ಗಣೇಶ್ ಅಮೂಲ್ಯರನ್ನ ಮತ್ತೆ ಒಂದು ಮಾಡೋದು ಕಷ್ಟ
ಹೀಗೊಂದು ಗಾಸಿಪ್ ಗಾಂಧಿನಗರದಲ್ಲಿ ಸುಳಿದಾಡ್ತಿದೆ. ಹೌದು. ಅದೇನಪ್ಪ ಅಂದ್ರೆ, ಈ ಇಬ್ಬರ ನಡುವಿನ ಮುಸುಕಿನ ಗುದ್ದಾಟ ಯಾವ ಮಟ್ಟ ತಲುಪಿದೆ ಅಂದ್ರೆ, ಅವರಿಬ್ಬರು ಇನ್ನೆಂದೂ ಜೋಡಿಯಾಗಿ ನಟಿಸಲಾರರು, ಮತ್ತೊಂದು ಸೂಪರ್ ಹಿಟ್ ಚಿತ್ರ ನೀಡಲಾರರು.
ಆ ಜೋಡಿ ಯಾವುದಂದ್ರೆ, ಗೋಲ್ಡನ್ ಸ್ಟಾರ್ ಎಂಬ ಬಿರುದಾಂಕಿತರಾಗಿರುವ ಗಣೇಶ್ ಮತ್ತು 'ಚೆಲುವಿನ ಚಿತ್ತಾರ'ದ ಮೂಲಕ ಉಲ್ಲಾಸದ ಹೂಮಳೆ ಸುರಿಸಿದ ಮುದ್ದಿನ ಹುಡುಗಿ ಐಸೂ ಯಾನೆ ಅಮೂಲ್ಯ. ಗಣೇಶ್, ಅಮೂಲ್ಯ ಜೋಡಿ ಒಂದಲ್ಲ, ಎರಡಲ್ಲ, ಮೂರ್ಮೂರು ಸಿನಿಮಾಗಳನ್ನ ಕೊಟ್ಟಿದೆ. ಅವುಗಳಲ್ಲಿ ಎರಡು ಸೂಪರು, ಮೂರನೇಯದು 'ಹಿಟ್ಟು'!
ಅಂದ್ರೆ ಮೂರನೇ ಸಿನಿಮಾ 'ಖುಷಿ ಖುಷಿಯಾಗಿ' ಅಷ್ಟೇನೂ ಖುಷಿಕೊಟ್ಟಿಲ್ಲ. ಈ ಸಿನಿಮಾದಿಂದಲೇ ಈ ಜೋಡಿಯ ಸಂಬಂಧ ಹಳಸಿದೆ ಅಂತಿದೆ ಗಾಂಧಿನಗರ. ಖುಷಿ ಖುಷಿಯಾಗಿ ಚಿತ್ರದ ಪ್ರೋಮೋಷನ್ ವಿಚಾರದಲ್ಲೂ ಅಮೂಲ್ಯ ಬಾರದೇ ಇದ್ದಿದ್ದು ಗಣೇಶ್ ಕೋಪಕ್ಕೆ ಕಾರಣ ಅಂತಿದೆ ಗಾಂಧಿನಗರದ ಸಿಸಿಟೀವಿ ಗಾಸಿಪ್. [ಖುಷಿ ಖುಷಿಯಾಗಿ ಚಿತ್ರವಿಮರ್ಶೆ]
ಚೆಲುವಿನ ಚಿತ್ತಾರ, ಶ್ರಾವಣಿ ಸುಬ್ರಹ್ಮಣ್ಯ ಸಿನಿಮಾಗಳಲ್ಲಿ ಈ ಜೋಡಿಗಾಗೀನೇ ಮತ್ತೆ ಮತ್ತೆ ಸಿನಿಮಾ ನೋಡಿದ್ದ ಚಿತ್ರಪ್ರೇಮಿಗಳು ಗಣೇಶ್ ಅಮೂಲ್ಯ ಜೋಡಿಯನ್ನ ಮತ್ಯಾವಾಗ ನೋಡ್ತೀವಿ? ಅಂತ ಕಣ್ಣೀರಿಳಿಸೋ ಸೆಂಟಿಮೆಂಟ್ ಸಿನಿಮಾಗೆ ಕಾದಿದ್ದಾರೆ. ಆದ್ರೆ ಇವರಿಬ್ಬರ ನಡುವೇನೇ ಸೆಂಟಿಮೆಂಟ್ ಇಲ್ಲ ಅಂದ್ರೆ ಹೇಗೆ? ಹೀಗಾಗೋಕೆ ಕಾರಣ ಏನು ಮುಂದೆ ಗೊತ್ತಾಗ್ಬುಹುದೇನೋ! ಅಹಂ ಪಕ್ಕಕ್ಕಿಟ್ಟು ಇಬ್ಬರೂ ಮತ್ತೆ ಒಂದಾಗಲಿ ಅಂತ ಅಭಿಮಾನಿಗಳು ಬಯಸುತ್ತಿದ್ದಾರೆ.


Click it and Unblock the Notifications












