twitter
    For Quick Alerts
    ALLOW NOTIFICATIONS  
    For Daily Alerts

    ಪ್ರಶಾಂತ್ ನೀಲ್‌ಗೆ ಕಾಯುವಂತೆ ಹೇಳಿದ ತೆಲುಗು ಸೂಪರ್ ಸ್ಟಾರ್‌ಗಳು!

    By ರವೀಂದ್ರ ಕೊಟಕಿ
    |

    ಪ್ರಸ್ತುತ ಪ್ರಶಾಂತ್ ನೀಲ್ ಅವರ ಫೋಕಸ್ 'ಕೆಜಿಎಫ್-2' ಮತ್ತು 'ಸಲಾರ್' ಗಿಂತ ಹೆಚ್ಚಾಗಿ ತೆಲುಗಿನ ಸೂಪರ್ ಸ್ಟಾರ್ ಗಳ ಕಾಲ್ ಷೀಟ್ ಪಡೆಯುವುದರ ಮೇಲೆ ಹೆಚ್ಚಾಗಿದೆ. ಇದೇ ಕ್ರಮದಲ್ಲಿ ಒಂದು ರೌಂಡ್ ಎಲ್ಲಾ ಸೂಪರ್ ಸ್ಟಾರ್ ಗಳ ಜೊತೆ ಮಾತುಕತೆ ಪ್ರಶಾಂತ್ ನೀಲ್ ಮಾಡಿ ಮುಗಿಸಿದ್ದಾರೆ.

    ಇದೇ ಕ್ರಮದಲ್ಲಿ, ವಿಜಯದಶಮಿ ದಿನದಂದು ಮೆಗಾಸ್ಟಾರ್ ಚಿರಂಜೀವಿ ಮನೆಯಲ್ಲಿ ಪ್ರಶಾಂತ್ ಅವರಿಗೆ ಭೂರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಪ್ರಶಾಂತ್ ನೀಲ್ ಜೊತೆಗೆ ನಿರ್ಮಾಪಕ ಡಿವಿವಿ ದಾನಯ್ಯ ಕೂಡ ಕೂಡ ಊಟದ ಸಮಾರಂಭದ ಭಾಗವಾಗಿದ್ದರು. ಆನಂತರ ಚಿರಂಜೀವಿ, ರಾಮ್ ಚರಣ್ ತೇಜ ಜೊತೆ ನಿಂತು ಪ್ರಶಾಂತ್ ನೀಲ್ ತೆಗೆಸಿಕೊಂಡಿದ್ದ ಫೋಟೋ ಕೂಡ ವೈರಲ್ ಆಯಿತು. ರಾಮ್ ಚರಣ್ ತೇಜ ಅವರ 'RC 17' ಪ್ರಶಾಂತ್ ನೀಲ್ ನಿರ್ದೇಶನ ಮಾಡುವುದು ಬಹುತೇಕ ಖಚಿತ ಅಂತ ಎಲ್ಲೆಡೆ ಸುದ್ದಿಯಾಯಿತು. ಆದರೆ ಈಗ ಇದರ ಬಗ್ಗೆ ಒಂದು ಆಸಕ್ತಿದಾಯಕ ಅಪ್ಡೇಟ್ ಹೊರಬಿದ್ದಿದೆ. ಪ್ರಸ್ತುತ ರಾಮ್ ಚರಣ್ ತೇಜ ರಾಜಮೌಳಿಯವರ 'ಆರ್‌ಆರ್‌ಆರ್' ಚಿತ್ರದಲ್ಲಿ ಅಭಿನಯಿಸುತ್ತಿದ್ದು. ಇದರೊಂದಿಗೆ ಮತ್ತೊಬ್ಬ ಖ್ಯಾತ ನಿರ್ದೇಶಕ ಶಂಕರ್ ಅವರ ನಿರ್ದೇಶನದ ಚಿತ್ರದಲ್ಲಿ ಕೂಡ ನಟಿಸುತ್ತಿದ್ದಾರೆ.

    ಇವೆರಡು ಹೊರತಾಗಿ ಮತ್ತೊಂದು ಚಿತ್ರಕ್ಕೆ ಈಗಾಗಲೇ ರಾಮಚರಣ್ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಚಿತ್ರವನ್ನು 'ಜೆರ್ಸಿ' ನಿರ್ದೇಶಕ ಗೌತಮ್ ತಿನ್ನನೂರಿ ನಿರ್ದೇಶಿಸುತ್ತಿದ್ದಾರೆ. ಈ ಬಗ್ಗೆ ಖುದ್ದು ರಾಮ್ ಚರಣ್ ತೇಜ ಅವರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಷಯವನ್ನು ಹೊರಹಾಕಿದ್ದಾರೆ.

