ಮಹೇಶ್ ಬಾಬು 'ಗುಂಟೂರು ಖಾರಂ' ಸೆಟ್ನಲ್ಲಿ ಕಿರಿಕ್? ಚಿತ್ರದಿಂದ ನಾಯಕಿ ಪೂಜಾ ಹೆಗ್ಡೆ ಔಟ್?
ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಶ್ರೀನಿವಾಸ್ ಜೋಡಿಯ 'ಗುಂಟೂರು ಖಾರಂ' ಸಿನಿಮಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗ್ತಿದೆ. ಕಳೆದ ಕೆಲ ದಿನಗಳಿಂದ ಸಿನಿಮಾ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಮಾತುಗಳು ಕೇಳಿಬರ್ತಿತ್ತು. ಇದೀಗ ನಟಿ ಪೂಜಾ ಹೆಗ್ಡೆ ಚಿತ್ರದಿಂದ ಹೊರ ಬಂದಿದ್ದಾರೆ ಎನ್ನುವ ಗುಸುಗುಸು ಕೇಳಿಬರ್ತಿದೆ. ಅಷ್ಟಕ್ಕೂ ಸೆಟ್ನಲ್ಲಿ ಏನಾಯ್ತು? ಎನ್ನುವ ಚರ್ಚೆ ಶುರುವಾಗಿದೆ.
ಬಹಳ ಹಿಂದೆ ಅನೌನ್ಸ್ ಆಗಿದ್ದ 'ಗುಂಟೂರು ಖಾರಂ' ಸಿನಿಮಾ ಸೆಟ್ಟೇರುವುದು ತಡವಾಗಿತ್ತು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಈ ವರ್ಷ ಏಪ್ರಿಲ್ನಲ್ಲೇ ರಿಲೀಸ್ ಆಗಬೇಕಿತ್ತು. ರಿಲೀಸ್ ಡೇಟ್ ಕೂಡ ಘೋಷಣೆ ಆಗಿತ್ತು. ಆದರೆ ಸ್ಕ್ರಿಪ್ಟ್ ವಿಚಾರದಲ್ಲಾದ ಕೆಲ ಗೊಂದಲಗಳಿಂದ ಶೂಟಿಂಗ್ ತಡವಾಗಿತ್ತು. ಈಗಾಗಲೇ ಒಂದಷ್ಟು ಶೆಡ್ಯೂಲ್ ಕಂಪ್ಲೀಟ್ ಆಗಿದೆ. ಭರ್ಜರಿ ಟೀಸರ್ ಕೂಡ ರಿಲೀಸ್ ಆಗಿ ಸದ್ದು ಮಾಡ್ತಿದೆ. ಮಹೇಶ್ ಬಾಬುಗೆ ಕೆಲ ಸನ್ನಿವೇಶಗಳು ಇಷ್ಟವಾಗಲಿಲ್ಲ. ಅದಕ್ಕೆ ರೀಶೂಟ್ ಮಾಡುತ್ತಿದ್ದಾರೆ ಎನ್ನುವ ವದಂತಿ ಕೂಡ ಹರಡಿತ್ತು.

ಇತ್ತೀಚೆಗೆ ತ್ರಿವಿಕ್ರಮ್ ಶ್ರೀನಿವಾಸ್ ಜೊತೆಗಿನ ಭಿನ್ನಾಭಿಪ್ರಾಯಗಳಿಂದ ಸಂಗೀತ ನಿರ್ದೇಶಕ ಎಸ್. ತಮನ್ ಹೊರ ಬಂದಿದ್ದಾರೆ ಎನ್ನಲಾಗಿತ್ತು. ಅದು ನಿಜಾನೋ ಸುಳ್ಳೋ? ಎನ್ನುವ ಗೊಂದಲದ ನಡುವೆ ಈಗ ನಟಿ ಪೂಜಾ ಹೆಗ್ಡೆ ಕೂಡ ಚಿತ್ರದಿಂದ ಹೊರ ಬರುತ್ತಿದ್ದಾರೆ ಎನ್ನುವ ಚರ್ಚೆ ಟಾಲಿವುಡ್ನಲ್ಲಿ ಶುರುವಾಗಿದೆ. 'ಗುಂಟೂರು ಖಾರಂ' ಸಿನಿಮಾ ತಡವಾಗುತ್ತಿರುವುದೇ ಇಷ್ಟಕ್ಕೆಲ್ಲಾ ಕಾರಣ ಎನ್ನಲಾಗ್ತಿದೆ.
ಪೂಜಾಗೆ ಡೇಟ್ಸ್ ಸಮಸ್ಯೆ?
'ಗುಂಟೂರು ಖಾರಂ' ಸಿನಿಮಾ ಶೂಟಿಂಗ್ ಪದೇ ಪದೇ ತಡವಾಗುತ್ತಿದೆ. ಚಿತ್ರಕಥೆಯಲ್ಲಿ ಬದಲಾವಣೆ ಮಾಡುತ್ತಿದ್ದು ಸಂಕ್ರಾಂತಿಗೂ ಸಿನಿಮಾ ರಿಲೀಸ್ ಆಗಲ್ಲ ಎನ್ನುವ ವಾದ ಶುರುವಾಗಿದೆ. ಟಾಲಿವುಡ್ ಮಾತ್ರವಲ್ಲದೇ ಬಾಲಿವುಡ್ನಲ್ಲೂ ಬೇಡಿಕೆ ಸೃಷ್ಟಿಸಿಕೊಂಡಿರುವ ಪೂಜಾ ಹೆಗ್ಡೆಗೆ ಈಗ ಡೇಟ್ಸ್ ಸಮಸ್ಯೆ ಎದುರಾಗಿದೆ. ಕಳೆದ ವರ್ಷ ಈ ಚಿತ್ರಕ್ಕಾಗಿ ಕಾಲ್ಶೀಟ್ ಕೊಟ್ಟಿದ್ದರು. ಆದರೆ ಈವರೆಗೆ ಚಿತ್ರೀಕರಣ ಮುಗಿದಿಲ್ಲ. ಈ ವರ್ಷ ಜೂನ್ನಿಂದ ಡಿಸೆಂಬರ್ವರೆಗೆ ಬೇರೆ ಸಿನಿಮಾಗಳಿಗೆ ಕಾಲ್ಶೀಟ್ ಕೊಟ್ಟಿದ್ದಾರಂತೆ. ಆ ಸಿನಿಮಾಗಳಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ 'ಗುಂಟೂರು ಖಾರಂ' ಚಿತ್ರದಿಂದ ಹೊರ ಬರುವ ನಿರ್ಧಾರಾ ಮಾಡಿದ್ದಾರಂತೆ.

ಪೂಜಾ ಹೆಗ್ಡೆ ಜಾಗಕ್ಕೆ ತ್ರಿಷಾ ಎಂಟ್ರಿ?
ಸದ್ಯ ಚಿತ್ರದಿಂದ ಪೂಜಾ ಹೆಗ್ಡೆ ಹೊರನಡೆದಿದ್ದಾರೆ ಎನ್ನುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಇದರ ನಡುವೆ ತ್ರಿಷಾ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ ಎನ್ನುವ ಸುದ್ದಯನ್ನು ಕೆಲವರು ತೇಲಿಬಿಟ್ಟಿದ್ದಾರೆ. ಈ ಹಿಂದೆ ಮಹೇಶ್ ಬಾಬು ಹಾಗೂ ತ್ರಿಷಾ 'ಅತಡು' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಆ ಚಿತ್ರಕ್ಕೂ ತ್ರಿವಿಕ್ರಮ್ ಆಕ್ಷನ್ ಕಟ್ ಹೇಳಿದ್ದರು. 'ಪೊನ್ನಿಯಿನ್ ಸೆಲ್ವನ್' ಸರಣಿ ಚಿತ್ರದಿಂದ ತ್ರಿಷಾ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ.
