'ಆದಿಪುರುಷ್' ಸೋಲಿನ ಬೆನ್ನಲ್ಲೇ ಕನ್ನಡ ನಿರ್ಮಾಪಕರ ಮತ್ತೊಂದು ಚಿತ್ರಕ್ಕೆ ಪ್ರಭಾಸ್ ಗ್ರೀನ್ ಸಿಗ್ನಲ್?
ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ಟೈಮೇ ಯಾಕೋ ಸರಿಯಿಲ್ಲ ಅನ್ನಿಸ್ತಿದೆ. 'ಬಾಹುಬಲಿ' ನಂತರ ಆ ರೇಂಜಿನ ಸಕ್ಸಸ್ ಮಾತ್ರ ಸಿಕ್ತಿಲ್ಲ. 'ಆದಿಪುರುಷ್' ಸೇರಿ ಒಂದರ್ಥದಲ್ಲಿ ಹ್ಯಾಟ್ರಿಕ್ ಸೋಲು ಎದುರಾಗಿದೆ. ಸದ್ಯ 'ಸಲಾರ್', 'ಪ್ರಾಜೆಕ್ಟ್'- K ಹಾಗೂ 'ರಾಜಾ ಡೀಲಕ್ಸ್' ಸಿನಿಮಾಗಳಲ್ಲಿ ಅಭಿಮಾನಿಗಳ ಪ್ರೀತಿಯ ಡಾರ್ಲಿಂಗ್ ನಟಿಸ್ತಿದ್ದಾರೆ. ಈಗ ಇನ್ನೊಂದು ಸಿನಿಮಾ ಸುದ್ದಿ ಬಂದಿದೆ.
ಓಂ ರಾವುತ್ ನಿರ್ದೇಶನದ 'ಆದಿಪುರುಷ್' ಚಿತ್ರದಲ್ಲಿ ಪ್ರಭಾಸ್ ಶ್ರೀರಾಮನಾಗಿ ನಟಿಸಿದ್ದಾರೆ. ಪ್ರಭಾಸ್ ನಟನೆ ಇಷ್ಟವಾದರೂ ಒಟ್ಟಾರೆಯಾಗಿ ಸಿನಿಮಾ ಪ್ರೇಕ್ಷಕರಿಗೆ ನಿರಾಸೆ ಮೂಡಿಸಿದೆ. ಈಗಾಗಲೇ ಸಿನಿಮಾ 450 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದೆ. ಆದರೂ ಈ ಪೌರಾಣಿಕ ಸಿನಿಮಾ ನಿರೀಕ್ಷಿಸಿದ ಮಟ್ಟದಲ್ಲಿ ಸಕ್ಸಸ್ ಕಂಡಿಲ್ಲ. ಅಂದಾಜು 1000 ಕೋಟಿ ರೂ. ಕಲೆಕ್ಷನ್ ಮಾಡುವ ನಿರೀಕ್ಷೆ ಇತ್ತು. ಆದರೆ 500 ಕೋಟಿ ಗಡಿ ದಾಟೋದು ಕಷ್ಟ ಎನ್ನುವಂತಾಗಿಬಿಟ್ಟಿದೆ.

ಕಲೆಕ್ಷನ್ ವಿಚಾರವನ್ನು ಪಕ್ಕಕ್ಕಿಟ್ಟರೆ ಸಿನಿಮಾ ಭಾರೀ ವಿವಾದ ಸೃಷ್ಟಿಸಿದೆ. ಪ್ರೇಕ್ಷಕರು ಸಿನಿಮಾ ನೋಡಿ ಮೆಚ್ಚಿಕೊಳ್ಳುವ ಬದಲು ಸಿನಿಮಾ ನೋಡೋಕೆ ಹಿಂದೇಟು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವರು ಪ್ರಭಾಸ್ಗೆ ಈ ಸಿನಿಮಾ ಬೇಕಿತ್ತಾ? ರಾಮಾಯಣ ಕಾವ್ಯ ಆಧರಿಸಿ ಪ್ರಯೋಗ ಮಾಡಿ ಈ ರೀತಿಗೆ ಟೀಕೆಗೆ ಗುರಿಯಾಗಿದ್ದು ಯಾಕೆ? ಈ ಬಗ್ಗೆ ಪ್ರಭಾಸ್ಗೆ ಅರಿವು ಇರಲಿಲ್ಲವೇ ಎನ್ನುವ ಪ್ರಶ್ನೆ ಎತ್ತಿದ್ದಾರೆ. ಇದೆಲ್ಲದರ ನಡುವೆ ಯಂಗ್ ರೆಬಲ್ ಸ್ಟಾರ್ ಮತ್ತೊಂದು ಸಿನಿಮಾ ಬಗ್ಗೆ ಗುಸುಗುಸು ಶುರುವಾಗಿದೆ.
