ಶ್ರೀರಾಮನ ಪಾತ್ರದಲ್ಲಿ ಸೂಪರ್ ಸ್ಟಾರ್ ಮಹೇಶ್ ಬಾಬು? ಯಾವ ಸಿನಿಮಾ ಅಂದ್ರೆ?
ಇತ್ತೀಚೆಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪೌರಾಣಿಕ, ಐತಿಹಾಸಿಕ ಸಿನಿಮಾಗಳ ಸಂಖ್ಯೆ ಹೆಚ್ಚುತ್ತಿದೆ. ನಮ್ಮ ಪುರಾಣ ಹಾಗೂ ಮಹಾನ್ ಗ್ರಂಥಗಳ ಹಿನ್ನೆಲೆಯಲ್ಲಿ ತೆರೆಮೇಲೆ ನಾನಾ ಪ್ರಯೋಗ ಮಾಡಲಾಗುತ್ತಿದೆ. ತೆಲುಗು ನಟ ಮಹೇಶ್ ಬಾಬು ಮುಂದಿನ ಸಿನಿಮಾದಲ್ಲಿ ಶ್ರೀರಾಮನಾಗಿ ಬಣ್ಣ ಹಚ್ಚುತ್ತಾರೆ ಎನ್ನಲಾಗ್ತಿದೆ.
ಸದ್ಯ ರಾಜಮೌಳಿ ನಿರ್ದೇಶನದ SSMB29 ಚಿತ್ರದಲ್ಲಿ ಮಹೇಶ್ ಬಾಬು ನಟಿಸುತ್ತಿದ್ದಾರೆ. ಕೀನ್ಯಾದಲ್ಲಿ ಚಿತ್ರದ ಚಿತ್ರೀಕರಣ ನಡೀತಿದೆ. ಮಹೇಶ್ ಬಾಬು ಜೊತೆ ಪ್ರಿಯಾಂಕ ಚೋಪ್ರಾ ಕೂಡ ತೆರೆ ಹಂಚಿಕೊಳ್ಳುತ್ತಿದ್ದಾರೆ. ನೂರಾರು ಕೋಟಿ ಬಜೆಟ್ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಹಾಲಿವುಡ್ ತಂತ್ರಜ್ಞರು ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಮಹೇಶ್ ಬಾಬು ಪಾತ್ರ ಏನು ಎನ್ನುವ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಿದೆ.

ಚಿತ್ರದಲ್ಲಿ ಮಹೇಶ್ ಬಾಬು ಲುಕ್ ರಿವೀಲ್ ಆಗಿಲ್ಲ. ಇತ್ತೀಚಿಗೆ ಅವರ ಹುಟ್ಟುಹಬ್ಬಕ್ಕೆ ಬಂದಿದ್ದ ಪೋಸ್ಟರ್ ನಿರಾಸೆ ಮೂಡಿಸಿತ್ತು. ನಾಯಕನ ಮುಖ ತೋರಿಸದೇ ಜಾಗ್ರತೆ ವಹಿಸಿದ್ದರು ಜಕ್ಕಣ್ಣ. ನವೆಂಬರ್ನಲ್ಲಿ ಸಿನಿಮಾ ಟೀಸರ್ ಬಿಡುಗಡೆ ಮಾಡುವ ಪ್ರಯತ್ನ ನಡೀತಿದೆ. ಅಂದಹಾಗೆ ಚಿತ್ರದಲ್ಲಿ ಶ್ರೀರಾಮನಾಗಿ ಮಹೇಶ್ ಬಾಬು ನಟಿಸುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ.
ರಾಮಾಯಣದ ಹಿನ್ನೆಲೆಯಲ್ಲಿ SSMB29 ಸಿನಿಮಾ ಕಥೆ ಸಾಗುತ್ತದೆ ಎಂದು ಹೇಳಲಾಗ್ತಿದೆ. ಚಿತ್ರಕ್ಕೆ ಜೆನ್ 63 ಎಂಬ ಟೈಟಲ್ ಪರಿಶೀಲನೆಯಲ್ಲಿ ಚಿತ್ರತಂಡ ಇದೆ. ಚಿತ್ರದ ಕಥೆಗೂ ರಾಮಾಯಣಕ್ಕೂ ಲಿಂಕ್ ಇರುತ್ತದೆ ಎನ್ನುವ ಊಹಾಪೋಹ ಶುರುವಾಗಿದ್ದು ಕೆಲ ಸನ್ನಿವೇಶಗಳಲ್ಲಿ ಶ್ರೀರಾಮನಾಗಿ ಮಹೇಶ್ ಬಾಬು ಮಿಂಚುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.

