ವಿಜಯ್ ದೇವರಕೊಂಡ ಅತಿಯಾದ ಬೇಡಿಕೆಯಿಂದ ಬೇಸತ್ತ ನಿರ್ದೇಶಕ
ತೆಲುಗು ಸಿನಿಮಾರಂಗದ ಸೆನ್ಸೇಷನ್ ಸ್ಟಾರ್ ಎಂದೇ ಖ್ಯಾತಿಗಳಿಸಿರುವ ಅರ್ಜುನ್ ರೆಡ್ಡಿ ಖ್ಯಾತಿಯ ನಟ ವಿಜಯ್ ದೇವರಕೊಂಡ ಸದ್ಯ ಲೈಗರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಸಾರಥ್ಯದಲ್ಲಿ ಸಿನಿಮಾ ಮೂಡಿಬಂದಿದ್ದು ಈಗಾಗಲೇ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಕಾಯುತ್ತಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದ್ದು, ಚಿತ್ರದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ ವಿಜಯ್ ದೇವರಕೊಂಡ.
ಅಂದಹಾಗೆ ವಿಜಯ್ ದೇವರಕೊಂಡ ಪ್ಯಾನ್ ಇಂಡಿಯಾ ಸಿನಿಮಾ ಬಿಡುಗಡೆಗೂ ಮೊದಲೇ ಗಡಿಗೂ ಮೀರಿ ಖ್ಯಾತಿಗಳಿಸಿದ್ದಾರೆ, ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಬಾಲಿವುಡ್ ನಲ್ಲೂ ದೇವರಕೊಂಡ ಸಖತ್ ಹವಾ ಕ್ರಿಯೇಟ್ ಮಾಡಿದ್ದು, ಬೇಡಿಕೆಯ ನಟನಾಗಿದ್ದಾರೆ. ಬೇಡಿಕೆ ಹೆಚ್ಚಾಗುತ್ತಿದ್ದಂತೆ ಕಲಾವಿದರ ಬೇಡಿಕೆಗಳು ಹೆಚ್ಚಾಗುತ್ತವೆ. ಸಂಭಾವನೆ ಜೊತೆಗೆ ಚಿತ್ರದ ಕಥೆ, ಮೇಕಿಂಗ್ ಹೀಗೆ ಪ್ರತಿಯೊಂದು ವಿಚಾರಗಳಲ್ಲೂ ಹೀಗೆ ಇರಬೇಕು, ಹಾಗೆ ಇರಬೇಕು ಎನ್ನುವ ಒತ್ತಡ ಹೇರುತ್ತಿರುತ್ತಾರೆ.
ಇದೀಗ ವಿಜಯ್ ದೇವರಕೊಂಡ ಕಡೆಯಿಂದನೂ ಅಂಥದ್ದೆ ಒಂದು ಮಾತು ಕೇಳಿಬರುತ್ತಿದೆ. ಲೈಗರ್ ಸಿನಿಮಾ ಬಳಿಕ ವಿಜಯ್ ದೇವರಕೊಂಡ ನಿರ್ದೇಶಕ ಸುಕುಮಾರ್ ಮತ್ತು ಶಿವ ನಿರ್ವಾಣ ಜೊತೆ ಸಿನಿಮಾ ಮಾಡುವ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ವಿಜಯ್ ಸದ್ಯ ಲೈಗರ್ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗಿದ್ದಾರೆ, ಹಾಗೆ ಮಾರ್ಕೇಟ್ ಕೂಡ ದೊಡ್ಡದಾಗಲಿದೆ. ಹಾಗಾಗಿ ಮುಂಬರುವ ಸಿನಿಮಾಗಳು ಸಹ ಪ್ಯಾನ್ ಇಂಡಿಯಾ ಮಟ್ಟದಲ್ಲೇ ಇರಲಿ ಎಂದು ವಿಜಯ್ ನಿರೀಕ್ಷೆ ಮಾಡುತ್ತಿದ್ದಾರೆ.

ಅಂದಹಾಗೆ ನಿರ್ದೇಶಕ ಸುಕುಮಾರ್ ಜೊತೆ ಮಾಡುತ್ತಿರುವ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುವ ಸಾಧ್ಯತೆ ಇದ್ದು ದೊಡ್ಡ ಮಟ್ಟದಲ್ಲಿ ಸಿನಿಮಾ ಮೂಡಿಬರಲಿದೆ. ಆದರೆ ವಿಜಯ್ ಗೆ ನಿರ್ದೇಶಕ ಶಿವ ನಿರ್ವಾಣ ಜೊತೆ ಮಾಡುತ್ತಿರುವ ಸಿನಿಮಾದ ಬಗ್ಗೆ ಅಷ್ಟು ನಿರೀಕ್ಷೆ ಇಲ್ಲ. ಹಾಗಾಗಿ ಶಿವ ನಿರ್ದೇಶನದ ಚಿತ್ರವನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡುವಂತೆ ವಿಜಯ್ ದೇವರಕೊಂಡ ಒತ್ತಾಯ ಮಾಡುತ್ತಿದ್ದಾರೆ. ಅಲ್ಲದೆ ಚಿತ್ರತಂಡದ ಜೊತೆ ಒಂದೊಂದೇ ಬೇಡಿಕೆ ಇಡುತ್ತಿದ್ದಾರೆ.
ಮೊದಲು ಚಿತ್ರದ ಕಥೆ ಬದಲಾಯಿಸುವಂತೆ ಶಿವ ಅವರಿಗೆ ಹೇಳಿದ್ದಂತೆ. ವಿಜಯ್ ದೇವರಕೊಂಡ ಹೇಳಿದ ಹಾಗೆ ಕಥೆಯಲ್ಲಿ ಕೊಂಚ ಬದಲಾವಣೆಯನ್ನು ಮಾಡಿದರು ನಿರ್ದೇಶಕ ಶಿವ. ಆದರೆ ಅದು ಕೂಡ ವಿಜಯ್ ದೇವರಕೊಂಡಗೆ ತೃಪ್ತಿ ನೀಡುತ್ತಿಲ್ಲ ಎನ್ನುವ ಮಾತು ಟಾಲಿವುಡ್ ಅಂಗಳದಲ್ಲಿ ಸದ್ದು ಮಾಡುತ್ತಿದೆ. ಕಥೆ ಬದಲಾವಣೆಯ ಜೊತೆಗೆ ಚಿತ್ರದ ಬಜೆಟ್ ಜಾಸ್ತಿ ಮಾಡುವಂತೆಯೂ ಒತ್ತಾಯ ಮಾಡುತ್ತಿದ್ದಾರಂತೆ.
ಆರಂಭದಲ್ಲಿ ವಿಜಯ್ ದೇವರಕೊಂಡ ಮಾತನ್ನು ಒಪ್ಪಿಕೊಳ್ಳುತ್ತಿದ್ದ ನಿರ್ದೇಶಕ ಶಿವ ಕಥೆಯನ್ನು ಬದಲಾಯಿಸಿದ್ದಾರಂತೆ. ಆದರೀಗ ದೊಡ್ಡ ಬದಲಾವಣೆ ಮಾಡುವಂತೆ ಹೇಳುತ್ತಿದ್ದಾರಂತೆ. ಇದು ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ ಎನ್ನಲಾಗುತ್ತಿದೆ. ಸದ್ಯ ವಿಜಯ್ ಬೇಡಿಕೆಯನ್ನು ಈಡೇರಿಸಲು ಚಿತ್ರತಂಡ ಹಿಂದೇಟು ಹಾಕಿದೆ ಎನ್ನುವ ಮಾತು ಕೇಳಿಬರುತ್ತಿದ.
ಅಲ್ಲದೆ ನಿರ್ದೇಶಕ ಶಿವ ಮತ್ತು ನಿರ್ಮಾಣ ಸಂಸ್ಥೆ ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ತಯಾರಿಲ್ಲ. ಅವರ ಬಜೆಟ್ ಕೇವಲ ತೆಲುಗು ಸಿನಿಮಾಗೆ ಮಾತ್ರ ಸೀಮಿತವಾಗಿರಿಸಿಕೊಂಡಿದ್ದಾರೆ. ವಿಜಯ್ ದೇವರಕೊಂಡ ಬೇಡಿಕೆಗಳನ್ನು ಪೂರೈಸಲು ಸಾಧ್ಯವಾಗದೆ ಸುಸ್ತಾಗಿರುವ ಚಿತ್ರತಂಡ ಈ ಯೋಜನೆಯನ್ನೇ ಕೈ ಬಿಡುವ ನಿರ್ಧಾರಕ್ಕೆ ಬಂದಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.
ವಿಜಯ್ ದೇವರಕೊಂಡ ಹಳೆಯ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಮಾಯಿ ಮಾಡಿತ್ತು. ಹಾಗಾಗಿ ಮುಂದಿನ ಸಿನಿಮಾಗಳ ಮೇಲು ಅದೇ ಬರವಸೆ ಇಟ್ಟುಕೊಂಡಿದ್ದು, ಭವಿಷ್ಯದ ಯೋಜನೆಗಳ ಬಗ್ಗೆ ಸಿಕ್ಕಾಪಟ್ಟೆ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದಾರೆ ಎನ್ನಲಾಗುತ್ತಿದೆ. ಸದ್ಯ ವಿಜಯ್ ಲೈಗರ್ ಬಿಡುಗಡೆಗೆ ಕಾಯುತ್ತಿದ್ದಾರೆ.


Click it and Unblock the Notifications