ಕೆವಿಎನ್ ಬ್ಯಾನರ್ನಲ್ಲಿ ಪ್ರಭಾಸ್?
ಸದ್ಯ ಪ್ರಭಾಸ್ ಕೆವಿಎನ್ ಪ್ರೊಡಕ್ಷನ್ ಬ್ಯಾನರ್ನಲ್ಲಿ ಸಿನಿಮಾ ಮಾಡ್ತಾರೆ ಎನ್ನುವ ಮಾತುಗಳು ಟಾಲಿವುಡ್ನಲ್ಲಿ ಕೇಳಿಬರ್ತಿದೆ. ಕನ್ನಡದಲ್ಲಿ 'ಸಖತ್' ಹಾಗೂ 'ಬೈಟು ಲವ್' ಸಿನಿಮಾಗಳನ್ನು ಕೆವಿಎನ್ ಸಂಸ್ಥೆ ನಿರ್ಮಾಣ ಮಾಡಿದೆ. 'RRR' ಸಿನಿಮಾ ವಿತರಣೆ ಮಾಡಿತ್ತು. ಇನ್ನು ಧ್ರುವ ನಟನೆಯ 'KD' ಸೇರಿದಂತೆ ಒಂದಷ್ಟು ಸಿನಿಮಾಗಳ ನಿರ್ಮಾಣ ಆಗುತ್ತಿದೆ. ಯಶ್19 ಚಿತ್ರಕ್ಕೂ ವೆಂಕಟ್ ಕೋನಂಕಿ ಬಂಡವಾಳ ಹೂಡುವ ಮಾತುಗಳು ಕೇಳಿಬರ್ತಿದೆ. ಇದೆಲ್ಲದರ ನಡುವೆ ಪ್ರಭಾಸ್ ಸಿನಿಮಾ ಸುದ್ದಿ ಈಗ ಚರ್ಚೆ ಹುಟ್ಟಾಕ್ಕಿದೆ.
ಹರೀಶ್ ಶಂಕರ್ ಆಕ್ಷನ್ ಕಟ್?
ಕೆವಿಎನ್ ಬ್ಯಾನರ್ನಲ್ಲಿ ಪ್ರಭಾಸ್ ನಟನೆಯ ಮುಂದಿನ ಚಿತ್ರವನ್ನು ಹರೀಶ್ ಶಂಕರ್ ನಿರ್ದೇಶನ ಮಾಡ್ತಾರೆ ಎನ್ನಲಾಗ್ತಿದೆ. ತೆಲುಗಿನಲ್ಲಿ 'ಗಬ್ಬರ್ ಸಿಂಗ್' ಹಾಗೂ 'ದುವ್ವಾಡೆ ಜಗನ್ನಾಥಂ' ರೀತಿಯ ಹಿಟ್ ಸಿನಿಮಾಗಳನ್ನು ಅವರು ನಿರ್ದೇಶನ ಮಾಡಿದ್ದಾರೆ. ಸದ್ಯ ಪವನ್ ಕಲ್ಯಾಣ್ ನಟನೆಯ 'ಉಸ್ತಾದ್ ಭಗತ್ಸಿಂಗ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಒಟ್ನಲ್ಲಿ ಕೆವಿಎನ್ ಬ್ಯಾನರ್ನಲ್ಲಿ ಯಂಗ್ ರೆಬಲ್ ಸ್ಟಾರ್ ನಟಿಸೋ ಬಗ್ಗೆ ಅಧಿಕೃತ ಮಾಹಿತಿ ಸಿಗಬೇಕಿದೆ.

