ದರ್ಶನ್ ಎದುರು ಚಿರಂಜೀವಿ? ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಕಸರತ್ತು!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು 'ಕಾಟೇರ'ನ ದರ್ಶನಕ್ಕೆ ಕಾಯ್ತಿದ್ದಾರೆ. ಬಹುನಿರೀಕ್ಷಿತ ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಇದೆಲ್ಲದರ ನಡುವೆ ದರ್ಶನ್ ಮುಂದಿನ ಸಿನಿಮಾ ಬಗ್ಗೆ ಕ್ರೇಜಿ ನ್ಯೂಸ್ ವೈರಲ್ ಆಗುತ್ತಿದೆ.
'ಕ್ರಾಂತಿ' ಬೆನ್ನಲ್ಲೇ ದರ್ಶನ್ ನಟನೆಯ 'ಕಾಟೇರ' ಸಿನಿಮಾ ಮೂಡಿ ಬರ್ತಿದೆ. ಬಳಿಕ ದರ್ಶನ್ 'ಡೆವಿಲ್' ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಮಿಲನಾ ಪ್ರಕಾಶ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರಲಿದೆ. ಈಗಾಗಲೇ ಸರಳವಾಗಿ ಚಿತ್ರದ ಮುಹೂರ್ತ ನೆರವೇರಿಸಲಾಗಿದೆ. ಜನವರಿಯಲ್ಲೇ 'ಡೆವಿಲ್' ಚಿತ್ರೀಕರಣ ಆರಂಭವಾಗಲಿದೆ. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಲಿದೆ.

'ಡೆವಿಲ್' ಬಳಿಕ ದರ್ಶನ್ ಯಾವ ಚಿತ್ರದಲ್ಲಿ ನಟಿಸುತ್ತಾರೆ ಎನ್ನುವ ಕುತೂಹಲ ಸಹಜ. ತರುಣ್ ಸುಧೀರ್ ನಿರ್ದೇಶನದಲ್ಲೇ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಾರೆ ಎನ್ನಲಾಗ್ತಿದೆ. ದರ್ಶನ್ ಆಪ್ತ ಸಚ್ಚಿದಾನಂದ ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ಇನ್ನು ಜೋಗಿ ಪ್ರೇಮ್ ನಿರ್ದೇಶನದಲ್ಲೂ ಒಂದು ಸಿನಿಮಾ ಘೋಷಣೆ ಆಗಿದೆ. ಕೆವಿಎನ್ ಪ್ರೊಡಕ್ಷನ್ ಬ್ಯಾನರ್ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ.
ಕೆಲ ದಿನಗಳ ಹಿಂದೆ ದರ್ಶನ್ ಹಾಗೂ ಪ್ರೇಮ್ ನಡುವೆ ವೈಮನಸ್ಸು ಮೂಡಿತ್ತು. ಆದರೆ ಅದನ್ನು ಮರೆತು ಇಬ್ಬರೂ ಒಟ್ಟಿಗೆ ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ಈ ಸಿನಿಮಾ ಬಗ್ಗೆ ಇದೀಗ ಕ್ರೇಜಿ ನ್ಯೂಸ್ ವೈರಲ್ ಆಗ್ತಿದೆ. ಚಿತ್ರದಲ್ಲಿ ಟಾಲಿವುಡ್ ನಟ ಮೆಗಾಸ್ಟಾರ್ ಚಿರಂಜೀವಿ ನಟಿಸುತ್ತಾರೆ ಎನ್ನಲಾಗ್ತಿದೆ. ಚಿರುಗೆ ಕನ್ನಡ ಚಿತ್ರರಂಗ ಹೊಸದಲ್ಲ. ಈಗಾಗಲೇ 'ಸಿಪಾಯಿ' ಹಾಗೂ 'ಶ್ರೀ ಮಂಜುನಾಥ' ಸಿನಿಮಾಗಳಲ್ಲಿ ನಟಿಸಿದ್ದರು.

