ನನ್ನ ಕಷ್ಟ ಯಾರು ಅರ್ಥ ಮಾಡಿಕೊಳ್ಳುತ್ತಾರೆ, ಹೇಳಿ ? -ಶಿಲ್ಪ ಶ್ರೀನಿವಾಸ್
*ನಮ್ಮ ವರದಿಗಾರರಿಂದ
ಬೆಂಗಳೂರು : ನಟಿ ಪ್ರೇಮ ಅವರ ಕಾಲ್ಶೀಟ್ ವಿಚಾರದಲ್ಲಿ ವಿವಾದಕ್ಕೆ ಸಿಲುಕಿರುವ ನಿರ್ಮಾಪಕ ಶಿಲ್ಪ ಶ್ರೀನಿವಾಸ್ ನಿರ್ಮಾಪಕರ ಸಂಘದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ.
ಸೋಮವಾರ ನಟಿ ಪ್ರೇಮಾ ಮನೆಗೆ ನುಗ್ಗಿ ದಾಂಧಲೆ ನಡೆಸಿ, ಪೊಲೀಸರ ಅತಿಥಿಯಾಗಿ, ಜಾಮೀನಿನ ಮೇಲೆ ಬಿಡುಗಡೆ ಯಾಗಿರುವ ಎಚ್.ಸಿ.ಶ್ರೀನಿವಾಸ್ ಉರುಫ್ ಶಿಲ್ಪ ಶ್ರೀನಿವಾಸ್ ವರ್ತನೆ ಇಡೀ ಕನ್ನಡ ಉದ್ದಿಮೆ ಬಾಯಿ ಮೇಲೆ ಬೆರಳಿಡುವಂತೆ ಮಾಡಿತ್ತು. ನೀವು ಹೀಗೆ ಮಾಡಿದ್ದಾರೂ ಯಾಕೆ ಎಂದು ನಾವು ಅವರನ್ನು ಕೇಳಿದಾಗ ....
ನಾನು ಎಮೋಷನಲ್ ಆಗಿದ್ದೆ. ಆ ಕಾರಣಕ್ಕೆ ಹೀಗಾಯಿತು. ಆದರೂ ನನಗೆ ನ್ಯಾಯ ಸಿಗಲಿಲ್ಲ. ನಿರ್ಮಾಪಕರೇ ಇನ್ನೊಬ್ಬ ನಿರ್ಮಾಪಕನ ಕಷ್ಟ ಅರ್ಥ ಮಾಡಿಕೊಳ್ಳದಿದ್ದ ಮೇಲೆ ಅಧಿಕಾರ ಕಟ್ಟಿಕೊಂಡು ಮಾಡುವುದಾದರೂ ಏನು. ಅದಕ್ಕೇ ನಿರ್ಮಾಪಕರ ಸಂಘದ ಉಪಾದ್ಯಕ್ಷ ಸ್ಥಾನಕ್ಕೇ ರಾಜೀನಾಮೆ ಬರೆದು ಕೊಟ್ಟಿದ್ದೇನೆ.
ನವೆಂಬರ್ 22ರಿಂದ ಪರ್ವ ಶೂಟಿಂಗ್ ಮುಂದುವರೆಯುತ್ತೆ. 2 ದಿನಗಳ ಮಟ್ಟಿಗೆ ಶೂಟಿಂಗ್ಗೆ ಬರಬೇಕು ಅಂತ ಖುದ್ದು ನಾನು ಹಾಗೂ ದೇಸಾಯಿ ಪ್ರೇಮಾ ಅವರನ್ನು ಕೇಳಿಕೊಂಡೆವು. ಅವರೂ ಓಕೆ ಅಂದರು. ನವೆಂಬರ್ 22ಕ್ಕೆ ಶೂಟಿಂಗ್ ಮತ್ತೆ ಶುರುವಾಯಿತು. ಪ್ರೇಮಾ ಬರಲಿಲ್ಲ. ಯಾಕೆ ಅಂತ ಆಕೆಯ ತಂದೆ ಚೆಂಗಪ್ಪನವರನ್ನು ಕೇಳಿದೆ. ನಿರ್ಮಾಪಕ ಚಿದಂಬರ ಶೆಟ್ಟಿ ಬಡ್ಡಿ ಮಾಫಿಯಾಗೆ ಸಿಕ್ಕಿ ಸತ್ತರಲ್ಲ, ಅಂಥದೇ ಸಾವು ನಿಮಗೂ ಬರುತ್ತದೆ ಅಂತ ಹೇಳಿದೆ. ಆದರೆ, ಚೆಂಗಪ್ಪ ತಿಳಿದುಕೊಂಡದ್ದೇ ಬೇರೆ.