ತಮನ್ ಬದಲು ಅನಿರುದ್ದ್ ಸಂಗೀತ?
ಮಹೇಶ್ ಬಾಬು ಜೊತೆಗಿನ ಭಿನ್ನಾಭಿಪ್ರಾಯಗಳಿಂದ ಸಂಗೀತ ನಿರ್ದೇಶಕ ಎಸ್. ತಮನ್ ಕೂಡ ಚಿತ್ರದಿಂದ ಹೊರನಡೆದಿದ್ದಾರೆ ಎನ್ನಲಾಗ್ತಿದೆ. ತಮನ್ ಬದಲು ತಮಿಳಿನ ಅನಿರುದ್ಧ್ ರವಿಚಂದರ್ 'ಗುಂಟೂರು ಖಾರಂ' ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡುತ್ತಾರೆ ಎನ್ನುವ ಗುಸುಗುಸು ಕೇಳಿಬರ್ತಿದೆ. ಈ ಬಗ್ಗೆ ಪರೋಕ್ಷವಾಗಿ ತನ್ನದೇ ಶೈಲಿಯಲ್ಲಿ ತಮನ್ ಪ್ರತಿಕ್ರಿಯೆ ನೀಡಿದ್ದಾರೆ. ಸಿಪ್ಪೆ ಸುಲಿದ ಬಾಳೆ ಹಣ್ಣಿನ ಫೋಟೊ ಶೇರ್ ಮಾಡಿ ಹೊಟ್ಟೆ ಉರಿಗೆ ಬಾಳೆಹಣ್ಣು ಮದ್ದು ಎನ್ನುವ ಅರ್ಥದಲ್ಲಿ ಕಾಮೆಂಟ್ ಮಾಡಿದ್ದಾರೆ. ಆ ಮೂಲಕ ಇದೆಲ್ಲಾ ಸುಳ್ಳು ಎಂದು ಹೇಳುವ ಪ್ರಯತ್ನ ಮಾಡಿದಂತೆ ಕಾಣುತ್ತಿದೆ.
ಸಂಕ್ರಾಂತಿಗೆ ಸಿನಿಮಾ ರಿಲೀಸ್ ಡೌಟ್
'ಗುಂಟೂರು ಖಾರಂ' ಸಿನಿಮಾ ರಿಲೀಸ್ ಡೇಟ್ ಈಗಾಗಲೇ 2 ಬಾರಿ ಬದಲಾಗಿದೆ. ಮುಂದಿನ ವರ್ಷ ಸಂಕ್ರಾಂತಿಗೆ ಸಿನಿಮಾ ತೆರೆಗರ ಬರುತ್ತೆ ಎಂದು ಚಿತ್ರತಂಡ ಘೋಷಿಸಿದೆ. ಆದರೆ ಇದೆಲ್ಲ ಗೊಂದಲಗಳಿಂದ ಸಿನಿಮಾ ಸುಗ್ಗಿ ಸಂಭ್ರಮದಲ್ಲಿ ಬರೋದು ಅನುಮಾನ ಎನ್ನಲಾಗುತ್ತಿದೆ. ಆದರೆ ಚಿತ್ರತಂಡ ಮಾತ್ರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 'ಅತಡು' ಹಾಗೂ 'ಖಲೇಜಾ' ನಂತರ ಮಹೇಶ್- ತ್ರಿವಿಕ್ರಮ್ ಕಾಂಬಿನೇಷನ್ನಲ್ಲಿ ಬರ್ತಿರೋ ಹ್ಯಾಟ್ರಿಕ್ ಸಿನಿಮಾ ಇದು. ಹಾಗಾಗಿ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆಯಿದೆ.


Click it and Unblock the Notifications











