ಪ್ರಭಾಸ್- ಪ್ರಶಾಂತ್ ನೀಲ್ ನಡುವೆ ಶೀತಲ ಸಮರ? 'ಸಲಾರ್-2' ನಿಂತೇಹೋಯ್ತಾ?
ಬಾಹುಬಲಿ ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ಸಿನಿಮಾ 600 ಕೋಟಿ ರೂ. ಗೂ ಅಧಿಕ ಕಲೆಕ್ಷನ್ ಮಾಡಿತ್ತು ಎಂದು ಹೇಳಲಾಗಿತ್ತು. 'KGF' ಸರಣಿ ಬಳಿ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ ಎನ್ನುವ ಕಾರಣಕ್ಕೆ ಭಾರೀ ಹೈಪ್ ಕ್ರಿಯೇಟ್ ಮಾಡಿತ್ತು. ಒಂದು ಹಂತಕ್ಕೆ ಸಿನಿಮಾ ಸದ್ದು ಮಾಡಿತ್ತು.
ಸತತ ಸೋಲುಗಳಿಂದ ಕಂಗೆಟ್ಟಿದ್ದ ಪ್ರಭಾಸ್ಗೆ 'ಸಲಾರ್' ಒಳ್ಳೆ ಬೂಸ್ಟ್ ಕೊಟ್ಟಿದ್ದು ಸುಳ್ಳಲ್ಲ. ಆದರೂ ಸಿನಿಮಾ ಬಜೆಟ್ ಜಾಸ್ತಿಯಾಗಿ ನಿರ್ಮಾಪಕರಿಗೆ ಲಾಭ ಬಂದಿಲ್ಲ ಎನ್ನುವ ವಾದ ಕೆಲವರದ್ದು. ಆದರೆ ಚಿತ್ರತಂಡ ಮಾತ್ರ ಬೆಂಗಳೂರಿನಲ್ಲಿ ಅದ್ಧೂರಿಯಾಗಿ 'ಸಲಾರ್' ಸಕ್ಸಸ್ ಪಾರ್ಟಿ ಮಾಡಿ ಎಂಜಾಯ್ ಮಾಡಿತ್ತು. ಇನ್ನು ಚಿತ್ರದ ಸೀಕ್ವೆಲ್ಗಾಗಿ ಪ್ರಭಾಸ್ ಅಭಿಮಾನಿಗಳು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.

