ಯುಕೆಯಲ್ಲಿ ಲಂಕೆ ನಿರ್ಮಾಣ? ರಾವಣನಾಗಿ ನಟಿಸಲು ರಾಕಿಂಗ್ ಸ್ಟಾರ್ ಲಂಡನ್ನತ್ತ ಪಯಣ!
ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾ ಬಗ್ಗೆ ದಿನಕ್ಕೊಂದು ಸುದ್ದಿ ವೈರಲ್ ಆಗುತ್ತಿದೆ. ಅಧಿಕೃತವಾಗಿ ಈ ಸಿನಿಮಾ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಆದರೆ ತೆರೆಮರೆಯಲ್ಲಿ ಕಸರತ್ತು ನಡೆಯುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಲೇ ಇದೆ. ಯಶ್ ಚಿತ್ರದಲ್ಲಿ ರಾವಣನ ಪಾತ್ರ ಮಾಡುತ್ತಾರೆ ಎನ್ನುವ ಕಾರಣಕ್ಕೆ ಸ್ಯಾಂಡಲ್ವುಡ್ ಅಂಗಳದಲ್ಲೂ ಸಿನಿಮಾ ಕುತೂಹಲ ಮೂಡಿಸಿದೆ.
ಈಗಾಗಲೇ ರಾಮಾಯಣ ಮಹಾಕಾವ್ಯ ಆಧರಿಸಿ ಸಾಕಷ್ಟು ಸಿನಿಮಾಗಳು ಬಂದೋಗಿವೆ. ಕಳೆದ ವರ್ಷ ಕೂಡ 'ಆದಿಪುರುಷ್' ಸಿನಿಮಾ ತೆರೆಗೆ ಬಂದಿತ್ತು. ಆದರೆ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಇದೀಗ ನಿತೇಶ್ ತಿವಾರಿ ಬಹಳ ದೊಡ್ಡಮಟ್ಟದಲ್ಲಿ ರಾಮಾಯಣ ಕಾವ್ಯ ಆಧರಿಸಿ ಸಿನಿಮಾ ಮಾಡುವ ಸಾಹಸಕ್ಕೆ ಕೈ ಹಾಕುತ್ತಿದ್ದಾರೆ. ರಣ್ಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತಾ ಮಾತೆಯಾಗಿ ನಟಿಸೋದು ಬಹುತೇಕ ಖಚಿತ ಎನ್ನಲಾಗ್ತಿದೆ.

ರಾವಣನಾಗಿ ಯಶ್ ನಟಿಸುತ್ತಾರೆ ಎನ್ನುವ ಗುಸುಗುಸು ಕೇಳಿ ಬರುತ್ತಲೇ ಇದೆ. ಆದರೆ ಯಶ್ ಮಾತ್ರ ಈ ಬಗ್ಗೆ ತುಟಿಕ್ ಪಿಟಿಕ್ ಎನ್ನುತ್ತಿಲ್ಲ. 'ಟಾಕ್ಸಿಕ್' ಚಿತ್ರದಲ್ಲಿ ಯಶ್ ಬ್ಯುಸಿಯಾಗಿದ್ದಾರೆ. ಕನ್ನಡ ಬಿಟ್ಟು ಬೇರೆ ಭಾಷೆಗೆ ಹೋಗುವುದಿಲ್ಲ ಎಂದು ಪರೋಕ್ಷವಾಗಿ ಹೇಳು ಬರ್ತಿದ್ದಾರೆ. ಆದರೂ ರಾಮಾಯಣದಂತಹ ಸಿನಿಮಾ ಆಗಿರುವುದರಿಂದ ಒಪ್ಪಿಕೊಳ್ಳುವ ಸಾಧ್ಯತೆಯಿದೆ. ಇನ್ನು ರಾಮಾಯಣ ಕಾವ್ಯದಲ್ಲಿ ರಾಮನಷ್ಟೇ ರಾವಣನ ಪಾತ್ರಕ್ಕೂ ಪ್ರಾಮುಖ್ಯತೆ ಇದೆ. ಹಾಗಾಗಿ ನಟಿಸುವ ಸಾಧ್ಯತೆ ದಟ್ಟವಾಗಿದೆ.
ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಗ್ರಾಫಿಕ್ಸ್ ಮಾಯಾಲೋಕದಲ್ಲಿ ರಾಮಾಯಣ ಕಾವ್ಯವನ್ನು ತಿದ್ದಿ ತೀಡಲು ನಿತೇಶ್ ತಿವಾರಿ ಪ್ರಯತ್ನಿಸುತ್ತಿದ್ದಾರೆ. ಸದ್ಯ ಸಿನಿಮಾ ಶೂಟಿಂಗ್ ಶೆಡ್ಯೂಲ್ ಬಗ್ಗೆ ಗುಸುಗುಸು ಶುರುವಾಗಿದೆ. ಈ ಬಗ್ಗೆ ಕೆಲ ಮಾಧ್ಯಮಗಳಲ್ಲಿ ಕೂಡ ವರದಿಯಾಗಿದೆ. ಟೈಮ್ಸ್ ಆಫ್ ಇಂಡಿಯಾ ಲೇಟೆಸ್ಟ್ ವರದಿ ಪ್ರಕಾಶ ಶೀಘ್ರದಲ್ಲೇ ರಣ್ಬೀರ್ ಕಪೂರ್ ಸಿನಿಮಾ ಚಿತ್ರೀಕರಣಕ್ಕೆ ಹಾಜರಾಗಲಿದ್ದಾರೆ ಎನ್ನಲಾಗಿದೆ.
ಚಿತ್ರದ ಬಹುತೇಕ ಚಿತ್ರೀಕರಣ ಮುಂಬೈನಲ್ಲೇ ನಡೆಯಲಿದೆ. ರಣ್ಬೀರ್ ಕಪೂರ್ ಮುಂಬೈನಲ್ಲಿ 60 ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದು ಬಳಿಕ ಲಂಡನ್ ಶೆಡ್ಯೂಲ್ಗೆ ಹಾಜರಾಗುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಲಂಕಾ ಭಾಗದ ಚಿತ್ರೀಕರಣವನ್ನು ಲಂಡನ್ನಲ್ಲಿ ಮಾಡಲು ತಯಾರಿ ನಡೀತಿದೆ. ಅಲ್ಲಿ 60 ದಿನಗಳ ಕಾಲ ರಣ್ಬೀರ್ ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರೆ. ಲಂಡನ್ ಶೆಡ್ಯೂಲ್ನಲ್ಲಿ ಯಶ್ ಕೂಡ ಚಿತ್ರೀಕರಣಕ್ಕೆ ಹಾಜರಾಗುತ್ತಾರೆ ಎನ್ನುವ ವದಂತಿ ಇದೆ.

