ಬಾಲಿವುಡ್ ನಟ ಶಾರುಖ್ ಖಾನ್ ಸಿನಿಮಾದಲ್ಲಿ ಸೌತ್ ಸ್ಟಾರ್ ದಳಪತಿ ವಿಜಯ್?
ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಅನೇಕ ವರ್ಷಗಳ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಶಾರುಖ್ ಸದ್ಯ ಪಠಾಣ್ ಸಿನಿಮಾದ ಚಿತ್ರೀಕರಣದ ನಡುವೆ ಈಗ ಮತ್ತೊಂದು ಬಹುನಿರೀಕ್ಷೆಯ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ಸಾರಥ್ಯದಲ್ಲಿ ಮೂಡಿಬರುತ್ತಿರುವ ಹೊಸ ಸಿನಿಮಾದಲ್ಲಿ ಶಾರುಖ್ ಬ್ಯುಸಿಯಾಗಿದ್ದಾರೆ. ಈಗಾಗಲೇ ಅಟ್ಲೀ ನಿರ್ದೇಶನದ ಹೊಸ ಸಿನಿಮಾ ಪ್ರಾರಂಭವಾಗಿದ್ದು ಚಿತ್ರದ ಬಗ್ಗೆ ದಿನಕ್ಕೊಂದು ಸುದ್ದಿ ಹರಿದಾಡುತ್ತಿದೆ.
ಅಟ್ಲೀ ಮತ್ತು ಶಾರುಖ್ ಕಾಂಬಿನೇಷನ್ನ ಹೊಸ ಸಿನಿಮಾ ಸದ್ಯ ಪುಣೆಯಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಚಿತ್ರದಲ್ಲಿ ಶಾರುಖ್ಗೆ ಜೋಡಿಯಾಗಿ ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ನಯನತಾರಾ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ನಯನತಾರಾ ಕೂಡ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು ಭರ್ಜರಿಯಾಗಿ ಚಿತ್ರೀಕರಣ ನಡೆಯುತ್ತಿದೆ.
ಅಂದಹಾಗೆ ಶಾರುಖ್ ಮತ್ತು ನಿರ್ದೇಶಕ ಅಟ್ಲೀ ಸಿನಿಮಾದಲ್ಲಿ ಆ ಸ್ಟಾರ್ ಕಲಾವಿದ ನಟಿಸುತ್ತಿದ್ದಾರೆ, ಇವರು ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಅನೇಕ ಕಲಾವಿದರ ಹೆಸರು ಕೇಳಿಬರುತ್ತಿದೆ. ಈಗಾಗಲೇ ನಟಿ ಪ್ರಿಯಮಣಿ, ಸೌತ್ ಸ್ಟಾರ್ ರಾಣಾ ದಗ್ಗುಬಾಟಿ ಹೆಸರು ಬಲವಾಗಿ ಕೇಳಿಬರುತ್ತಿದೆ. ಪ್ರಿಯಮಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರೆ ನಟ ರಾಣಾ ದಗ್ಗುಬಾಟಿ ವಿಲನ್ ಆಗಿ ಅಬ್ಬರಿಸಲಿದ್ದಾರೆ ಎನ್ನಲಾಗುತ್ತಿದೆ. ಈ ನಡುವೆ ಈಗ ಮತ್ತೋರ್ವ ಖ್ಯಾತ ನಟನ ಹೆಸರು ಕೇಳಿಬರುತ್ತಿದೆ.

