'ಪುಷ್ಪ 2'ನಲ್ಲಿ ಮತ್ತೋರ್ವ ಕನ್ನಡದ ನಟಿ?
ತೆಲುಗಿನ 'ಪುಷ್ಪ' ಸಿನಿಮಾ ಬಹುದೊಡ್ಡ ಯಶಸ್ಸು ಕಂಡಿದೆ. ಅಲ್ಲು ಅರ್ಜುನ್ ನಟಿಸಿ, ಸುಕುಮಾರ್ ನಿರ್ದೇಶಿಸಿದ್ದ ಈ ಸಿನಿಮಾ ಕೇವಲ 16 ದಿನಗಳಲ್ಲಿ 200 ಕೋಟಿಗೂ ಹೆಚ್ಚು ಹಣ ಕಲೆಕ್ಷನ್ ಮಾಡಿದೆ.
ರಕ್ತ ಚಂದನ ಮರದ ಕಳ್ಳಸಾಗಣೆಯ ಸುತ್ತ ಹೆಣೆದ 'ಪುಷ್ಪ' ಕತೆ ಮಾಸ್ ಪ್ರೇಕ್ಷಕರಿಗೆ ಮಾತ್ರವೇ ಅಲ್ಲ ಕ್ಲಾಸ್ ಪ್ರೇಕ್ಷಕರಿಗೂ ಇಷ್ಟವಾಗಿದೆ. ಸಿನಿಮಾದ ತೆಲುಗು ಆವೃತ್ತಿ ಮಾತ್ರವಲ್ಲ ಹಿಂದಿ ಆವೃತ್ತಿ ಕೂಡ ಸೂಪರ್ ಹಿಟ್ ಆಗಿದೆ.
'ಪುಷ್ಪ' ಸಿನಿಮಾದಲ್ಲಿ ಕನ್ನಡದ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದರು, ಕನ್ನಡದ ನಟ ಡಾಲಿ ಧನಂಜಯ್ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. 'ಪುಷ್ಪ' ಸಿನಿಮಾದ ಮೊದಲ ಭಾಗವಷ್ಟೆ ಇದೀಗ ಬಿಡುಗಡೆ ಆಗಿದ್ದು, ಸಿನಿಮಾದ ಎರಡನೇ ಭಾಗ ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಆ ಸಿನಿಮಾದಲ್ಲಿ ಕನ್ನಡ ಮೂಲದ ಮತ್ತೊಬ್ಬ ನಟಿ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

'ಪುಷ್ಪ 2' ನಲ್ಲಿ ಕೃತಿ ಶೆಟ್ಟಿ?
ಕರ್ನಾಟಕ ಮೂಲದ ನಟಿ ಕೃತಿ ಶೆಟ್ಟಿ 'ಪುಷ್ಪ 2' ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ತೆಲುಗು ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈಗಾಗಲೇ 'ಉಪ್ಪೆನ' ಹಾಗೂ 'ಶ್ಯಾಮ ಸಿಂಗ ರಾಯ್' ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಕೃತಿಗೆ ಸುಕುಮಾರ್ ಆಫರ್ ನೀಡಿದ್ದಾರೆ ಎನ್ನುವ ಸುದ್ದಿಗಳು ಬಲವಾಗಿ ಕೇಳಿ ಬರುತ್ತಿದೆ.

'ಪುಷ್ಪ 2' ಸಿನಿಮಾದಲ್ಲಿ ನಟಿಸುವುದು ಖಾತ್ರಿಯೇ?
'ಶ್ಯಾಮ ಸಿಂಘ ರಾಯ್' ಸಿನಿಮಾಕ್ಕೆ ಸಂಬಂಧಿಸಿದ ಸಂದರ್ಶನವೊಂದರಲ್ಲಿ, 'ಪುಷ್ಪ 2' ಸಿನಿಮಾದಲ್ಲಿ ಅವಕಾಶ ಸಿಕ್ಕಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿರುವ ಕೃತಿ ಶೆಟ್ಟಿ, ''ನನಗೆ ಸುಕುಮಾರ್ ಆಗಲಿ ಅಥವಾ 'ಪುಷ್ಪ' ಸಿನಿಮಾ ತಂಡವದರಿಂದಾಗಲಿ ಯಾವುದೇ ಕರೆ ಬಂದಿಲ್ಲ. ಆದರೆ ನನಗೆ ಸುಕುಮಾರ್ ಅವರ ಸಿನಿಮಾಗಳಲ್ಲಿ ನಟಿಸುವ ಆಸೆಯಿದೆ, 'ಪುಷ್ಪ 2' ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕರೆ ಖಂಡಿತ ತಪ್ಪಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

