ಸಲ್ಮಾನ್ ಖಾನ್ ಜೋಡಿಯಾಗಿ ನಯನತಾರಾ; ಯಾವ ಸಿನಿಮಾ ಗೊತ್ತಾ?
ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಒಂದೊಳ್ಳೆ ಬ್ರೇಕ್ಗಾಗಿ ಸರ್ಕಸ್ ಮಾಡುವಂತಾಗಿದೆ. 'ಟೈಗರ್- 3' ಒಂದು ಹಂತಕ್ಕೆ ಸದ್ದು ಮಾಡಿದ್ದು ಬಿಟ್ರೆ ಸಲ್ಲು ಸಿನಿಮಾಗಳು ಈಗ ವರ್ಕ್ ಆಗ್ತಿಲ್ಲ. ಸತತ ಸೋಲುಗಳಿಂದ ಶಾರುಖ್ ಖಾನ್ ಚೇತರಿಸಿಕೊಂಡಿದ್ದಾರೆ. ಆದರೆ ಆಮೀರ್ ಖಾನ್, ಸಲ್ಮಾನ್ ಖಾನ್ ಸೋಲಿನ ಸುಳಿಗೆ ಸಿಲುಕಿದ್ದಾರೆ.
ಕಳೆದ ವರ್ಷ ಬಂದಿದ್ದ 'ಸಿಕಂದರ್' ಸಿನಿಮಾ ಹೀನಾಯವಾಗಿತ್ತು. ಮುರುಗದಾಸ್ ನಿರ್ದೇಶನದ ಸಿನಿಮಾ ಬಾಕ್ಸಾಫೀಸ್ನಲ್ಲಿ ಮುಗ್ಗರಿಸಿತ್ತು. ಬಳಿಕ ಚಿತ್ರತಂಡದಲ್ಲೇ ಭಿನ್ನಾಭಿಪ್ರಾಯ ಮೂಡಿತ್ತು. ಇದೀಗ 'ಮಾತೃಭೂಮಿ' ಎಂಬ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಲ್ಲು ಸಿದ್ಧತೆ ನಡೆಸಿದ್ದಾರೆ. ಈ ನಡುವೆ ಅವರ ಮತ್ತೊಂದು ಸಿನಿಮಾ ಬಗ್ಗೆ ಚರ್ಚೆ ಶುರುವಾಗಿದೆ. ಸಲ್ಲುಗೆ ದಕ್ಷಿಣದ ಫಿಲ್ಮ್ ಮೇಕರ್ಸ್ ಮೇಲೆ ನಂಬಿಕೆ ಹೆಚ್ಚು. ಈ ಹಿಂದೆ ತಮಿಳು ನಿರ್ದೇಶಕರು ಅವರಿಗೆ ಹಿಟ್ ಸಿನಿಮಾ ಕೊಟ್ಟು ಗೆಲ್ಲಿಸಿದ್ದರು. ಇದೀಗ ತೆಲುಗು ನಿರ್ದೇಶಕನ ಜೊತೆ ಕೈ ಜೋಡಿಸುತ್ತಿದ್ದಾರೆ.

ಸಲ್ಮಾನ್ ಖಾನ್ ನಟನೆಯ ಮುಂದಿನ ಚಿತ್ರಕ್ಕೆ ತೆಲುಗು ನಿರ್ದೇಶಕ ವಂಶಿ ಪೈಡಿಪಲ್ಲಿ ಆಕ್ಷನ್ ಕಟ್ ಹೇಳುತ್ತಾರೆ ಎನ್ನಲಾಗ್ತಿದೆ. ದಿಲ್ ರಾಜು ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಆ ಚಿತ್ರದಲ್ಲಿ ಅಲ್ಲು ಜೋಡಿಯಾಗಿ ತಮಿಳು ನಟಿ ನಯನತಾರಾ ನಟಿಸುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. 'ಜವಾನ್' ಚಿತ್ರದಲ್ಲಿ ಶಾರುಖ್ ಖಾನ್ ಜೊತೆ ನಟಿಸಿ ನಯನತಾರಾ ಗೆದ್ದಿದ್ದರು. ಹಾಗಾಗಿ ಸಲ್ಮಾನ್ ಖಾನ್ಗೆ ಜೊತೆಯಾದರೂ ಅಚ್ಚರಿ ಪಡಬೇಕಿಲ್ಲ.
ನಯನತಾರ ಲಕ್ಕಿ ಹೀರೊಯಿನ್ ಎಂದೇ ಹೆಸರಾಗಿದ್ದಾರೆ. ದಕ್ಷಿಣದಲ್ಲಿ ಒಳ್ಳೆ ಕ್ರೇಜ್ ಸಂಪಾದಿಸಿದ್ದಾರೆ. 'ಮನ ಶಂಕರವರಪ್ರಸಾದ್ಗಾರು' ಚಿತ್ರದಲ್ಲಿ ಚಿರಂಜೀವಿ ಜೋಡಿಯಾಗಿ ನಟಿಸಿ ಕಮಾಲ್ ಮಾಡಿದ್ದರು. ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ಸದ್ಯ 'ಟಾಕ್ಸಿಕ್' ಚಿತ್ರದಲ್ಲಿ ಯಶ್ ಸಹೋದರಿ ಪಾತ್ರದಲ್ಲಿ ನಯನ್ ಬಣ್ಣ ಹಚ್ಚಿದ್ದಾರೆ. 'ಮೂಕ್ಕುಟ್ಟಿ ಅಮ್ಮನ್-2' ಎಂಬ ತಮಿಳು ಚಿತ್ರದಲ್ಲಿ ಈಗ ನಟಿಸುತ್ತಿದ್ದಾರೆ. ಮತ್ತೆರಡು ಸಿನಿಮಾಗಳು ಆಕೆಯ ಕೈಯಲ್ಲಿದೆ.

