ರಶ್ಮಿಕಾ ವಿರುದ್ಧ ಆತ ಸೇಡು ತೀರಿಸಿಕೊಳ್ಳುತ್ತಿದ್ದಾನಾ? ಶ್ರೀವಲ್ಲಿಗೆ ಕಂಟಕವಾಗಿರುವ ಆ ವ್ಯಕ್ತಿ ಯಾರು?
ಒಂದಿಲ್ಲೊಂದು ಕಾರಣಕ್ಕೆ ನಟಿ ರಶ್ಮಿಕಾ ಮಂದಣ್ಣ ಸದಾ ಸುದ್ದಿಯಲ್ಲಿ ಇರ್ತಾರೆ. ಸದ್ಯ ಕಿರಿಕ್ ಬೆಡಗಿ ನಿತಿನ್ ಸಿನಿಮಾದಿಂದ ಹೊರ ಬಂದಿದ್ದಾರೆ ಎನ್ನಲಾಗ್ತಿದೆ. ಆ ಪಾತ್ರದಲ್ಲಿ ಶ್ರೀಲೀಲಾ ನಟಿಸುವ ಬಗ್ಗೆ ಗುಸುಗುಸು ಶುರುವಾಗಿದೆ. ಇದೆಲ್ಲದರ ಮಧ್ಯೆ ರಶ್ಮಿಕಾ ದಿಢೀರನೆ ಆ ಸಿನಿಮಾದಿಂದ ಹೊರ ಬಂದಿದ್ದು ಯಾಕೆ? ಅನ್ನೋದು ಈಗ ಟಾಲಿವುಡ್ನಲ್ಲಿ ಹಾಟ್ ಟಾಪಿಕ್ ಆಗಿದೆ.
ನಿತಿನ್ ಹಾಗೂ ರಶ್ಮಿಕಾ ಈ ಹಿಂದೆ 'ಭೀಷ್ಮ' ಎನ್ನುವ ಚಿತ್ರದಲ್ಲಿ ನಟಿಸಿದ್ದರು. ವೆಂಕಿ ಕುಡುಮಲ ನಿರ್ದೇಶನದ ಈ ಸಿನಿಮಾ ಒಂದು ಹಂತಕ್ಕೆ ಸಕ್ಸಸ್ ಕಂಡಿತ್ತು. ಹಾಗಾಗಿ ಅದೇ ಕಾಂಬಿನೇಷನ್ನಲ್ಲಿ ಮತ್ತೊಂದು ಸಿನಿಮಾ ಆರಂಭವಾಗಿತ್ತು. ಸ್ಪೆಷಲ್ ವಿಡಿಯೋ ಮಾಡಿ ಈ ವಿಚಾರವನ್ನು ಕೆಲ ದಿನಗಳ ಹಿಂದೆ ಚಿತ್ರತಂಡ ಹಂಚಿಕೊಂಡಿತ್ತು. ಇನ್ನು ಚಿತ್ರದ ಮುಹೂರ್ತ ಸಮಾರಂಭದಲ್ಲಿ ಚಿರಂಜೀವಿ ಬಂದು ಶುಭ ಹಾರೈಸಿದ್ದರು. ಸಿನಿಮಾ ಚಿತ್ರೀಕಣ ಕೂಡ ಆರಂಭವಾಗಿತ್ತು.

ರಶ್ಮಿಕಾ ಕೂಡ ಒಂದು ದಿನದ ಮಟ್ಟಿಗೆ ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು ಎನ್ನಲಾಗ್ತಿದೆ. ಆದರೆ ಈಗ ಡೇಟ್ಸ್ ಸಮಸ್ಯೆ ಎಂದು ಹೇಳಿ ಆಕೆ ನಿತಿನ್ ಸಿನಿಮಾದಿಂದ ಹೊರ ಬರುತ್ತಿರುವುದಾಗಿ ಹೇಳಲಾಗುತ್ತಿದೆ. ರಶ್ಮಿಕಾ ಅತ್ತ ಬಾಲಿವುಡ್ ಸಿನಿಮಾಗಳಲ್ಲೂ ನಟಿಸ್ತಿದ್ದಾರೆ. ಟಾಲಿವುಡ್ನಲ್ಲೂ ಒಳ್ಳೆ ಅವಕಾಶಗಳು ಸಿಗುತ್ತಿದೆ. ಹಿಂದಿ, ತೆಲುಗು, ತಮಿಳಿನಲ್ಲಿ ಒಂದಷ್ಟು ಸಿನಿಮಾಗಳ ಚರ್ಚೆ ನಡೀತಿದೆ. ಇದೆಲ್ಲದರ ನಡುವೆ ಆಕೆ ನಿತಿನ್ ಚಿತ್ರಕ್ಕೆ ಡೇಟ್ಸ್ ಕೊಡೋದು ಕಷ್ಟವಾಗ್ತಿದೆ ಎನ್ನಲಾಗ್ತಿದೆ.
ಮೇಲ್ನೋಟಕ್ಕೆ ಡೇಟ್ಸ್ ಸಮಸ್ಯೆಯಿಂದ ರಶ್ಮಿಕಾ ಈ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಲಾಗುತ್ತಿದೆ. ಈ ಬಗ್ಗೆ ಚಿತ್ರತಂಡದ ಜೊತೆ ಚರ್ಚಿಸಿ ನಿರ್ಧಾರ ಕೈಗೊಂಡಿದ್ದಾರೆ ಎನ್ನುವ ಚರ್ಚೆ ನಡೀತಿದೆ. ಆದರೆ ರಶ್ಮಿಕಾ ಈ ಸಿನಿಮಾ ಕೈಬಿಡಲು ಅಸಲಿ ಕಾರಣ ಬೇರೆನೆ ಇದೆ ಎನ್ನುವ ವದಂತಿ ಟಾಲಿವುಡ್ನಲ್ಲಿ ಸದ್ದು ಮಾಡ್ತಿದೆ. ಇದೆಲ್ಲದರ ಹಿಂದೆ ಆತ ಇದ್ದಾನೆ ಎನ್ನಲಾಗ್ತಿದೆ. ಕೆಲ ದಿನಗಳ ಹಿಂದೆ ಕಿರಿಕ್ ಬೆಡಗಿ ಜೊತೆಗಿದ್ದ ಅದೇ ವ್ಯಕ್ತಿ ಈಗ ಆಕೆಗೆ ಕಂಟಕವಾಗಿದ್ದಾನೆ ಎನ್ನುವ ಬಗ್ಗೆ ಚರ್ಚೆ ನಡೀತಿದೆ.

ರಶ್ಮಿಕಾ ಬಳಿ ಮ್ಯಾನೇಜರ್ ಆಗಿ ಕಿರಣ್ ಎಂಬ ವ್ಯಕ್ತಿ ಈ ಹಿಂದೆ ಕೆಲಸ ಮಾಡುತ್ತಿದ್ದ. ಆತ ನಟಿಗೆ 80 ಲಕ್ಷ ರೂ. ಮೋಸ ಮಾಡಿದ್ದಾನೆ ಎನ್ನುವ ಆರೋಪ ಕೇಳಿ ಬಂದಿತ್ತು. ಇದೇ ಕಾರಣಕ್ಕೆ ಆತನನ್ನು ರಶ್ಮಿಕಾ ಕೆಲಸದಿಂದ ತೆಗೆದು ಹಾಕಿದ್ದರು. ಈ ವಿಚಾರವನ್ನು ಪ್ರೆಸ್ನೋಟ್ ಮೂಲಕ ಸ್ಪಷ್ಟಪಡಿಸಿದ್ದರು. ಆತನೇ ಈಗ ಕೊಡಗಿನ ಬೆಡಗಿ ಸಿನಿಕರಿಯರ್ಗೆ ಮುಳುವಾಗಿದ್ದಾನಂತೆ. ರಶ್ಮಿಕಾ ಈಗ ನಿತಿನ್ ಸಿನಿಮಾ ಅವಕಾಶ ಕಳೆದುಕೊಳ್ಳಲು ಆತನೇ ಮುಖ್ಯ ಕಾರಣ ಎನ್ನುವ ಮಾತುಗಳು ಕೇಳಿಬರ್ತಿದೆ.
