ರಾಧಿಕಾ ಕುಮಾರಸ್ವಾಮಿ 'ಬಂಗಾರದ ವಂಶ' ಏನಾಯ್ತು?
'ರುದ್ರತಾಂಡವ' ಚಿತ್ರದ ಮೂಲಕ ಹೊಸ ಇನ್ನಿಂಗ್ಸ್ ಆರಂಭಿಸಿದ ರಾಧಿಕಾ ಕುಮಾರಸ್ವಾಮಿ ಅವರ ಚೆಲುವಿಗೆ ಪ್ರೇಕ್ಷಕರು ಕರಗಿದ್ದಾರೆ. ಆದರೆ ಅವರ 'ಅಣ್ಣತಂಗಿ' ಕಥೆಯ 'ಬಂಗಾರದ ವಂಶ' ಚಿತ್ರ ಏನಾಯಿತು? ಸಾಕಷ್ಟು ಹಿಂದೆಯೇ ಸದ್ದು ಮಾಡಿದ ಈ ಚಿತ್ರದ ಕಥೆ ಎಲ್ಲಿಗೆ ಬಂದಿದೆ?
ಗಾಂಧಿನಗರ ಮೂಲಗಳ ಪ್ರಕಾರ 'ಬಂಗಾರದ ವಂಶ' ಚಿತ್ರ ಸದ್ಯಕ್ಕೆ ಸ್ಟಾಪ್ ಆಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಚಿತ್ರ ಸೆಂಟಿಮೆಂಟ್ ಚಿತ್ರಗಳ ಸರದಾರ ಸಾಯಿಪ್ರಕಾಶ್ ಅವರ ಆಕ್ಷನ್ ಕಟ್ ನಲ್ಲಿ ಮೂಡಿಬರಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಚಿತ್ರ ನಿಂತುಹೋಗಿದೆಯಾ?

ಈ ಚಿತ್ರ ರಾಧಿಕಾ ಕುಮಾರಸ್ವಾಮಿ ಸ್ವಂತ ನಿರ್ಮಾಣದ ಚಿತ್ರ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈ ಚಿತ್ರದ ಹೀರೋ ಎನ್ನಲಾಗಿತ್ತು. ಆದರೆ ಇದುವರೆಗೂ 'ಬಂಗಾರದ ವಂಶ' ಚಿತ್ರ ಏನಾಯಿತು ಎಂಬ ಸುದ್ದಿ ಇಲ್ಲ.
'ರುದ್ರತಾಂಡವ'ದ ಬಳಿಕ ರಾಧಿಕಾ ಕುಮಾರಸ್ವಾಮಿ ತಮ್ಮ ಮುಂದಿನ ಚಿತ್ರವನ್ನೂ ಪ್ರಕಟಿಸಿದ್ದಾರೆ. ತಮ್ಮ ಮುಂದಿನ ಚಿತ್ರ 'ವಿಕ್ಟರಿ' ಖ್ಯಾತಿಯ ನಂದಕಿಶೋರ್ ನಿರ್ದೇಶನದಲ್ಲಿ ಎಂದು ರಾಧಿಕಾ ಹೇಳಿದ್ದಾರೆ. ಆದರೆ ಅವರ 'ಬಂಗಾರದ ವಂಶ' ಚಿತ್ರದ ಬಗ್ಗೆ ಮಾತ್ರ ಅವರು ಏನೂ ಹೇಳದೆ ಇರುವುದು ಚಿತ್ರ ಸ್ಟಾಪ್ ಆಗಿದೆ ಎಂಬ ಅನುಮಾನಕ್ಕೆ ಕಾರಣವಾಗಿದೆ.
ಇನ್ನು ಸಾಯಿಪ್ರಕಾಶ್ ಅವರೂ ಅಷ್ಟೇ 'ಬಂಗಾರದ ವಂಶ' ಚಿತ್ರದ ಬಗ್ಗೆ ಏನೂ ಹೇಳುತ್ತಿಲ್ಲ. ಚಿತ್ರ ಆರಂಭವಾದರೆ ತಾವು ಏನಾದರೂ ಮಾತನಾಡಬಹುದು. ಆದರೆ ಅದಕ್ಕೂ ಮುನ್ನ ತಾವೇನು ಹೇಳಲು ಸಾಧ್ಯವಿಲ್ಲ ಎಂಬಂತಾಗಿದೆ ಅವರ ಪರಿಸ್ಥಿತಿ. ಇಷ್ಟಕ್ಕೂ ರಾಧಿಕಾ ಅವರು ಈ ಚಿತ್ರ ಮಾಡ್ತಾರಾ ಇಲ್ಲವೇ ಎಂಬುದು ಸದ್ಯಕ್ಕೆ ಚಿದಂಬರ ರಹಸ್ಯವಾಗಿಯೇ ಉಳಿದಿದೆ.


Click it and Unblock the Notifications











