ಪ್ರಿಯಕರನ ಸಹಾಯದಿಂದ ಪ್ರಶಾಂತ್ ನೀಲ್ ಹೊಸ ಚಿತ್ರದಲ್ಲಿ ಅವಕಾಶ ಗಿಟ್ಟಿಸಿದ್ರಾ ಈ ಕನ್ನಡ ನಟಿ?
'KGF' ಸರಣಿ ಸಿನಿಮಾಗಳಿಂದ ಪ್ರಶಾಂತ್ ನೀಲ್ ಸ್ಟಾರ್ ಡೈರೆಕ್ಟರ್ ಪಟ್ಟಕ್ಕೇರಿಬಿಟ್ಟಿದ್ದಾರೆ. ದೊಡ್ಡ ದೊಡ್ಡ ಸಿನಿಮಾಗಳ ಮೂಲಕ ನೀಲ್ ಸದ್ದು ಮಾಡಲು ಸಜ್ಜಾಗಿದ್ದಾರೆ. ಪ್ರಭಾಸ್ ಕಾಂಬಿನೇಷನ್ನಲ್ಲಿ 'ಸಲಾರ್' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಜ್ಯೂ. ಎನ್ಟಿಆರ್ ನಟನೆಯ ಮುಂದಿನ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ನೀಲ್ ಸಿದ್ಧತೆ ನಡೆಸಿದ್ದಾರೆ.
ಬೇರೆ ಬೇರೆ ಜಾನರ್ ಸಿನಿಮಾ ಮಾಡುವ ಆಸೆಯಿದೆ ಎನ್ನುವ ಪ್ರಶಾಂತ್ ನೀಲ್ ಸದ್ಯ ಕರಿಯರ್ಗಾಗಿ ಆಕ್ಷನ್ ಸಿನಿಮಾಗಳನ್ನು ನೆಚ್ಚಿಕೊಂಡಿದ್ದಾರೆ. ಬಾಲಿವುಡ್ ನಿರ್ಮಾಪಕರು ಕೂಡ ನೀಲ್ ಜೊತೆ ಸಿನಿಮಾ ಮಾಡಲು ಕಾಯುತ್ತಿದ್ದಾರೆ. ಆದರೆ ಅಳೆದು ತೂಗಿ ಪ್ರಶಾಂತ್ ತಮ್ಮ ಮುಂದಿನ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. 'KGF' ಸಿನಿಮಾ ನೋಡಿ ತಾರಕ್ ಕರೆದು ಅವಕಾಶ ಕೊಟ್ಟಿದ್ದಾರೆ.

ಪ್ರಶಾಂತ್ ನೀಲ್ ನೆಚ್ಚಿನ ನಟರಲ್ಲಿ ಜ್ಯೂ. ಎನ್ಟಿಆರ್ ಕೂಡ ಒಬ್ಬರು. ಹಾಗಾಗಿ ಇವರಿಬ್ಬರ ಕಾಂಬಿನೇಷನ್ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಮುಂದಿನ ವರ್ಷ ಮೇ ವೇಳೆಗೆ NTR31 ಸಿನಿಮಾ ಸೆಟ್ಟೇರಲಿದೆ. ಮೈತ್ರಿ ಮೂವಿ ಮೇಕರ್ಸ್ ಹಾಗೂ ಎನ್ಟಿಆರ್ ಆರ್ಟ್ಸ್ ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡಲಿವೆ. ತಾರಕ್ ಬಿಟ್ಟರೆ ಬೇರೆ ಯಾರು ಚಿತ್ರಕ್ಕೆ ಆಯ್ಕೆ ಆಗಿಲ್ಲ. ಆದರೆ ಕನ್ನಡದ ಕಿರುತೆರೆ ನಟಿ ಇದೀಗ ಚಿತ್ರದಲ್ಲಿ ನಟಿಸೋ ಅವಕಾಶ ಗಿಟ್ಟಿಸಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ.
ಒಂದ್ಕಾಲದಲ್ಲಿ ಕನ್ನಡ ಕಿರುತೆರೆಯಲ್ಲಿ ಮಿಂಚಿದ ಜ್ಯೋತಿ ರೈ ಈಗ ಟಾಲಿವುಡ್ನಲ್ಲಿ ಸೆಟ್ಲ್ ಆಗಿದ್ದಾರೆ. ತೆಲುಗು ಕಿರುತೆರೆ, ಸಿನಿಮಾ ಹಾಗೂ ವೆಬ್ ಸೀರಿಸ್ಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ. ನಿರ್ದೇಶಕು ಸುಕುಪೂರ್ವಜ್ ಎಂಬುವವರ ಜೊತೆ ಡೇಟಿಂಗ್ನಲ್ಲಿದ್ದಾರೆ. ಇಬ್ಬರೂ ಮದುವೆ ಕೂಡ ಆಗಿದ್ದಾರೆ ಎನ್ನಲಾಗ್ತಿದೆ. ಜ್ಯೋತಿ ರೈ ಈಗ ಪ್ರಶಾಂತ್ ನೀಲ್ ಮುಂದಿನ ಚಿತ್ರದಲ್ಲಿ ಅವಕಾಶ ಪಡೆದಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.
ತಾರಕ್ ಸದ್ಯ 'ದೇವರ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಮುಗಿದ ಮೇಲೆ ನೀಲ್ ಜೊತೆ ಸಿನಿಮಾ ಮಾಡಲಿದ್ದಾರೆ. ಪ್ಯಾನ್ ಇಂಡಿಯಾ ರೇಂಜ್ನಲ್ಲಿ ತಯಾರಾಗಲಿರುವ ಈ ಸಿನಿಮಾದಲ್ಲಿ ಜ್ಯೋತಿರೈ ಕೂಡ ನಟಿಸುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಜ್ಯೋತಿರೈ ಪ್ರಿಯಕರ ಸುಕುಪೂರ್ವಜ್ ಈಗ ಪ್ರಶಾಂತ್ ನೀಲ್ಗೆ ಆತ್ಮೀಯರಾಗಿದ್ದಾರಂತೆ. ಆತನ ಸಹಹೆ ಮೇರೆಗೆ NTR31 ಚಿತ್ರದಲ್ಲಿ ಜ್ಯೋತಿಗೆ ಅವಕಾಶ ಸಿಕ್ಕಿದೆ ಎನ್ನಲಾಗ್ತಿದೆ.

