ಪವನ್ ಒಡೆಯರ್ ಆಕ್ಷನ್ ಕಟ್ ನಲ್ಲಿ ಯಶ್ ಜೋಶ್
ಈ ಮಾಹಿತಿ ಇನ್ನೂ ಅಧಿಕೃತವಾಗಿಲ್ಲವಾದರೂ ಸುದ್ದಿಮಾಧ್ಯಮಗಳಿಗೆ ಲೀಕ್ ಆಗಿದೆ. ಇತ್ತೀಚಿಗಷ್ಟೇ ಯೋಗರಾಜ್ ಭಟ್ಟರ ಡ್ರಾಮಾ ಮುಗಿಸಿರುವ ಯಶ್, ಈ ಚಿತ್ರದಲ್ಲಿ ನಟಿಸಲಿದ್ದಾರೆ. ನಾಯಕಿ ಹಾಗೂ ಉಳಿದ ತಾರಾಗಣದ ಆಯ್ಕೆ ಇನ್ನೂ ಆಗಿಲ್ಲ. ಚಿತ್ರದ ಹೆಸರು, ಕಥೆ ಹಾಗೂ ಮಿಕ್ಕ ವಿವರಗಳು ಸದ್ಯಕ್ಕೆ ಬಹಿರಂಗವಾಗಿಲ್ಲ. ಆದರೆ ಚಿತ್ರದ ಟ್ಯಾಗ್ ಲೈನ್ "ಲವ್ವು ಗಿವ್ವು ಎಕ್ಸ್ ಟ್ರಾ...".
ಗೋವಿಂದಾಯ ನಮಃ ಚಿತ್ರ ನೂರು ದಿನ ಪೂರೈಸಿ ನಿರ್ದೇಶಕ ಪವನ್ ಒಡೆಯರ್ ಆತ್ಮವಿಶ್ವಾಸ ಹೆಚ್ಚಲು ಕಾರಣವಾಗಿದೆ. ಯೋಗರಾಜ್ ಭಟ್ಟರ ಅಪ್ಪಟ ಶಿಷ್ಯರಾಗಿರುವ ಪವನ್ ಒಡೆಯರ್ ಸ್ವತಂತ್ರವಾಗಿ ನಿರ್ದೇಶಿಸಿರುವ ಮೊದಲ ಚಿತ್ರ ಗೋವಿಂದಾಯ ನಮಃ. ಎರಡನೆಯದಾಗಿ ಮಾಡಬೇಕಿದ್ದ ನಟರಾಜ್ ಸರ್ವೀಸ್ ಮುಂದಕ್ಕೆ ಹೋಗಿರುವುದರಿಂದ ಇದೀಗ ಯಶ್ ನಾಯಕತ್ವದ ಹೊಸ ಚಿತ್ರವೇ ಎರಡನೇ ಚಿತ್ರವಾಗಲಿದೆ.
ಅಂದಹಾಗೆ, ಈ ವರ್ಷದ ಸೂಪರ್ ಹಿಟ್ ಚಿತ್ರಗಳ ಸಾಲಿನಲ್ಲಿ ಪವನ್ ಒಡೆಯರ್ ನಿರ್ದೇಶನದ 'ಗೋವಿಂದಾಯ ನಮಃ' ಚಿತ್ರ ಸ್ಥಾನ ಪಡೆದಿರುವುದರಿಂದ ಸಹಜವಾಗಿಯೇ ಬರಲಿರುವ ಪವನ್ ಒಡೆಯರ್ ಚಿತ್ರದ ಬಗ್ಗೆ ಕನ್ನಡ ಸಿನಿಪ್ರಿಯರಲ್ಲಿ ನಿರೀಕ್ಷೆ ಹೆಚ್ಚು ಮೂಡಿದೆ. ಜೊತೆಗೆ ಭಟ್ಟರ ಶಿಷ್ಯರೆಂಬ ಕಿರೀಟ ಬೇರೆ. ನಟ ಯಶ್ ಅವರ ಇತ್ತೀಚಿನ ಚಿತ್ರಗಳಾದ ಲಕ್ಕಿ ಹಾಗೂ ಜಾನು ನಿರೀಕ್ಷಿತ ಯಶಸ್ಸು ಗಳಿಸಿಲ್ಲ.
ಹೀಗಾಗಿ ಯಶ್ ಅಭಿಮಾನಿಗಳು ಬರಲಿರುವ ಯೋಗರಾಜ್ ಭಟ್ ನಿರ್ದೇಶನದ ಡ್ರಾಮಾಗೆ ಕಾಯುತ್ತಿದ್ದಾರೆ. ಡ್ರಾಮಾದಲ್ಲಿ ಯಶ್ ಜೋಡಿಯಾಗಿ ಕನ್ನಡದ ಪ್ರತಿಭಾನ್ವಿತ ನಟಿ ರಾಧಿಕಾ ಪಂಡಿತ್ ನಟಿಸಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ಹಿರಿಯ ನಟ, ರೆಬೆಲ್ ಸ್ಟಾರ್ ಅಂಬರೀಷ್, ತಮಿಳು ನಟ ಸಂಪತ್ ಇದ್ದಾರೆ. ನೀನಾಸಂ ಸತೀಶ್ ಹಾಗೂ ಸಿಂಧು ಲೋಕನಾಥ್ ಜೋಡಿ ಕೂಡ ಡ್ರಾಮಾದಲ್ಲಿ ಕಚಗುಳಿ ಇಡಲಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications












