ಪವರ್ ಸ್ಟಾರ್ ಜೊತೆ ಕೆವಿಎನ್ ಹೈವೋಲ್ಟೇಜ್ ಪ್ರಾಜೆಕ್ಟ್; ನಿರ್ದೇಶಕ ಯಾರು?
ಪ್ಯಾನ್ ಇಂಡಿಯಾ ಜಮಾನದಲ್ಲಿ ಸಿನಿಮಾ ನಿರ್ಮಾಣ ಸಂಸ್ಥೆಗಳು ದೊಡ್ಡದಾಗಿ ಲೆಕ್ಕಾಚಾರ ಮಾಡುತ್ತಿವೆ. ಸ್ಟಾರ್ ನಟ, ಸ್ಟಾರ್ ನಿರ್ದೇಶಕನನ್ನು ಒಟ್ಟಿಗೆ ಸೇರಿ ಬಹುಕೋಟಿ ವೆಚ್ಚದ ಪ್ರಾಜೆಕ್ಟ್ಗಳನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ. ಕನ್ನಡದ ಕೆವಿಎನ್ ಚಿತ್ರ ನಿರ್ಮಾಣ ಸಂಸ್ಥೆ ಈಗಾಗಲೇ ಪರಭಾಷೆ ಸಿನಿಮಾಗಳತ್ತ ಮುಖ ಮಾಡಿದೆ.
ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ಈವೆರೆಗೆ ಯಾವುದೇ ದೊಡ್ಡ ಬ್ಲಾಕ್ಬಸ್ಟರ್ ಹಿಟ್ ಸಿನಿಮಾ ಕೊಟ್ಟಿಲ್ಲ. ಆದರೆ ಮುಂದೆ ದೊಡ್ಡ ದೊಡ್ಡ ಪ್ರಾಜೆಕ್ಟ್ಗಳು ಅವರ ಬತ್ತಳಿಕೆಯಲ್ಲಿದೆ. ಯಶ್ ನಟನೆಯ 'ಟಾಕ್ಸಿಕ್' ಹಾಗೂ ದಳಪತಿ ವಿಜಯ್ ಅಭಿನಯದ 'ಜನ ನಾಯಗನ್' ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಮೆಗಾಸ್ಟಾರ್ ಚಿರಂಜೀವಿ ಹಾಗೂ ಬಾಬಿ ಜೋಡಿಯ ಚಿತ್ರಕ್ಕೂ ಹಣ ಹೂಡುತ್ತಿದೆ. ಬಾಲಿವುಡ್ನಲ್ಲಿ ಅಕ್ಷಯ್ ಕುಮಾರ್ ನಟನೆಯ 'ಹೈವಾನ್' ಚಿತ್ರ ಕೈಗೆತ್ತಿಕೊಂಡಿದೆ.

ಸದ್ಯ ತೆಲುಗು ನಟ ಪವನ್ ಕಲ್ಯಾನ್ ಹೀರೊ ಆಗಿ ಕೆವಿಎನ್ ಸಂಸ್ಥೆ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದೆ ಎನ್ನಲಾಗ್ತಿದೆ. ರಾಜಕೀಯರಂಗದಲ್ಲಿ ಸಕ್ರಿಯರಾಗಿರುವ ಪವನ್ ಸದ್ಯಕ್ಕೆ ಸಿನಿಮಾಗಳಲ್ಲಿ ನಟಿಸುವುದು ಕಷ್ಟ ಕಷ್ಟ. ಆದರೆ ಇತ್ತೀಚೆಗೆ ಬಂದ 'OG' ಸಿನಿಮಾ ಹಿಟ್ ಆಗಿ ಪವರ್ ಸ್ಟಾರ್ ಮತ್ತೆ ಸಿನಿಮಾಗಳಲ್ಲಿ ನಟಿಸಬೇಕು ಎನ್ನುವ ಕೂಗು ಹೆಚ್ಚುವಂತಾಗಿದೆ.
ತಮಿಳು ನಿರ್ದೇಶಕ ಲೋಕೇಶ್ ಕನಕರಾಜ್ ಹಾಗೂ ಪವನ್ ಕಲ್ಯಾಣ್ ಕಾಂಬಿನೇಷನ್ ಬಗ್ಗೆ ಚರ್ಚೆ ಶುರುವಾಗಿದೆ. ಇವರಿಬ್ಬರನ್ನು ಒಟ್ಟಿಗೆ ಸೇರಿಸಿ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಸಿನಿಮಾ ಮಾಡಲು ಮುಂದಾಗಿರುವ ಬಗ್ಗೆ ಗುಸುಗುಸು ಶುರುವಾಗಿದೆ. ಲೋಕೇಶ್ ಕನಕರಾಜ್ 'ಕೂಲಿ' ಸಿನಿಮಾ ಮಾಡಿ ಗೆದ್ದಿದ್ದಾರೆ. ರಜನಿಕಾಂತ್ ಸೇರಿದಂತೆ ಸ್ಟಾರ್ ನಟರು ಅಭಿನಯಿಸಿದ್ದ ಮಲ್ಟಿಸ್ಟಾರರ್ ಸಿನಿಮಾವನ್ನು ತೆರೆಗೆ ತಂದಿದ್ದರು. ಮಿಶ್ರಪ್ರತಿಕ್ರಿಯೆ ಸಿಕ್ಕರೂ ಸಿನಿಮಾ ತಕ್ಕಮಟ್ಟಿಗೆ ಗೆದ್ದಿತ್ತು.

'ಕೂಲಿ' ಬಳಿಕ 'ಕೈದಿ'-2 ಚಿತ್ರಕ್ಕೆ ಲೋಕೇಶ್ ಆಕ್ಷನ್ ಕಟ್ ಹೇಳ್ತಾರೆ ಎನ್ನಲಾಗ್ತಿದೆ. ಕಾರ್ತಿ ನಟಿಸಿದ್ದ 'ಕೈದಿ' ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ಅದೇ ಚಿತ್ರದ ಕಥೆ ಮುಂದುವರೆಸುವ ಪ್ರಯತ್ನದಲ್ಲಿ ಲೋಕೇಶ್ ಕನಕರಾಜ್ ಬ್ಯುಸಿಯಾಗಿದ್ದಾರೆ. ಈ ಚಿತ್ರವನ್ನು ಕೆವಿಎನ್ ಸಂಸ್ಥೆ ನಿರ್ಮಿಸಬೇಕಿದೆ. ಆದರೆ ಈ ಚಿತ್ರ ಬಿಟ್ಟು ಪವನ್ ಕಲ್ಯಾಣ್ ಚಿತ್ರ ಕೈಗೆತ್ತಿಕೊಳ್ಳಲು ಮುಂದಾಗಿದ್ದಾರೆ ಎನ್ನುವ ವದಂತಿ ಶುರುವಾಗಿದೆ.
ಲೋಕೇಶ್ ನಿರ್ದೇಶನದ 'ಲಿಯೋ' ಸಿನಿಮಾ ನೋಡಿ ಪವನ್ ಕಲ್ಯಾಣ್ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಹಾಗಾಗಿ ಎಲ್ಲಾ ಕೂಡಿ ಬಂದರೆ ಅವರು ಸಿನಿಮಾ ಮಾಡುವ ಸಾಧ್ಯತೆಯಿದೆ. ಆಂಧ್ರ ಡಿಸಿಎಂ ಆಗಿರುವ ಪವರ್ ಸ್ಟಾರ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಹಾಗಾಗಿ ಸಿನಿಮಾಗಳಲ್ಲಿ ನಟಿಸಲು ಸಮಯ ಇಲ್ಲ ಎನ್ನುತ್ತಿದ್ದಾರೆ.
ಕಳೆದ ಎರಡು ವರ್ಷಗಳಿಂದ ಸಿನಿಮಾ ಚಿತ್ರೀಕರಣಕ್ಕೆ ಬ್ರೇಕ್ ಹಾಕಿ ಪವನ್ ಜನಸೇನಾ ಪಕ್ಷ ಸಂಘಟನೆ, ಚುನಾವಣೆ ಎಂದು ಬ್ಯುಸಿಯಾಗಿದ್ದರು. ಅದಕ್ಕೂ ಮುನ್ನ ಆರಂಭಿಸಿದ್ದ 'ಹರಿಹರ ವೀರಮಲ್ಲು', 'OG', 'ಉಸ್ತಾದ್ ಭಗತ್ ಸಿಂಗ್' ಚಿತ್ರಗಳನ್ನು ನಿಲ್ಲಿಸಿದ್ದರು. ಇತ್ತೀಚೆಗೆ ಎರಡು ಚಿತ್ರಗಳ ಚಿತ್ರೀಕರಣ ಮುಗಿಸಿ ಬಿಡುಗಡೆ ಮಾಡಲಾಗಿತ್ತು.
'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಅರ್ಧಕ್ಕೆ ನಿಂತಿದೆ. ಅದನ್ನು ಪೂರ್ಣಗೊಳಿಸಬೇಕಿದೆ. ಆ ಬಳಿಕವೇ ಬೇರೆ ಸಿನಿಮಾಗಳ ಮಾತು. ಇನ್ನು ಒಂದು ವೇಳೆ ಲೋಕೇಶ್ ಕನಕರಾಜ್ ಒಪ್ಪದೇ ಇದ್ದರೆ 'ಜನನಾಯಗನ್' ಚಿತ್ರ ನಿರ್ದೇಶಕ ವಿನೋದ್ ಈ ಚಿತ್ರಕ್ಕೆ ಸಾರಥ್ಯ ವಹಿಸುತ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಿದೆ. ಇದೆಲ್ಲಾ ಬರೀ ಅಂತೆಕಂತೆ ಸುದ್ದಿ. ಅಧಿಕೃತ ಮಾಹಿತಿ ಇನ್ನಷ್ಟೆ ಸಿಗಬೇಕಿದೆ. ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಗುತ್ತಾ ಕಾದು ನೋಡಬೇಕಿದೆ.


Click it and Unblock the Notifications











