ನಾಲ್ಕನೇ ಬಾರಿ ಹಿಟ್ ನಿರ್ದೇಶಕನ ಜೊತೆ ಕೈ ಜೋಡಿಸಿದ ಅಲ್ಲು ಅರ್ಜುನ್!
'ಪುಷ್ಪ' ಸಿನಿಮಾದ ಬಳಿಕ ಅಲ್ಲು ಅರ್ಜುನ್ ಸಹ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಯಶ್, ಪ್ರಭಾಸ್, ಜೂ ಎನ್ಟಿಆರ್, ರಾಜಮೌಳಿ ರೀತಿ ಅಲ್ಲು ಅರ್ಜುನ್ ಮೇಲೂ ಅತ್ಯುತ್ತಮ ಸಿನಿಮಾ ನೀಡಲೇ ಬೇಕಾದ ಒತ್ತಡ ಸೃಷ್ಟಿಯಾಗಿದೆ.
ಇದೀಗ 'ಪುಷ್ಪ 2' ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿರುವ ಅಲ್ಲು ಅರ್ಜುನ್, ಆ ಬಳಿಕ ಯಾವ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ ಎಂಬ ಕುತೂಹಲ ಉಂಟಾಗಿದೆ.
'ಪುಷ್ಪ' ಸಿನಿಮಾವನ್ನು ಸುಕುಮಾರ್ ನಿರ್ದೇಶಿಸಿ ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. ಆ ಸಿನಿಮಾದ ಬಳಿಕ 'ಪುಷ್ಪ 2' ಮಾಡುತ್ತಾರೆ ಎಂಬುದು ಖಾತ್ರಿಯೇ ಆಗಿತ್ತು, ಹಾಗಾಗಿ 'ಪುಷ್ಪ 2' ನಂತರ ಅಲ್ಲು ಅರ್ಜುನ್ ಯಾವ ಸಿನಿಮಾ ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ ಕುತೂಹಲ ಇತ್ತು. ಆ ಕುತೂಹಲಕ್ಕೆ ಇದೀಗ ಬಹುತೇಕ ತೆರೆ ಬಿದ್ದಿದೆ.

'ಪುಷ್ಪ 2' ಸಿನಿಮಾದ ಬಳಿಕ ಅಲ್ಲು ಅರ್ಜುನ್, ತೆಲುಗಿನ ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಜೊತೆಗೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ. ಈ ಇಬ್ಬರೂ ಈ ಹಿಂದೆ ಒಟ್ಟಿಗೆ ಹಲವು ಸಿನಿಮಾಗಳನ್ನು ಮಾಡಿದ್ದಾರೆ. ಇದೀಗ ಮತ್ತೆ ಒಬ್ಬರಿಗೊಬ್ಬರು ಜೊತೆಯಾಗಲಿದ್ದಾರೆ.
ತ್ರಿವಿಕ್ರಮ್ ಶ್ರೀನಿವಾಸ್ ಪ್ರಸ್ತುತ ಮಹೇಶ್ ಬಾಬು ನಟನೆಯ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್, 'ಪುಷ್ಪ 2' ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಇವೆರಡೂ ಸಿನಿಮಾಗಳು ಮುಗಿದ ಬಳಿಕ ಅಲ್ಲು ಅರ್ಜುನ್ ಹಾಗೂ ತ್ರಿವಿಕ್ರಮ್ ಶ್ರೀನಿವಾಸ್ ಅವರ ಸಿನಿಮಾ ಪ್ರಾರಂಭವಾಗಲಿದೆ.
ಈ ಹಿಂದೆ ಅಲ್ಲು ಅರ್ಜುನ್ ನಟನೆಯ ಮೂರು ಸಿನಿಮಾಗಳನ್ನು ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನ ಮಾಡಿದ್ದಾರೆ. ಆ ಮೂರು ಸಿನಿಮಾಗಳು ಸೂಪರ್-ಡೂಪರ್ ಹಿಟ್ ಆಗಿವೆ. ಮೊದಲಿಗೆ 'ಜುಲೈ', ಆ ಬಳಿಕ ಅಲ್ಲು ಅರ್ಜುನ್, ಸಮಂತಾ, ಉಪೇಂದ್ರ ನಟಿಸಿದ್ದ 'ಸನ್ ಆಫ್ ಸತ್ಯಮೂರ್ತಿ' ನಂತರ ಸೂಪರ್-ಡೂಪರ್ ಹಿಟ್ ಸಿನಿಮಾ 'ಅಲಾ ವೈಕುಂಟಪುರಂಲೊ' ಸಿನಿಮಾಗಳನ್ನು ಈ ಜೋಡಿ ಒಟ್ಟಿಗೆ ಮಾಡಿದೆ.
ಇದೀಗ ನಾಲ್ಕನೇ ಬಾರಿಗೆ ಈ ಜೋಡಿ ಜೊತೆಯಾಗುತ್ತಿದ್ದು, ಸಿನಿ ಪ್ರೇಮಿಗಳು ನಿರೀಕ್ಷೆಯಿಂದ ಕಾಯುತ್ತಿದ್ದಾರೆ.
ಅಲ್ಲು ಅರ್ಜುನ್ ಹಿಂದಿ ಸಿನಿಮಾ ಮಾಡಲಿದ್ದಾರೆ ಎಂಬ ಬಗ್ಗೆಯೂ ಸುದ್ದಿಯಾಗಿತ್ತು. ಬಾಲಿವುಡ್ನ ಖ್ಯಾತ ನಟ ಸಂಜಯ್ ಲೀಲಾ ಬನ್ಸಾಲಿ, ಅಲ್ಲು ಅರ್ಜುನ್ ಸಿನಿಮಾವನ್ನು ನಿರ್ದೇಶನ ಮಾಡುತ್ತಾರೆ ಎಂಬ ಸುದ್ದಿಗಳೂ ಹರಿದಾಡಿದ್ದವು. ಆದರೆ ಅದಿನ್ನೂ ಖಾತ್ರಿಯಾಗಿಲ್ಲ.


Click it and Unblock the Notifications