ಒಬ್ಬ ಮನುಷ್ಯ ಕಾರನ್ನು ಗೋಡೆಗೆ ಗುದ್ದಿ, ಬಟ್ಟೆ ಹರಕೊಂಡು ಬೀದಿ ಮೇಲೆ ಉರುಳಿ, ಹೇಂಕರಿಸುತ್ತಾನೆ ಎಂದರೆ ಅದರ ಹಿಂದೆ ದೊಡ್ಡ ಮನೋಮಾಲಿನ್ಯದ ಘಟನಾವಳಿ ಇದ್ದೇ ಇರುತ್ತದೆ. ಹಾಗಂತ ಮನೋವಿಜ್ಞಾನಿಗಳೇ ಹೇಳುತ್ತಾರೆ. ಶಿಲ್ಪಾ ಶ್ರೀನಿವಾಸ್ ಕ್ರುದ್ಧತೆಗೆ ಕುಮ್ಮಕ್ಕು ಕೊಟ್ಟದ್ದಾದರೂ ಏನು ಎಂಬ ಕುತೂಹಲ ಇನ್ನೂ ಇದ್ದೇ ಇದೆ. ಒಬ್ಬ ನಿರ್ದೇಶಕ ಡೆಡ್ಲೈನ್ ಫೇಸ್ ಮಾಡದಿದ್ದರೆ ಏನೆಲ್ಲಾ ಅವಘಡಗಳಾಗುತ್ತವೆ ಎಂಬುದಕ್ಕೂ ಪ್ರೇಮಾ- ಶ್ರೀನಿವಾಸ್ ಪ್ರಕರಣ ಜ್ವಲಂತ ಉದಾಹರಣೆ.
ಅಂದಹಾಗೆ, ಇದೇ ಸಂಜೆ (ನವೆಂಬರ್ 27) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಈ ಪ್ರಕರಣದ ಬಗ್ಗೆ ಚರ್ಚಿಸಲು ಸಭೆ ಸೇರಲಿದೆ. ಸಭೆಗೆ ಶ್ರೀನಿವಾಸ್ಗೆ ಕೂಡ ಬುಲಾವು ಬಂದಿದೆ. ಅಲ್ಲಾದರೂ ಶ್ರೀನಿವಾಸ್ ಕ್ರುದ್ಧತೆಯ ಅಸಲಿಯತ್ತು ಹೊರ ಬೀಳುತ್ತದೆಯೇ ಅಥವಾ ಇನ್ನಷ್ಟು ಕಠಿಣ ಶಿಕ್ಷೆಯನ್ನು ಅವರು ಎದುರಿಸಬೇಕಾದೀತೆ? ಕಾದು ನೋಡಬೇಕು.
ನೀವೇನಂತೀರಿ
ವಾರ್ತಾ ಸಂಚಯ
ನಟಿ ಪ್ರೇಮಾ ಮನೆಗೆ ನುಗ್ಗಿ ಹಲ್ಲೆ : ನಿರ್ಮಾಪಕ ಶಿಲ್ಪ ಶ್ರೀನಿವಾಸ್ ಬಂಧನ
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications











