Ramya: 'ಉತ್ತರಕಾಂಡ' ಚಿತ್ರದಿಂದಲೂ ಹೊರಬಂದ್ರಾ ರಮ್ಯಾ? ಅಸಲಿಗೆ ಆಗಿದ್ದೇನು?
ಕಳೆದ ವರ್ಷ ಗಣೇಶ ಹಬ್ಬದ ಸಂಭ್ರಮದಲ್ಲಿ ನಟಿ ರಮ್ಯಾ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದರು. 'ಆಪಲ್ ಬಾಕ್ಸ್ ಸ್ಟುಡಿಯೋಸ್' ಸಿನಿಮಾ ನಿರ್ಮಾಣ ಸಂಸ್ಥೆ ಆರಂಭಿಸಿ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದ್ದರು. ಬಳಿಕ ಧನಂಜಯ್ ನಟನೆಯ 'ಉತ್ತರಕಾಂಡ' ಚಿತ್ರದಲ್ಲಿ ನಾಯಕಿಯಾಗಿ ನಟಿಸಲು ಒಪ್ಪಿದ್ದರು. ಸದ್ಯ ವಿದೇಶದಲ್ಲಿ ರಮ್ಯಾ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗ್ತಿದೆ. ಈ ನಡುವೆ ಆಕೆ 'ಉತ್ತರಕಾಂಡ' ಚಿತ್ರದಿಂದ ಹೊರ ಬಂದಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ.
ಒಂದ್ಕಾಲದಲ್ಲಿ ಸ್ಯಾಂಡಲ್ವುಡ್ ಕ್ವೀನ್ ಆಗಿ ಮೆರೆದ ರಮ್ಯಾ ನಂತ್ರ ರಾಜಕೀಯರಂಗದತ್ತ ಮುಖ ಮಾಡಿದ್ದರು. ಚಿತ್ರರಂಗಕ್ಕೆ ಗುಡ್ಬೈ ಹೇಳಿದ್ದರು. ಆದರೆ ಅಭಿಮಾನಿಗಳು ಆಕೆಯನ್ನು ತೆರೆಮೇಲೆ ನೋಡೋಕೆ ಬಹಳ ಇಷ್ಟಪಡುತ್ತಿದ್ದರು. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಆಸೆ ವ್ಯಕ್ತಪಡಿಸುತ್ತಿದ್ದಾರೆ. ಪದ್ಮಾವತಿ ಚಿತ್ರರಂಗಕ್ಕೆ ರೀಎಂಟ್ರಿ ಕೊಟ್ಟ ಸುದ್ದಿ ಕೇಳಿ ಅಭಿಮಾನಿಗಳು ಖುಸಿಯಾಗಿದ್ದರು. ಮೊದಲು ನಿರ್ಮಾಪಕಿಯಾಗಿ ಮಾತ್ರ ವಾಪಸ್ ಆಗ್ತಾರೆ ಎನ್ನಲಾಗಿತ್ತು. ಬಳಿಕ ನಟಿಸೋಕು ಸೈ ಎಂದಿದ್ದರು.

ಕಳೆದ ಕೆಲ ದಿನಗಳಿಂದ ನಟಿ ರಮ್ಯಾ ದೂರದ ಡೆನ್ಮಾರ್ಕ್ನಲ್ಲಿ ಬೀಡು ಬಿಟ್ಟಿದ್ದಾರೆ. ದೇಹದ ತೂಕ ಇಳಿಸಿಕೊಂಡು ಹಳೇ ಚಾರ್ಮ್ ಮರಳಿ ಪಡೆಯಲು ಅಲ್ಲಿ ಪ್ರಕೃತಿ ಚಿಕಿತ್ಸೆ ಮೊರೆ ಹೋಗಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಆಗಿಂದಾಗ್ಗೆ ಫೋಟೊ, ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ಆಕೆಯ ಸೆಲ್ಫಿ ಡ್ಯಾನ್ಸ್ ವಿಡಿಯೋ ವೈರಲ್ ಆಗಿತ್ತು.
'ಉತ್ತರಕಾಂಡ' ಸುದ್ದಿನೇ ಇಲ್ಲ!
2019ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋತಿತ್ತು. ಪಕ್ಷದ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ ಆಗಿದ್ದ ರಮ್ಯಾ ಆ ನಂತರ ದೆಹಲಿ ಬಿಟ್ಟು ಅಜ್ಞಾತಕ್ಕೆ ತೆರಳಿದ್ದರು. ಅಭಿಮಾನಿಗಳ ಪ್ರೀತಿಯ ಪದ್ಮಾಪತಿ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಎನ್ನುವ ಮಾಹಿತಿ ಇರಲಿಲ್ಲ. ಬಳಿಕ ನಿಧಾನವಾಗಿ ಚಿತ್ರರಂಗದ ಕಾರ್ಯಕ್ರಮಗಳಲ್ಲಿ ಭಾಗಿ ಆದರು. ಕೊನೆಗೆ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದರು. ಬಳಿಕ 'ಉತ್ತರಕಾಂಡ' ಸಿನಿಮಾ ಒಪ್ಪಿದ್ದರು. ಚಿತ್ರದ ಮುಹೂರ್ತ ಸಮಾರಂಭದಲ್ಲಿ ಭಾಗಿ ಆಗಿದ್ದರು. ಬಳಿಕ ಆ ಸಿನಿಮಾ ಸುದ್ದಿನೇ ಇಲ್ಲ.

ಚಿತ್ರದಿಂದ ನಟಿ ರಮ್ಯಾ ಹೊರಕ್ಕೆ?
ರಮ್ಯಾ 'ಉತ್ತರಕಾಂಡ' ಚಿತ್ರದಿಂದ ಹೊರ ಬಂದಿದ್ದಾರೆ ಎನ್ನುವ ಗುಸು ಗುಸು ಗಾಂಧಿನಗರದ ಗಲ್ಲಿಗಳಲ್ಲಿ ಹರಿದಾಡುತ್ತಿದೆ. ಇದ್ದಕ್ಕಿದಂತೆ ಯಾಕೆ ಇಂತಹ ವದಂತಿ ಶುರುವಾಯಿತು ಅನ್ನೋದು ಅರ್ಥವಾಗ್ತಿಲ್ಲ. ಕಳೆದ ವರ್ಷ ನವೆಂಬರ್ನಲ್ಲಿ 'ಉತ್ತರಕಾಂಡ' ಸಿನಿಮಾ ಮುಹೂರ್ತ ನಡೆದಿತ್ತು. ಆ ಬಳಿಕ ಸಿನಿಮಾ ಚಿತ್ರೀಕರಣದ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ಸದ್ಯ ರಮ್ಯಾ ವಿದೇಶಕ್ಕೆ ಹೋಗಿದ್ದಾರೆ. ಇಂತಹ ಹೊತ್ತಲ್ಲೆ ಹೀಗೊಂದು ಊಹಾಪೋಹ ಶುರುವಾಗಿದೆ.
ತಡವಾಗ್ತಿದೆ 'ಉತ್ತರಕಾಂಡ' ಶೂಟಿಂಗ್
ಧನಂಜಯ್, ರೋಹಿತ್ ಪದಕಿ, ಕೆಆರ್ಜಿ ಕಾಂಬಿನೇಷನ್ನಲ್ಲಿ ಬಂದ 'ರತ್ನನ್ಪ್ರಪಂಚ' ಸಿನಿಮಾ ಹಿಟ್ ಆಗಿತ್ತು. ಕೋವಿಡ್ ಸಮಯದಲ್ಲಿ ಓಟಿಟಿಯಲ್ಲೇ ಸಿನಿಮಾ ಗೆದ್ದಿತ್ತು. ಈ ಸಿನಿಮಾ ನೋಡಿ ರಮ್ಯಾ ಕೂಡ ಮೆಚ್ಚಿಕೊಂಡಿದ್ದರು. ಅದೇ ಕಾಂಬಿನೇಷನ್ನಲ್ಲಿ 'ಉತ್ತರಕಾಂಡ' ಸಿನಿಮಾ ಕೂಡ ಮೂಡಿ ಬರ್ತಿದೆ. ಕಾರಣಾಂತರಗಳಿಂದ ಸಿನಿಮಾ ಚಿತ್ರೀಕರಣ ತಡವಾಗುತ್ತಿದೆ. ಕಥೆಯನ್ನು ತಿದ್ದಿ ತೀಡುವ ಕೆಲಸ ನಡೀತಿದೆ. ಹಾಗಾಗಿಯೇ ಸೆಟ್ಗೆ ಹೋಗೋದು ತಡವಾಗುತ್ತಿದೆ ಎನ್ನಲಾಗ್ತಿದೆ. ಇಂತಹ ಹೊತ್ತಲ್ಲೇ ರಮ್ಯಾ ಚಿತ್ರದಿಂದ ಹೊರ ಬಂದಿದ್ದಾರೆ ಎನ್ನುವ ಅಂತೆ ಕಂತೆ ಸುದ್ದಿ ಹರಿದಾಡ್ತಿದೆ.
'ಸ್ವಾತಿ ಮುತ್ತಿನ.. ಚಿತ್ರದಲ್ಲಿ ನಟಿಸ್ಲಿಲ್ಲ
ರಮ್ಯಾ 'ಆಪಲ್ ಬಾಕ್ಸ್ ಸ್ಟುಡಿಯೋಸ್' ಬ್ಯಾನರ್ನಲ್ಲಿ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾ ನಿರ್ಮಿಸಿದ್ದಾರೆ. ರಾಜ್. ಬಿ ಶೆಟ್ಟಿ ಕಥೆ, ಚಿತ್ರಕಥೆ ಬರೆದು ಚಿತ್ರ ನಿರ್ದೇಶಿಸಿ ನಟಿಸಿದ್ದಾರೆ. ಮೊದಲಿಗೆ ಈ ಚಿತ್ರದಲ್ಲಿ ರಮ್ಯಾ ನಟಿಸೋದಾಗಿ ಹೇಳಿದ್ದರು. ಆದರೆ ನಂತರ ಚಿತ್ರದಲ್ಲಿ ನಟಿಸೋಕೆ ಒಲ್ಲೆ ಎಂದಿದ್ದರು. ನಂತರ ಆ ಪಾತ್ರದಲ್ಲಿ ಸಿರಿ ರವಿಕುಮಾರ್ ನಟಿಸಿದರು. ಅದೇ ರೀತಿ 'ಉತ್ತರಕಾಂಡ' ಚಿತ್ರದಿಂದಲೂ ಆಕೆ ಹೊರ ಬಂದಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ.
ರಮ್ಯಾ ಚಿತ್ರ ಕೈ ಬಿಡಲು ಕಾರಣ ಏನು?
ಸ್ಯಾಂಡಲ್ವುಡ್ ಕ್ವೀನ್ ಮತ್ತೆ ನಾಯಕಿಯಾಗಿ ಪ್ರೇಕ್ಷಕರನ್ನು ರಂಜಿಸೋದಕ್ಕೆ ಮನಸ್ಸು ಮಾಡಿದ್ದಾರೆ. ಅದಕ್ಕಾಗಿಯೇ ವಿದೇಶಕ್ಕೆ ತೆರಳಿ ತೂಕ ಇಳಿಸಿ ಹೊಸ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರಲು ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ. ಹಾಗಿರುವಾಗ ರಮ್ಯಾ 'ಉತ್ತರಕಾಂಡ' ಚಿತ್ರದಿಂದ ಹೊರ ಬಂದಿದ್ದಾರೆ ಅನ್ನೋದೆಲ್ಲಾ ಸುಳ್ಳು ಎನ್ನುವುದು ಕೆಲವರ ವಾದ. 'ಉತ್ತರಕಾಂಡ' ಉತ್ತರ ಕರ್ನಾಟಕ ಶೈಲಿಯ ರಗಡ್ ಸಿನಿಮಾ. ಆಕೆಯ ಪಾತ್ರ, ಡೈಲಾಗ್ಸ್ ಎಲ್ಲವೂ ಅಷ್ಟೇ ರಗಡ್ ಆಗಿದೆಯಂತೆ. ಅದೇ ಕಾರಣಕ್ಕೋ ಏನೋ ಆಕೆ ಸಿನಿಮಾದಿಂದ ಹೊರಬರಲು ನಿರ್ಧರಿಸಿದ್ರಾ? ಎನ್ನುವ ಅನುಮಾನ ಕೆಲವರದ್ದು. ಅದೆಲ್ಲಾ ಏನೇ ಇದ್ದರೂ ಈ ಬಗ್ಗೆ ಸ್ವತಃ ರಮ್ಯಾ ಉತ್ತರಿಸಬೇಕಿದೆ.


Click it and Unblock the Notifications