ರಶ್ಮಿಕಾ ಜೊತೆ ಭಿನ್ನಾಭಿಪ್ರಾಯ ಶುರುವಾದ ದಿನದಿಂದಲೂ ಮ್ಯಾನೇಜರ್ ಆಕೆಯ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾನೆ. ರಶ್ಮಿಕಾ ಬಗ್ಗೆ ನಿರ್ಮಾಪಕರು, ನಿರ್ದೇಶಕರ ಬಳಿ ಅಪ ಪ್ರಚಾರ ಆರಂಭಿಸಿದ್ದಾನೆ. ರಶ್ಮಿಕಾ ಬಾಲಿವುಡ್ ಸಿನಿಮಾಗಳಲ್ಲಿ ನಟಿಸೋ ಪ್ರಯತ್ನ ಮಾಡುತ್ತಿದ್ದಾರೆ. ಆಕೆಗೆ ತೆಲುಗು ಸಿನಿಮಾಗಳಲ್ಲಿ ನಟಿಸೋ ಆಲೋಚನೆ ಇಲ್ಲ ಎನ್ನುವ ಅರ್ಥದಲ್ಲಿ ಸುಳ್ಳು ಪ್ರಚಾರ ನಡೆಸುತ್ತಿದ್ದಾನೆ. ಸಾಲದ್ದಕ್ಕೆ ರಶ್ಮಿಕಾ ಬದಲು ಶ್ರೀಲೀಲಾ ಹಾಗೂ ಮೃಣಾಲ್ ಠಾಕೂರ್ ಹೆಸರುಗಳನ್ನು ಫಿಲ್ಮ್ ಮೇಕರ್ಸ್ ಬಳಿ ಪ್ರಸ್ತಾಪಿಸುತ್ತಿದ್ದಾನೆ ಎನ್ನಲಾಗ್ತಿದೆ.
ತಮ್ಮ ಬಗ್ಗೆ ಇಂತಹ ಸುಳ್ಳು ಪ್ರಚಾರ ನಡೆಯುತ್ತಿರುವುದು ಗೊತ್ತಾಗಿ ಬೇಸರದಿಂದ ರಶ್ಮಿಕಾ ಉದ್ದೇಶಪೂರ್ವಕವಾಗಿ ನಿತಿನ್ ಸಿನಿಮಾದಿಂದ ಹೊರ ಬಂದಿದ್ದಾರೆ ಎನ್ನುವ ಗುಸುಗುಸು ಕೇಳಿಬರ್ತಿದೆ. ರಶ್ಮಿಕಾ ಆ ಚಿತ್ರದಿಂದ ಹೊರ ಬರುತ್ತಿದ್ದಂತೆ ಶ್ರೀಲೀಲಾ ಹೆಸರು ಚಾಲ್ತಿಗೆ ಬಂದಿದೆ. ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಇನ್ನು ರಶ್ಮಿಕಾ ನಟನೆಯ 'ಪುಷ್ಪ'-2 ಚಿತ್ರಕ್ಕೂ ಇದೇ ಸಂಸ್ಥೆ ಬಂಡವಾಳ ಹೂಡಿದೆ.
ಒಂದ್ಕಡೆ ಶ್ರೀಲೀಲಾ ಹಾಗೂ ಮೃಣಾಲ್ ಠಾಕೂಲ್ ಕೊಡಗಿನ ಬೆಡಗಿಗೆ ಪೈಪೋಟಿ ಕೊಡುತ್ತಿದ್ದಾರೆ. ಮತ್ತೊಂದು ಕಡೆ ಹಳೇ ಮ್ಯಾನೇಜರ್ನಿಂದ ರಶ್ಮಿಕಾಗೆ ವಿಚಿತ್ರ ಸಮಸ್ಯೆ ಎದುರಾಗಿದೆ. ಮುಂದೆ ಇದು ಆಕೆಯ ಕರಿಯರ್ಗೆ ಕುತ್ತು ತರಬಹುದು ಎನ್ನುವ ಚರ್ಚೆ ಟಾಲಿವುಡ್ನಲ್ಲಿ ಸದ್ದು ಮಾಡ್ತಿದೆ. ಈ ಬಗ್ಗೆ ಆಕೆಯೇ ಪ್ರತಿಕ್ರಿಯಿಸಬೇಕಿದೆ.


Click it and Unblock the Notifications











