Don't Miss!
- Lifestyle ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
- News ಲೋಕಸಭಾ ಚುನಾವಣೆ 2024: ಈ ಆರು ಜಿಲ್ಲೆಗಳಲ್ಲಿ ಬಹುತೇಕ ಶೂನ್ಯ ಮತದಾನ; ಕಾರಣವೇನು?
- Sports LSG vs CSK IPL 2024: ಮತ್ತೊಮ್ಮೆ ಧೋನಿ, ಜಡೇಜಾ ಅಬ್ಬರ; ಲಕ್ನೋ ತಂಡಕ್ಕೆ ಸವಾಲಿನ ಗುರಿ ನೀಡಿದ ಸಿಎಸ್ಕೆ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಸ್ವೀಟಿ' ರಾಧಿಕಾಗೆ ಖಾರವಾದ ವಿಜಯಲಕ್ಷ್ಮಿ ಸಿಂಗ್
ಹಲವಾರು ವರುಷಗಳ ನಂತರ 'ಸ್ವೀಟಿ - ನನ್ನ ಜೋಡಿ' ಚಿತ್ರಕ್ಕಾಗಿ ಮುಖಕ್ಕೆ ಬಣ್ಣ ಹಚ್ಚಿಕೊಂಡಿರುವ ರಾಧಿಕಾ ಕುಮಾರಸ್ವಾಮಿ ಮತ್ತು ಚಿತ್ರದ ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆ. ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಇಬ್ಬರು ಮಹಿಳಾಮಣಿಗಳ ಜಗಳದಲ್ಲಿ ಚಿತ್ರ ಕುಂಟುಂತ್ತ ಸಾಗಿದೆ.
ನಿರ್ದೇಶಕನೆಂದ್ರೆ ಚಿತ್ರತಂಡದ ಕ್ಯಾಪ್ಟನ್ ಇದ್ದಂತೆ, ಮಕ್ಕಳಿಗೆ ದಾರಿದೀಪವಾಗಿ ಸರಿಯಾದ ದಾರಿಯಲ್ಲಿ ನಡೆಸಬೇಕಾದ ಮೇಷ್ಟ್ರಿದ್ದಂತೆ. ಅಂತಹ ನಿರ್ದೇಶಕರೇ ಶೂಟಿಂಗಿಗೆ ಯದ್ವಾತದ್ವಾ ತಡವಾಗಿ ಬಂದು ನಿರ್ಮಾಪಕರ ಜೇಬಿಗೆ ತೂತಾಗುವಂತೆ ಮಾಡಿದರೆ, ದುಡ್ಡು ಸುರಿಯುತ್ತಿರುವ ನಿರ್ಮಾಪಕರಿಗೆ ಮತ್ತು ಗಂಟೆಗಟ್ಟಲೆ ಬಣ್ಣಹಚ್ಚಿ ಕುಂತ ಸುಂದರ ಮೊಗದ ನಟಿಗೆ ಹೇಗಾಗಿರಬೇಡ?
ಇಲ್ಲಿ ನಿರ್ಮಾಪಕಿ ಮತ್ತು ಬಣ್ಣ ಹಚ್ಚಿರುವ ನಟಿ ಒಬ್ಬರೇ ಆಗಿರುವ ರಾಧಿಕಾ ಕುಮಾರಸ್ವಾಮಿ ಅವರು ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಅವರ ಧೋರಣೆಯಿಂದ ನಖಶಿಖಾಂತ ಉರಿದುಹೋಗಿದ್ದಾರೆ. 'ಈ ಬಂಧನ' ಎಂಬ ರಿಮೇಕ್ ಚಿತ್ರದ ಮೂಲಕ ನಿರ್ದೇಶಕಿಯಾಗಿ ಕಾಲಿಟ್ಟಿದ್ದ ವಿಜಯಲಕ್ಷ್ಮಿ ಸಿಂಗ್ ಅವರು ಈ ಆರೋಪಗಳಿಗೆ ಏನು ಸಮರ್ಥನೆ ನೀಡುತ್ತಾರೆ?
ಎರಡು ಸಂದರ್ಭಗಳಲ್ಲಿ ರಾಧಿಕಾ ಅವರ ಸಹನೆಯನ್ನು ವಿಜಯಲಕ್ಷ್ಮಿಯವರು ಪರೀಕ್ಷಿಸಿದ್ದಾರೆ. ಕಳೆದ ವಾರ, ಮೈಸೂರು ವಿಮಾನ ನಿಲ್ದಾಣದಲ್ಲಿ ಶೂಟಿಂಗ್ ನಡೆಯಬೇಕಾಗಿತ್ತು. ಭಾರೀ ಕಷ್ಟಪಟ್ಟು ಶೂಟಿಂಗಿಗೆ ಪರವಾನಗಿ ಪಡೆಯಲಾಗಿತ್ತು. ಗಂಟೆಗೆ 30 ಸಾವಿರ ರು. ನೀಡುವುದಾಗಿಯೂ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಸೆಟ್ಟಿಂಗ್, ಕ್ಯಾಮೆರಾ, ರಾಧಿಕಾ, ಎಲ್ಲ ಸರಂಜಾಮುಗಳು ರೆಡಿ. ಆದರೆ, ನಿರ್ದೇಶಕಿ ಸಿಂಗ್ ನಾಪತ್ತೆ!
ಕಟ್ಟುನಿಟ್ಟಿನ ಸಿಪಾಯಿಯಂತೆ ಎಲ್ಲರೂ ಸರಿಯಾದ ಸಮಯದಲ್ಲಿ ಶೂಟಿಂಗಿಗೆ ಹಾಜರಿರತಕ್ಕದ್ದು ಎಂದು ಹಿಂದಿನ ದಿನವೇ ವಿಜಯಲಕ್ಷ್ಮಿ ಸಿಂಗ್ ತಾಕೀತು ಮಾಡಿದ್ದರು. ಆದರೆ ಅವರೇ 3 ಗಂಟೆ ತಡವಾಗಿ ಬಂದಿದ್ದಾರೆ. ಆದಿದ್ದು ಆಗಿಹೋಯಿತು, ಶೂಟಿಂಗ್ ನಡೆದರೆ ಸಾಕೆಂದು ಎಲ್ಲವನ್ನೂ ಸಹಿಸಿಕೊಂಡ ರಾಧಿಕಾ ಕುಮಾರಸ್ವಾಮಿ ಚಿತ್ರೀಕರಣ ಮುಂದುವರಿಸಿದ್ದರು.
ಒಂದು ಬಾರಿ ಈ ರೀತಿಯಾದರೆ ಸಹಿಸಬಹುದೇನೋ, ಆದರೆ, ಎರಡು ದಿನಗಳ ಹಿಂದೆ ಮತ್ತೆ ಇದೇ ರೀತಿಯಾಗಿದೆ. ಸರಿಯಾಗಿ 6 ಗಂಟೆಗೆ ಶೂಟಿಂಗ್ ಎಂದಿದ್ದ ವಿಜಯಲಕ್ಷ್ಮಿ ಶೂಟಿಂಗ್ ಸ್ಪಾಟಿಗೆ ಬರೋಬ್ಬರಿ 2 ಗಂಟೆ ತಡವಾಗಿ ಬಂದಿದ್ದಾರೆ. ಬಣ್ಣ ಹಚ್ಚಿಕೊಂಡು ಬುಸುಬುಸು ಎನ್ನುತ್ತಿದ್ದ ರಾಧಿಕಾ ಇನ್ನಷ್ಟು ಕೆಂಪಗಾಗಿ, ಸಿಂಗ್ ಬಂದಾಕ್ಷಣ ಶೂಟಿಂಗ್ ಮಾಡದೆ, ಪ್ಯಾಕಪ್ ಅಂದಿದ್ದಾರೆ.
ಅಲ್ಲಿಗೆ ಇಬ್ಬರ ನಡುವಿನ ಜಗಳ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದೆ. ಇಬ್ಬರ ನಡುವಿನ ಸಂಬಂಧ ಹಳಸಿಹೋಗಿದೆ ಎನ್ನುತ್ತಾರೆ ಲೈಟ್ ಬಾಯ್ಗಳು. ವಿಜಯಲಕ್ಷ್ಮಿ ಸಿಂಗ್ ಅವರ ಅಣ್ಣ ರಾಜೇಂದ್ರ ಸಿಂಗ್ ಬಾಬು ಅವರ ಮಗ ಆದಿತ್ಯನೇ ಈ ಚಿತ್ರಕ್ಕೆ ಹೀರೋ. ಅಂದ ಹಾಗೆ, ಅಣ್ಣನ ಮಗಳು ರಿಶಿಕಾ ಸಿಂಗ್ ಮದುವೆ ನಿಶ್ಚಿತಾರ್ಥದ ಗಡಿಬಿಡಿಯಲ್ಲಿ ವಿಜಯಲಕ್ಷ್ಮಿ ಸಿಂಗ್ ಮುಳುಗಿಹೋಗಿದ್ದರೇನೋ?