ಹೊಂಬಾಳೆ ಹಾದಿಯಲ್ಲಿ ಕೆವಿಎನ್ ಪ್ರೊಡಕ್ಷನ್ಸ್!; ಕಾಲಿವುಡ್ ಸೂಪರ್ ಸ್ಟಾರ್ ಕೊನೆ ಚಿತ್ರಕ್ಕೆ ಬಂಡವಾಳ?
ಕನ್ನಡ ಚಿತ್ರರಂಗದ ಅತಿದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆಗಳಲ್ಲಿ ಕೆವಿಎನ್ ಪ್ರೊಡಕ್ಷನ್ ಕೂಡ ಒಂದು. ಈಗಾಗಲೇ ಬಹುಕೋಟಿ ವೆಚ್ಚದ ಸಾಲು ಸಾಲು ಸಿನಿಮಾಗಳನ್ನು ಸಂಸ್ಥೆ ಕೈಗೆತ್ತಿಕೊಂಡಿದೆ. ಕನ್ನಡ ಬಳಿಕ ಇದೀಗ ಪರಭಾಷೆಯತ್ತ ಸಂಸ್ಥೆ ಮುಖ ಮಾಡಿದೆ. ಈಗಾಗಲೇ ರಾಮ್ಚರಣ್ ಜೊತೆ ಒಂದು ಸಿನಿಮಾ ಮಾಡುವ ಪ್ರಯತ್ನ ನಡೀತಿದೆ.
'ಮಫ್ತಿ' ಖ್ಯಾತಿಯ ನರ್ತನ್ ನಿರ್ದೇಶನದಲ್ಲಿ ತೆಲುಗು ನಟ ರಾಮ್ಚರಣ್ ಸಿನಿಮಾವೊಂದು ಮಾಡಲಿದ್ದಾರೆ. ಈ ಬಗ್ಗೆ ಹಲವು ದಿನಗಳಿಂದ ಚರ್ಚೆ ನಡೆಯುತ್ತದೆ. ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಕೈಗೆತ್ತಿಕೊಳ್ಳಲಿದೆ. ಆದರೆ ಸದ್ಯಕ್ಕೆ ಟಾಲಿವುಡ್ ಮೆಗಾ ಪವರ್ ಸ್ಟಾರ್ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ಆ ಸಿನಿಮಾ ತಡವಾಗುತ್ತಿದೆ.

ಕನ್ನಡದಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ದೊಡ್ಡ ಪ್ರಾಜೆಕ್ಟ್ಗಳಿಗೆ ಕೈ ಹಾಕಿದೆ. ಜೋಗಿ ಪ್ರೇಮ್ ನಿರ್ದೇಶನದಲ್ಲಿ ಧ್ರುವ ಸರ್ಜಾ ನಟನೆಯ 'ಕೆಡಿ' ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಮೂಡಿ ಬರಲಿದೆ. ದರ್ಶನ್ ಹಾಗೂ ಪ್ರೇಮ್ ಕಾಂಬಿನೇಷನ್ ಚಿತ್ರವನ್ನು ಕೂಡ ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ಘೋಷಿಸಿದೆ. ಇನ್ನು 'ಟಾಕ್ಸಿಕ್' ಸಿನಿಮಾ ಸಂಗತಿ ಹೇಳುವುದೇ ಬೇಕಿಲ್ಲ.
ಯಶ್ ನಟನೆಯ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರಕ್ಕೆ ಕೆವಿಎನ್ ಸಂಸ್ಥೆ ಬಂಡವಾಳ ಹೂಡುತ್ತಿದೆ. ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರ ನಿರ್ಮಾಣದಲ್ಲಿ ಖುದ್ದು ಯಶ್ ಕೈ ಜೋಡಿಸಿದ್ದಾರೆ. ಇದೆಲ್ಲದರ ನಡುವೆ ತಮಿಳು ಚಿತ್ರ ನಿರ್ಮಾಣಕ್ಕೆ ಕೆವಿಎನ್ ಸಂಸ್ಥೆ ಮುಂದಾಗಿದೆ ಎನ್ನುವ ಚರ್ಚೆ ಶುರುವಾಗಿದೆ. ದಳಪತಿ ವಿಜಯ್ ನಟನೆಯ 69ನೇ ಚಿತ್ರದ ಜವಾಬ್ದಾರಿಯನ್ನು ಕೆವಿಎನ್ ಸಂಸ್ಥೆ ವಹಿಸಿಕೊಳ್ಳುತ್ತದೆ ಎನ್ನಲಾಗ್ತಿದೆ.
ಸದ್ಯ ದಳಪತಿ ವಿಜಯ್ 'ಗೋಟ್'(The Greatest Of AllTime) ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದಾರೆ. ವೆಂಕಟ್ ಪ್ರಭು ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸೆಪ್ಟೆಂಬರ್ 5ಕ್ಕೆ ಸಿನಿಮಾ ರಿಲೀಸ್ ಪ್ರಯತ್ನ ನಡೀತಿದೆ. ಪ್ರಭುದೇವಾ, ಪ್ರಶಾಂತ್, ಸ್ನೇಹಾ, ಜಯರಾಂ, ಲೈಲಾ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಈ ಸೈನ್ಸ್ ಫಿಕ್ಷನ್ ಚಿತ್ರದಲ್ಲಿ ವಿಜಯ್ ದ್ವಿಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

ನಟ ವಿಜಯ್ ಇತ್ತೀಚೆಗೆ ಸ್ವಂತ ಪ್ರಾದೇಶಿಕ ಪಕ್ಷ ಘೋಷಣೆ ಮಾಡಿದ್ದಾರೆ. 'ತಮಿಳಗ ವೆಟ್ರಿ ಕಳಗಂ' ಎಂದು ಪಕ್ಷಕ್ಕೆ ನಾಮಕರಣ ಮಾಡಿದ್ದಾರೆ. ಮುಂದಿನ ತಮಿಳುನಾಡು ಚುನಾವಣೆ ವೇಳೆಗೆ ಸಕ್ರಿಯ ರಾಜಕಾರಣ ಆರಂಭಿಸಲು ತೀರ್ಮಾನಿಸಿದ್ದಾರೆ. ಹಾಗಾಗಿ ಅದಕ್ಕೂ ಮುನ್ನ ಮತ್ತೊಂದು ಚಿತ್ರದಲ್ಲಿ ನಟಿಸಲು ದಳಪತಿ ಮನಸ್ಸು ಮಾಡಿದ್ದಾರೆ. ಅದು 69ನೇ ಸಿನಿಮಾ ಆಗಿರಲಿಲ್ಲ. ಸದ್ಯ ಆ ಚಿತ್ರಕ್ಕೆ ಕೆವಿನ್ ಸಂಸ್ಥೆ ಬಂಡವಾಳ ಹೂಡುತ್ತದೆ ಎನ್ನುವ ಮಾತುಗಳು ಕಾಲಿವುಡ್ನಲ್ಲಿ ಕೇಳಿಬರ್ತಿದೆ.
ಸದ್ಯ ಪ್ಯಾನ್ ಇಂಡಿಯಾ ಟ್ರೆಂಟ್ ಭರಾಟೆ ಜೋರಾಗಿರುವುದರಿಂದ ಯಾರು, ಎಲ್ಲಿ ಬೇಕಾದರೂ ಕೆಲಸ ಮಾಡುತ್ತಾರೆ ಎನ್ನುವಂತಾಗಿದೆ. ಅದೇ ರೀತಿ ನಿರ್ಮಾಪಕ, ನಿರ್ದೇಶಕರು ಬೇರೆ ಬೇರೆ ಭಾಷೆಗಳಲ್ಲಿ ಸಿನಿಮಾ ಮಾಡಲು ಬಹಳ ಉತ್ಸುಕರಾಗುತ್ತಿದ್ದಾರೆ. ಈಗಾಗಲೇ ಹೊಂಬಾಳೆ ಸಂಸ್ಥೆ ಮಲಯಾಳಂ, ತೆಲುಗು ಸಿನಿಮಾಗಳನ್ನು ನಿರ್ಮಿಸಿದೆ. ತಮಿಳಿನಲ್ಲಿ ಎರಡು ಸಿನಿಮಾ ಘೋಷಿಸಿದೆ. 'ರಘುತಾತ' ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ವಿಜಯ್ ಕೊನೆ ಚಿತ್ರಕ್ಕೆ ಯಾರು ಆಕ್ಷನ್ ಕಟ್ ಹೇಳ್ತಾರೆ ಎನ್ನುವ ಚರ್ಚೆ ಸಹ ಜೋರಾಗಿದೆ.
ವಿಜಯ್ 69ನೇ ಚಿತ್ರಕ್ಕೆ ಹೆಚ್. ವಿನೋದ್ ಆಕ್ಷನ್ ಕಟ್ ಹೇಳುತ್ತಾರೆ ಎನ್ನಲಾಗ್ತಿದೆ. ಈಗಾಗಲೇ ಕಥೆ ಹೇಳಿ ಒಪ್ಪಿಸಿದ್ದಾರೆ ಎನ್ನುವ ಚರ್ಚೆ ನಡೀತಿದೆ. ವಿಜಯ್ ಪೊಲಿಟಿಕಲ್ ಎಂಟ್ರಿಗೆ ಪ್ಲಸ್ ಆಗುವಂತಹ ಸಬ್ಜೆಕ್ಟ್ ಆ ಚಿತ್ರದಲ್ಲಿದೆ ಎಂದು ಹೇಳಲಾಗುತ್ತಿದೆ. ವಿನೋದ್ ಈ ಹಿಂದೆ 'ವಾಲಿಮೈ', 'ತುನಿವು' ರೀತಿಯ ಹಿಟ್ ಸಿನಿಮಾಗಳನ್ನು ಕಟ್ಟಿಕೊಟ್ಟಿದ್ದರು.


Click it and Unblock the Notifications