ಮುಂದಿನ ವರ್ಷ ಸಿನಿಮಾ ಶುರು
ಪ್ರಭಾಸ್ ಈಗಾಗಲೇ 'ಸಲಾರ್' ಹಾಗೂ 'ಪ್ರಾಜೆಕ್ಟ್'- K ಚಿತ್ರಗಳ ಚಿತ್ರೀಕರಣ ಮುಗಿಸಿದ್ದಾರೆ. ಸದ್ದಿಲ್ಲದೇ 'ರಾಜಾ ಡೀಲಕ್ಸ್' ಶೂಟಿಂಗ್ ಕೂಡ ಮಾಡುತ್ತಾ ಬರುತ್ತಿದ್ದಾರೆ. ಸಂದೀಪ್ ರೆಡ್ಡಿ ನಿರ್ದೇಶನದ 'ಸ್ಪಿರಿಟ್' ಚಿತ್ರದಲ್ಲೂ ನಟಿಸಬೇಕಿದೆ. ಹಾಗಾಗಿ ಕೆವಿಎನ್ ಪ್ರೊಡಕ್ಷನ್ಸ್ ಸಿನಿಮಾ ಮುಂದಿನ ವರ್ಷ ಸೆಟ್ಟೇರುವ ನಿರೀಕ್ಷೆಯಿದೆ. ಅಷ್ಟರಲ್ಲಿ ಪವನ್ ಕಲ್ಯಾಣ್ ಚಿತ್ರವನ್ನು ಹರೀಶ್ ಶಂಕರ್ ಮುಗಿಸಲಿದ್ದಾರೆ. ಸದ್ಯ ಪ್ಯಾನ್ ಇಂಡಿಯಾ ಟ್ರೆಂಡ್ ನಡೆಯುತ್ತಿರುವುದರಿಂದ ತೆಲುಗಿನಲ್ಲಿ ನಿರ್ಮಾಣವಾಗುವ ಸಿನಿಮಾ ಕನ್ನಡಕ್ಕೂ ಡಬ್ ಆಗಿ ಬರಲಿದೆ.
ಮೌನಕ್ಕೆ ಜಾರಿದ ಪ್ರಭಾಸ್
ಇನ್ನು 'ಆದಿಪುರುಷ್' ಸಿನಿಮಾ ವಿಚಾರದಲ್ಲಿ ಪ್ರಭಾಸ್ ಸೈಲೆಂಟ್ ಆಗಿದ್ದಾರೆ. ಇಷ್ಟೆಲ್ಲಾ ಟೀಕೆ ಟಿಪ್ಪಣಿಗಳು ವ್ಯಕ್ತವಾಗುತ್ತಿದ್ದರು ಮಾತನಾಡುವ ಗೋಜಿಗೆ ಹೋಗುತ್ತಿಲ್ಲ. ಟೀಸರ್ ರಿಲೀಸ್ ಆದಾಗಲೇ ಭಾರೀ ಟೀಕೆ ವ್ಯಕ್ತವಾಗಿತ್ತು. ಒಂದಷ್ಟು ವಿವಾದಕ್ಕೂ ಕಾರಣವಾಗಿತ್ತು. ಇತ್ತೀಚೆಗೆ ಸಿನಿಮಾ ಬ್ಯಾನ್ ಮಾಡುವಂತೆ ದೆಹಲಿ ಹೈಕೋರ್ಟ್ನಲ್ಲಿ ಪಿಟಿಷನ್ ಕೂಡ ದಾಖಲಾಗಿತ್ತು. ಆದರೆ ಪ್ರಭಾಸ್ ಮಾತನಾಡುತ್ತಿಲ್ಲ. ಇದೆಲ್ಲದರ ನಡುವೆ ಕಮಲ್ ಹಾಸನ್ 'ಪ್ರಾಜೆಕ್ಟ್- K' ತಂಡ ಸೇರಿಕೊಂಡ ಸುದ್ದಿ ಬಂದಿದೆ.


Click it and Unblock the Notifications











