ರಾಮ್ ಗೋಪಾಲ್ ವರ್ಮಾ ನಿರ್ದೇಶನದಲ್ಲಿ ಶಿವಣ್ಣ
ಹಲವಾರು ನಾಯಕನಟರಿಗೆ ಬ್ರೇಕ್ ಕೊಟ್ಟಂತಹ ನಿರ್ದೇಶಕ ರಾಮ್ ಗೋಪಾಲ್ ವರ್ಮಾ. ಕೇವಲ ನಾಯಕರಿಗಷ್ಟೇ ಅಲ್ಲ ನಾಯಕಿಯರ ವೃತ್ತಿಬದುಕಿನಲ್ಲೂ ಮಹತ್ವದ ಬದಲಾವಣೆ ತಂದ ಕೀರ್ತಿ ವರ್ಮಾ ಸಾಹೇಬರಿಗಿದೆ. ಇದೀಗ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರಿಗೆ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ.
ಈ ಹಿಂದೆ ಸತ್ಯ, ಸರ್ಕಾರ್, ಕಂಪನಿ ಚಿತ್ರಗಳನ್ನು ನಿರ್ಮಿಸಿರುವ ನಿರ್ಮಾಪಕರು ಶಿವಣ್ಣ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರಂತೆ. ಇದೇ ನಿರ್ಮಾಪಕರು ಕಿಚ್ಚ ಸುದೀಪ್ ಅವರ 'ರಣ್' ಹಾಗೂ 'ರಕ್ತಚರಿತ್ರ' ಚಿತ್ರಗಳನ್ನೂ ನಿರ್ಮಿಸಿದ್ದಾರೆ.

ಸದ್ಯಕ್ಕೆ ಹರಿದಾಡುತ್ತಿರುವ ಸುದ್ದಿ ಏನೆಂದರೆ ಇದೊಂದು ಚತುರ್ಭಾಷಾ ಚಿತ್ರ ಎಂಬುದು. ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಚಿತ್ರ ನಿರ್ಮಾಣವಾಗಲಿದೆಯಂತೆ. ಕಳೆದೆರಡು ತಿಂಗಳಿಂದ ಶಿವಣ್ಣ ಮತ್ತು ವರ್ಮಾ ನಡುವೆ ಮಾತುಕತೆ ನಡೆಯುತ್ತಿದೆ ಎಂಬುದು ಇನ್ನೊಂದು ಸಂಗತಿ.
ಚಿತ್ರಕ್ಕೆ ಶಿವಣ್ಣ ಇನ್ನೂ ಓಕೆ ಹೇಳದಿದ್ದರೂ ಸ್ಕ್ರಿಪ್ಟ್ ನ್ನು ಓದುತ್ತಿದ್ದಾರಂತೆ. ಅವರು ಗ್ರೀನ್ ಸಿಗ್ನಲ್ ಕೊಟ್ಟ ಕೂಡಲೇ ಚಿತ್ರ ಸೆಟ್ಟೇರಲಿದೆ. ಆದಷ್ಟು ಬೇಗ ಶಿವಣ್ಣ ಓಕೆ ಎಂದರೆ ಇದೇ ಏಪ್ರಿಲ್ 24ರ ಅಣ್ಣಾವ್ರ 86ನೇ ಹುಟ್ಟುಹಬ್ಬದಲ್ಲೇ ಚಿತ್ರಕ್ಕೆ ಮುಹೂರ್ತ ನಡೆಯಲೂಬಹುದು.
ರಾಮ್ ಗೋಪಾಲ್ ವರ್ಮಾ ಅವರು ಹೇಳಿಕೇಳಿ ಪ್ರಯೋಗಶೀಲ ನಿರ್ದೇಶಕ. ಶಿವಣ್ಣ ಅವರು ಈ ರೀತಿಯ ಪ್ರಯೋಗಗಳಿಗೆ ಸದಾ ಮುಂದಿರುವಂತಹ ನಟ. ಇಬ್ಬರು ಒಟ್ಟಿಗೆ ಸೇರಿದರೆ ಒಂದು ಅದ್ಭುತ ಸಿನಿಮಾ ಅಂತೂ ಪ್ರೇಕ್ಷಕರ ಪಾಲಿಗೆ ಸಿಗುವುದು ನಿಶ್ಚಿತ. (ಏಜೆನ್ಸೀಸ್)


Click it and Unblock the Notifications











