗ್ತಿದೆ. ಸದ್ಯ ಇದೆಲ್ಲಾ ಬರೀ ಅಂತೆ ಕಂತೆ ಸುದ್ದಿ ಆಗಿದ್ದು ಅಧಿಕೃತವಾಗಿ ಯಾವುದೇ ಮಾಹಿತಿ ಇನ್ನು ಸಿಕ್ಕಿಲ್ಲ. ಇನ್ನು 'ವೆಟ್ಟೈಯಾನ್' ಬಳಿಕ ಲೋಕೇಶ್ ಕನಕರಾಜ್ ನಿರ್ದೇಶನದ ಚಿತ್ರದಲ್ಲಿ ಸೂಪರ್ ಸ್ಟಾರ್ ನಟಿಸಲಿದ್ದಾರೆ. ಇತ್ತೀಚೆಗೆ ಬಾಲಿವುಡ್ ನಿರ್ಮಾಪಕ ಸಾಜಿದ್ ನಾಡಿಯಾವಾಲ ಜೊತೆ ಒಂದು ಸಿನಿಮಾ ಮಾಡುವ ಬಗ್ಗೆ ರಜನಿಕಾಂತ್ ಚರ್ಚಿಸಿದ್ದಾರೆ.


Click it and Unblock the Notifications










