ಕೀರ್ತಿ ಸುರೇಶ್ ಮದುವೆಗೆ ತಯಾರಿ? ಚಿತ್ರರಂಗಕ್ಕೆ ಮಹಾನಟಿ ಗುಡ್ಬೈ?
ಅಂದ ಹಾಗೂ ಅಭಿನಯ ಎರಡರಿಂದಲೂ ಪ್ರೇಕ್ಷಕರಿಗೆ ಮೋಡಿ ಮಾಡುವ ಚೆಲುವೆ ಕೀರ್ತಿ ಸುರೇಶ್. 'ಮಹಾನಟಿ'ಯಾಗಿ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡ ಚೆಲುವೆ ಇತ್ತೀಚೆಗೆ ಅಷ್ಟಾಗಿ ಸದ್ದು ಮಾಡುತ್ತಿಲ್ಲ. ಈ ನಡುವೆ ಕೀರ್ತಿ ಮದುವೆಗೆ ಸಿದ್ಧತೆ ನಡೆಸಿದ್ದಾರೆ. ಚಿತ್ರರಂಗಕ್ಕೆ ಗುಡ್ಬೈ ಹೇಳುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ.
ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದ ಕೀರ್ತಿ ಸುರೇಶ್ ಮುಂದೆ ನಾಯಕಿಯಾಗಿಯೂ ಸಕ್ಸಸ್ ಕಂಡರು. ಮೋಹನ್ ಲಾಲ್, ಪವನ್ ಕಲ್ಯಾಣ್, ಮಹೇಶ್ ಬಾಬು ರೀತಿಯ ಸ್ಟಾರ್ ನಟರ ಜೊತೆ ನಟಿಸಿ ಕೀರ್ತಿ ಗಮನ ಸೆಳೆದಿದ್ದಾರೆ. ಸ್ಕಿನ್ ಶೋಗೆ ಹಿಂದೇಟು ಹಾಕುವ ಚೆಲುವೆ ಅಭಿನಯಕ್ಕೆ ಅವಕಾಶ ಇರುವ ಪಾತ್ರಗಳನ್ನು ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಾರೆ. 'ವಾಶಿ' ಎನ್ನುವ ಮಲಯಾಳಂ ಚಿತ್ರದಲ್ಲಿ ಕೀರ್ತಿ ಸುರೇಶ್ ಕೊನೆಯದಾಗಿ ಬಣ್ಣ ಹಚ್ಚಿದ್ದರು. ಮಲಯಾಳಂ ಚೆಲುವೆ ಉದ್ಯಮಿ ಒಬ್ಬರನ್ನು ಮದುವೆ ಆಗಲು ಒಪ್ಪಿಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.

ಪೋಷಕರು ನಿಶ್ಚಯಿಸಿದ ಹುಡುಗನನ್ನು ಕೀರ್ತಿ ಸುರೇಶ್ ಮದುವೆ ಆಗುತ್ತಿದ್ದಾರಂತೆ. ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಎನ್ನಲಾಗ್ತಿದೆ. ಈಗಾಗಲೇ ಕೀರ್ತಿ ಸುರೇಶ್ ಪೋಷಕರು ಮದುವೆ ತಯಾರಿ ಆರಂಭಿಸಿದ್ದಾರೆ ಎನ್ನಲಾಗ್ತಿದ್ದು, ಸಂಪ್ರದಾಯದ ಪ್ರಕಾರ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರಂತೆ. ಮಹಾನಟಿ ಕೈ ಹಿಡಿಯುವ ಹುಡುಗ ಯಾರು ಎನ್ನು ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದ್ದಾರೆ. ಮಲಯಾಳಂ ವರದಿಗಳ ಪ್ರಕಾರ ಸಂಬಂಧಿಕರಲ್ಲೇ ಹುಡುಗನನ್ನು ಹುಡುಕಿದ್ದಾರಂತೆ.

ಕೀರ್ತಿ ಸುರೇಶ್ ನಟಿಸುತ್ತಿರುವ ಸಿನಿಮಾಗಳ ವಿಷಯಕ್ಕೆ ಬಂದರೆ ಚಿರಂಜೀವಿ ನಟನೆಯ 'ಭೋಳಾ ಶಂಕರ್' ಚಿತ್ರದಲ್ಲಿ ಬಣ್ಣಹಚ್ಚಿದ್ದಾರೆ. ಈ ಚಿತ್ರದಲ್ಲಿ ಚಿರು ಸಹೋದರಿಯಾಗಿ ಕೀರ್ತಿ ಮಿಂಚಿದ್ದಾರೆ. ಇನ್ನು ನಾನಿ ನಟನೆಯ 'ದಸರಾ', ತಮಿಳಿನ 'ಮಾಮಾನನ್', 'ಸಿರೆನ್' ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ತಮಿಳು ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಜೊತೆ ಕೀರ್ತಿ ಹೆಸರು ತಳುಕು ಹಾಕಿಕೊಂಡಿತ್ತು. ಇಬ್ಬರು ಪ್ರೀತಿಸುತ್ತಿದ್ದು ಮದುವೆ ಆಗುತ್ತಾರೆ ಎನ್ನಲಾಗಿತ್ತು. ಅದರೆ ಇದೆಲ್ಲಾ ಬರೀ ವದಂತಿ ಎನ್ನುವುದು ನಂತರ ಗೊತ್ತಾಗಿತ್ತು.
ಮದುವೆ ನಂತರ ಕೀರ್ತಿ ಸುರೇಶ್ ಸಿನಿಮಾಗಳಲ್ಲಿ ನಟಿಸೋದು ಅನುಮಾನ ಎನ್ನಲಾಗ್ತಿದೆ. ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸಿ, ನಂತರ ಮದುವೆ ಆಗಿ ಚಿತ್ರರಂಗ ತೊರೆಯುತ್ತಾರೆ ಎನ್ನಲಾಗ್ತಿದೆ. ಮದುವೆ ಸಮಯದಲ್ಲಿ ಚಿತ್ರರಂಗದಿಂದ ಕೊಂಚ ಬಿಡುವು ಪಡೆದುಕೊಂಡು ಮತ್ತೆ ಮಹಾನಟಿ ಬಣ್ಣದಲೋಕಕ್ಕೆ ವಾಪಸ್ ಆಗುತ್ತಾರೆ ಎನ್ನುವ ಗುಸುಗುಸು ಕೂಡ ಕೇಳಿಬರ್ತಿದೆ. ಎರಡು ವರ್ಷಗಳ ಹಿಂದೆ ಇದೇ ರೀತಿ ಕೀರ್ತಿ ಮದುವೆ ಬಗ್ಗೆ ಚರ್ಚೆ ನಡೆದಿತ್ತು. ಆದರೆ ಅದೆಲ್ಲಾ ಸುಳ್ಳು ಎಂದು ಆಕೆ ಹೇಳಿದ್ದರು. ಈಗ ಮತ್ತೆ ಮದುವೆ ವದಂತಿ ಜೋರಾಗಿದೆ.


Click it and Unblock the Notifications