    ಈ ಚಿತ್ರದ ನಂತರ 'RC 17' ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಡಿತ್ತು. ಆದರೆ ಈ ವಿಚಾರದಲ್ಲಿ ಈಗ ಒಂದು ಹೊಸದೊಂದು ಸುದ್ದಿ ಟಾಲಿವುಡ್ ಅಂಗಳದಿಂದ ಹೊರಬಿದ್ದಿದೆ.

    ರಾಮ್ ಚರಣ್ ತೇಜ ಅವರ ಕಡೆಯಿಂದ ಹೊರಬಿದ್ದಿರುವ ಸಂಗತಿಯೆಂದರೆ "ಹೌದು, ನಾನು ಪ್ರಶಾಂತ್ ನೀಲ್ ಅವರ ಜೊತೆಯಲ್ಲಿ ವಿಜಯದಶಮಿ ದಿನದಂದು ಡಿನ್ನರ್ ಮಾಡಿದ್ದು ನಿಜ. ಆದರೆ ಸದ್ಯಕ್ಕೆ ಪ್ರಶಾಂತ್ ನೀಲ್ ಅವರ ನಿರ್ದೇಶನದಲ್ಲಿ ಸಿನಿಮಾ ಮಾಡುವ ಯಾವುದೇ ಆಲೋಚನೆಗೆ ನಾನು ಇನ್ನೂ ಬಂದಿಲ್ಲ" ಅಂತ ಸ್ಪಷ್ಟೀಕರಣ ಕೊಟ್ಟಿದ್ದಾರೆ.

    ಎನ್‌ಟಿಆರ್ ಸಿನಿಮಾ ಕಥೆ ಎಲ್ಲಿಗೆ ಬಂತು?

    ಎನ್‌ಟಿಆರ್ ಸಿನಿಮಾ ಕಥೆ ಎಲ್ಲಿಗೆ ಬಂತು?

    'ಸಾಲರ್' ಚಿತ್ರ ಕೈಗೆತ್ತಿಕೊಳ್ಳುವ ಮೊದಲೇ ಪ್ರಶಾಂತ್ ನೀಲ್, ಎನ್‌ಟಿಆರ್ ಅವರ ಚಿತ್ರ ಮಾಡಬೇಕಿತ್ತು. ಆ ಚಿತ್ರಕ್ಕೆ ಮೈತ್ರಿ ಮೂವೀಸ್ ಅವರು ಬಂಡವಾಳ ಹೂಡುವುದು ಕೂಡ ಖಚಿತವಾಗಿತ್ತು. ಆದರೆ ಇದುವರೆಗೂ ಈ ಚಿತ್ರ ಸೆಟ್ ಕಡೆಗೆ ಮುಖ ಮಾಡಿಲ್ಲ ಜೊತೆಗೆ ಈ ಚಿತ್ರಕ್ಕೆ ಸಂಬಂಧಿಸಿದ ಯಾವುದೇ ಅಪ್ಡೇಟ್ಸ್ ಎರಡು ಕಡೆಯಿಂದ ಬರುತ್ತಿಲ್ಲ. ಸದ್ಯಕ್ಕೆ ಮೈತ್ರಿ ಮೂವೀಸ್ ಮತ್ತು ಎನ್‌ಟಿಆರ್ ಇಬ್ಬರು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. 'ಆರ್ ಆರ್‌ಆರ್‌ಆರ್' ನಲ್ಲಿ ಬಿಜಿಯಾಗಿರುವ ಜೂನಿಯರ್ ಎನ್‌ಟಿಆರ್, ಈ ಚಿತ್ರದ ನಂತರ ಕೊರಟಾಲ ಶಿವ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರ ನಂತರ ಪ್ರಶಾಂತ್ ನೀಲ್ ಅವರ ಚಿತ್ರ ಇರುತ್ತದೆ ಅಂತ ಹೇಳಲಾಗುತ್ತಿದ್ದು ಆದರೆ ಅಧಿಕೃತ ಮಾಹಿತಿ ಮಾತ್ರ ಇನ್ನೂ ಹೊರಬಿದ್ದಿಲ್ಲ.

    ಹೊರಗಿನ ನಿರ್ದೇಶಕರುಗಳಿಗೆ ಮಹೇಶ್ ಬಾಬು ಕೊಡಲ್ಲ ಕಾಲ್ ಶೀಟ್

    ಹೊರಗಿನ ನಿರ್ದೇಶಕರುಗಳಿಗೆ ಮಹೇಶ್ ಬಾಬು ಕೊಡಲ್ಲ ಕಾಲ್ ಶೀಟ್

    ಹಾಗೆ ನೋಡುವುದಾದರೆ ಪ್ರಶಾಂತ್ ನೀಲ್ ತೆಲುಗು ಚಿತ್ರರಂಗದಲ್ಲಿ ಮೊದಲು ಟಾರ್ಗೆಟ್ ಮಾಡಿದ್ದು ಮಹೇಶ್ ಬಾಬು ಅವರನ್ನು. 'ಕೆಜಿಎಫ್-1' ಬಿಡುಗಡೆಯ ನಂತರ ಮಹೇಶ್ ಬಾಬು ಅವರನ್ನು ಭೇಟಿಯಾದ ಪ್ರಶಾಂತ್ ನೀಲ್ ಅವರು ಸೂಪರ್ ಸ್ಟಾರ್ ಗೆ ಕಥೆಯನ್ನು ಹೇಳಿದ್ದಾರೆ. ಕಥೆ ಕೇಳಿದ ಮಹೇಶ್ ಬಾಬು ಕಡೆಯಿಂದ ಎಸ್ ಅಥವಾ ನೋ ಎರಡು ಕೂಡ ಬಂದಿಲ್ಲ. ಇದೇ ಕ್ರಮದಲ್ಲಿ ಪ್ರಶಾಂತ್ ನೀಲ್ ಅವರು ಅದೇ ಕಥೆಯನ್ನು ಹಿಡಿದು ಜೂನಿಯರ್ ಎನ್‌ಟಿಆರ್ ಅವರನ್ನು ಭೇಟಿಯಾಗಿ ಕಥೆ ಹೇಳಿದ್ದು ಮತ್ತು ಆ ಸಮಯದಲ್ಲಿ ಅವರಿಂದ ಗ್ರೀನ್ ಸಿಗ್ನಲ್ ಪಡೆದುಕೊಂಡಿದ್ದು. ಪ್ರಸ್ತುತ ನಿರ್ದೇಶಕರ ಆಯ್ಕೆಯ ವಿಚಾರದಲ್ಲಿ ಮಹೇಶ್ ಬಾಬು ಸಿಕ್ಕಾಪಟ್ಟೆ ಚೂಸಿಯಾಗಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ಮುರುಗದಾಸ್ ಅವರ 'ಸ್ಪೈಡರ್' ಚಿತ್ರದ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಹೊರಗಿನ ನಿರ್ದೇಶಕರುಗಳಿಗೆ ಮನ್ನಣೆ ಹಾಕುವುದನ್ನು ಮಹೇಶ್ ಬಾಬು ಸಂಪೂರ್ಣವಾಗಿ ಕೈಬಿಟ್ಟಿದ್ದಾರೆ. ಇದೇ ಕ್ರಮದಲ್ಲಿ ಈಗಾಗಲೇ ಮಣಿರತ್ನಂ ಮತ್ತು ಶಂಕರ್ ಚಿತ್ರಗಳಿಗೆ ಕೂಡ ರೆಡ್ ಸಿಗ್ನಲ್ ಕೊಟ್ಟಿದ್ದಾರೆ. ಅಲ್ಲದೆ ಬಾಲಿವುಡ್ ನಿಂದ ಬಂದ 'ರಾಮಾಯಣ'ದ ಆಫರನ್ನು ಕೂಡ ತಿರಸ್ಕರಿಸಿದ್ದಾರೆ. ಪ್ರಸ್ತುತ 'ಗೀತ ಗೋವಿಂದಂ' ನಿರ್ದೇಶಕ ಪರಶುರಾಮ್ ಅವರ 'ಸರ್ಕಾರ್ ವಾರಿ ಪಾಟ'ದಲ್ಲಿ ನಟಿಸುತ್ತಿದ್ದು ಚಿತ್ರ ಜನವರಿ 14ರಂದು ಬಿಡುಗಡೆಯಾಗುತ್ತಿದೆ. ಇದರ ನಂತರ ನಿರ್ದೇಶಕ ತ್ರಿವಿಕ್ರಮ್ ಅವರ ಚಿತ್ರದಲ್ಲಿ ನಟಿಸುತ್ತಿರುವ ಮಹೇಶ್ ಬಾಬು