ಎನ್ಟಿಆರ್ ಜೊತೆ ಜ್ಯೋತಿ ರೈ ನಟಿಸಬಹುದು. ಅಥವಾ ಸ್ಪೆಷಲ್ ಸಾಂಗ್ನಲ್ಲಿ ಹೆಜ್ಜೆ ಹಾಕಬಹುದು ಎನ್ನುವ ಮಾತುಗಳು ಕೇಳಿಬರ್ತಿದೆ. ಕೊಡಗಿನ ಮೂಲದ ನಟಿ ಜ್ಯೋತಿ ರೈ 'ಬಂದೇ ಬರತಾವ ಕಾಲ' ಧಾರಾವಾಹಿಯಲ್ಲಿ ಮೊದಲಿಗೆ ನಟಿಸಿದ್ದರು. ಬಳಿಕ ಕನ್ನಡ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದರು. ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡ ಆಕೆ 20ನೇ ವಯಸ್ಸಿನಲ್ಲಿ ಮದುವೆ ಆಗಿದ್ದರು. ಮೊದಲ ಪತಿಯಿಂದ ದೂರಾಗಿರುವ 'ಜೋಗುಳ'ದ ಅಮ್ಮ ಈಗ 2ನೇ ಮದುವೆಗೆ ಸಿದ್ಧರಾಗಿದ್ದಾರೆ.
ಕನ್ನಡದಲ್ಲಿ 'ಗೆಜ್ಜೆಪೂಜೆ', 'ಪ್ರೇರಣಾ', 'ಕಿನ್ನರಿ', 'ಮೂರು ಗಂಟು','ಜೋಗುಳ', 'ಕನ್ಯಾದಾನ', 'ಅನುರಾಗ ಸಂಗಮ, 'ಗೆಜ್ಜೆಪೂಜೆ', 'ಲವಲವಿಕೆ', 'ಕಸ್ತೂರಿ ನಿವಾಸ' ಸೇರಿದಂತೆ ಕೆಲ ಧಾರಾವಾಹಿಗಳಲ್ಲಿ ಜ್ಯೋತಿ ರೈ ನಟಿಸಿದ್ದಾರೆ. 'ಕನ್ಯಾದಾನಂ' ಧಾರಾವಾಹಿ ಮೂಲಕ ತೆಲುಗು ಕಿರುತೆರೆಗೆ ಎಂಟ್ರಿ ಕೊಟ್ಟಿದ್ದ ಜ್ಯೋತಿರೈ 'ಗುಪ್ಪೆಡಂತ ಮನಸು' ಧಾರಾವಾಹಿಯ ಪಾತ್ರದಲ್ಲಿ ತೆಲುಗು ವೀಕ್ಷಕರ ಮನಗೆದ್ದಿದ್ದರು.
ಅಂದಹಾಗೆ ಸುಕುಪುರ್ವಜ್ ನಿರ್ದೇಶನದ 'ಎ ಮಾಸ್ಟರ್ ಪೀಸ್' ಚಿತ್ರದಲ್ಲಿ ಜ್ಯೋತಿ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ. 'ಪ್ರೆಟಿಗರ್ಲ್' ಎನ್ನುವ ವೆಬ್ ಸೀರಿಸ್ನಲ್ಲೂ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗೆ ಸಿಕ್ಕಾಪಟ್ಟೆ ಬೋಲ್ಡ್ ಅವತಾರದಲ್ಲಿ ಫೋಟೊಶೂಟ್ ಮಾಡಿಸಿ ಅಭಿಮಾನಿಗಳ ಮನಗೆಲ್ಲುತ್ತಿದ್ದಾರೆ.


Click it and Unblock the Notifications