ಸನ್ನಿ ಡಿಯೋಲ್ ಚಿತ್ರದಲ್ಲಿ ಹನುಮಂತನ ಪಾತ್ರ ಮಾಡಲಿದ್ದು ಮೇ ತಿಂಗಳಿನಲ್ಲಿ ಚಿತ್ರೀಕರಣದಲ್ಲಿ ಭಾಗವಹಿಸುತ್ತಾರೆ. 3 ಭಾಗಗಳಾಗಿ ರಾಮಾಯಣ ಕಾವ್ಯವನ್ನು ತೆರೆಗೆ ತರಲಾಗುತ್ತಿದೆ. ಮೊದಲ ಭಾಗದಲ್ಲಿ ಸನ್ನಿ ಡಿಯೋಲ್ ಅತಿಥಿ ಪಾತ್ರದಲ್ಲಿ ಕೆಲವೊತ್ತು ಮಾತ್ರ ಕಾಣಿಸಿಕೊಳ್ಳುತ್ತಾರೆ ಎನ್ನಲಾಗ್ತಿದೆ. ಎರಡು ಹಾಗೂ ಮೂರನೇ ಭಾಗದಲ್ಲಿ ಅವರ ಪಾತ್ರಕ್ಕೆ ಹೆಚ್ಚು ಮಹತ್ವ ಇರಲಿದೆ ಎನ್ನುವ ಚರ್ಚೆ ನಡೀತಿದೆ.
ವಿಭೀಷಣ ಪಾತ್ರಕ್ಕೆ ತಮಿಳು ನಟ ವಿಜಯ್ ಸೇತುಪತಿ ಹೆಸರು ಕೇಳಿಬರ್ತಿದೆ. ಮತ್ತೊಂದು ಪ್ರಮುಖ ಪಾತ್ರಕ್ಕೆ ಲಾರಾ ದತ್ ಹೆಸರು ಚಾಲ್ತಿಯಲ್ಲಿದೆ. ಒಟ್ಟಾರೆ ಅಧಿಕೃತವಾಗಿ ಘೋಷಣೆಗೂ ಮುನ್ನ ನಿತೇಶ್ ತಿವಾರಿ ರಾಮಾಯಣ ಸಿನಿಮಾ ಬಹಳ ಸದ್ದು ಮಾಡ್ತಿದೆ. ಲಂಡನ್ನಲ್ಲಿ ಸೆಟ್ಗಳನ್ನು ನಿರ್ಮಿಸಿ ಲಂಕೆಯ ಸನ್ನಿವೇಶಗಳನ್ನು ಸೆರೆಹಿಡಿಯುವ ಲೆಕ್ಕಾಚಾರ ಮಾಡಿದ್ದಾರಂತೆ.
ರಾವಣನ ಪಾತ್ರದಲ್ಲಿ ಯಶ್ ಲುಕ್ ಟೆಸ್ಟ್ ಸಹ ಮಾಡಿದ್ದಾರೆ ಎನ್ನಲಾಗ್ತಿದೆ. ಬಹುಕೋಟಿ ವೆಚ್ಚದಲ್ಲಿ ಈ ಸರಣಿ ಸಿನಿಮಾ ನಿರ್ಮಾಣದ ಪ್ರಯತ್ನ ನಡೀತಿದೆ. 'ಆದಿಪುರುಷ್' ಸಿನಿಮಾ ಭಾರೀ ಟೀಕೆಗೆ ಗುರಿಯಾಗಿದ್ದರಿಂದ ನಿತೇಶ್ ನಿರ್ದೇಶನದ ರಾಮಾಯಣ ಸಿನಿಮಾ ಕುತೂಹಲ ಮೂಡಿಸಿದೆ. ಜೊತೆಗೆ ಸಣ್ಣ ಆತಂಕವನ್ನು ಹುಟ್ಟುಹಾಕಿದೆ.


Click it and Unblock the Notifications











