ಸ್ಪೇನ್ನಲ್ಲಿ ಅನಿರುದ್ದ್ ಹಾಗೂ ಕಾವ್ಯಾ ಮಾರನ್ ಮದುವೆ? ನಟ ರಜನಿಕಾಂತ್ ಮಧ್ಯಸ್ಥಿಕೆ?
ತಾರೆಯರ ಡೇಟಿಂಗ್ ವದಂತಿ ಹೊಸದೇನು ಅಲ್ಲ. ಸಿನಿಮಾ, ರಾಜಕೀಯ, ಕ್ರಿಕೆಟ್ ಲೋಕದಲ್ಲಿ ಜನಪ್ರಿಯತೆ ಗಳಿಸಿದವರು ಕದ್ದುಮುಚ್ಚಿ ಸುತ್ತಾಡುವುದನ್ನು ಬಹಳ ದಿ ಮುಚ್ಚಿಡೋಕೆ ಸಾಧ್ಯವಿಲ್ಲ. ಮೊಬೈಲ್ ಕ್ಯಾಮರಾ, ಸೋಶಿಯಲ್ ಮೀಡಿಯಾ ಜಮಾನದಲ್ಲಿ ಅದು ಬಹಳ ಕಷ್ಟ ಬಿಡಿ. ಹೀಗೆ ಕದ್ದುಮುಚ್ಚಿ ಓಡಾಡುವವರು ಬಳಿಕ ಮದುವೆ ಆಗಿ ಅಚ್ಚರಿ ಮೂಡಿಸಿರುವುದು ಇದೆ.
ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಉದ್ಯಮಿ ಮತ್ತು ಐಪಿಎಲ್ (IPL) ಫ್ರಾಂಚೈಸಿ ಸನ್ರೈಸರ್ಸ್ ಹೈದರಾಬಾದ್ನ (SRH) ಸಹ-ಮಾಲಕಿ ಕಾವ್ಯಾ ಮಾರನ್ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಗುಸುಗುಸು ಬಹಳ ದಿನಗಳಿಂದ ಕೇಳಿಬರ್ತಿದೆ. ಇದೆಲ್ಲಾ ಸುಳ್ಳು ಎಂದು ಅನಿರುದ್ದ್ ಸೋಶಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ. ಆದರೂ ವದಂತಿ ಮಾತ್ರ ಕಮ್ಮಿ ಆಗ್ತಿಲ್ಲ. ಇದೀಗ ಡೇಟಿಂಗ್ ಅಲ್ಲ, ಇಬ್ಬರ ಮದುವೆ ಬಗ್ಗೆ ಊಹಾಪೋಹ ಶುರುವಾಗಿದೆ. ವರ್ಷದ ಕೊನೆಗೆ ಮದುವೆ ಆಗುತ್ತಾರೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ.

ಸನ್ ಗ್ರೂಪ್ನ ಮುಖ್ಯಸ್ಥರಾದ ಕಲಾನಿಧಿ ಮಾರನ್ ಪುತ್ರಿ ಕಾವ್ಯಾ. ತಮಿಳು ಹಾಗೂ ತೆಲುಗು ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್. ಸನ್ ಪಿಕ್ಚರ್ಸ್ ಸಂಸ್ಥೆ ನಿರ್ಮಾಣದ ಸಿನಿಮಾಗಳಲ್ಲಿ ಅನಿರುದ್ದ್ ಕೆಲಸ ಮಾಡಿದ್ದಾರೆ. ನ್ಯೂಯಾರ್ಕ್ನಲ್ಲಿ ಇಬ್ಬರೂ ಒಟ್ಟಿಗೆ ಸುತ್ತಾಡುತ್ತಿರುವ ಫೋಟೊಗಳು ವೈರಲ್ ಆಗಿ ಭಾರೀ ಚರ್ಚೆಗೆ ಗ್ರಾಸವಾಗತ್ತು. ಇದೀಗ ಸ್ಪೇನ್ ದೇಶದಲ್ಲಿ ಇಬ್ಬರ ಮದುವೆಗೆ ಸಿದ್ಧತೆ ನಡೀತಿದೆ ಎನ್ನುವ ಗುಸುಗುಸು ಶುರುವಾಗಿದೆ.
ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಅನಿರುದ್ಧ್ ಸಂಬಂಧಿಕರು ಎನ್ನುವುದು ಬಹಳ ಜನಕ್ಕೆ ಗೊತ್ತಿಲ್ಲ. ಅನಿರುದ್ಧ್ ತಾಯಿ ಲಕ್ಷ್ಮಿ ರವಿಚಂದರ್ ಹಾಗೂ ರಜನಿಕಾಂತ್ ಪತ್ನಿ ಲತಾ ಸಹೋದರಿಯಾಗಿರುವುದರಿಂದ ವರಸೆಯಲ್ಲಿ ಸೂಪರ್ ಸ್ಟಾರ್ ಅವರ ಚಿಕ್ಕಪ್ಪ ಆಗಬೇಕು. ಸನ್ ಗ್ರೂಪ್ನ ಮುಖ್ಯಸ್ಥ ಕಲಾನಿಧಿ ಮಾರನ್ ಹಾಗೂ ರಜನಿಕಾಂತ್ ನಡುವೆ ಆತ್ಮೀಯ ಒಡನಾಟವಿದೆ. ಹಾಗಾಗಿ ಸ್ವತಃ ರಜನಿಕಾಂತ್ ಮುಂದೆ ನಿಂತು ಅನಿರುದ್ಧ್ ಹಾಗೂ ಕಾವ್ಯಾ ಮದುವೆ ಮಾಡಿಸುತ್ತಿದ್ದಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ಆದರೆ ಈ ಬಗ್ಗೆ ಖಚಿತ ಮಾಹಿತಿ ಇಲ್ಲ. ಎಲ್ಲಾ ಬರೀ ಅಂತೆಕಂತೆ ಸುದ್ದಿ ಎನ್ನಲಾಗ್ತಿದೆ.
ಇತ್ತೀಚೆಗೆ ರಜನಿಕಾಂತ್ ಬಗ್ಗೆ ಸಾಕಷ್ಟು ವದಂತಿ ಹರಡಲಾಗುತ್ತಿದೆ. ನಟ ವಿಜಯ್ ತಮಿಳುನಾಡು ಸಿಎಂ ಪಟ್ಟಕ್ಕೇರಿದ್ದು ರಜನಿಕಾಂತ್ ಅವರಿಗೆ ಇಷ್ಟವಿಲ್ಲ. ಅದಕ್ಕೆ ಡಿಎಂಕೆ ಹಾಗೂ ಎಡಿಎಂಕೆ ಪಕ್ಷಗಳು ಸೇರಿ ಸರ್ಕಾರ ರಚಿಸುವಂತೆ ರಜನಿಕಾಂತ್ ಸಲಹೆ ನೀಡಿದ್ದಾರೆ. ವಿಜಯ್ ಸಿಎಂ ಆಗಿರುವುದು ತಲೈವಾಗೆ ಅಸೂಯೆ ಅಂತೆಲ್ಲಾ ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ ಎಲ್ಲದಕ್ಕೂ ರಜನಿಕಾಂತ್ ಬ್ರೇಕ್ ಹಾಕಿದ್ದರು. ಸದ್ಯ ಕಾವ್ಯಾ- ಅನಿರುದ್ದ್ ಮದುವೆ ವದಂತಿಗೆ ತಲೈವಾ ಹೆಸರು ತಳುಕು ಹಾಕಲಾಗ್ತಿದೆ.
ಹಲವು ಹಿಟ್ ಸಿನಿಮಾಗಳಿಗೆ ಅನಿರುದ್ಧ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. 'ಟಾಕ್ಸಿಕ್' ಚಿತ್ರಕ್ಕೂ ಅನಿರುದ್ಧ್ ಜೊತೆ ಚರ್ಚಿಸಿದ್ದಾರೆ ಎನ್ನಲಾಗಿತ್ತು. ಕೊನೆಗೆ ರವಿಬಸ್ರೂರು ಆ ಜವಾಬ್ದಾರಿ ವಹಿಸಿಕೊಂಡರು. 'ತ್ರೀ', 'ವಿಐಪಿ', 'ಕತ್ತಿ', 'ತಿರುಚಿತ್ರಂಬಲಂ', 'ವಿಕ್ರಂ', 'ಲಿಯೋ', 'ಜವಾನ್', 'ಜೈಲರ್', 'ಜನನಾಯಗನ್' ರೀತಿಯ ಹಿಟ್ ಸಿನಿಮಾಗಳಿಗೆ ಅನಿರುದ್ದ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ನಟಿಯರಾದ ಆಂಡ್ರಿಯಾ, ಪ್ರಿಯಾ ಆನಂದ್, ಕೀರ್ತಿ ಸುರೇಶ್ ಜೊತೆ ಅನಿರುದ್ಧ್ ಹೆಸರು ತಳಕು ಹಾಕಿಕೊಂಡಿತ್ತು. ಇದೀಗ ಕಾವ್ಯಾ ಮಾರನ್ ಜೊತೆ ಡೇಟಿಂಗ್ ವದಂತಿ ಹರಿದಾಡ್ತಿದೆ. ಇಬ್ಬರೂ ಅಧಿಕೃತವಾಗಿ ಪ್ರತಿಕ್ರಿಯಿಸದೇ ಇರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.


Click it and Unblock the Notifications