ಕನ್ನಡದ 'ಉಗ್ರಂ' ಚಿತ್ರದ ಕಥೆಯನ್ನೇ ದೊಡ್ಡ ಸ್ಕೇಲ್ನಲ್ಲಿ 'ಸಲಾರ್' ಆಗಿ ತೆರೆಗೆ ತರಲಾಗಿತ್ತು. ಒಂದೇ ಚಿತ್ರದ ಕಥೆಯನ್ನು 2 ಭಾಗಗಳಾಗಿ ಪ್ರೇಕ್ಷಕರ ಮುಂದಿದಲೂ ನೀಲ್ ಮುಂದಾಗಿದ್ದರು. ಈಗಾಗಲೇ ಮೊದಲ ಭಾಗ ತೆರೆಗೆ ಬಂದಿದೆ. 2ನೇ ಭಾಗ ಯಾವಾಗ ಎನ್ನುವ ಚರ್ಚೆ ಶುರುವಾಗಿದೆ. ಟಾಲಿವುಡ್ನಲ್ಲಿ ಚರ್ಚೆ ಆಗುತ್ತಿರುವ ಪ್ರಕಾರ ಇನ್ನೆರಡು ತಿಂಗಳಲ್ಲಿ ಸಿನಿಮಾ ಸೆಟ್ಟೇರಲಿದೆ.
ಇತ್ತೀಚೆಗೆ ನಟ ಪೃಥ್ವಿರಾಜ್ ಸುಕುಮಾರನ್ ಕೂಡ ಇದೇ ಮಾತನ್ನು ಹೇಳಿದ್ದರು. 'ಸಲಾರ್' ಸೀಕ್ವೆಲ್ ಚಿತ್ರೀಕರಣಕ್ಕಾಗಿ ಕಾಯುತ್ತಿದ್ದೇನೆ. ಆದಷ್ಟು ಬೇಗ ಶೂಟಿಂಗ್ ಶುರು ಎಂದಿದ್ದರು. 'ಸಲಾರ್-1 ಸೀಸ್ಫೈರ್' ಚಿತ್ರದಲ್ಲಿ ಅರ್ಧ ಕಥೆಯನ್ನು ಮಾತ್ರ ಹೇಳಲಾಗಿದೆ. ಶೌರ್ಯಾಂಗ ಪರ್ವದ ಕಥೆ ತೆರೆಮೇಲೆ ಬರಬೇಕಿದೆ. ದೇವನ ಹಿನ್ನೆಲೆ ಏನು? ಚಿಕ್ಕಂದಿನಿಂದ ಆತ್ಮೀಯ ಸ್ನೇಹಿತರಾಗಿದ್ದ ವರದರಾಜ್ ಮನ್ನಾರ್ ಹಾಗೂ ದೇವ ದೂರಾಗಿದ್ದು ಯಾಕೆ? ಎನ್ನುವ ಕಾರಣ ಗೊತ್ತಾಗಬೇಕಿದೆ.
ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ 'ಸಲಾರ್'-2 ಶೌರ್ಯಾಂಗ ಪರ್ವ ಬರುತ್ತದೆ ಎನ್ನುವ ನಿರೀಕ್ಷೆಯಿದೆ. ಆದರೆ ಈಗ ಸಿನಿಮಾ ಬರೋದು ಅನುಮಾನ ಎನ್ನುವ ಚರ್ಚೆ ಶುರುವಾಗಿದೆ. ಪ್ರಭಾಸ್- ಪ್ರಶಾಂತ್ ನೀಲ್ ನಡುವೆ ಎಲ್ಲವೂ ಸರಿಯಿಲ್ಲ. ಅದೇ ಕಾರಣಕ್ಕೆ ಸಿನಿಮಾ ನಿಂತು ಹೋಗುತ್ತದೆ. 'ಸಲಾರ್-2' ಸೆಟ್ಟೇರುವುದೇ ಇಲ್ಲ ಎನ್ನುವ ವದಂತಿ ಶುರುವಾಗಿದೆ. ಪ್ರಶಾಂತ್ ನೀಲ್ ರೀ ಶೂಟ್ ಮಾಡುವುದು ಜಾಸ್ತಿ. ಇದು ಪ್ರಭಾಸ್ಗೆ ಇಷ್ಟವಾಗುತ್ತಿಲ್ಲ. ಮೊದಲ ಭಾಗಕ್ಕೆ ಬಜೆಟ್ ಜಾಸ್ತಿ ಆಗಿತ್ತು. ಆದರೆ ನೆಟ್ ಕಲೆಕ್ಷನ್ ಕಮ್ಮಿ ಆಗಿತ್ತಂತೆ, ಹೊಂಬಾಳೆ ಸಂಸ್ಥೆಗೂ ಸೀಕ್ವೆಲ್ ಬಗ್ಗೆ ಹೆಚ್ಚಿನ ಆಸಕ್ತಿ ಇಲ್ಲ ಎನ್ನುವ ಗುಸುಗುಸು ಶುರುವಾಗಿದೆ.
ಪ್ರಭಾಸ್ ಬೇರೆ ಬೇರೆ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೆ 'ಕಲ್ಕಿ 2898AD' ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ. ನಾಗ್ ಅಶ್ವಿನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ. ವೈಜಯಂತಿ ಮೂವೀಸ್ ಬ್ಯಾನರ್ನಲ್ಲಿ 500 ಕೋಟಿ ರೂ. ಬಜೆಟ್ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಕಮಲ್ ಹಾಸನ್, ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ ಚಿತ್ರದ ತಾರಾಗಣದಲ್ಲಿದ್ದಾರೆ.
'ಕಲ್ಕಿ 2898AD' ಬಳಿಕ ಪ್ರಭಾಸ್ ನಟನೆಯ 'ದಿ ರಾಜಾ ಸಾಬ್' ಸಿನಿಮಾ ತೆರೆಗೆ ಬರಲಿದೆ. ಮಾರುತಿ ನಿರ್ದೇಶನದ ಈ ಹಾರರ್ ಕಾಮಿಡಿ ಥ್ರಿಲ್ಲರ್ ಕೂಡ ಭಾರೀ ನಿರೀಕ್ಷೆ ಮೂಡಿಸಿದೆ. ಸಂಜಯ್ ದತ್ ಸೇರಿದಂತೆ ದೊಡ್ಡ ತಾರಾಗಣ ಈ ಚಿತ್ರದಲ್ಲಿದೆ. ಈ ಎರಡು ಸಿನಿಮಾಗಳ ಬಳಿಕ 'ಸ್ಪಿರಿಟ್' ಚಿತ್ರಕ್ಕೆ ಪ್ರಭಾಸ್ ಬಣ್ಣ ಹಚ್ಚುವ ಸಾಧ್ಯತೆಯಿದೆ. ಇದೇ ಡಿಸೆಂಬರ್ನಲ್ಲಿ 'ಸ್ಪಿರಿಟ್' ಶೂಟಿಂಗ್ ಎಂದು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಹೇಳುತ್ತಿದ್ದಾರೆ.

'ಸ್ಪಿರಿಟ್' ಬಳಿಕ ಹನು ರಾಘವಪುಡಿ ನಿರ್ದೇಶನದ ಚಿತ್ರಕ್ಕೆ ಪ್ರಭಾಸ್ ಗ್ರೀನ್ ಸಿಗ್ನಲ್ ಕೊಟ್ಟಿರುವುದಾಗಿ ವರದಿಯಾಗಿದೆ. 'ಸೀತಾರಾಮಂ' ಚಿತ್ರಕ್ಕೆ ಹನು ರಾಘವಪುಡಿ ಆಕ್ಷನ್ ಕಟ್ ಹೇಳಿದ್ದರು. ಪ್ರಭಾಸ್ ಜೊತೆಗೂ ಐತಿಹಾಸಿಕ ಕಥಾಹಂದರದ ಸಿನಿಮಾ ಮಾಡುವುದಾಗಿ ನಿರ್ದೇಶಕರು ಹೇಳಿಕೊಂಡಿದ್ದಾರೆ. ಇದೆಲ್ಲದರ ನಡುವೆ 'ಸಲಾರ್'-2 ಯಾವಾಗ ಎನ್ನುವ ಪ್ರಶ್ನೆ ಕಾಡುತ್ತಿದೆ. ನಟ ಪೃಥ್ವಿರಾಜ್ ಮಾತುಗಳನ್ನು ಕೇಳುತ್ತಿದ್ದರೆ 'ಸಲಾರ್'-2 ನಿಂತು ಹೋಯ್ತು ಎನ್ನುವುದು ಬರೀ ವದಂತಿ ಎನ್ನುವುದು ಗೊತ್ತಾಗುತ್ತಿದೆ.


Click it and Unblock the Notifications











