ಗಾಡ್ ಫಾದರ್ ಪ್ರಸಾದ್ ಸ್ಥಿತಿ ಬಾಯಿಗಿಟ್ಟ ಬಿಸಿತುಪ್ಪ!

ಮೇಲ್ನೋಟಕ್ಕೆ ಇದು ಚಿತ್ರಗಳ ಬಿಡುಗಡೆಗೆ ಸಂಬಂಧಿಸಿದ್ದು ಎನಿಸಿದರೂ ಅದರಲ್ಲಿ ಬೇರೆ ರಾಜಕೀಯಗಳೂ ಸಾಕಷ್ಟಿವೆ ಎನ್ನಲಾಗುತ್ತಿದೆ. ಸ್ವಲ್ಪ ಸಮಯದ ಹಿಂದಷ್ಷೇ ಚಿತ್ರರಂಗದ ಪ್ರತಿಷ್ಠಿತ ಕುಟುಂಬವೊಂದಕ್ಕೆ ಬಾಯಿಗೆ ಬಂದಂತೆ ಬಯ್ದು ಬಹಳಷ್ಟು ಜನರಿಂದ ಬೈಸಿಕೊಂಡಿದ್ದ ಪ್ರಸಾದ್ ಅವರಿಗೆ, ಈ ಚಿತ್ರದ ಮೂಲಕ ಪಾಠ ಕಲಿಸುವ ಪ್ಲಾನೊಂದು ಸದ್ದಿಲ್ಲದೇ ನಡೆಯುತ್ತಿದೆ ಎಂಬ ಮಾತು ಗಾಂಧಿನಗರದಿಂದ ಕೇಳಿಬರುತ್ತಿದೆ.
'ಕೆ ಮಂಜು ನಿರ್ಮಾಣದ 'ಗಾಡ್ ಫಾದರ್' ಚಿತ್ರವನ್ನು 10 ಕೋಟಿ ರು.ಗೆ ಕೊಂಡುಕೊಂಡಿರುವ ವಿತರಕ 'ಪ್ರಸಾದ್ ವೆಂಚರ್ಸ್'ನ ಪ್ರಸಾದ್, ಮನಸ್ಸಿಗೆ ಬಂದಿದ್ದನ್ನು ಮಾತನಾಡಿ ಚಿತ್ರರಂಗದಲ್ಲಿ ಹಲವರ ದ್ವೇಷ ದ್ವೇಷ ಕಟ್ಟಿಕೊಂಡಿದ್ದಾರೆ. ಈಗ ಗಾಡ್ ಫಾದರ್ ಚಿತ್ರಕ್ಕೆ ಪ್ರತಿಯಾಗಿ ಪರಭಾಷಾ ಚಿತ್ರಗಳ ಬಿಡುಗಡೆ ಮೂಲಕ ಭಾರಿ ಪೈಪೋಟಿ ಎದುರಿಸುತ್ತಿರುವ ಪ್ರಸಾದ್ ಸಹಾಯಕ್ಕೆ ಯಾರೂ ಬರುತ್ತಿಲ್ಲ. ದಿಢೀರ್ ಆದ ಈ ಬೆಳವಣಿಗೆಯಿಂದ ಕಂಗಾಲಾಗಿದ್ದಾರೆ' ಎಂಬುದು ಗಾಂಧಿನಗರದಲ್ಲಿ ಎದ್ದಿರುವ ಗುಲ್ಲು.
ಮೊದಲ ಎರಡು ವಾರಗಳಲ್ಲಿ ರು. 7.5 ಕೋಟಿ ಗಳಿಸಿರುವ 'ಗಾಡ್ಫಾದರ್', ಈಗ ಥಿಯೇಟರ್ ಖೋತಾ ಅನುಭವಿಸುತ್ತಿದೆ. ಗಳಿಸಿರುವ ರು. 7.5 ಕೋಟಿಯಲ್ಲಿ ಥಿಯೇಟರ್ ಬಾಡಿಗೆ ಕಳೆದು ಪ್ರಸಾದ್ ಕೈಗೆ ಸಿಕ್ಕಿದ್ದು ರು. 5.5 ಕೋಟಿ ಮಾತ್ರ. 7 ಕೋಟಿ ರು. ವೆಚ್ಚದಲ್ಲಿ ಮಾಡಿದ್ದ ಚಿತ್ರವನ್ನು 10 ಕೋಟಿ ರು. ಕೊಟ್ಟು ಖರೀದಿಸಿದ್ದ ಪ್ರಸಾದ್, ಇನ್ನೂ 4.5 ಕೋಟಿ ರು. ಗಳನ್ನು ಇನ್ನುಂದೆ ಗಳಿಸಬೇಕಿದೆ. ಆದರೆ ಅದು ಕಷ್ಟ ಎನ್ನಲಾಗುತ್ತಿದೆ.
ಉಪೇಂದ್ರ ನಾಯಕತ್ವದ ಚಿತ್ರಕ್ಕೆ 'ಉಚಿತ ಆಡಿಯೋ ಸಿಡಿ' ಎಂಬ ಗಿಮಿಕ್ ಅಗತ್ಯವೇ ಇರಲಿಲ್ಲ. ಈಗ ಅದೂ ಪ್ರಸಾದ್ ಯಶಸ್ಸಿಗೆ ಮುಳುವಾಗಿದೆ. ಎರಡನೇ ವಾರದಲ್ಲೇ ಪ್ರೇಕ್ಷಕರ ಸಂಖ್ಯೆಯಲ್ಲಿ ಕುಸಿತ ಕಂಡಿದ್ದ 'ಗಾಡ್ ಫಾದರ್', ಈಗ 'ಜುಲಾಯಿ' ಹೊಡೆತ ಎದುರಿಸುತ್ತಿದೆ. ಇನ್ನೇನು 'ಏಕ್ತಾ ಟೈಗರ್' ಮೂಲಕ ಭಾರಿ ಹೊಡೆತ ಗ್ಯಾರಂಟಿ ಎಂಬುದು ಗಾಂಧಿನಗರಿಗರ ಲೆಕ್ಕಾಚಾರ. ಹೀಗಾಗಿ, ಈ ಮೊದಲಿನ ಪ್ರಸಾದ್ ಲೆಕ್ಕಾಚಾರ ತಲೆಕೆಳಗಾಗಿದೆ.
ಸದ್ಯ ಕಂಗಾಲಾಗಿರುವ ಪ್ರಸಾದ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮೊರೆ ಹೋಗಿದ್ದಾರೆ. ಆದರೆ, ಅಲ್ಯಾವ 'ವರಪ್ರಸಾದ'ವೂ ಪ್ರಸಾದ್ ಅವರಿಗೆ ಸಿಗುವುದಿಲ್ಲ ಎಂದು ಗಾಂಧಿನಗರ ನಗುತ್ತಿದೆ. ಪ್ರಸಾದ್ ಗೆ ಬುದ್ಧಿ ಕಲಿಸಲು ಸಾಕಷ್ಟು ಮಂದಿ ಸಂಚು ಮಾಡುತ್ತಿದ್ದಾರೆ ಎನ್ನಲಾಗುತ್ತಿರುವುದೇನೋ ನಿಜ. ಆದರೆ, ಪ್ರಸಾದ್ ಬುದ್ಧಿ ಕಲಿಯುತ್ತಾರೆ ಎಂದು ಅವರಿಗೆ ಹೇಳಿದವರ್ಯಾರು ಎಂಬುದು ಪ್ರಸಾದ್ ಬಲ್ಲವರು ಕೇಳುವ ಪ್ರಶ್ನೆ! ಉತ್ತರ ಯಾವೋನಿಗ್ಗೊತ್ತು!? (ಒನ್ ಇಂಡಿಯಾ ಕನ್ನಡ)


Click it and Unblock the Notifications











