ಅಧಿಕೃತ ಘೋಷಣೆಗೂ ಮುನ್ನ ರಜನಿಕಾಂತ್- ಲೋಕೇಶ್ ಕನಕರಾಜ್ ಸಿನಿಮಾ ಟೈಟಲ್ ಲೀಕ್?
ಸೂಪರ್ ರಜನಿಕಾಂತ್ ನಟನೆಯ 'ವೆಟ್ಟೆಯಾನ್' ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಮತ್ತೊಂದು ಕಡೆ ತಲೈವಾ ಮುಂದಿನ ಚಿತ್ರಕ್ಕೆ ಲೋಕೇಶ್ ಕನಕರಾಜ್ ತಯಾರಿ ನಡೆಸುತ್ತಿದ್ದಾರೆ. ಏಪ್ರಿಲ್ 22ಕ್ಕೆ ಟೈಟಲ್ ಸಮೇತ ಸಿನಿಮಾ ಟೈಟಲ್ ಘೋಷಣೆ ಮಾಡುವುದಾಗಿ ಚಿತ್ರತಂಡ ಹೇಳಿದೆ. ಸದ್ಯ ರಜನಿಕಾಂತ್- ಲೋಕೇಶ್ ಕನಕರಾಜ್ ಸಿನಿಮಾ ಟೈಟಲ್ ಏನಿರಬಹುದು ಎನ್ನುವ ಚರ್ಚೆ ಶುರುವಾಗಿದೆ.
'ಕೈದಿ', 'ಮಾಸ್ಟರ್', 'ವಿಕ್ರಂ', 'ಲಿಯೋ' ರೀತಿಯ ಹಿಟ್ ಸಿನಿಮಾಗಳನ್ನು ಲೋಕೇಶ್ ಕನಕರಾಜ್ ಕಟ್ಟಿಕೊಟ್ಟಿದ್ದಾರೆ. ಅದೇ ಕಾರಣಕ್ಕೆ ತಲೈವಾ 171 ಸಿನಿಮಾ ಕೂಡ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಲೋಕೇಶ್ ಟೇಕಿಂಗ್ ಸೂಪರ್ ಸ್ಟಾರ್ ಪರ್ಫಾರ್ಮನ್ಸ್ ಸಿಂಕ್ ಆದ್ರೆ ತೆರೆಮೇಲೆ ಮ್ಯಾಜಿಕ್ ಗ್ಯಾರೆಂಟಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ನಿಂದಲೇ ತಲೈವಾ 171 ಸಿನಿಮಾ ಕುತೂಹಲ ಮೂಡಿಸಿದೆ.

ಗೋಲ್ಡ್ ಕೈ ಗಡಿಯಾರಗಳನ್ನು ಬೇಡಿ ರೀತಿ ಹಿಡಿದು ಸನ್ಕ್ಲಾಸ್ ತೊಟ್ಟು ರಜನಿಕಾಂತ್ ಖಡಕ್ ಲುಕ್ನಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್ ಸೂಪರ್ ಹಿಟ್ ಆಗಿದೆ. ಸೂಪರ್ ಸ್ಟಾರ್ ಸ್ಟೈಲ್, ಸ್ವ್ಯಾಗ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಂದಹಾಗೆ 'ಜೈಲರ್' ಸಿನಿಮಾ ನಿರ್ಮಿಸಿದ್ದ ಸನ್ ಪಿಕ್ಚರ್ಸ್ ತಲೈವಾ 171 ಚಿತ್ರಕ್ಕೂ ಬಂಡವಾಳ ಹೂಡುತ್ತಿದೆ. ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ಗಳನ್ನೆಲ್ಲಾ ಬ್ಲಾಕ್ ಮಾಡಿ ಲೋಕೇಶ್ ಕನಕರಾಜ್ ಚಿತ್ರದ ಕಥೆ, ಚಿತ್ರಕಥೆ, ಪ್ರೀ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.
ಮುಂದಿನ ವಾರವೇ ತಲೈವಾ 171 ಸಿನಿಮಾ ಟೀಸರ್ ಶೂಟಿಂಗ್ ನಡೆಯಲಿದೆ ಎಂದು ಕಾಲಿವುಡ್ನಲ್ಲಿ ಚರ್ಚೆ ಆಗುತ್ತಿದೆ. ಇನ್ನು ಚಿತ್ರದ ಟೈಟಲ್ ಏನಿರಬಹುದು ಎನ್ನುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಚಿತ್ರತಂಡ 'ಕಳುಗು' ಎನ್ನುವ ಟೈಟಲ್ ಪರಿಶೀಲನೆಯಲ್ಲಿದೆ ಎನ್ನುವ ಗುಸುಗುಸು ಶುರುವಾಗಿದೆ. 'ಕಳುಗು' ಎಂದರೆ ತಮಿಳಿನಲ್ಲಿ ಹದ್ದು ಅಥವಾ ಗರುಡ ಎನ್ನುವ ಅರ್ಥ ಇದೆ. ಇದೇ ಟೈಟಲ್ ಚಿತ್ರದಲ್ಲಿ ರಜನಿಕಾಂತ್ 40 ವರ್ಷಗಳ ಹಿಂದೆ ಹೀರೊ ಆಗಿ ನಟಿಸಿದ್ದರು.
'ರೇಸ್ ವಿತ್ ದಿ ಡೆವಿಲ್' ಎನ್ನುವ ಹಾಲಿವುಡ್ ಚಿತ್ರದಿಂದ ಪ್ರೇರಣಗೊಂಡು 1981ರಲ್ಲಿ ನಿರ್ದೇಶಕ ಮುತ್ತುರಾಮನ್ 'ಕಳುಗು' ಸಿನಿಮಾ ಕಟ್ಟಿಕೊಟ್ಟಿದ್ದರು. ಆದರೆ ಸಿನಿಮಾ ಬಾಕ್ಸಾಫೀಸ್ನಲ್ಲಿ ಮುಗ್ಗರಿಸಿತ್ತು. ಇದೀಗ ಇದೇ ಟೈಟಲ್ನಲ್ಲಿ ಲೋಕೇಶ್ ಕನಕರಾಜ್ ಒಂದು ಗ್ಯಾಂಗ್ಸ್ಟರ್ ಸಿನಿಮಾ ಮಾಡ್ತಾರೆ ಎನ್ನಲಾಗ್ತಿದೆ. ತಲೈವಾ ಖಡಕ್ ರೋಲ್ನಲ್ಲಿ ಅಬ್ಬರಿಸಲಿದ್ದಾರೆ. ತಲೈವಾ 171 ಸಿನಿಮಾ ಟೈಟಲ್ 'ಕಳುಗು' ಎಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆದರೆ ಈ ಬಗ್ಗೆ ಏಪ್ರಿಲ್ 22ಕ್ಕೆ ಸ್ಪಷ್ಟನೆ ಸಿಗಲಿದೆ.

