ಹೀಗೊಂದು ಸುದ್ದಿ: ದರ್ಶನ್ ಅಡ್ವಾನ್ಸ್ ಹಿಂತಿರುಗಿಸಿದ ಬಳಿಕ ರಿಯಲ್ ಸ್ಟಾರ್ಗೆ ಸೂರಪ್ಪ ಬಾಬು ಸಿನಿಮಾ?
ರೆಲ್ಯೂಲರ್ ಜಾಮೀನು ಪಡೆದ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೊದಲ ಬಾರಿಗೆ ಒಂದು ವಿಡಿಯೋ ಮಾಡಿದ್ದರು. ಆ ವಿಡಿಯೋದಲ್ಲಿ ಇಬ್ಬರು ನಿರ್ಮಾಪಕರಿಗೆ ತಾವು ಪಡೆದಿದ್ದ ಅಡ್ವಾನ್ಸ್ ಹಣವನ್ನು ಹಿಂತಿರುಗಿಸಿರುವುದು ನಿಜವೆಂದು ಹೇಳಿದ್ದರು. ಅದ್ಯಾಕೆ ಹಣ ಹಿಂತಿರುಗಿಸಿದ್ದು ಅನ್ನೋದಕ್ಕೆ ಸೂಕ್ತ ಕಾರಣವನ್ನು ನೀಡಿದ್ದರು. ಆ ಇಬ್ಬರು ನಿರ್ಮಾಪಕರಲ್ಲಿ ಸೂರಪ್ಪ ಬಾಬು ಕೂಡ ಒಬ್ಬರು.
'ಕೋಟಿಗೊಬ್ಬ 3' ಹೀನಾಯ ಸೋಲಿನ ಬಳಿಕ ನಿರ್ಮಾಪಕ ಸೂರಪ್ಪ ಬಾಬು ಮತ್ತೊಂದು ಸಿನಿಮಾಗೆ ಕೈ ಹಾಕಿದ್ದರು. ದರ್ಶನ್ ಜೊತೆ ಸಿನಿಮಾ ಮಾಡುವುದಕ್ಕೆ ಬಾಬು ಓಡಾಡುತ್ತಿದ್ದರು. ಆ ವೇಳೆ ದರ್ಶನ್ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಆ ವೇಳೆ ಸೂರಪ್ಪ ಬಾಬು ಚಾಲೆಂಜಿಂಗ್ ಸ್ಟಾರ್ಗೆ ಅಡ್ವಾನ್ಸ್ ರೂಪದಲ್ಲಿ ಹಣವನ್ನು ನೀಡಿದ್ದರು. ಅದೇ ಹಣವನ್ನು ಈಗ ಹಿಂತಿರುಗಿಸಿದ್ದಾರೆ.

ದರ್ಶನ್ ಅಡ್ವಾನ್ಸ್ ಮೊತ್ತವನ್ನು ವಾಪಾಸ್ ಮಾಡಿದ ಬಳಿಕ ಸೂರಪ್ಪ ಬಾಬು ಮುಂದೇನು ಮಾಡ್ತಾರೆ? ಯಾವ ಹೀರೋಗೆ ಸಿನಿಮಾ ಮಾಡುತ್ತಾರೆ? ಅನ್ನೋ ಪ್ರಶ್ನೆ ಹುಟ್ಟುಕೊಂಡಿತ್ತು. ದರ್ಶನ್ ವಿಡಿಯೋ ಮೂಲಕ ಹಣ ಹಿಂತಿರುಗಿಸಿದ್ದು ನಿಜವಾಗುತ್ತಿದ್ದಂತೆ ಗಾಂಧಿನಗರದ ಮಂದಿ ಒಂದಿಷ್ಟು ಸುದ್ದಿಯನ್ನು ಕಲೆ ಹಾಕಿದ್ದಾರೆ. ಸೂರಪ್ಪ ಬಾಬು ಮುಂದೆ ಯಾವ ಸಿನಿಮಾ ಮಾಡುತ್ತಾರೆ? ಅನ್ನೋ ಸುದ್ದಿಯನ್ನು ಹುಡುಕಿಕೊಂಡು ಬಂದಿದ್ದಾರೆ. ಅಸಲಿಗೆ ಗಾಂಧಿನಗರದಲ್ಲಿ ಓಡಾಡುತ್ತಿರುವ ಸುದ್ದಿ ಏನು?
ಎಲ್ಲಾ ಸರಿಯಾಗಿದ್ದಿದ್ದರೆ ದರ್ಶನ್ ಹಾಗೂ ಸೂರಪ್ಪ ಬಾಬು ಒಂದು ಸಿನಿಮಾ ಮಾಡಬೇಕಿತ್ತು. ಬಹುಶ: ಈ ವರ್ಷ ಆ ಸಿನಿಮಾ ಸೆಟ್ಟೇರುತ್ತಿತ್ತು. ಮುಂದಿನ ವರ್ಷ ರಿಲೀಸ್ ಆಗುತ್ತಿತ್ತೇನೋ. ನಿರ್ಮಾಪಕ ಸೂರಪ್ಪ ಬಾಬುಗೂ ದರ್ಶನ್ ಜೊತೆ ಸಿನಿಮಾ ಮಾಡೋದು ಅನಿವಾರ್ಯತೆ ಆಗಿತ್ತು. ಆದರೆ, ಸೂರಪ್ಪ ಬಾಬು ಅದೃಷ್ಟ ಇಲ್ಲವೋ? ಅಥವಾ ದರ್ಶನ್ ನಸೀಬು ಸರಿಯಿರಲಿಲ್ಲವೋ? ಹಾಕಿಕೊಂಡಿದ್ದ ಪ್ಲಾನ್ಗಳೆಲ್ಲವೂ ಕೈ ಕೊಟ್ಟಿತ್ತು. ನಿರ್ಮಾಪಕ ಸೂರಪ್ಪ ಬಾಬುಗೆ ಈ ಬೆಳವಣಿಗೆಯಿಂದ ನಿರಾಸೆಯಂತೂ ಆಗಿದೆ.
ಸ್ಯಾಂಡಲ್ವುಡ್ ಮಂದಿ ಹೇಳುವ ಪ್ರಕಾರ 'ಕೋಟಿಗೊಬ್ಬ 3' ಸಿನಿಮಾದಿಂದ ಸೂರಪ್ಪ ಬಾಬು ಕೈ ಸುಟ್ಟುಕೊಂಡಿದ್ದರು. ಹೀಗಾಗಿ ಅವರಿಗೆ ಕಮಿಟ್ಮೆಂಟ್ ಇತ್ತು. ದರ್ಶನ್ ಇನ್ನೂ ವಿರಾಟ್ ಮುಗಿಸಿದ ಬಳಿಕವೇ ಇನ್ನೊಂದು ಸಿನಿಮಾ ಕೈಗೆತ್ತಿಕೊಳ್ಳುತ್ತಾರೆ. ಆದರೆ, ಆ ಸಿನಿಮಾ ಯಾವಾಗ ಶುರುವಾಗುತ್ತೋ ಗೊತ್ತಿಲ್ಲ. ಯಾಕಂದ್ರೆ, ಅವರ ಆರೋಗ್ಯ ಇನ್ನೂ ಸರಿ ಹೋಗಿಲ್ಲ. ಒಂದ್ವೇಳೆ ಸರ್ಜರಿ ಆಗಬೇಕು ಅಂತಾದರೆ, ಇನ್ನೂ ಮುಂದಕ್ಕೆ ಹೋಗುವ ಸಾಧ್ಯತೆಯಿದೆ.

