'ಕಾಂತಾರ- 1' ರಿಲೀಸ್ ಡೇಟ್ ಫಿಕ್ಸ್; ಅಂತೂ ಆ ಹಬ್ಬಕ್ಕೆ ಬರುವ ಧೈರ್ಯ ಮಾಡಿದ ರಿಷಬ್!
'ಟಾಕ್ಸಿಕ್' ಬಿಟ್ರೆ ಆ ಮಟ್ಟಿಗೆ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ನಿರೀಕ್ಷೆ ಹುಟ್ಟಾಕ್ಕಿರುವ ಮತ್ತೊಂದು ಸಿನಿಮಾ 'ಕಾಂತಾರ' ಚಾಪ್ಟರ್-1. ರಿಷಬ್ ಶೆಟ್ಟಿ ಚಿತ್ರವನ್ನು ನಿರ್ದೇಶಿಸಿ ನಟಿಸುತ್ತಿದ್ದಾರೆ. ಮುಂದಿನ ತಿಂಗಳು ಸಿನಿಮಾ ಚಿತ್ರೀಕರಣಕ್ಕೆ ಸಿದ್ಧತೆ ನಡೀತಿದೆ. ತಮ್ಮ ಹುಟ್ಟೂರಲ್ಲಿ ಚಿತ್ರಕ್ಕಾಗಿ ಭಾರೀ ಸೆಟ್ ನಿರ್ಮಿಸುವ ಕೆಲಸಗಳು ನಡೀತಿದೆ.
ಈಗಾಗಲೇ 'ಕಾಂತಾರ' ಪ್ರೀಕ್ವೆಲ್ ಪೋಸ್ಟ್ ಥ್ರಿಯೇಟ್ರಿಕಲ್ ಓಟಿಟಿ ರೈಟ್ಸ್ ಕೂಡ ಮಾರಾಟವಾಗಿದೆ. ಅಂದಾಜು 150 ಕೋಟಿ ರೂ.ಗೆ ಡೀಲ್ ನಡೆದಿರುವ ಗುಸುಗುಸು ಕೇಳಿಬರ್ತಿದೆ. ಇನ್ನು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಏಕಕಾಲಕ್ಕೆ ಈ ಬಾರಿ ಸಿನಿಮಾ ತೆರೆಗೆ ಬರಲಿದೆ. ತುಳು ಹಾಗೂ ಇಂಗ್ಲೀಷ್ ಭಾಷೆಗಳಿಗೂ ಸಿನಿಮಾ ಡಬ್ ಆಗಲಿದೆ. ಈಗಾಗಲೇ ರಿಷಬ್ ಶೆಟ್ಟಿ ಕಥೆ, ಚಿತ್ರಕಥೆ ಸಿದ್ಧಪಡಿಸಿ ಚಿತ್ರೀಕರಣ ಆರಂಭಿಸಲು ಕಾಯುತ್ತಿದ್ದಾರೆ.

'ಕಾಂತಾರ' ಪ್ರೀಕ್ವೆಲ್ನಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸುವ ಸಾಧ್ಯತೆಯಿದೆ. ಆಲಿಯಾ ಭಟ್, ಸಾಯಿ ಪಲ್ಲವಿ ಜೊತೆಗೂ ಚಿತ್ರತಂಡ ಮಾತುಕತೆ ನಡೆಸುವ ಲೆಕ್ಕಾಚಾರದಲ್ಲಿದೆ. ಅಂದಾಜು 20 ಕೋಟಿ ರೂ. ಬಜೆಟ್ನಲ್ಲಿ ನಿರ್ಮಾಣವಾಗಿದ್ದ 'ಕಾಂತಾರ' ಸಿನಿಮಾ 350 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿತ್ತು. ದೇಶ ವಿದೇಶಗಳಲ್ಲಿ ಸಿನಿಮಾ ಸದ್ದು ಮಾಡಿತ್ತು. ರಿಷಬ್ ಶೆಟ್ಟಿ ನಿರ್ದೇಶನ, ನಟನೆ ಕಂಡು ಪರಭಾಷಾ ಪ್ರೇಕ್ಷಕರು ಹುಬ್ಬೇರಿಸಿದ್ದರು.
'KGF' ಚಾಪ್ಟರ್-2 ರೀತಿಯಲ್ಲೇ 'ಕಾಂತಾರ' ಚಾಪ್ಟರ್-1 ಬಗ್ಗೆ ಭಾರೀ ಕುತೂಹಲ ಇದೆ. ಪರಭಾಷಿಕರು ಕೂಡ ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡಬೇಕು ಎಂದು ತುದಿಗಾಲಲ್ಲಿ ನಿಲ್ಲುವಂತಾಗಿದೆ. ಅದೇ ಕಾರಣಕ್ಕೆ ರಿಷಬ್ ಬಹಳ ಎಚ್ಚರಿಕೆಯಿಂದ ಸಿನಿಮಾ ಕಟ್ಟಿಕೊಡುವ ಸಾಹಸ ಮಾಡುತ್ತಿದ್ದಾರೆ. ಮುಹೂರ್ತದ ಸಂಭ್ರಮದಲ್ಲೇ ಸಣ್ಣ ಟೀಸರ್ ಬಿಟ್ಟು ರಿಷಬ್ ಶೆಟ್ಟಿ ಗೆದ್ದಿದ್ದರು. ಫಸ್ಟ್ ಲುಕ್ನಲ್ಲಿ ಅವರ ಲುಕ್, ಗೆಟಪ್ ನೋಡಿ ಸಿನಿರಸಿಕರು ಫಿದಾ ಆಗಿದ್ದಾರೆ.
'ಕಾಂತಾರ' ಸಿನಿಮಾ ಬಂದು ವರ್ಷ ಕಳೆದರೂ ಪ್ರೀಕ್ವೆಲ್ ಶೂಟಿಂಗ್ ಶುರುವಾಗಿಲ್ಲ. ಹಾಗಾಗಿ ಸಿನಿಮಾ ರಿಲೀಸ್ ಯಾವಾಗ? ಎನ್ನುವ ಗೊಂದಲ ಅಭಿಮಾನಿಗಳಲ್ಲಿದೆ. ಈ ವರ್ಷ ಸಿನಿಮಾ ತೆರೆಗೆ ಬರೋದು ಕಷ್ಟ ಎನ್ನುವಂತಾಗಿದೆ. ಮುಂದಿನ ವರ್ಷ ಸಂಕ್ರಾಂತಿ ಸಂಭ್ರಮದಲ್ಲಿ 'ಕಾಂತಾರ' ಚಾಪ್ಟರ್-1 ತೆರೆಗೆ ಬರುತ್ತದೆ ಎನ್ನುವ ಚರ್ಚೆ ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಇದೇ ಹಾಟ್ ಟಾಪಿಕ್ ಆಗಿದೆ.