2012ರಲ್ಲಿ 'ಕಳುಗು' ಟೈಟಲ್ನಲ್ಲಿ ಮತ್ತೊಂದು ತಮಿಳು ಸಿನಿಮಾ ಕೂಡ ಬಂದಿತ್ತು. ಹಾಗಾಗಿ ಮತ್ತದೇ ಟೈಟಲ್ ಬಳಸುವುದು ಅನುಮಾನ ಎನ್ನುವ ವಾದವೂ ಇದೆ. ಈ ಟೈಟಲ್ ಮತ್ತೆ ರಜನಿಕಾಂತ್- ದಳಪತಿ ವಿಜಯ್ ಅಭಿಮಾನಿಗಳ ನಡುವೆ ಕೆಸರೆರಚಾಟಕ್ಕೆ ಕಾರಣವಾಗಬಹುದು ಎನ್ನುವ ಚರ್ಚೆಯೂ ನಡೆದಿದೆ. ಕಾರಣ 'ಜೈಲರ್' ಸಿನಿಮಾ ಆಡಿಯೋ ಲಾಂಚ್ ವೇದಿಕೆಯಲ್ಲಿ ರಜನಿಕಾಂತ್ ಹೇಳಿದ್ದ ಹದ್ದು, ಕಾಗೆ ಕಥೆ.
ಕಾಲಿವುಡ್ ಸೂಪರ್ ಸ್ಟಾರ್ ಯಾರು? ಎಂದ ರಜನಿಕಾಂತ್ ಹಾಗೂ ವಿಜಯ್ ಅಭಿಮಾನಿಗಳ ನಡುವೆ ಭಾರೀ ಚರ್ಚೆ ನಡೆದಿತ್ತು. ಇದೇ ಸಮಯದಲ್ಲಿ ಸೂಪರ್ ಸ್ಟಾರ್ ಟೈಟಲ್ ಬಗ್ಗೆ ತಲೈವಾ ಕಾಗೆ, ಹದ್ದು ಕಥೆ ಹೇಳಿ ಸ್ಪಷ್ಟನೆ ಕೊಡುವ ಪ್ರಯತ್ನ ಮಾಡಿದ್ದರು. ಆದರೆ ಕೆಲವರು ಇದನ್ನು ಬೇರೆ ರೀತಿ ಬಿಂಬಿಸಿ ಮಾತನಾಡಿದರು. ದಳಪತಿಯನ್ನು ಕಾಗೆ ಹೋಲಿಸಿ ರಜನಿಕಾಂತ್ ಮಾತನಾಡಿದ್ದರು ಎಂದಿದ್ದರು. ಹಾಗಾಗಿ ಮತ್ತೆ 'ಕಳುಗು' ಟೈಟಲ್ನಲ್ಲಿ ರಜನಿಕಾಂತ್ ಸಿನಿಮಾ ಮಾಡಿದರೆ ಅದು ತಪ್ಪು ಸಂದೇಶ ಕೊಟ್ಟಂತೆ ಆಗುತ್ತದೆ ಎನ್ನುವುದು ಕೆಲವರ ವಾದ.


Click it and Unblock the Notifications











