ಜೆಡಿಎಸ್ ಪಕ್ಷ ಬಿಡಲಾರೆ; ಪೂಜಾ ಗಾಂಧಿ ಸ್ಪಷ್ಟನೆ
'ಮುಂಗಾರು ಮಳೆ' ಹುಡುಗಿ ಪೂಜಾ ಗಾಂಧಿ ಮತ್ತೆ ಮಾತನಾಡಿದ್ದಾರೆ. ಇನ್ನು ಮಾತನಾಡುವುದಿಲ್ಲ ಎಂದು ಅದೆಷ್ಟೋ ಬಾರಿ ಹೇಳಿದರೂ ಮತ್ತೆ ಮಾತನಾಡುವ ಪ್ರಸಂಗ ಪೂಜಾ ಗಾಂಧಿ ಅವರಿಗೆ ಬಂದಿದೆ. ಕೆಲವು ದಿನಗಳ ಹಿಂದೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಮುಖಂಡ ಕುಮಾರಸ್ವಾಮಿ ಬಹಿರಂಗವಾಗಿಯೇ "ನಿಮ್ಮ ಸೇವೆ ಸಾಕು ಪೂಜಾ ಗಾಂಧಿಯವರೇ...' ಎಂದಿದ್ದರು. ಆಗಿನಿಂದಲೂ ಪೂಜಾ ಗಾಂಧಿ ಜೆಡಿಎಸ್ ಬಿಡುಬಹುದು ಎನ್ನಲಾಗುತ್ತಿತ್ತು.
ಆದರೆ ಇದೀಗ ಈ ಸಂದೇಹಕ್ಕೆ ಉತ್ತರ ದೊರೆತಿದೆ. ಈ ವಿಷಯದ ಬಗ್ಗೆ ಸ್ವತಃ ಪೂಜಾ ಗಾಂಧಿ ಉತ್ತರಿಸಿದ್ದಾರೆ. ಅದು ಕುಮಾರಸ್ವಾಮಿ ಅವರು ಭಾವುಕರಾಗಿ ಆಡಿದ ಮಾತು ಎಂದಿದ್ದಾರೆ. "ಪಕ್ಷಕ್ಕೆ ರಾಜೀನಾಮೆ ನೀಡಬೇಕು ಎಂದು ಕುಮಾರಸ್ವಾಮಿ ಹೇಳಿಲ್ಲ. ಅವರು ಆ ಸಂದರ್ಭದಲ್ಲಿ ಹೇಳಿದ್ದ ಮಾತುಗಳು ಭಾವೋದ್ವೇಗಕ್ಕೆ ಸಂಬಂಧಿಸಿದ್ದು. ನಾನು ಅವರ ತಂಗಿ ಸಮಾನ ಎಂದು ಕೂಡ ಅವರು ಆ ಸಂದರ್ಭದಲ್ಲೇ ಹೇಳಿದ್ದಾರೆ.
ಪಕ್ಷಕ್ಕಾಗಿ ನಾನು ಮಾಡಿರುವ ಕೆಲಸ ಎಲ್ಲರಿಗೂ ಸಂತಸ ತಂದಿದೆ. ಸೆಲೆಬ್ರಿಟಿಗಳು ಎಂದ ಮೇಲೆ ವಿವಾದಗಳು ಯಾವಾಗಲೂ ಇದ್ದದ್ದೇ. ನನ್ನ ಮೇಲೆ ಬಂದ ಪ್ರತಿ ಸುಳ್ಳು ಆರೋಪಗಳಿಗೂ ನಾನು ಸ್ಪಷ್ಟೀಕರಣ ನೀಡುತ್ತಾ ನನ್ನ ಅಮೂಲ್ಯ ಸಮಯ ವ್ಯರ್ಥ ಮಾಡುವುದಿಲ್ಲ. ಬದಲು ನನ್ನ ಕೆಲಸದಲ್ಲಿ ನಾನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತೇನೆ" ಎಂದು ಕುಮಾರಸ್ವಾಮಿ ಮಾತಿನ ಅರ್ಥವನ್ನು ವಿವರಿಸಿ ತಮ್ಮ ನಿರ್ಧಾರದ ಬಗ್ಗೆಯೂ ಹೇಳಿದ್ದಾರೆ ಪೂಜಾ ಗಾಂಧಿ.
ಅಂದಮೇಲೆ ನಟಿ ಪೂಜಾ ಗಾಂಧಿ ಜೆಡಿಎಸ್ ಪಕ್ಷ ಬಿಡುವುದಿಲ್ಲ ಎಂಬುದು ಪಕ್ಕಾ ಆಗಿದೆ. ಚುನಾವಣೆಗೆ ನಿಲ್ಲುವ ಯೋಚನೆ ಇದೆಯೇ ಎಂಬ ಪ್ರಶ್ನೆಗೆ ಕೂಡ ಪೂಜಾ ಗಾಂಧಿ "ಪಕ್ಷವು ನನಗೆ ವಹಿಸುವ ಯಾವುದೇ ಜವಾಬ್ದಾರಿಗಳನ್ನು ನಾನು ನಿರ್ವಹಿಸಲಿದ್ದೇನೆ"ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿದ್ದಾರೆ. ಸದ್ಯಕ್ಕೆ ಜೆಡಿಎಸ್ ಯುವ ಘಟಕದ ಕಾರ್ಯಾಧ್ಯಕ್ಷೆ ಆಗಿರುವ ಪೂಜಾ ಗಾಂಧಿ, ಮುಂದೆ ಅಲ್ಲಿ ಯಾವ ಹುದ್ದೆಯನ್ನು ಪಡೆದುಕೊಳ್ಳಬಹುದು ಎಂಬ ಕುತೂಹಲ ಎಲ್ಲರಲ್ಲಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