ಇತ್ತೀಚಿನ ವರ್ಷಗಳಲ್ಲಿ ಸುಗ್ಗಿ ಹಬ್ಬಕ್ಕೆ ಯಾವುದೇ ದೊಡ್ಡ ಕನ್ನಡ ಸಿನಿಮಾಗಳು ಬಿಡುಗಡೆ ಆಗುತ್ತಿಲ್ಲ. ಆದರೆ ಮುಂದಿನ ವರ್ಷ 'ಕಾಂತಾರ-1' ಸಿನಿಮಾ ಬರುತ್ತದೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಅಂತೂ ಇಂತೂ ಸಂಕ್ರಾಂತಿ ಹಬ್ಬಕ್ಕೆ ಕನ್ನಡ ಸಿನಿಮಾ ಬರುತ್ತಾ? ಎಂದು ಕೆಲವರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಚಿರಂಜೀವಿ ನಟನೆಯ 'ವಿಶ್ವಂಭರ', ಪ್ರಭಾಸ್ 'ರಾಜಾ ಸಾಬ್', ಅಜಿತ್ ಅಭಿನಯದ 'ಗುಡ್ ಬ್ಯಾಡ್ ಅಗ್ಲಿ' ಸಿನಿಮಾಗಳನ್ನು ಮುಂದಿನ ವರ್ಷ ಸುಗ್ಗಿ ಸಂಭ್ರಮದಲ್ಲಿ ತೆರೆಗೆ ತರುವ ಪ್ರಯತ್ನ ನಡೀತಿದೆ. ಹಾಗಾಗಿ 'ಕಾಂತಾರ' ಸಿನಿಮಾ ಕೂಡ ಈ ಲಿಸ್ಟ್ ಸೇರಿಕೊಳ್ಳುತ್ತಾ? ಅಥವಾ ಈ ವರ್ಷಾಂತ್ಯಕ್ಕೆ ಸಿನಿಮಾ ಬಿಡುಗಡೆ ಮಾಡುತ್ತಾರಾ? ಎನ್ನುವ ಲೆಕ್ಕಾಚಾರವೂ ಶುರುವಾಗಿದೆ.
'ಕಾಂತಾರ' ಚಿತ್ರದಲ್ಲಿ ಪಂಜುರ್ಲಿ ಹಾಗೂ ಗುಳಿಗ ದೈವಗಳ ವಿಚಾರವನ್ನು ರಿಷಬ್ ಶೆಟ್ಟಿ ಹೇಳಿದ್ದರು. ಪ್ರೀಕ್ವೆಲ್ನಲ್ಲಿ ಅದನ್ನು ಮತ್ತಷ್ಟು ಆಳವಾಗಿ ತೆರೆಗೆ ತರುತ್ತಾರೆ ಎನ್ನುವ ಊಹಾಪೋಹ ಇದೆ. ಆ ದೈವಗಳ ಹುಟ್ಟು, ಆಚರಣೆಗಳು ನಡೆದು ಬಂದ ಕಥೆಯನ್ನು ಚಿತ್ರದಲ್ಲಿ ಹೇಳುತ್ತಾರಾ? ಕಾಡುಬೆಟ್ಟು ಶಿವಣ್ಣ ತಂದೆಯ ಕಥೆ ಚಿತ್ರದಲ್ಲಿ ಇರುತ್ತಾ? ಹೀಗೆ ಕಥೆಯ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ. ಸಿನಿಮಾ ಅಂತೂ ಭಾರೀ ನಿರೀಕ್ಷೆ ಮೂಡಿಸಿರುವುದು ಸುಳ್ಳಲ್ಲ.


Click it and Unblock the Notifications