ತಮಿಳು ಸೂಪರ್ ಸ್ಟಾರ್ ದಳಪತಿ ವಿಜಯ್, ಶಾರುಖ್ ಖಾನ್ ನಟನೆಯ ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತು ಬಾಲಿವುಡ್ ಅಂಗಳದಲ್ಲಿ ವೈರಲ್ ಆಗಿದೆ. ಚಿತ್ರದ ಅತಿಥಿ ಪಾತ್ರದಲ್ಲಿ ವಿಜಯ್ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಅಂದಹಾಗೆ ನಿರ್ದೇಶಕ ಅಟ್ಲೀ ಈಗಾಗಲೇ ವಿಜಯ್ ಜೊತೆ ಮೂರು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಹಾಗಾಗಿ ಅಟ್ಲೀ ಮತ್ತು ವಿಜಯ್ ನಡುವೆ ಉತ್ತಮ ಬಾಂಧವ್ಯವಿದೆ. ಇದೇ ಪ್ರೀತಿ- ವಿಶ್ವಾಸಕ್ಕೆ ದಳಪತಿ ವಿಜಯ್, ಶಾರುಖ್ ಸಿನಿಮಾದಲ್ಲಿ ಗೆಸ್ಟ್ ಆಗಿ ಕಾಣಿಸಿಕೊಳ್ಳಲು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಆದರೆ ಈ ಬಗ್ಗೆ ಸಿನಿಮಾ ತಂಡ ಯಾವುದೇ ಅಧಿಕೃತ ಮಾಹಿತಿ ಬಹಿರಂಗ ಪಡಿಸಿಲ್ಲ. ಆದರೆ ವಿಜಯ್ ಮತ್ತು ಶಾರುಖ್ನನ್ನು ಒಂದೇ ಸಿನಿಮಾದಲ್ಲಿ ನೋಡಲು ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಒಂದು ವೇಳೆ ಈ ಸುದ್ದಿ ನಿಜವೇ ಆಗಿದ್ದರೇ ಬಾಲಿವುಡ್ ಮತ್ತು ಸೌತ್ ಸೂಪರ್ ಸ್ಟಾರ್ ಇಬ್ಬರನ್ನು ಒಂದೇ ಸಿನಿಮಾದಲ್ಲಿ ಕಣ್ತುಂಬಿಕೊಳ್ಳುವ ಅವಕಾಶ ಚಿತ್ರಾಭಿಮಾನಿಗಳಿಗೆ ಸಿಗಲಿದೆ.
ಅಂದಹಾಗೆ ಈ ಮೊದಲು ವಿಜಯ್ ಮತ್ತು ಶಾರುಖ್ ಖಾನ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಪ್ರಶಸ್ತಿ ಸಮಾರಂಭ ಕಾರ್ಯಕ್ರಮದಲ್ಲಿ ಇಬ್ಬರು ಒಟ್ಟಿಗೆ ಕಾಣಿಕೊಂಡಿದ್ದರು. ಅಷ್ಟೆಯಲ್ಲ ಇಬ್ಬರೂ ವೇದಿಕೆ ಮೇಲೆ ಹೆಜ್ಜೆ ಹಾಕುವ ಮೂಲಕ ಅಭಿಮಾನಿಗಳನ್ನು ಸಂಭ್ರಮ ಹೆಚ್ಚಿಸಿದ್ದರು. ಇದೀಗ ತೆರೆಮೇಲೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ ಎಂದರೇ ಇದಕ್ಕಿಂತ ಸಂಭ್ರಮ ಅಭಿಮಾನಿಗಳಿಗೆ ಬೇರೇನು ಇಲ್ಲ.
ಇನ್ನು ವಿಶೇಷ ಎಂದರೆ ಶಾರುಖ್ ಮತ್ತು ಅಟ್ಲೀ ಸಿನಿಮಾಗೆ 'ಜವಾನ್' ಎಂದು ಟೈಟಲ್ ಇಡಲಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಸಿನಿಮಾತಂಡ ಎಲ್ಲಿಯೂ ಹೇಳಿಕೊಂಡಿಲ್ಲ. ಚಿತ್ರಕ್ಕೆ ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದ್ರನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಚಿತ್ರದ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಸಧ್ಯದಲ್ಲೇ ರಿವೀಲ್ ಆಗುವ ಸಾಧ್ಯತೆ ಇದ್ದು, ಇನ್ನು ಯಾರೆಲ್ಲ ನಟಿಸಲಿದ್ದಾರೆ, ಏನೆಲ್ಲ ವಿಶೇಷತೆಗಳಿವೆ ಎನ್ನುವ ಕುತೂಹಲಕ್ಕೆ ತೆರೆಬೀಳಲಿದೆ.


Click it and Unblock the Notifications