ಇತ್ತ ಸೂರಪ್ಪ ಬಾಬು ಕೂಡ ಹೆಚ್ಚು ದಿನ ಕಾಯುವ ಸ್ಥಿತಿಯಲ್ಲಿ ಇರಲಿಲ್ಲ. ಆದಷ್ಟು ಬೇಗ ಇನ್ನೊಂದು ಸಿನಿಮಾ ಮಾಡಲೇಬೇಕಾದ ಅನಿವಾರ್ಯತೆ ಅವರಿಗಿತ್ತು ಎನ್ನಲಾಗಿದೆ. ದರ್ಶನ್ ಅಡ್ವಾನ್ಸ್ ಮೊತ್ತವನ್ನು ಹಿಂತಿರುಗಿಸಿದ ಬಳಿಕ ರಿಯಲ್ ಸ್ಟಾರ್ ಉಪೇಂದ್ರ ಜೊತೆ ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಉಪ್ಪಿ ಜೊತೆನೇ ಯಾಕೆ ಸಿನಿಮಾ ಮಾಡೋದಕ್ಕೆ ಹೋದರು ಅನ್ನೋದಕ್ಕೆ ಗಾಂಧಿನಗರದ ಮಂದಿ ಮತ್ತೆ 'ಕೋಟಿಗೊಬ್ಬ 3' ಕಡೆಗೆ ಬೆರಳು ಮಾಡಿ ತೋರಿಸುತ್ತಾರೆ.
ಅಂದ್ಹಾಗೆ ಸೂರಪ್ಪ ಬಾಬು, ಉಪೇಂದ್ರ ಹಾಗೂ ನಿರ್ದೇಶಕ ನಾಗಣ್ಣ ಅವರದ್ದು ಹಳೆ ಕಮಿಟ್ಮೆಂಟ್ ಒಂದಿತ್ತು. ಈ ಸಂದರ್ಭದಲ್ಲಿ ಆ ಪ್ರಾಜೆಕ್ಟ್ ಅನ್ನು ಟೇಕಾಫ್ ಮಾಡುವುದಕ್ಕೆ ಸೂರಪ್ಪ ಬಾಬು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಶೀಘ್ರದಲ್ಲಿಯೇ ಈ ಮೂವರು ಸೇರಿ ಹೊಸ ಸಿನಿಮಾ ಅನೌನ್ಸ್ ಮಾಡುತ್ತಾರೆ ಅನ್ನೋದು ಕೂಡ ಸ್ಯಾಂಡಲ್ವುಡ್ನಲ್ಲಿ ಸೌಂಡ್ ಮಾಡುತ್ತಿದೆ. ಇದೆಲ್ಲವೂ ಗಾಂಧಿನಗರದಲ್ಲಿ ಹರಿದಾಡುತ್ತಿರುವ ಸುದ್ದಿ. ಆದರೆ, ಸೂರಪ್ಪ ಬಾಬು ಆಗಲಿ, ಉಪೇಂದ್ರ ಆಗಲಿ, ನಾಗಣ್ಣ ಆಗಲಿ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಕ್ಲಾರಿಟಿ ಕೊಟ್ಟರೂ ಕೊಡಬಹುದು.


Click it and Unblock the Notifications











