twitter
    For Quick Alerts
    ALLOW NOTIFICATIONS  
    For Daily Alerts

    ಹಾದಿ ತಪ್ಪಿಸಿದ ಉಪೇಂದ್ರಬುದ್ಧಿ ಹೇಳಲಿರುವ ಜಿತೇಂದ್ರ

    By Staff
    |

    * ಸತ್ಯನಾರಾಯಣ

    ಚಿತ್ರದ ಕತೆ, ಪಾತ್ರಗಳ ಕಾಸ್ಟ್ಯೂಮ್‌ ನೋಡಿದವರೆಲ್ಲರೂ ಈ ಮಾತಿಗೆ ತಲೆದೂಗುವುರಾದರೂ ಚಿತ್ರದ ನಿರ್ದೇಶಕ ವಿಶ್ವನಾಥ್‌, ನಾಯಕ ಜಗ್ಗೇಶ್‌ ಮಾತ್ರ ಬಿಲ್‌ಕುಲ್‌ ಅಲ್ಲ ಅಂತಾರೆ. ಇತ್ತೀಚೆಗೆ ಜಿತೇಂದ್ರ ಚಿತ್ರದ ಸೆಟ್‌ಗೆ ಭೇಟಿಕೊಟ್ಟ ಪತ್ರಕರ್ತರಿಗೆ ಕಾಣಿಸಿದ್ದು ಜಗ್ಗೇಶ್‌ ಅವರ ಮಾಂತ್ರಿಕನ ವೇಷ. ತಲೆಯ ಮೇಲೆ ಜುಟ್ಟು, ಪುಟ್ಟ ದಾಡಿ.

    ಇದು ಉಪೇಂದ್ರ ಚಿತ್ರದ ನಾಯಕನ ವೇಷದ ಡಿಟ್ಟೋ. ಹಾಗಂತ ಜಗ್ಗೇಶ್‌ ಮುಂದೆ ಹೇಳಿದರೆ ಅವರು ತೀರಾ ಮುಗ್ಧವಾಗಿ ನಾನು ಉಪೇಂದ್ರ ಚಿತ್ರವನ್ನೇ ನೋಡಿಲ್ಲ ಅಂದರು. ಅಷ್ಟೇಕೆ ಜಿತೇಂದ್ರ ಚಿತ್ರದ ಕತೆಯೂ ಅವರಿಗೆ ಗೊತ್ತೇ ಇಲ್ಲವಂತೆ !

    ಹಾಗಿದ್ದೂ ಉಪೇಂದ್ರ ಚಿತ್ರದಲ್ಲಿ ನಾಯಕ ಇದೇ ಗೆಟಪ್‌ನಲ್ಲಿ ತನ್ನ ಅಪ್ಪನ ಮೇಲೆಯೇ ಹರಿಹಾಯುತ್ತಾನೆ ಅನ್ನೋದು ಗೊತ್ತಿದೆ. ಅದು ಸರಿಯಲ್ಲ ಅಂತ ಯಾರೋ ಹೇಳಿದ್ದಾರಂತೆ. ಅಂತೂ ಉಪೇಂದ್ರ ಚಿತ್ರದಲ್ಲಾದ ತಪ್ಪುಗಳನ್ನು ತಿದ್ದೋದಕ್ಕೆ ಜಗ್ಗೇಶ್‌ ಸನ್ನದ್ಧರಾಗಿದ್ದಾರೆ ಅನ್ನೋದು ಖಾತ್ರಿ. ನಿರ್ದೇಶಕ ವಿಶ್ವನಾಥ್‌ ಮಾತಲ್ಲಿ ಅದು ಇನ್ನಷ್ಟು ಸ್ಪಷ್ಟವಾಯಿತು. ಉಪೇಂದ್ರ ತಮ್ಮ ಚಿತ್ರದಲ್ಲಿ ಸಮಾಜವನ್ನು ಬೈತಾರೆ, ಪಾತ್ರಗಳನ್ನು ಬೈತಾರೆ, ಇಡೀ ಜಗತ್ತೇ ಕುರೂಪವಾಗಿದೆ ಅನ್ನೋ ಸ್ಟೇಟ್‌ಮೆಂಟ್‌ ಕೊಡ್ತಾರೆ. ಆದರೆ ನೋಡುವ ಕಣ್ಣು ಸರಿಯಿದ್ದರೆ ಜಗತ್ತು ಸುಂದರವಾಗಿಯೇ ಇರುತ್ತದೆ ಅನ್ನೋದನ್ನು ಸಾಬೀತು ಪಡಿಸೋದಕ್ಕೆ ಜಿತೇಂದ್ರ ಚಿತ್ರ ಮಾಡುತ್ತಿದ್ದಾರಂತೆ ವಿಶ್ವನಾಥ್‌.

    ಅಲ್ಲಿಗೆ ಇದು ಆ್ಯಂಟಿ ಉಪೇಂದ್ರ ಚಿತ್ರ ಅನ್ನೋದು ಗ್ಯಾರಂಟಿಯಾಯಿತು. ಇದೂ ಸಾಲದು ಎಂಬಂತೆ ಇಲ್ಲೂ ಒಂದು ವೇಶ್ಯೆ ಪಾತ್ರವಿದೆ. ಉಪೇಂದ್ರ ಚಿತ್ರದಲ್ಲಿ ಆ ಪಾತ್ರವನ್ನು ಪ್ರೇಮಾ ಮಾಡಿದ್ದರು.

    ಜಗ್ಗೇಶ್‌ ಮತ್ತು ಉಪೇಂದ್ರ ಅವರ ಜಗಳ ಹಳೇದು. ನಟನಾಗಿ ಜಗ್ಗೇಶ್‌ ಉಪೇಂದ್ರನಿಗಿಂತ ಸೀನಿಯರ್‌ ಆಗಿದ್ದರೂ ಜನಪ್ರಿಯತೆಯಲ್ಲಿ ಉಪೇಂದ್ರ ಮೈಲುದ್ದ ಮುಂದಿದ್ದಾರೆ. ಇವರಿಬ್ಬರಿಗೂ ಚಾಮರಾಜ ಪೇಟೆಯ ಆಸು ಪಾಸಿನಲ್ಲಿ ಅಭಿಮಾನಿಗಳಿದ್ದಾರೆ. ತನ್ನ ಅಭಿಮಾನಿಗಳನ್ನು ಉಪೇಂದ್ರ ಕಿಡ್ನಾಪ್‌ ಮಾಡಿ ಅಭಿಮಾನಿ ಸಂಘ ಕಟ್ಟಿದ್ದಾರೆ ಎಂದು ಜಗ್ಗೇಶ್‌ ನೇರವಾಗಿಯೇ ಆರೋಪಿಸಿದ್ದೂ ಉಂಟು. ಈಗ ಅವರು ನೇರವಾಗಿಯೇ ಕಾಲುಕೆದರಿ ಜಗಳಕ್ಕಿಳಿದಿದ್ದಾರೆ.

    ಕನ್ನಡ ಚಿತ್ರರಂಗದ ಮಟ್ಟಿಗೆ ಇಂಥಾ ಬೀದಿ ಜಗಳ ಹೊಸದು. ಈ ಹಿಂದೆ ರಾಜ್‌ ಮತ್ತು ವಿಷ್ಣು ನಡುವೆ ಸ್ಪರ್ಧೆಯಿದ್ದರೂ ಅವರಿಬ್ಬರೂ ಎಂದೂ ಪರಸ್ಪರ ದೋಷಾರೋಪಗಳಲ್ಲಿ ತೊಡಗಿರಲಿಲ್ಲ . ಅವರ ಅಭಿಮಾನಿಗಳಷ್ಟೇ ಬಡಿದಾಡಿಕೊಳ್ಳುತ್ತಿದ್ದರು. ಅದೇ ಥರ ಶಿವರಾಜ್‌ ಕುಮಾರ್‌ ಮತ್ತು ಉಪೇಂದ್ರ ಅಭಿಮಾನಿಗಳ ನಡುವೆ ಜಗಳವಿದ್ದರೂ ಅದು ಪ್ರೀತ್ಸೆ ಚಿತ್ರ ತೆರೆ ಕಂಡ ನಂತರ ಸ್ತಬ್ಧವಾಗಿದೆ. ದಿಗ್ಗಜರು ಚಿತ್ರಕ್ಕೆ ಸಂಬಂಧಿಸಿದಂತೆ ವಿನಾಕಾರಣ ಅಭಿಮಾನಿಗಳು ಹೊಡೆದಾಡುತ್ತಿರುವುದು ಸದ್ಯದ ಬೆಳವಣಿಗೆ. ಯಾಕೆಂದರೆ ವಿಷ್ಣು ಮತ್ತು ಅಂಬರೀಷ್‌ ಯಾವತ್ತೂ ವೃತ್ತಿ ಬದುಕಲ್ಲಾಗಲೀ, ಖಾಸಗಿ ಬದುಕಲ್ಲಾಗಲಿ ಪ್ರತಿಸ್ಪರ್ಧಿಗಳಾಗಿರಲಿಲ್ಲ. ಇಬ್ಬರೂ ತಾವು ಜೀವದ ಗೆಳೆಯರು ಅನ್ನೋದನ್ನು ಸಾರ್ವಜನಿಕವಾಗಿಯೇ ಸಾಕಷ್ಟು ಸಾರಿ ಬಹಿರಂಗಗೊಳಿಸಿದ್ದುಂಟು. ಇವೆಲ್ಲದಕ್ಕೂ ಕ್ಷಮೆಯಿದೆ. ಆದರೆ ಜಗ್ಗೇಶ ಮತ್ತು ಉಪೇಂದ್ರರ ನಡುವಣ ಜಗಳಕ್ಕೆ ಕಾರಣಗಳೇ ಇಲ್ಲ. ಯಾಕೆಂದರೆ ಜಗ್ಗೇಶ್‌ ಚಿತ್ರಗಳು ಯಾವತ್ತೂ ಬಜೆಟ್‌ನಲ್ಲಾಗಲೀ, ನಿರೀಕ್ಷೆಯಲ್ಲಾಗಲೀ ಉಪೇಂದ್ರ ಚಿತ್ರದ ಅರ್ಧಕ್ಕೂ ತಲುಪಿಲ್ಲ. ಜೊತೆಗೆ ಉಪೇಂದ್ರರಿಗೆ ಇರುವಂಥಾ ಬಹುಮುಖ ಪ್ರತಿಭೆ ಜಗ್ಗೇಶ್‌ಗಿಲ್ಲ. ಅವರೇನಿದ್ದರೂ ಒಬ್ಬ ನಟ, ಅದರಲ್ಲೂ ಹಾಸ್ಯ ನಟ.

    ಯಾವುದಾದರೂ ಚಿತ್ರ ಯಶಸ್ಸಾದರೆ, ಅದೇ ಟ್ರೆಂಡ್‌ನಲ್ಲಿ ನಾಲ್ಕೈದು ಚಿತ್ರಗಳು ಬರೋದು ಮಾಮೂಲು. ಆದರೆ ಉಪೇಂದ್ರ ವಿಷಯದಲ್ಲಿ ಅದು ಉಲ್ಟಾ ಆಗಿದೆ. ಅವರು ನಿರ್ದೇಶಿಸಿದ ಚಿತ್ರಗಳಿಗೆ ವಿರುದ್ಧವಾದ ಚಿತ್ರ ನಿರ್ಮಿಸಿದರೆ ಜನರ ಗಮನ ಸೆಳೆಯಬಹುದು ಎಂಬುದು ಕೆಲವರ ಲೆಕ್ಕಾಚಾರ. ಬಹುಶಃ ಉಪೇಂದ್ರರನ್ನು ಅನುಕರಿಸೋದಕ್ಕೆ ಸಾಧ್ಯವಾಗದೇ ಇರುವುದೇ ಇದಕ್ಕೆ ಕಾರಣಾಗಿರಬಹುದು. ಈಗಾಗಲೇ ಝಡ್‌ ಎಂಬ ಚಿತ್ರ ಉಪೇಂದ್ರರ ‘ಎ’ ಚಿತ್ರಕ್ಕೆ ಉತ್ತರ ರೂಪದಲ್ಲಿ ಬಂದು ಗಲ್ಲಾ ಪೆಟ್ಟಿಗೆಯಲ್ಲಿ ದಯನೀಯ ಸೋಲು ಕಂಡಿತ್ತು. ಈಗ ಕುಮಾರಸ್ವಾಮಿ ಅಂತಾ ರಿಸ್ಕ್‌ಗೆ ಕೈ ಹಾಕಿದ್ದಾರೆ. ಇದಕ್ಕೆ ಅವರು ಕೊಡುವ ಕಾರಣವೇ ಬೇರೆ. ಉಪೇಂದ್ರ ಚಿತ್ರ ನೋಡಿ ಯುವಜನತೆ ಹಾದಿ ತಪ್ಪಿದೆಯಂತೆ. ಅಂಥವರಿಗೆ ಸಿನಿಮಾ ಬೇರೆ, ವಾಸ್ತವ ಬದುಕು ಬೇರೆ ಅನ್ನೋ ಸತ್ಯವನ್ನು ಮನದಟ್ಟು ಮಾಡಿಕೊಡುವುದೇ ಜಿತೇಂದ್ರ ಚಿತ್ರದ ಉದ್ದೇಶವಂತೆ. ಹಾಗಿದ್ದರೂ ಸಮಾಜಕ್ಕೆ ಸಂದೇಶ ನೀಡುವುದಕ್ಕೆ 35 ಲಕ್ಷ ರೂಪಾಯಿ ಖರ್ಚು ಮಾಡುವುದು ತಮಾಷೆಯಾಗಿಯೇ ಕಾಣಿಸುತ್ತದೆ.

    ವಾರ್ತಾ ಸಂಚಯ
    ಮುಖಪುಟ / ಸ್ಯಾಂಡಲ್‌ವುಡ್‌

    Wednesday, April 24, 2024, 18:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X