    ತದನಂತರ ಎಸ್ ಎಸ್ ರಾಜಮೌಳಿಯವರ ಇಂಡಿಯಾಸ್ ಬಿಗ್ಗೆಸ್ಟ್ ಆಕ್ಷನ್ ಅಡ್ವೆಂಚರ್ಸ್ ಮೂವಿಗಾಗಿ ಒಂದು ವರ್ಷದ ಕಾಲ್ ಶೀಟ್ ಮೀಸಲಿಟ್ಟಿದ್ದಾರೆ. ಅಲ್ಲಿಗೆ ಮಹೇಶ್ ಕಡೆಯಿಂದ ಸದ್ಯಕ್ಕೆ ಪ್ರಶಾಂತ್ ನೀಲ್ ಚಿತ್ರಕ್ಕೆ ಎಸ್ ಹೇಳುವ ಸಾಧ್ಯತೆಗಳಿಲ್ಲ.

    ಅಲ್ಲು ಅರ್ಜುನ್ ಸಿನಿಮಾ ಎಲ್ಲಿಗೆ ಬಂತು?

    ಅಲ್ಲು ಅರ್ಜುನ್ ಸಿನಿಮಾ ಎಲ್ಲಿಗೆ ಬಂತು?

    ಟಾಲಿವುಡ್ ನ ಎಲ್ಲಾ ಸೂಪರ್ ಸ್ಟಾರ್ ಗಳ ಜೊತೆಗೆ ಒಂದು ಸುತ್ತಿನ ಮಾತುಕತೆ ಮಾಡಿ ಮುಗಿಸಿರುವ ಪ್ರಶಾಂತ್ ನೀಲ್ ಇದೇ ಕ್ರಮದಲ್ಲಿ ಅಲ್ಲು ಅರ್ಜುನ್ ಅವರ ಜೊತೆಯೂ ಕೂಡ ಮಾತುಕತೆ ನಡೆಸಿ ಕಥೆಯ ಮೂಲಕ ಇಂಪ್ರೆಸ್ ಮಾಡಿದ್ದಾರೆ. ಪ್ರಸ್ತುತ 'ಪುಷ್ಪ' ಚಿತ್ರದ ಮೇಲೆ ಪೂರ್ತಿಯಾಗಿ ಫೋಕಸ್ ಆಗಿರುವ ಅಲ್ಲು ಅರ್ಜುನ್ ಈ ಚಿತ್ರದ ನಂತರ ಯುವ ನಿರ್ದೇಶಕ ವೇಣು ಶ್ರೀರಾಮ್ ನಿರ್ದೇಶನದ 'ಐಕಾನ್' ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದು ಅಲ್ಲದೆ ಖ್ಯಾತ ನಿರ್ದೇಶಕ ಕೊರಟಾಲ ಶಿವ ಅವರ ಚಿತ್ರ ಕೂಡ ಮುಂದಿನ ಯುಗಾದಿ ದಿನದಿಂದ ಶುಭಾರಂಭ ಮಾಡಲಿದೆ.ಅಲ್ಲಿಗೆ ಅಲ್ಲು ಅರ್ಜುನ್ ಅವರ ಚಿತ್ರ ಕೂಡ ಸದ್ಯಕ್ಕೆ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ.

    ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿರುವ ಸ್ಟಾರ್ ಗಳು

    ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿರುವ ಸ್ಟಾರ್ ಗಳು

    ಕೈಯಲ್ಲಿ ಎಲ್ಲಾ ಸೂಪರ್ ಸ್ಟಾರ್ ಗಳ ಕಾಲ್ ಷೀಟ್ ಹಿಡಿದಿದ್ದರೂ, ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಲು ತುಂಬಾ ಸಮಯ ಕಾಯುವ ಸ್ಥಿತಿ ಎದುರಾಗಿದೆ. ಇದಕ್ಕೆ ಮುಖ್ಯ ಕಾರಣ ಪ್ರಸ್ತುತ ತೆಲುಗಿನ ಚಿತ್ರಗಳಾದ 'ಆರ್ ಆರ್ ಆರ್' ಮತ್ತು 'ಪುಷ್ಪ' ಭಾರಿ ಬಜೆಟ್ ನಲ್ಲಿ ತಯಾರಾಗಿದ್ದು ಇವುಗಳ ಭವಿಷ್ಯವನ್ನು ಟಾಲಿವುಡ್ ಎದುರು ನೋಡುತ್ತಿದೆ. ಇನ್ನೊಂದೆಡೆ ಪ್ರಶಾಂತ್ ನೀಲ್ ನಿರ್ದೇಶನದ 'ಕೆಜಿಎಫ್2' ಮತ್ತು 'ಸಲಾರ್' ಚಲಚಿತ್ರಗಳ ಭವಿಷ್ಯದ ಮೇಲೆ ಪ್ರಶಾಂತ್ ನೀಲ್ ಅವರ ಮುಂದಿನ ಚಿತ್ರಗಳ ಭವಿಷ್ಯ ಕೂಡ ನಿಂತಿದೆ. ಇದರಲ್ಲಿ ಯಾವ ಚಿತ್ರ ಫ್ಲಾಪ್ ಆದರೂ ಅಥವಾ ಸಾಧಾರಣ ಗಳಿಕೆಯನ್ನು ಕಂಡರೂ ಅದರ ಇಂಪ್ಯಾಕ್ಟ್ ಪ್ರಶಾಂತ್ ನೀಲ್ ನಿರ್ದೇಶಿಸುವ ಮುಂದಿನ ಚಿತ್ರದ ಮೇಲೆ ಬೀಳುತ್ತದೆ. ಹೀಗಾಗಿ ತಕ್ಷಣ ಪ್ರಶಾಂತ್ ನೀಲ್ ಅವರ ಚಿತ್ರಕ್ಕೆ ಕಾಲ್‌ಶೀಟ್ ಕೊಟ್ಟರೆ ಆ ಸ್ಟಾರ್ ನಟರ ಚಿತ್ರಗಳ ಬಿಸಿನೆಸ್ ಮೇಲೆ ಕೂಡ ಅದರ ಪರಿಣಾಮ ಬೀರುತ್ತದೆ. ಹೀಗಾಗಿ ಪ್ರಸ್ತುತ ನಟರು ಅಥವಾ ನಿರ್ಮಾಪಕರು ಕೂಡ ದೊಡ್ಡಮಟ್ಟದ ರಿಸ್ಕ್ ತೆಗೆದುಕೊಳ್ಳುವ ಸ್ಥಿತಿಯಲ್ಲಿಲ್ಲ.

    'ಕೆಜಿಎಫ್ 2', 'ಸಲಾರ್' ಮೇಲೆ ನೀಲ್ ಯಶಸ್ಸು ನಿಂತಿದೆ

    'ಕೆಜಿಎಫ್ 2', 'ಸಲಾರ್' ಮೇಲೆ ನೀಲ್ ಯಶಸ್ಸು ನಿಂತಿದೆ

    ಪ್ರಸ್ತುತ ಟಾಲಿವುಡ್ ಅಂಗಳದಿಂದ ಕೇಳಿಬರುತ್ತಿರುವ ಮಾತು 'ಕೆಜಿಎಫ್ -2, 'ಸಲಾರ್' ಭರ್ಜರಿ ಯಶಸ್ಸು ಕಂಡರೆ ಎಲ್ಲಾ ಸ್ಟಾರ್ ಗಳ ಚಿತ್ರಗಳು ಕೂಡ ಮೇಲಿಂದ ಮೇಲೆ ನಿರ್ಮಾಣಕ್ಕೆ ಸಿದ್ಧಗೊಳ್ಳುತ್ತವೆ. ಒಂದು ವೇಳೆ ಈ ಎರಡು ಚಿತ್ರಗಳ ರಿಸಲ್ಟ್‌ನಲ್ಲಿ ಏರುಪೇರಾದರೂ ಇದರಲ್ಲಿ ಯಾವೊಂದು ಚಿತ್ರವೂ ಸೆಟ್ ಏರುವುದಿಲ್ಲ'. ಟಾಲಿವುಡ್ ನಲ್ಲಿ ನೆಲೆಗೊಳ್ಳಲು ದೊಡ್ಡ ಮಟ್ಟದಲ್ಲಿ ಸ್ಕೆಚ್ ಹಾಕಿ ನಿಂತಿರುವ ಪ್ರಶಾಂತ್ ನೀಲ್ ಅವರ ಟಾಲಿವುಡ್ ಭವಿಷ್ಯ 'ಕೆಜಿಎಫ್-2', 'ಸಲಾರ್' ಚಿತ್ರಗಳ ಯಶಸ್ಸಿನ ಮೇಲೆ ನಿಂತಿದೆ.

    English summary
    Telugu top heroes not yet agreed to make movie with Prashanth Neel. Now Prashanth Neel working with Prabhas in Salaar.
    Saturday, October 23, 2021, 18:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X