ಸಮಂತಾಗೆ ಅನಾರೋಗ್ಯ ಅನ್ನುವುದೆಲ್ಲ ಬರೀ ನಾಟಕ? ಇದೆಲ್ಲಾ ಪ್ರಚಾರದ ಗಿಮಿಕ್ಕಾ?
ಬಿಟ್ಟಿ ಪಬ್ಲಿಸಿಟಿಗಾಗಿ ಸಮಂತಾ ಮಯೋಸೈಟಿಸ್ ಕಾಯಿಲೆ ಇದೆ ಅಂತೆಲ್ಲಾ ಸುಖಾಸುಮ್ಮನೆ ನಾಟಕ ಮಾಡುತ್ತಿದ್ದಾರಂತೆ. ಹೀಗೊಂದು ಚರ್ಚೆ ಇದೀಗ ಟಾಲಿವುಡ್ ಅಂಗಳದಲ್ಲಿ ಶುರುವಾಗಿದೆ. 'ಯಶೋದ' ಹಾಗೂ 'ಶಾಕುಂತಲಂ' ಸಿನಿಮಾ ಪ್ರಚಾರಕ್ಕಾಗಿ ಸಿಂಪಥಿ ಗಿಟ್ಟಿಸಿಕೊಳ್ಳಲು ಸ್ಯಾಮ್ ಹೀಗೊಂದು ದಾಳ ಉರುಳಿಸಿದರಂತೆ. ಒಂದು ವೇಳೆ ಅನಾರೋಗ್ಯ ಇದ್ದರೂ ಅದು ಆಕೆ ಹೇಳಿಕೊಳ್ಳುವಷ್ಟು ದೊಡ್ಡ ಸಮಸ್ಯೆ ಅಲ್ಲವೇ ಅಲ್ಲವಂತೆ.
ಕಳೆದ ವರ್ಷ ಅಕ್ಟೋಬರ್ನಲ್ಲಿ ಸಮಂತಾ ತಮಗೆ ಮಯೋಸೈಟಿಸ್ ಅನ್ನುವ ಅಪರೂಪದ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಹೇಳಿದ್ದರು. ಚಿಕಿತ್ಸೆ ಪಡೆಯುತ್ತಿದ್ದಾಗಲೇ ಆಸ್ಪತ್ರೆ ಬೆಡ್ ಮೇಲೆಯೇ 'ಯಶೋದ' ಚಿತ್ರಕ್ಕೆ ಡಬ್ಬಿಂಗ್ ಮಾಡಿದ್ದಾಗಿ ಫೋಟೊಗಳನ್ನು ಶೇರ್ ಮಾಡಿದ್ದರು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಜ್ಯೂ. ಎನ್ಟಿಆರ್ ಸೇರಿದಂತೆ ಸಾಕಷ್ಟು ಸೆಲೆಬ್ರೆಟಿಗಳ ಆಕೆಯ ಬೆಂಬಲಕ್ಕೆ ನಿಂತರು. ಸೋಶಿಯಲ್ ಮೀಡಿಯಾದಲ್ಲಿ ಧೈರ್ಯ ತುಂಬಿದ್ದರು. ಶೀಘ್ರ ಚೇತರಿಕೊಳ್ಳಲು ಪ್ರಾರ್ಥಿಸಿದ್ದರು.

'ಯಶೋದ' ಸಿನಿಮಾ ರಿಲೀಸ್ ಹತ್ತಿರವಿದ್ದಾಗ ಸಂದರ್ಶನ ನೀಡಿ ನೋವು ತೋಡಿಕೊಂಡಿದ್ದರು. ಇದೆಲ್ಲಾ ಸಿನಿಮಾಗ ಪ್ಲಸ್ ಆಗಿತ್ತಂತೆ. ಆ ಸಿನಿಮಾ ಒಂದು ರೇಂಜಿಗೆ ಸಕ್ಸಸ್ ಆಗಿತ್ತು. ನಂತರ ಸೈಲೆಂಟ್ ಆಗಿದ್ದ ಸಮಂತಾ 'ಶಾಕುಂತಲಂ' ಸಿನಿಮಾ ರಿಲೀಸ್ ಹತ್ತಿರವಾಗ್ತಿದ್ದಂತೆ ಪ್ರಮೋಷನ್ಗೆ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಬಿಳಿ ಬಟ್ಟೆ, ಜಪಮಾಲೆ ಹಿಡಿದು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು. ಪ್ರಚಾರದ ವೇಳೆ ಭಾವುಕರಾಗಿ ಮಾತನಾಡಿದ್ದರು. ಅನಾರೋಗ್ಯದಿಂದ ಬಳಲುತ್ತಿರುವಂತೆ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದರು.
ಸಂಪೂರ್ಣವಾಗಿ ಚೇತರಿಸಿಕೊಳ್ಳದೇ ಇದ್ದರೂ 'ಶಾಕುಂತಲಂ' ಸಿನಿಮಾ ಮೇಲಿನ ಅಕ್ಕರೆಯಿಂದ ಸುದ್ದಿಗೋಷ್ಠಿಯಲ್ಲಿ ಭಾಗಿ ಆಗಿದ್ದಾಗಿ ಹೇಳಿಕೊಂಡಿದ್ದರುಲ. ಸಿನಿಮಾ ರಿಲೀಸ್ಗೆ 2 ದಿನ ಬಾಕಿ ಇರುವಾಗ ತಮಗೆ ಜ್ವರ ಇದೆ, ಇನ್ನು ಮುಂದು ಪ್ರಮೋಷನ್ನಲ್ಲಿ ಭಾಗಿ ಆಗಲು ಸಾಧ್ಯವಿಲ್ಲ ಅಂತೆಲ್ಲಾ ಹೇಳಿದ್ದರು. ಇದೀಗ ದಿಢೀರನೇ 'ಸಿಟಾಡೆಲ್' ವೆಬ್ಸೀರಿಸ್ ವರ್ಲ್ಡ್ ಪ್ರೀಮಿಯರ್ ಪ್ರಮೋಷನ್ಗಾಗಿ ವಿದೇಶಕ್ಕೆ ಹಾರಿದ್ದಾರೆ. ಲುಕ್ ಬದಲಿಸಿ ಅಲ್ಟ್ರಾ ಸ್ಟೈಲಿಶ್ ಲುಕ್ನಲ್ಲಿ ದರ್ಶನ ಕೊಟ್ಟಿದ್ದಾರೆ.
ವಾರದ ಹಿಂದೆ ಹುಷಾರಿಲ್ಲ ಎಂದ ಸ್ಯಾಮ್ ಈಗ ವಿದೇಶಕ್ಕೆ ಹೋಗಿದ್ದಾರೆ. ಇದು ಹೇಗೆ ಅಂತ ಕೆಲವರು ಕೇಳುತ್ತಿದ್ದಾರೆ. ಇದನ್ನೆಲ್ಲಾ ನೋಡಿ ಕೆಲವರು ಸಮಂತಾಗೆ ಅನಾರೋಗ್ಯ ಅನ್ನೋದೆಲ್ಲಾ ಬರೀ ಡ್ರಾಮಾ, ಆಕೆಯ ಮಾತುಗಳಲ್ಲಿ ನಿಜ ಇಲ್ಲ. ಎಷ್ಟೇ ಸಿಂಪಥಿ ಗಿಟ್ಟಿಸುವ ಪ್ರಯತ್ನ ಮಾಡಿದರೂ 'ಶಾಕುಂತಲಂ' ಸಿನಿಮಾ ಗೆಲ್ಲಲಿಲ್ಲ. ಸಿನಿಮಾ ಅಟ್ಟರ್ ಫ್ಲಾಪ್ ಆಗಿದೆ ಅಂತೆಲ್ಲಾ ಮಾತನಾಡಲು ಆರಂಭಿಸಿದ್ದಾರೆ. ಈ ಹಿಂದೆ ನಿರ್ಮಾಪಕ ಚಿಟ್ಟಿಬಾಬು ಇದೇ ವಿಚಾರವಾಗಿ ಸಂದರ್ಶನವೊಂದರಲ್ಲಿ ಮಾತನಾಡಿದ್ದರು.

