ಬಂಕಿಮ ಚಂದ್ರ ಚಟರ್ಜಿ ಬರೆದ ಪ್ರಸಿದ್ಧ ಕಾದಂಬರಿ ಆಧಾರಿತ ಚಿತ್ರದಲ್ಲಿ ರಿಷಬ್ ಶೆಟ್ಟಿ?
'ಕಾಂತಾರ- 1' ಸಿನಿಮಾ ಸೂಪರ್ ಹಿಟ್ ಆಗಿದೆ. ರಿಷಬ್ ಶೆಟ್ಟಿ ಮುಂದಿನ ಸಿನಿಮಾ ಬಗ್ಗೆ ಭಾರೀ ಚರ್ಚೆ ನಡೀತಿದೆ. ಜನವರಿಯಲ್ಲಿ 'ಜೈ ಹನುಮಾನ್' ಸಿನಿಮಾ ಚಿತ್ರೀಕರಣ ಆರಂಭವಾಗುತ್ತದೆ ಎನ್ನಲಾಗ್ತಿದೆ. ಈಗಾಗಲೇ ಕಥೆ ಒಪ್ಪಿ ಫೋಟೊಶೂಟ್ ಸಹ ಮಾಡಲಾಗಿದೆ. ಮುಂದೆ ಬಂಕಿಮ ಚಂದ್ರ ಚಟರ್ಜಿ ಬರೆದ ಕಾದಂಬರಿ ಆಧರಿತ ಚಿತ್ರದಲ್ಲಿ ಕೂಡ ರಿಷಬ್ ನಟಿಸುತ್ತಾರೆ ಎನ್ನುವ ಚರ್ಚೆ ನಡೀತಿದೆ.
ಸದ್ಯ ಪ್ಯಾನ್ ಇಂಡಿಯಾ ಸಿನಿಮಾಗಳ ಟ್ರೆಂಡ್ ನಡೀತಿದೆ. ಸ್ಟಾರ್ ನಟರು ದೊಡ್ಡ ದೊಡ್ಡ ಸಿನಿಮಾಗಳ ಮೇಲೆ ಕಣ್ಣಿಟ್ಟಿದ್ದಾರೆ. ಅದಕ್ಕಾಗಿ ತಿಂಗಳುಗಳಗಟ್ಟಲೆ ಪ್ರೀ ಪ್ರೊಡಕ್ಷನ್, ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್, ಪ್ರಮೋಷನ್, ರಿಲೀಸ್ ಅಂತೆಲ್ಲಾ ಪ್ರತಿ ಚಿತ್ರಕ್ಕೆ ಎರಡ್ಮೂರು ವರ್ಷ ವ್ಯಯಿಸುತ್ತಿದ್ದಾರೆ. 'ಕಾಂತಾರ' ಬಂದು 3 ವರ್ಷಗಳ ಬಳಿಕ 'ಚಾಪ್ಟರ್-1' ಬಂದಿತ್ತು. ದೊಡ್ಡ ಸಿನಿಮಾಗಳು ಆಗಿರುವುದರಿಂದ ಹೆಚ್ಚು ಸಮಯ ಬೇಕು ಎನ್ನುತ್ತಾರೆ. 'ಜೈ ಹನುಮಾನ್' ಸಿನಿಮಾ ಯಾವಾಗ ಶುರುವಾಗಿ ತೆರೆಗೆ ಬರುತ್ತದೆ ಎನ್ನುವುದು ಗೊತ್ತಿಲ್ಲ.

ಸದ್ಯಕ್ಕೆ ರಿಷಬ್ ಶೆಟ್ಟಿ ಕನ್ನಡ ಸಿನಿಮಾಗಳಲ್ಲಿ ನಟಿಸುವುದು ಅನುಮಾನ. ಜೈ ಹನುಮಾನ್ ಬಳಿಕ ತೆಲುಗಿನ ಸಿತಾರಾ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ಮಾಡಲು ಒಪ್ಪಿದ್ದಾರೆ. ಅಧಿಕೃತವಾಗಿ ಈ ಸಿನಿಮಾ ಘೋಷಣೆಯಾಗಿದೆ. ಶಿವಾಜಿ ಬಯೋಪಿಕ್ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಒಟ್ಟಾರೆ ದೊಡ್ಡ ದೊಡ್ಡ ಬಜೆಟ್ನಲ್ಲಿ ಭಾರೀ ಸಿನಿಮಾಗಳಲ್ಲಿ ಡಿವೈನ್ ಸ್ಟಾರ್ ಬಣ್ ಹಚ್ಚುತ್ತಿದ್ದಾರೆ.
ಸಿತಾರಾ ಎಂಟರ್ಟೈನ್ಮೆಂಟ್ಸ್ ಸಂಸ್ಥೆ ನಿರ್ಮಾಣದ ಚಿತ್ರಕ್ಕೆ ಅಶ್ವಿನ್ ಗಂಗರಾಜು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಐತಿಹಾಸಿ ಕಥಾಹಂದರ ಸಿನಿಮಾ ಎನ್ನಲಾಗ್ತದೆ. ಅಂದಹಾಗೆ ಈ ಚಿತ್ರದ ಕಥೆ ಬಗ್ಗೆ ಟಾಲಿವುಡ್ ಅಂಗಳದಲ್ಲಿ ಚರ್ಚೆ ಶುರುವಾಗಿದೆ. ಖ್ಯಾತ ಸಾಹಿತಿ ಬಂಕಿಮ ಚಂದ್ರ ಚಟರ್ಜಿ ಬರೆದ 'ಆನಂದಮಠ' ಕಾದಂಬರಿ ಆಧರಿಸಿ ಸಿನಿಮಾ ಮೂಡಿ ಬರುತ್ತದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಚಿತ್ರಕ್ಕೆ '1770' ಎನ್ನುವ ಟೈಟಲ್ ಫಿಕ್ಸ್ ಮಾಡುತ್ತಾರೆ ಎನ್ನುವ ಊಹಾಪೋಹ ಕೂಡ ಇದೆ.
ಅಂದಹಾಗಿ 'ಆನಂದ ಮಠ' ಕಾದಂಬರಿ ಆಧರಿಸಿ 1952ರಲ್ಲೇ ಬಾಲಿವುಡ್ನಲ್ಲಿ ಸಿನಿಮಾ ಬಂದಿತ್ತು. ತಮಿಳಿಗೂ ಡಬ್ ಆಗಿತ್ತು. ಹೆಮೆನ್ ಗುಪ್ತಾ ನಿರ್ದೇಶನದ ಈ ಚಿತ್ರದಲ್ಲಿ ಪೃಥ್ವಿರಾಜ್ ಕಪೂರ್, ಅಜಿತ್, ಗೀತಾ ಬಾಲಿ ನಟಿಸಿದ್ದರು. ಈ ಕಾದಂಬರಿಯಲ್ಲಿ ಇದು 1770ರ ಬಂಗಾಳದ ಕ್ಷಾಮದ ಸಮಯದಲ್ಲಿ ಮತ್ತು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧದ ಸನ್ಯಾಸಿ ದಂಗೆಯ ಕಥೆಯಿದೆ. ಆದರೆ ರಿಷಬ್ ನಟನೆಯ ಸಿನಿಮಾ ಥೀಮ್ ಪೋಸ್ಟರ್ ಕೂಡ ಈ ಬಗ್ಗೆ ಸುಳಿವು ಕೊಡುವಂತಿದೆ.
ನಿಜಕ್ಕೂ 'ಆನಂದ ಮಠ' ಕಾದಂಬರಿ ಆಧರಿತ ಚಿತ್ರದಲ್ಲಿ ರಿಷಬ್ ನಟಿಸುತ್ತಾರಾ ಎನ್ನುವ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಸಿಗಲಿದೆ. ಒಟ್ಟಾರೆ ಕನ್ನಡದ ನಟನಿಗೆ ಪರಭಾಷೆ ನಿರ್ದೇಶಕರು ಕಥೆಗಳನ್ನು ಬರೆಯುತ್ತಿರುವುದು ಸಂತಸದ ವಿಷಯ. ಅಂದಹಾಗೆ ನಿರ್ದೇಶಕ ಅಶ್ವಿನ್ ಗಂಗರಾಜು ಖ್ಯಾತ ನಿರ್ದೇಶಕ ರಾಜಮೌಳಿ ಗರಡಿಯಲ್ಲಿ ಪಳಗಿದವರು. ಹಾಗಾಗಿ ಈ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.
ಸದ್ಯ ರಿಷಬ್ ಶೆಟ್ಟಿ 'ಕಾಂತಾರ-1' ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. 3 ವರ್ಷಗಳ ಕಾಲ ಕಷ್ಟಪಟ್ಟು ಸಿನಿಮಾ ಮಾಡಿ ಈಗ ವಿಶ್ರಾಂತಿ ಪಡೆಯುತ್ತಿದ್ದಾರೆ. ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ರಿಷಬ್ ಶೆಟ್ಟಿ ಭಾಗಿ ಆಗಿದ್ದರು. ವೇದಿಕೆಯಲ್ಲಿ ಬಾಲಿವುಡ್ ನಟ ರಣ್ವೀರ್ ಸಿಂಗ್ ಕರಾವಳಿ ದೈವಗಳ ಬಗ್ಗೆ ಅಪಹಾಸ್ಯ ಮಾಡಿ ಟೀಕೆಗೆ ಗುರಿಯಾಗಿದ್ದರು. ಈ ವೇಳೆ ಅಲ್ಲೇ ಇದ್ದ ರಿಷಬ್ ಶೆಟ್ಟಿ ಕೂಡ ಆ ರೀತಿ ಮಾಡದಂತೆ ತಾಕೀತು ಮಾಡಿದ್ದರು. ತಪ್ಪಿನ ಅರಿವಾದ ಬಳಿಕ ರಣ್ವೀರ್ ಸಿಂಗ್ ಕ್ಷಮೆ ಕೇಳಿದ್ದರು.


Click it and Unblock the Notifications











