ಶಾರುಖ್ ಅಶೋಕ, ಚರಿತ್ರೆಗೆ ದೋಖಾ- ಸಿಡಿದ ಸತ್ಯು
ಅಶೋಕ ತನ್ನ ಜೀವನದ ಉತ್ತಮ ಮತ್ತು ಮಹತ್ವಾಕಾಂಕ್ಷೆಯ ಚಿತ್ರಗಳಲ್ಲಿ ಒಂದೆಂದು ಶಾರುಖ್ಖಾನ್ ಹೇಳಿಕೊಳ್ಳುತ್ತಿದ್ದರೆ, ಹಿರಿಯ ಚಿತ್ರನಿರ್ದೇಶಕ ಎಂ. ಎಸ್ ಸತ್ಯು ಅಶೋಕ ಸಿನೇಮಾ ನಮ್ಮ ಇತಿಹಾಸದ ಚಾರಿತ್ರ್ಯ ವಧೆ ಮಾಡುತ್ತಿದೆ ಎಂದು ಆಪಾದಿಸಿದ್ದಾರೆ.
ಅಶೋಕ ಚಕ್ರವರ್ತಿಯ ಕೀರ್ತಿಗೆ ಮಸಿ ಬಳಿಯುವ ಈ ಅಶೋಕ ಎಂಬ ಚಿತ್ರಕ್ಕೂ ಇತಿಹಾಸಕ್ಕೂ ಸಂಬಂಧವೇ ಇಲ್ಲ. ಇತಿಹಾಸದ ಎರಡು ಪುಟಗಳನ್ನೂ ತಿರುವಿ ಹಾಕದೇ ಅಶೋಕ ಚಿತ್ರ ತಯಾರಿಸಲಾಗಿದೆ. ಇದರಿಂದ ಐತಿಹಾಸಿಕ ವ್ಯಕ್ತಿಗಳ ಚಾರಿತ್ರ್ಯವಧೆಯಾಗಿದೆ ಎಂಬುದು ಸತ್ಯು ಅವರ ಆರೋಪ. ಮಂಗಳೂರಿನಲ್ಲಿ ಮಂಗಳವಾರ(ನ.20) ಸುದ್ದಿಗೋಷ್ಠಿಯಲ್ಲಿ ಸತ್ಯು ಮಾತನಾಡುತ್ತಿದ್ದರು.
ಉತ್ತಮ ಅಭಿರುಚಿಯ ಚಿತ್ರಗಳನ್ನು ತೆಗೆದಲ್ಲಿ ಜನರು ನೋಡುವುದಿಲ್ಲ ಎಂಬುದು ಸುಳ್ಳು. ಲಾಭ ತುಸು ಕಡಿಮೆಯಾಗಬಹುದಷ್ಟೆ. ಕಾಸು ಮಾಡಬೇಕೆಂದೇ ಮಾಡಿರುವ ಅಶೋಕ ಕೆಟ್ಟ ಚಿತ್ರ ಎಂದು ಸತ್ಯು ಸಿನೆಮಾವನ್ನು ಹಳಿದರು.
ಕಮಲ್ ಪ್ರತಿಭಾವಂತ, ಆದರೆ...
ಹೊಸ ಹೊಸ ಪ್ರಯತ್ನಗಳನ್ನು ಮಾಡುವ ಕಮಲಹಾಸನ್ ಬಗ್ಗೆ ಸತ್ಯುಗೆ ಕರುಣೆಯಿದೆ. ‘ಅವರಿಗೆ ಸಾಕಷ್ಟು ಪ್ರತಿಭೆಯಿದೆ. ಆದರೆ ಅದರ ಬಳಕೆಗೆ ಉತ್ತಮ ಮಾರ್ಗದರ್ಶನ ಇಲ್ಲದೆ ರಕ್ತದೋಕುಳಿಯ ಚಿತ್ರ ತೆಗೆಯುತ್ತಿದ್ದಾರೆ. ಕಲೆಯಲ್ಲಿ ಲಾಭವೊಂದೇ ಪ್ರಮುಖ ಗುರಿಯಾಗಿರಬಾರದು ಎಂದು ಸತ್ಯು ಸಲಹೆ ಮಾಡಿದರು.
ಇದು ಜಾಹೀರಾತಿಗೂ ಅನ್ವಯಿಸುತ್ತದೆ. ಉದಾಹರಣೆಗೆ ಕಲಾವಿದರು ಟೀಪುಡಿ ಮಾರುವುದಕ್ಕೆ ಹೋಗುವುದು ಬಿಲ್ಕುಲ್ ಸರಿಯಲ್ಲ. ಕೋಕೋ ಕೋಲಾ ಕೊಳ್ಳಿರಿ ಎಂದು ಸೇಲ್ಸ್ ಬಾಯ್ ಕೆಲಸದ ಹಾಗೆ ಉತ್ಪನ್ನಗಳನ್ನು ಹೊಗಳುವುದು ಎಷ್ಟು ಸರಿ? ಹಣಕ್ಕಾಗಿ ಯಾವುದೋ ಸಂಸ್ಥೆಗೆ ಮಾಡಲ್ ಆಗುವುದು, ಆ ಸಂಸ್ಥೆ ಬರೆದುಕೊಟ್ಟ ವಾಕ್ಯಗಳನ್ನು ಉರು ಹೊಡೆದು ಹೇಳಿ ಲಕ್ಷಗಟ್ಟಲೆ ಸಂಪಾದನೆ ಗಿಟ್ಟಿಸುವುದು ಕಲಾವಿದರಿಗೆ ಭೂಷಣವಲ್ಲ ಎಂದು ಸತ್ಯು ಕಿವಿ ಮಾತು ಹೇಳಿದರು.
(ಇನ್ಫೋ ಇನ್ಸೈಟ್)
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications











