ನಾನಿನ್ನು ಸುಮ್ಮನಿರುವುದಿಲ್ಲ , ಕೋರ್ಟಿಗೆ ಹೋಗುತ್ತೇನೆ!
‘ಧನರಾಜ್ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ವರ್ಷಕಾಲದ ಮಾನಸಿಕ ಹಿಂಸೆಯೂ ಸೇರಿದಂತೆ ನನಗಾಗಿರುವ ನಷ್ಟಕ್ಕೆ ಪರಿಹಾರ ಕೋರುತ್ತೇನೆ.’
ಧನರಾಜ್ ತಮ್ಮ ಮೇಲೆ ಮಾಡಿದ ಆಪಾದನೆಗಳಿಗೆ ಉಪೇಂದ್ರ ವ್ಯಗ್ರರಾಗಿದ್ದರು. ಅವರೊಂದಿಗೆ ಎಂಟು ಮಂದಿ ನಿರ್ಮಾಪಕರೂ ಸುದ್ದಿಗೋಷ್ಠಿಯಲ್ಲಿದ್ದರು. ಧನರಾಜ್ ನನಗೆ ಮೋಸ ಮಾಡಿದ್ದಾರೆ. ಆತನ ಮೇಲೆ ಕ್ರಿಮಿನಲ್ ದಾವೆ ಹೂಡುತ್ತೇನೆ ಎಂದು ಉಪೇಂದ್ರ ಗುಡುಗಿದರು.
ಧನರಾಜ್ರೊಂದಿಗೆ ಸಂಧಾನದ ಸಾಧ್ಯತೆಗಳನ್ನು ಸಾರಾಸಗಟಾಗಿ ತಳ್ಳಿ ಹಾಕಿದ ಉಪೇಂದ್ರ- ನಾನು ರಾಜಿಗೆ ಒಪ್ಪುವುದಿಲ್ಲ . ಏನಿದ್ದರೂ ನೇರ ಹೋರಾಟ. ಇಂಥ ಮಂದಿಯಿಂದ ಉದ್ಯಮಕ್ಕೆ ಅಪಾಯ. ಇಂಥವರು ಉದ್ಯಮದಲ್ಲಿ ಇರಬಾರದು ಎಂದರು.
ಎಚ್ಟೂಒ ಹೆಸರಲ್ಲಿ ಧನರಾಜ್ ದುಡ್ಡು ಮಾಡಿಕೊಂಡರು. ಸಿನಿಮಾ ನಿರ್ಮಿಸುವುದಾಗಿ ಹಣ ಸಂಗ್ರಹಿಸಿದರು. ಅವರ ಚಿತ್ರಕ್ಕಾಗಿ ನಾವೆಲ್ಲ ಕಷ್ಟ ಪಟ್ಟು ದುಡಿದೆವು. ಆದರೆ, ನಮ್ಮ ಹೆಸರು ಹೇಳಿಕೊಂಡು ಧನರಾಜ್ ಸ್ವಂತ ಡಿಸ್ಟ್ರಿಬ್ಯೂಷನ್ ಆಫೀಸ್ ಮಾಡಿಕೊಂಡರು. ಅವರಿಂದಾಗಿ ನಾನು ಅನುಭವಿಸಿದ ಮಾನಸಿಕ ಹಿಂಸೆ ಅಷ್ಟಿಷ್ಟಲ್ಲ . ನನ್ನ ಒಂದು ವರ್ಷ ಹಾಳಾಯಿತು. ಒಂದು ವರ್ಷದಿಂದ ನನ್ನ ಯಾವ ಸಿನಿಮಾನೂ ರಿಲೀಸ್ ಆಗಿಲ್ಲ .
ಸಿನಿಮಾ ಚೆನ್ನಾಗಿ ಬರಲಿ ಎಂದು ಕಷ್ಟ ಪಟ್ಟು ಕೆಲಸ ಮಾಡಿದೆವು. ಆದರೆ, ಈಗ ಆರೋಪ ಹೊರಿಸುತ್ತಿದ್ದಾರೆ. ಆತ ಕಲಾವಿದರಿಗೆ, ತಂತ್ರಜ್ಞರಿಗೆ ಸಂಭಾವನೆಯನ್ನೇ ಕೊಟ್ಟಿಲ್ಲ . ಸಂಭಾವನೆ ಕೇಳಲು ಹೋದವರಿಗೆ ಧಮಕಿ ಹಾಕಿದ್ದಾರೆ. ನನಗಾದ ನಷ್ಟ ಬಿಡಿ ; ಪಾಪ, ಈ ಬಡ ಕಲಾವಿದರನ್ನು ಯಾರು ಕೇಳುತ್ತಾರೆ. ಅವರೇನು ಪ್ರೆಸ್ ಮೀಟ್ ಮಾಡೋಕೆ ಆಗುತ್ತಾ? ನನ್ನ ಬಳಿ ಸಾಕ್ಷಿ ಆಧಾರಗಳಿವೆ. ಕಲಾವಿದರಿಗೆ ಸಂಭಾವನೆ ಸಂದಾಯ ಆಗುವವರೆಗೂ ನಾನು ಎಚ್ಟೂಒ ರಿಲೀಸ್ ಆಗಲಿಕ್ಕೆ ಬಿಡೊಲ್ಲ ಎಂದು ಉಪೇಂದ್ರ ಹೇಳಿದರು.
ತಮ್ಮ ಅಭಿನಯದ ಸಿನಿಮಾಗಳ ಬಿಡುಗಡೆಗಾಗಿ ತಮ್ಮದೇ ಆದ ಸ್ವಂತ ವಿತರಣಾ ಸಂಸ್ಥೆಯಾಂದನ್ನು ಪ್ರಾರಂಭಿಸುವುದಾಗಿ ಇದೇ ಸಂದರ್ಭದಲ್ಲಿ ಉಪೇಂದ್ರ ಹೇಳಿದರು.
what do you say ?
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications











