ಜನಾರ್ದನ ರೆಡ್ಡಿ ಮಗನ ಚೊಚ್ಚಲ ಚಿತ್ರಕ್ಕೆ ತೆಲುಗಿನ ಸ್ಟಾರ್ ನಿರ್ದೇಶಕ.!
ರಾಜಕಾರಣಿಗಳು ಮತ್ತು ರಾಜಕಾರಣಿಗಳ ಮಕ್ಕಳು ಚಿತ್ರರಂಗ ಪ್ರವೇಶ ಮಾಡುತ್ತಿರುವುದು ಹೊಸತೇನಲ್ಲ. ಕಳೆದ ವರ್ಷವಷ್ಟೇ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ 'ಜಾಗ್ವರ್' ಚಿತ್ರದ ಮೂಲಕ ಅದ್ಧೂರಿಯಾಗಿ ಎಂಟ್ರಿ ಕೊಟ್ಟಿದ್ದರು. ಶಾಸಕ ಚೆಲುವರಾಯ ಸ್ವಾಮಿ ಅವರ ಪುತ್ರ ಸಚಿನ್ ಹಾಗೂ ರೇವಣ್ಣ ಅವರ ಪುತ್ರ ಅನೂಪ್ ಕೂಡ ಸ್ಯಾಂಡಲ್ ವುಡ್ ಗೆ ಗ್ರ್ಯಾಂಡ್ ಆಗಿ ಕಾಲಿಟ್ಟಿದ್ದರು. ಈಗ ಗಣಿಧಣಿ ಗಾಲಿ ಜನಾರ್ದನ ರೆಡ್ಡಿ ಸರದಿ.[ಮಗ ಕಿರೀಟಿಗಾಗಿ ಜನಾರ್ದನ ರೆಡ್ಡಿ ಸಿನಿಮಾ ನಿರ್ಮಾಣ!]
ಹೌದು, ಜನಾರ್ದನ ರೆಡ್ಡಿ ಚಿತ್ರರಂಗಕ್ಕೆ ಧುಮುಕುತ್ತಿದ್ದು, ರೆಡ್ಡಿ ಪುತ್ರ ಕಿರೀಟಿ ಸ್ಯಾಂಡಲ್ ವುಡ್ ಪ್ರವೇಶ ಮಾಡುತ್ತಿದ್ದಾರೆ. ತೆರೆ ಮರೆಯಲ್ಲಿ ಚೊಚ್ಚಲ ಚಿತ್ರಕ್ಕೆ ಸಿದ್ದವಾಗುತ್ತಿರುವ ರೆಡ್ಡಿ, ಮಗನ ಮೊದಲ ಸಿನಿಮಾಗಾಗಿ ಸ್ಟಾರ್ ನಿರ್ದೇಶಕರಿಗೆ ಗಾಳ ಹಾಕಿದ್ದಾರೆ. ಯಾರದು ಆ ಸ್ಟಾರ್ ಡೈರೆಕ್ಟರ್? ಮುಂದೆ ಓದಿ....

ರೆಡ್ಡಿ ಮಗನ ಚಿತ್ರಕ್ಕೆ ತೆಲುಗು ಡೈರೆಕ್ಟರ್!
ಜನಾರ್ದನ ರೆಡ್ಡಿ ಅವರ ಮಗ ಕಿರೀಟಿ ಅಭಿನಯಿಸಲಿರುವ ಚೊಚ್ಚಲ ಚಿತ್ರಕ್ಕಾಗಿ ತೆಲುಗಿನ ಖ್ಯಾತ ನಿರ್ದೇಶಕರನ್ನ ಕರೆತರುತ್ತಿದ್ದಾರಂತೆ. ಈಗಾಗಲೇ ಇಬ್ಬರು ತೆಲುಗು ನಿರ್ದೇಶಕರ ಜೊತೆಗೆ ಮಾತುಕತೆ ಆಗಿದ್ದು, ಎಲ್ಲ ಅಂದುಕೊಂಡಂತೆ ಆದ್ರೆ, ಇಬ್ಬರಲ್ಲಿ ಒಬ್ಬರು ರೆಡ್ಡಿ ಪುತ್ರನ ಚಿತ್ರವನ್ನ ಡೈರೆಕ್ಟ್ ಮಾಡಲಿದ್ದಾರಂತೆ.

ಪೊರಿ ಜಗನ್ನಾಥ್ ಒಬ್ಬರು....
ತೆಲುಗಿನ ಸೂಪರ್ ಸ್ಟಾರ್ ನಟರ ನೆಚ್ಚಿನ ನಿರ್ದೇಶಕ ಪೊರಿ ಜಗನ್ನಾಥ್ ಅವರಿಗೆ ರೆಡ್ಡಿ ಮಗನ ಚಿತ್ರವನ್ನ ನಿರ್ದೇಶನ ಮಾಡುವಂತೆ ಆಫರ್ ಮಾಡಲಾಗಿದೆಯಂತೆ. ಪೂರಿ ಜಗನ್ನಾಥ್ ತೆಲುಗಿನಲ್ಲಿ 'ಬದ್ರಿ', 'ಯುವರಾಜ', 'ಪೋಕಿರಿ', 'ಬಿಸ್ ನೆಸ್ ಮ್ಯಾನ್', 'ಟೆಂಪರ್' ಸೇರಿದಂತೆ ಹಲವು ಚಿತ್ರಗಳನ್ನ ನಿರ್ದೇಶನ ಮಾಡಿದ್ದಾರೆ. ಇನ್ನು ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯದ ಚೊಚ್ಚಲ ಚಿತ್ರ 'ಅಪ್ಪು' ಮತ್ತು ಇತ್ತೀಚೆಗಷ್ಟೇ ತೆರೆಕಂಡ 'ರೋಗ್' ಚಿತ್ರವನ್ನ ಪೂರಿ ನಿರ್ದೇಶನ ಮಾಡಿದ್ದಾರೆ.

ವಿವಿ ವಿನಾಯಕ್ ಮತ್ತೊಬ್ಬರು....
ಪೂರಿ ಜಗನ್ನಾಥ್ ಅವರ ಜೊತೆ ತೆಲುಗಿನ ಮತ್ತೊಬ್ಬ ಸ್ಟಾರ್ ಡೈರೆಕ್ಟರ್ ವಿ.ವಿ ವಿನಾಯಕ್ ಅವರನ್ನ ಕೂಡ ಸಂಪರ್ಕಿಸಲಾಗಿದೆಯಂತೆ. ವಿವಿ ವಿನಾಯಕ್ ಅವರ ಇಲ್ಲಿಯವರೆಗೂ 'ಆದಿ', 'ಠಾಗೂರ್', 'ಬನ್ನಿ', 'ನಾಯಕ್', ಮತ್ತು ಚಿರಂಜೀವಿ ಅವರ 150ನೇ ಸಿನಿಮಾ 'ಖೈದಿ-150' ಚಿತ್ರ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳನ್ನ ನಿರ್ದೇಶನ ಮಾಡಿದ್ದಾರೆ.

ಇಬ್ಬರಲ್ಲಿ ಒಬ್ಬರು
ಈ ಇಬ್ಬರ ದೊಡ್ಡ ನಿರ್ದೇಶಕರಲ್ಲಿ ಒಬ್ಬರಿಂದ ತಮ್ಮ ಮಗನ ಸಿನಿಮಾಗೆ ಆಕ್ಷನ್ ಕಟ್ ಹೇಳುವ ತಯಾರಿಯಲ್ಲಿದ್ದಾರೆ ಗಾಲಿ ಜನಾರ್ದನ ರೆಡ್ಡಿ. ಆದ್ರೆ, ಇವರಿಬ್ಬರಲ್ಲಿ ಯಾರು ಅಂತಿಮವಾಗುತ್ತಾರೆ ಎಂಬುದು ಇನ್ನು ಗೊತ್ತಾಗಬೇಕಿದೆ.

ತರಬೇತಿಯಲ್ಲಿ ಕಿರೀಟಿ
ರೆಡ್ಡಿ ಮಗ ಕಿರೀಟಿ ಮೂಲತಃ ಡ್ಯಾನ್ಸರ್. ಈಗಾಗಲೇ ನೃತ್ಯದಲ್ಲಿ ಪರಿಣಿತಿ ಹೊಂದಿರುವ ಕಿರೀಟಿ ಆಕ್ಟಿಂಗ್ ಕೋರ್ಸ್ ಕೂಡ ಮಾಡುತ್ತಿದ್ದಾರೆ. ಜೊತೆ ಆಕ್ಷನ್, ಫೈಟ್ಸ್ ಅಂತ ಸಿದ್ದವಾಗುತ್ತಿದ್ದಾರೆ. ಒಟ್ನಲ್ಲಿ, ನಾಯಕನಾಗಿ ಪ್ರವೇಶ ಮಾಡಲು ಎಲ್ಲ ರೀತಿಯ ಸಕಲ ಸಿದ್ದತೆಗಳನ್ನ ಮಾಡಿಕೊಳ್ಳುತ್ತಿದ್ದಾರೆ ಕಿರೀಟಿ.

ಎರಡು ಭಾಷೆಯಲ್ಲಿ ಸಿನಿಮಾ
ಅಂದ್ಹಾಗೆ, ಜನಾರ್ದನ ರೆಡ್ಡಿ ಅವರ ಮಗನ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ತಯಾರಾಗಲಿದೆ. ಈ ಮೂಲಕ ಕನ್ನಡ ಮತ್ತು ತೆಲುಗು ಚಿತ್ರರಂಗಕ್ಕೆ ಮಗನನ್ನ ಪರಿಚಯ ಮಾಡುತ್ತಿದ್ದಾರೆ. ಇಷ್ಟೆಲ್ಲ ಸಿದ್ದತೆಗಳು ನಡೆಯುತ್ತಿದ್ದರೂ, ಈ ಸಿನಿಮಾ ಯಾವಾಗ ಶುರುವಾಗುತ್ತೆ ಎಂಬ ಮಾಹಿತಿಯನ್ನ ಮಾತ್ರ ಬಿಟ್ಟುಕೊಟ್ಟಿಲ್ಲ.


Click it and Unblock the Notifications