ರಾಜಕೀಯರಂಗಕ್ಕೆ ದಳಪತಿ ವಿಜಯ್ ಎಂಟ್ರಿ? ತಮಿಳುನಾಡಿನ 234 ಕ್ಷೇತ್ರಗಳಲ್ಲಿ ಕಾರ್ಯಾಚರಣೆ?
ಕಾಲಿವುಡ್ನಲ್ಲಿ ರಜನಿಕಾಂತ್ ಬಿಟ್ರೆ ಆ ರೇಂಜ್ಗೆ ಕ್ರೇಜ್ ಇರುವ ಮತ್ತೊಬ್ಬ ನಟ ದಳಪತಿ ವಿಜಯ್. ಹಿಟ್ ಸಿನಿಮಾಗಳಿಂದ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ವಿಜಯ್ ಶೀಘ್ರದಲ್ಲೇ ತಮಿಳುನಾಡು ರಾಜಕೀಯರಂಗ ಪ್ರವೇಶ ಮಾಡ್ತಾರೆ ಎನ್ನುವ ಗುಸುಗುಸು ಕಾಲಿವುಡ್ನಲ್ಲಿ ಶುರುವಾಗಿದೆ. 2026 ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈಗಾಗಲೇ ಅಭಿಮಾನಿಗಳ ಪ್ರೀತಿಯ 'ಮಾಸ್ಟರ್' ಕಾರ್ಯಾಚರಣೆ ಶುರು ಮಾಡಿದ್ದಾರೆ ಎನ್ನಲಾಗ್ತಿದೆ.
ಇತ್ತೀಚಿಗೆ ವಿಜಯ್ ತಮಿಳುನಾಡಿನ ಹಲವೆಡೆ ಕಲ್ಯಾಣ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ವಿಶ್ವ ಹಸಿವು ದಿನದ ಅಂಗವಾಗಿ ನಟ ವಿಜಯ್ ಕೇಂದ್ರ ಸರ್ಕಾರ ಎಲ್ಲರಿಗೂ ಆಹಾರ ನೀಡಬೇಕು ಎಂದಿದ್ದರು. ಅಲ್ಲದೆ ತಮಿಳುನಾಡಿನ ಹಲವೆಡೆ ಅನ್ನದಾನ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಇನ್ನೊಂದೆಡೆ ಕಡೆ, ಹಲವು ರಾಜಕೀಯ ಮುಖಂಡರ ಹುಟ್ಟುಹಬ್ಬ ಸಂಭ್ರಮದಲ್ಲಿ ದಳಪತಿ ಪಾಲ್ಗೊಳ್ಳುತ್ತಿದ್ದಾರೆ.

ಇತ್ತೀಚೆಗೆ, 234 ವಿಧಾನಸಭಾ ಕ್ಷೇತ್ರಗಳಲ್ಲಿ 10 ನೇ ತರಗತಿ ಮತ್ತು ಸೆಕೆಂಡ್ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಜೂನ್ 17ರಂದು ಸನ್ಮಾನಿಸಲು ಮುಂದಾಗಿದ್ದಾರೆ. ಚೆನ್ನೈ ನೀಲಗಿರಿಯ ಆರ್ಕೆ ಕನ್ವೆನ್ಷನ್ ಸೆಂಟರ್ನಲ್ಲಿ ಈ ಕಾರ್ಯಕ್ರಮಕ್ಕೆ ದೊಡ್ಡ ಮಟ್ಟದಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ. ವಿಜಯ್ ಪೀಪಲ್ಸ್ ಮೂವ್ ಮೆಂಟ್ ವಿದ್ಯಾರ್ಥಿಗಳಿಗೆ ಬಹುಮಾನದ ಜೊತೆಗೆ ನಗದು ಪ್ರೋತ್ಸಾಹಧನವನ್ನೂ ನೀಡುವುದಾಗಿ ಈಗಾಗಲೇ ಘೋಷಿಸಿದೆ.
ವಿಜಯ್ ಪೊಲಿಟಿಕಲ್ ಎಂಟ್ರಿ?
ರಾಜಕೀಯರಂಗ ಸೇರುವ ಬಗ್ಗೆ ಈವರೆಗೆ ನಟ ವಿಜಯ್ ಎಲ್ಲೂ ಮಾತನಾಡಿಲ್ಲ. ಆದರೆ ತಮ್ಮ ಅಭಿಮಾನಿ ಸಂಘಗಳ ಮೂಲಕ ಜನರನ್ನು ತಲುಪುವ ಪ್ರಯತ್ನ ಮಾಡುತ್ತಿದ್ದಾರೆ. ಕೆಲ ದಿನಗಳಿಂದ ವಿಜಯ್ ಚಟುವಟಿಕೆಗಳನ್ನು ಗಮನಿಸಿದರೆ ರಾಜಕೀಯರಂಗದತ್ತ ಗಮನ ಹರಿಸುತ್ತಿರುವಂತೆ ಕಾಣುತ್ತಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಅದಕ್ಕಾಗಿಯೇ 234 ಕ್ಷೇತ್ರಗಳಲ್ಲಿ ಟಾಪರ್ಗಳಿಗೆ ಸನ್ಮಾನ ಮಾಡುವುದಾಗಿ ಘೋಷಿಸಿದ್ದಾರೆ ಎನ್ನಲಾಗ್ತಿದೆ. ಕ್ಷೇತ್ರ ಎನ್ನುವ ಪದವನ್ನು ಪ್ರಸ್ತಾಪಿಸಿರುವುದು ಕೆಲವರ ಅಚ್ಚರಿಗೆ ಕಾರಣವಾಗಿದೆ.

2026ರ ಚುನಾವಣೆ ಟಾರ್ಗೆಟ್?
ವಿಜಯ್ ತಮ್ಮ ಅಭಿಮಾನಿ ಬಳಗವನ್ನು ಸೇರಿಸಿ ವಿಜಯ್ ಪೀಪಲ್ಸ್ ಫೋರಂ ಮಾಡಿದ್ದಾರೆ. ಇಲ್ಲಿರಲ್ಲಿ ಮೀನುಗಾರರು, ಮಹಿಳೆಯರು, ವಿದ್ಯಾರ್ಥಿ, ಕಾರ್ಮಿಕರು ಸೇರಿ ಒಟ್ಟು 10 ತಂಡಗಳಿವೆ. ಈ ಹತ್ತು ತಂಡಗಳ ಮೂಲಕ 2026ರ ಚುನಾವಣೆಯ ಗುರಿಯೊಂದಿಗೆ 234 ಕ್ಷೇತ್ರಗಳಲ್ಲಿ ವಿಜಯ್ ತಮ್ಮ ಚಟುವಟಿಕೆಗಳನ್ನು ವಿಸ್ತರಿಸಲಿದ್ದಾರೆ ಎನ್ನಲಾಗ್ತಿದೆ. ಈ ಹಿಂದೆ ಕೂಡ ವಿಜಯ್ ಪೊಲಿಟಿಕಲ್ ಎಂಟ್ರಿ ಬಗ್ಗೆ ಗುಸುಗುಸು ಕೇಳಿಬಂದಿತ್ತು. ಆದರೆ ಅವರು ಮಾತ್ರ ಮೌನವಾಗಿಯೇ ಇದ್ದಾರೆ.
ಮಾಸ್ ಲೀಡರ್ ಕೊರತೆ
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಹಾಗೂ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅಗಲಿಕೆಯ ನಂತರ ಒಬ್ಬ ಮಾಸ್ ಲೀಡರ್ ಕೊರತೆ ಅಲ್ಲಿನ ರಾಜಕೀಯರಂಗದಲ್ಲಿ ಗೋಚರಿಸುತ್ತಿದೆ. ರಜನಿಕಾಂತ್ ರಾಜಕೀಯ ಪ್ರವೇಶಿಸುವುದಾಗಿ ಹೇಳಿ ಹಿಂದೇಟು ಹಾಕಿದ್ದರು. ಕಮಲ್ ಹಾಸನ್ ಪಕ್ಷ ಕಟ್ಟಿದರೂ ಪ್ರಯೋಜನವಾಗಲಿಲ್ಲ. ದಳಪತಿ ವಿಜಯ್ ರಾಜಕೀಯ ಅಖಾಡಕ್ಕೆ ಧುಮುಕಿದರೆ ಮುಖ್ಯಮಂತ್ರಿ ಆಗುವ ಎಲ್ಲಾ ಸಾಧ್ಯತೆ ಇದೆ ಎನ್ನಲಾಗ್ತಿದೆ. ಹಾಗಾಗಿಯೇ ವಿಜಯ್ ನಡೆಯನ್ನು ಎಲ್ಲರೂ ಗಮನಿಸುತ್ತಿದ್ದಾರೆ.

ತಂದೆ ವಿರುದ್ಧ ತಿರುಗಿಬಿದ್ದಿದ್ದ ವಿಜಯ್
ವಿಜಯ್ ತಂದೆ ಎಸ್.ಎ. ಚಂದ್ರಶೇಖರ್ ನಿರ್ದೇಶಕರಾಗಿ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದರು. ಎಸ್.ಎ. ಚಂದ್ರಶೇಖರ್ 2 ವರ್ಷಗಳ ಹಿಂದೆ 'ಆಲ್ ಇಂಡಿಯಾ ದಳಪತಿ ವಿಜಯ್ ಮಕ್ಕಲ್ ಇಯಾಕ್ಕಮ್' ಎನ್ನುವ ಪಕ್ಷವನ್ನು ರಿಜಿಸ್ಟರ್ ಮಾಡಿಸಿದ್ದರು. ವಿಜಯ್ ಅಭಿಮಾನಿಗಳು ಈ ಬೆಂಬಲ ಸೂಚಿಸಬೇಕು ಎಂದು ತಂದೆ ಹೇಳಿದ್ದರು. ಆದರೆ ಇದಕ್ಕೆ ಸ್ವತಃ ವಿರೋಧ ವ್ಯಕ್ತಪಡಿಸಿದ್ದರು. "ಈಗ ರಿಜಿಸ್ಟರ್ ಆಗಿರುವ ಪಕ್ಷಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಈ ಪಾರ್ಟಿ ಜೊತೆ ನನ್ನ ಹೆಸರು ಸೇರಿಸಿದ್ದರೆ ಹಾಗೂ ಫೋಟೋ ಬಳಸಿಕೊಂಡರೆ, ಅದು ತಪ್ಪು ದಾರಿಗೆ ಎಳೆದಂತೆ. ಇದರ ಬಗ್ಗೆ ನಾನು ಕ್ರಮ ಕೈಗೊಳ್ಳುವೆ. ನನ್ನ ತಂದೆ ಈ ಪಕ್ಷ ಸ್ಥಾಪಿಸಿರುವುದರ ಬಗ್ಗೆ ನನಗೆ ಮಾಧ್ಯಮಗಳಿಂದ ತಿಳಿದು ಬಂತು" ಎಂದಿದ್ದರು.


Click it and Unblock the Notifications