ಸದ್ಯ ಪ್ರೇಮ್ 'KD' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ಧ್ರುವ ಸರ್ಜಾ ಹೀರೊ ಆಗಿ ನಟಿಸ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಮೂಡಿ ಬರಲಿದೆ. ಈ ಸಿನಿಮಾ ಬಳಿಕ ದರ್ಶನ್ ಚಿತ್ರವನ್ನು ಪ್ರೇಮ್ ಕೈಗೆತ್ತಿಕೊಳ್ಳಲಿದ್ದಾರೆ. ಇನ್ನು ಹೆಸರಿಡದ ಈ ಚಿತ್ರ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಇದೇ ಚಿತ್ರದಲ್ಲಿ ನಟಿಸುವಂತೆ ಟಾಲಿವುಡ್ ಮೆಗಾಸ್ಟಾರ್ನ ಪ್ರೇಮ್ ಅಪ್ರೋಚ್ ಮಾಡಿದ್ದಾರೆ ಎನ್ನಲಾಗ್ತಿದೆ.
ಮೂರು ದಿನಗಳ ಹಿಂದೆ ಹೈದರಾಬಾದ್ಗೆ ಹೋಗಿದ್ದ ಜೋಗಿ ಪ್ರೇಮ್, ನಟ ಚಿರಂಜೀವಿ ಜೊತೆ ಮಾತುಕತೆ ನಡೆಸಿದ್ದಾರೆ, ಕಥೆ ಹೇಳಿ ಬಂದಿದ್ದಾರೆ ಎನ್ನುವ ವದಂತಿ ಹರಡಿದೆ. ಈ ಸುದ್ದಿ ನಿಜವಾಗಿದ್ದು ಚಿರು ನಟಿಸೋಕೆ ಒಪ್ಪಿದರೆ ಕನ್ನಡ ಸಿನಿರಸಿಕರಿಗೆ ಹಬ್ಬವೇ ಸರಿ. ಪ್ಯಾನ್ ಇಂಡಿಯಾ ಜಮಾನದಲ್ಲಿ ಸ್ಟಾರ್ ನಟರು ಬೇರೆ ಬೇರೆ ಭಾಷೆಗಳಲ್ಲಿ ನಟಿಸೋದು ಸರ್ವೇ ಸಾಧಾರಣ ಎನ್ನುವಂತಾಗಿದೆ. ಹಾಗಾಗಿ ಚಿರು ನಟಿಸೋಕೆ ಒಪ್ಪಿದರೂ ಅಚ್ಚರಿಪಡಬೇಕಿಲ್ಲ.
ಸತತ ಸೋಲುಗಳಿಂದ ಕಂಗೆಟ್ಟಿದ್ದ ಮೆಗಾಸ್ಟಾರ್ ಚಿರಂಜೀವಿ ಈ ವರ್ಷ 'ವಾಲ್ತೇರು ವೀರಯ್ಯ' ಚಿತ್ರದಲ್ಲಿ ನಟಿಸಿ ಗೆದ್ದಿದ್ದರು. ಹುಟ್ಟುಹಬ್ಬದ ಸಂಭ್ರಮದಲ್ಲಿ ಹೊಸ ಚಿತ್ರವನ್ನು ಘೋಷಿಸಿದ್ದರು. ಮೆಗಾ 157 ಚಿತ್ರವನ್ನು ಮಲ್ಲಿಡಿ ವಶಿಷ್ಠ ನಿರ್ದೇಶನ ಮಾಡಲಿದ್ದಾರೆ. ಕಾರಣಾಂತರಗಳಿಂದ ಈ ಸಿನಿಮಾ ತಡವಾಗುತ್ತಿದೆ. ಫ್ಯಾಂಟಸಿ ಕಥೆಯನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ನಡೀತಿದ್ದು ದೊಡ್ಡ ಮಟ್ಟದಲ್ಲಿ ಸಿನಿಮಾ ಮೂಡಿ ಬರಲಿದೆ.
ನಟ ದರ್ಶನ್ ಕನ್ನಡ ಸಿನಿಮಾಗಳಲ್ಲಿ ಮಾತ್ರ ನಟಿಸುವುದಾಗಿ ಹೇಳುತ್ತಾ ಬರ್ತಿದ್ದಾರೆ. ಚಿರಂಜೀವಿ ನಟಿಸಿದರೆ ಸಹಜವಾಗಿಯೇ ಪ್ಯಾನ್ ಇಂಡಿಯಾ ಸಿನಿಮಾ ಮಾಡುವ ಲೆಕ್ಕಾಚಾರ ಶುರುವಾಗುತ್ತದೆ. ಪ್ರೇಮ್ ಮುಂದೆ ಏನು ಮಾಡುತ್ತಾರೋ? ಎನ್ನುವುದನ್ನು ಕಾದು ನೋಡಬೇಕಿದೆ. ಸದ್ಯ ಈ ವೈರಲ್ ಸುದ್ದಿ ಎಷ್ಟು ನಿಜ ಅನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ.


Click it and Unblock the Notifications