ಯಾವ ರೀತಿಯ ಸಿನಿಮಾಗಳಲ್ಲಿ ನಟಿಸಲು ಇಷ್ಟ?
ತಮಗೆ ಯಾವ ರೀತಿಯ ಸಿನಿಮಾಗಳಲ್ಲಿ ನಟಿಸುವ ಆಸೆಯಿದೆ ಎಂಬ ಬಗ್ಗೆಯೂ ಸಂದರ್ಶನದಲ್ಲಿ ಕೃತಿ ಶೆಟ್ಟಿ ಮಾತನಾಡಿದ್ದು, ''ನನಗೆ ಆಕ್ಷನ್ ಸಿನಿಮಾಗಳೆಂದರೆ ಬಹಳ ಇಷ್ಟ ಅಂಥಹಾ ಸಿನಿಮಾಗಳಲ್ಲಿ ನಟಿಸುವ ಆಸೆಯಿದೆ. ನಾನು ಕುಚುಪುಡಿ ನೃತ್ಯಗಾರ್ತಿ ಹಾಗಾಗಿ ನಾಟ್ಯ ಮುನ್ನೆಲೆಯಲ್ಲಿರುವ ಪಾತ್ರಗಳಲ್ಲಿಯೂ ನಟಿಸುವ ಆಸೆ. 'ಶ್ಯಾಮ ಸಿಂಗ ರಾಯ್' ಸಿನಿಮಾದಲ್ಲಿ ಸಾಯಿ ಪಲ್ಲವಿ ಮಾಡಿರುವ ನೃತ್ಯ ನನಗೆ ಬಹಳ ಇಷ್ಟವಾಯಿತು. ಆ ರೀತಿಯ ಡ್ಯಾನ್ಸ್ ನಾನು ಮಾಡಲಾರೆ, ನಾನು ಇನ್ನಷ್ಟು ಗಟ್ಟಿಯಾಗಬೇಕು, ಅಂಥಹಾ ಪಾತ್ರಗಳಲ್ಲಿ ನಟಿಸಲು ಸಹ ನನಗೆ ಇನ್ನಷ್ಟು ಅನುಭವ ಬೇಕು ಎನಿಸುತ್ತದೆ'' ಎಂದು ಪ್ರಾಮಾಣಿಕವಾಗಿ ಮಾತನಾಡಿದ್ದಾರೆ ಕೃತಿ ಶೆಟ್ಟಿ.

ಸುಕುಮಾರ್ ನಿರ್ಮಾಣ ಮಾಡಿದ್ದ 'ಉಪ್ಪೆನ' ಮೂಲಕ ಎಂಟ್ರಿ
ಸುಕುಮಾರ್ ಸಹ ನಿರ್ಮಾಣ ಮಾಡಿದ್ದ 'ಉಪ್ಪೆನ' ಸಿನಿಮಾದ ಮೂಲಕ ನಟನೆ ಆರಂಭಿಸಿದವರು ಕೃತಿ ಶೆಟ್ಟಿ. 'ಉಪ್ಪೆನ' ಸಿನಿಮಾವನ್ನು ಸುಕುಮಾರ್ ಶಿಷ್ಯ ಬುಚ್ಚಿ ಬಾಬು ಸನಾ ನಿರ್ದೇಶನ ಮಾಡಿದ್ದರು. ಆ ಸಿನಿಮಾ ದೊಡ್ಡ ಹಿಟ್ ಆಗಿತ್ತು. ಸಿನಿಮಾದಲ್ಲಿ ಕೃತಿ ಶೆಟ್ಟಿ ನಟನೆ ಬಗ್ಗೆ ಬಹಳ ಪ್ರಶಂಸೆಗಳು ಕೇಳಿ ಬಂದಿದ್ದವು. ಆ ನಂತರ ಸಾಕಷ್ಟು ಸಿನಿಮಾ ಅವಕಾಶಗಳು ಸಹ ಕೃತಿ ಶೆಟ್ಟಿ ಅವರನ್ನು ಅರಸಿ ಬಂದಿದ್ದವು. 'ಉಪ್ಪೆನ' ಬಳಿಕ 'ಶ್ಯಾಮ ಸಿಂಗ ರಾಯ್' ಸಿನಿಮಾದಲ್ಲಿ ಕೃತಿ ಶೆಟ್ಟಿ ನಟಿಸಿದರು. ಬಳಿಕ 'ಬಂಗಾರ್ರಾಜು' ಸಿನಿಮಾದಲ್ಲಿ ಸಹ ನಟಿಸಿದ್ದು, ಈ ಸಿನಿಮಾ ಇನ್ನಷ್ಟೆ ಬಿಡುಗಡೆ ಆಗಬೇಕಿದೆ.


Click it and Unblock the Notifications