"ಸಮಂತಾ ಬಹಳ ಡ್ರಾಮಾ ಮಾಡ್ತಿದ್ದಾಳೆ ಎಂದು ಟೀಕಿಸಿದ್ದರು. ಆಕೆಗೆ ಬಂದಿರುವ ಮಯೋಸೈಟಿಸ್ ಬಹಳ ಚಿಕ್ಕ ಕಾಯಿಲೆ. ಅದು ಎಲ್ಲರಿಗೂ ಬರುವಂಥದ್ದೆ. ಆದರೆ ಸ್ಯಾಮ್ ಮಾತ್ರ ಅದು ಮಾರಣಾಂತಿಕ ಕಾಯಿಲೆ ಅನ್ನುವಂತೆ ಹಂಗಾಮಾ ಮಾಡ್ತಿದ್ಧಾಳೆ. ಪ್ರತಿಸಲ ಸಿಂಪಥಿ ವರ್ಕೌಟ್ ಆಗುವುದಿಲ್ಲ. ಸಮಂತಾ ಕಣ್ಣೀರು ಹಾಕಿದ ಮಾತ್ರಕ್ಕೆ ಸಿನಿಮಾ ಗೆಲ್ಲಲ್ಲ" ಎಂದಿದ್ದರು.
"ಆಕೆಯ ಸ್ಟಾರ್ಡಮ್ ಯಾವಾಗಲೋ ಹೊರಟು ಹೋಗಿದೆ. ಆಕೆಯ ಅಧ್ಯಾಯ ಮುಗಿದೆ. ಅರ್ಧಂಬರ್ದ ಬಟ್ಟೆ ಹಾಕಿಕೊಂಡು 'ಪುಷ್ಪ'-2 ಸಿನಿಮಾದಲ್ಲಿ ಕುಣಿದಿದ್ದು ಅದಕ್ಕೆ. ನಾಯಕಿಯಾಗಿ ಅವಕಾಶಗಳು ಸಿಗುವಂತಿದ್ದರೆ ಐಟಂ ಸಾಂಗ್ಗೆ ಯಾಕೆ ಒಪ್ಪಿಕೊಳ್ಳುತ್ತಿದ್ದಳು. 'ಶಾಕುಂತಲಂ' ಪಾತ್ರಕ್ಕಾಗಿ ಯಾಕಾದರೂ ಆಕೆಯನ್ನು ಆಯ್ಕೆ ಮಾಡಿಕೊಂಡರೋ? ನನಗೆ ಆ ಸಿನಿಮಾ ಬಗ್ಗೆ ಎಳ್ಳಷ್ಟು ನಿರೀಕ್ಷೆ ಇಲ್ಲ" ಎಂದು ಚಿಟ್ಟಿಬಾಬು ಹೇಳಿದ್ದರು. ಆದರೆ ಚಿಟ್ಟಿಬಾಬು ಹೇಳಿಕೆ ವಿರುದ್ದ ಸ್ಯಾಮ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಆರೋಗ್ಯ ವಿಚಾರದಲ್ಲಿ ಹೀಗೆಲ್ಲಾ ಹೇಳಬೇಡಿ ಎಂದಿದ್ದರು.
ಮೊನ್ನೆ ಮೊನ್ನೆ ಹುಷಾರಿಲ್ಲ ಎನ್ನುತ್ತಿದ್ದ ಸಮಂತಾ ಇದೀಗ 'ಸಿಟಾಡೆಲ್' ವೆಬ್ ಸೀರಿಸ್ ಪ್ರಚಾರಕ್ಕೆ ಮುಂದಾಗಿರೋದು ನೋಡಿ ಚಿಟ್ಟಿಬಾಬು ರೀತಿಯಲ್ಲೇ ಕೆಲವರು ಮಾತನಾಡಲು ಆರಂಭಿಸಿದ್ದಾರೆ. ಸಮಂತಾ ಬರೀ ನಾಟಕ ಮಾಡುತ್ತಿದ್ದಾಳೆ ಅಂತೆಲ್ಲಾ ಹೇಳುತ್ತಿದ್ದಾರೆ. ಇದಕ್ಕೆ ಸ್ಯಾಮ್ ಏನು ಹೇಳುತ್ತಾರೋ ಕಾದು ನೋಡಬೇಕು. 'ಸಿಟಾಡೆಲ್' ವೆಬ್ ಸೀರಿಸ್ ಬಿಟ್ಟರೆ ವಿಜಯ್ ದೇವರಕೊಂಡ ಜೊತೆ 'ಖುಷಿ' ಚಿತ್ರದಲ್ಲಿ ಸ್ಯಾಮ್ ಬಣ್ಣ ಹಚ್ಚಿದ್ದಾರೆ.


Click it and Unblock the Notifications