ಮದುವೆ ಬಳಿಕ ಕೂಡ ನಯನ್ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಸಾರೊಗಸಿ ಪದ್ಧತಿಯಲ್ಲಿ ಅವಳಿ ಗಂಡು ಮಕ್ಕಳನ್ನು ವಿಘ್ನೇಶ್-ನಯನ್ ದಂಪತಿ ಪಡೆದಿದ್ದಾರೆ. ಮಕ್ಕಳ ಲಾಲನೆ ಪಾಲನೆ ಜೊತೆ ಜೊತೆಗೆ ತಮ್ಮ ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದ್ಕಾಲದಲ್ಲಿ ಬಾಲಿವುಡ್ ಸಹವಾಸ ಬೇಡ ಎಂದುಕೊಂಡಿದ್ದ ಆಕೆಗೆ ಅಟ್ಲಿ 'ಜವಾನ್' ಚಿತ್ರದಲ್ಲಿ ಅವಕಾಶ ಕೊಟ್ಟಿದ್ದರು. ಅದು ಪ್ಲಸ್ ಆಗಿತ್ತು.
ವಿಕ್ಕಿ ಕೌಶಲ್, ರಣ್ಬೀರ್ ಕಪೂರ್, ರಣ್ವೀರ್ ಸಿಂಗ್ ಆರ್ಭಟದ ನಡುವೆ ಸಲ್ಮಾನ್ ಖಾನ್ ಕ್ರೇಜ್ ಕಮ್ಮಿ ಆಗಿದೆ. ಬಿಗ್ಬಾಸ್ ಶೋ ಹೋಸ್ಟ್ ಆಗಿ ಕೂಡ ಮೊದಲಿನ ಮ್ಯಾಜಿಕ್ ನಡೀತಿಲ್ಲ. 'ಬ್ಯಾಟಲ್ ಆಫ್ ಗಲ್ವಾನ್' ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ಆ ಚಿತ್ರಕ್ಕೆ 'ಮಾತೃಭೂಮಿ' ಎಂದು ಟೈಟಲ್ ಬದಲಿಸಲಾಗಿದೆ. ಚಿತ್ರದಲ್ಲಿ ಕರ್ನಲ್ ಬಿಕ್ಕುಮಲ್ಲ ಸಂತೋಷ್ ಬಾಬು ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗ್ತಿದೆ.
ನೈಜಘಟನೆ ಆಧರಿಸಿದ 'ಮಾತೃಭೂಮಿ' ಚಿತ್ರಕ್ಕೆ ಅಪೂರ್ವ ಲಾಖಿಯಾ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಭಿಲಾಷ್ ಚೌಧರಿ, ಅಂಕುರ್ ಭಾಟಿಯಾ, ಝೈನ್ ಶಾ, ವಿಪಿನ್ ಭಾರದ್ವಾಜ್ ಮತ್ತು ಜೇಸನ್ ಥಾಮ್ ತಾರಾಗಣದಲ್ಲಿದ್ದಾರೆ. ಆಗಸ್ಟ್ 14ಕ್ಕೆ ಸಿನಿಮಾ ತೆರೆಗೆ ಬರಲಿದೆ.
ಬಾಲಿವುಡ್ ಅಂಗಳದಲ್ಲಿ ಸ್ಟಾರ್ ನಟಿಯರ ಅಭಾವ ಎದುರಾಗಿದೆ. ಅದನ್ನು ದಕ್ಷಿಣದ ನಟಿಯರು ಬಳಸಿಕೊಳ್ಳುತ್ತಿದ್ದಾರೆ. ರಶ್ಮಿಕಾ ಮಂದಣ್ಣ, ಶ್ರೀಲೀಲಾ, ರುಕ್ಮಿಣಿ ಸವಂತ್ ಹೀಗೆ ಸೌತ್ ನಟಿಯರು ಬಾಲಿವುಡ್ ಬಾಗಿಲು ತಟ್ಟಿದ್ದಾರೆ. ನಯನತಾರಾ ಕೂಡ ಈ ಪಟ್ಟಿಯಲ್ಲಿದ್ದಾರೆ.


Click it and Unblock the Notifications