ಕಳೆದ ವರ್ಷ ಬಂದಿದ್ದ 'ಕಲ್ಕಿ 2989AD' ಚಿತ್ರದಲ್ಲಿ ನಿರ್ದೇಶಕ ನಾಗ್ ಅಶ್ವಿನ್ ಇಂಥದ್ದೇ ಪ್ರಯತ್ನ ಮಾಡಿದ್ದರು. ಕರ್ಣನ ಪುನರ್ಜನ್ಮ ಭೈರವ ಎನ್ನುವಂತೆ ತೋರಿಸಿದ್ದರು. ಅಂಥದ್ದೇ ಪ್ರಯತ್ನ ಈಗ SSMB29 ಚಿತ್ರದಲ್ಲಿ ಜಕ್ಕಣ್ಣ ಮಾಡಿದ್ದಾರಾ? ಎನ್ನುವುದನ್ನು ಕಾದು ನೋಡಬೇಕಿದೆ. ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಈ ಚಿತ್ರಕ್ಕೂ ಕಥೆ ಚಿತ್ರಕಥೆ ಸಿದ್ಧಪಡಿಸಿದ್ದಾರೆ.
ಎರಡು ಭಾಗಗಳಾಗಿ SSMB29 ಸಿನಿಮಾ ಬರುತ್ತದೆ ಎಂದು ಹೇಳಲಾಗ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಆದರೆ ಕ್ಲೈಮ್ಯಾಕ್ಸ್ನಲ್ಲಿ ಸಣ್ಣ ಟ್ವಿಸ್ಟ್ ಕೊಟ್ಟು ಮುಂದಿನ ಭಾಗದ ಬಗ್ಗೆ ಕುತೂಹಲ ಮೂಡಿಸುವ ಪ್ರಯತ್ನ ಮಾಡುವುದಾಗಿ ವಿಜಯೇಂದ್ರ ಪ್ರಸಾದ್ ಹೇಳಿದ್ದಾರೆ. 'KGF- 2' ಕ್ಲೈಮ್ಯಾಕ್ಸ್ನಲ್ಲಿ ಪಾರ್- 3 ಬಗ್ಗೆ ಸುಳಿವು ಕೊಟ್ಟಂತೆ ಈ ಚಿತ್ರದಲ್ಲೂ ಮಾಡಲಿದ್ದಾರೆ.
ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಕೂಡ SSMB29 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕೆ. ಎಲ್ ನಾರಾಯಣ್ ನಿರ್ಮಾಣದ ಚಿತ್ರಕ್ಕೆ ಎಂ. ಎಂ ಕೀರವಾಣಿ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಪಿ. ಎಸ್ ವಿನೋದ್ ಛಾಯಾಗ್ರಹಣ ಚಿತ್ರಕ್ಕಿದೆ. ಟೋಡರ್ ಲಜರೋವ್ ಆಕ್ಷನ್ ಕಂಪೋಸ್ ಮಾಡಲಿದ್ದಾರೆ. ದೇಶವಿದೇಶಗಳಲ್ಲಿ ಸಿನಿಮಾ ಕಥೆ ಸಾಗುತ್ತದೆ. ಅದಕ್ಕೆ ತಕ್ಕಂತೆ ಕೀನ್ಯಾ ಸೇರಿದಂತೆ ಹಲವು ಭಾಗಗಳಲ್ಲಿ ಸಿನಿಮಾ ಚಿತ್ರೀಕರಣ ನಡೆಯಲಿದೆ.
ಇಂಡಿಯಾನ ಜೋನ್ಸ್ ಮಾದರಿಯ ಆಕ್ಷನ್ ಅಡ್ವೆಂಚರಸ್ ಸಿನಿಮಾ ಇದು ಎಂದು ರಾಜಮೌಳಿ ಹೇಳಿದ್ದಾರೆ. ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ದೇಶ ವಿದೇಶದ ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗಲಿದೆ. ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಹಾಲಿವುಡ್ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಸಾಥ್ ಕೊಡುವ ಸಾಧ್ಯತೆಯಿದೆ. 2027ರಲ್ಲಿ ಈ ಸಿನಿಮಾ ಪ್ರೇಕ್ಷಕರ ಮುಂದೆ ಬರಬಹುದು ಎಂದು ಹೇಳಲಾಗ್ತಿದೆ. ಇದು ಸಹಜವಾಗಿಯೇ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
ಮೇಕಪ್ ಮ್ಯಾನ್ ಪಟ್ಟಾಭಿ ಎಂಬುವವರು ರಾಜಮೌಳಿಗೆ ಶ್ರೀಕೃಷ್ಣನ ಪೇಟಿಂಗ್ ಗಿಫ್ಟ್ ಆಗಿ ಕೊಟ್ಟಿದ್ದಾರೆ. ಇದನ್ನು ನೋಡಿ SSMB29 ಚಿತ್ರದಲ್ಲಿ ಶ್ರಿಕೃಷ್ಣನಾಗಿ ಮಹೇಶ್ ಬಾಬು ನಟಿಸುತ್ತಾರಾ? ಎಂದು ಅಭಿಮಾನಿಗಳು ಗೆಸ್ ಮಾಡುತ್ತಿದ್ದಾರೆ.


Click it and Unblock the Notifications











