'ಕಾಂತಾರ ಚಾಪ್ಟರ್ 1'ರಲ್ಲಿ ಸಪ್ತಮಿ ಗೌಡಗೆ ಅವಕಾಶ ಇದೆಯಾ? ಟೀಸರ್ ರಿಲೀಸ್ ಆದ್ಮೇಲೆ ಯಾಕೀ ಡೌಟು?
ಕಳೆದ ವರ್ಷ 'ಕಾಂತಾರ' ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ರಿಷಬ್ ಶೆಟ್ಟಿ ಸಿನಿಮಾ ಬಾಕ್ಸಾಫೀಸ್ನಲ್ಲಿ 400 ಕೋಟಿ ರೂಪಾಯಿ ಕಲೆಕ್ಷನ್ ಮಾಡೋದು ಅಂದ್ರೆ ಅದೇನು ಸಾಮಾನ್ಯ ಸಾಧನೆಯೇನು ಆಗಿರಲಿಲ್ಲ. ಕನ್ನಡ ಚಿತ್ರರಂಗದಲ್ಲಿಯೇ ಹೊಸ ಇತಿಹಾಸವನ್ನು ಬರೆದ ಸಿನಿಮಾವಿದು.
'ಕಾಂತಾರ' ಮೆಗಾ ಹಿಟ್ ಆಗಿದ್ದು ನಿಜ. ಬಾಕ್ಸಾಫೀಸ್ನಲ್ಲಿ ನೂರಾರು ಕೋಟಿ ಹಣ ಲೂಟಿ ಮಾಡಿದ್ದೂ ನಿಜ. ಈ ಸಿನಿಮಾದಿಂದ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದೂ ಅಷ್ಟೇ ನಿಜ. ಆದರೆ, ತನ್ನ ಮೊದಲ ಸಿನಿಮಾದಲ್ಲೇ ಸಪ್ತಮಿ ಗೌಡ ಸಿನಿಪ್ರಿಯರ ಹೃದಯಕ್ಕೆ ಕನ್ನ ಹಾಕಿದ್ದರು. ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ಇಬ್ಬರ ಜೋಡಿ ಕೇವಲ ಕರ್ನಾಟಕದಲ್ಲಷ್ಟೇ ಅಲ್ಲ. ಭಾರತದಾದ್ಯಂತ ಮೆಚ್ಚುಗೆ ಗಳಿಸಿತ್ತು.

'ಕಾಂತರ' ಭರ್ಜರಿ ಸಕ್ಸಸ್ ಸಿಕ್ಮೇಲೆ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್ ಪ್ರೀಕ್ವೆಲ್ ಮಾಡುತ್ತಿದ್ದಾರೆ. ಈಗಾಗಲೇ ಸಿನಿಮಾ ಮುಹೂರ್ತ ಮಾಡಲಾಗಿದೆ. ಇದೇ ವೇಳೆ ಫಸ್ಟ್ ಲುಕ್ ಟೀಸರ್ ಅನ್ನು ರಿಲೀಸ್ ಮಾಡಲಾಗಿದೆ. ಅಂದ್ಹಾಗೆ ಈ ಸೆಟ್ಟೇರಿರುವ ಸಿನಿಮಾ 'ಕಾಂತಾರ ಚಾಪ್ಟರ್ 1'. ಈಗ ಈ ಸಿನಿಮಾ ಅಭಿಮಾನಿಗಳಲ್ಲಿ ಒಂದು ಪ್ರಶ್ನೆ ಹುಟ್ಟಿಕೊಂಡಿದೆ. ಚಾಪ್ಟರ್ 1ರಲ್ಲಿ ರಿಷಬ್ ಶೆಟ್ಟಿ ಜೊತೆ ಸಪ್ತಮಿ ಗೌಡ ಈ ಸಿನಿಮಾದಲ್ಲಿ ನಟಿಸುತ್ತಾರಾ? ಅನ್ನೋ ಪ್ರಶ್ನೆ ಎದುರಾಗಿದೆ.
'ಕಾಂತಾರ' ಈಗಾಗಲೇ ನೋಡಿರುವವರಿಗೆ ಹಿಂದೆ ಏನೆಲ್ಲ ಆಗಿತ್ತು ಅನ್ನೋದನ್ನು ತಿಳಿದುಕೊಳ್ಳುವ ಕುತೂಹಲ ಇದ್ದೇ ಇತ್ತು. ಅದನ್ನೇ ರಿಷಬ್ ಶೆಟ್ಟಿ 'ಕಾಂತಾರ ಅಧ್ಯಾಯ 1'ರಲ್ಲಿ ಹೇಳುವುದಕ್ಕೆ ಹೊರಟಿದ್ದಾರೆ. ಫಸ್ಟ್ ಲುಕ್ ಟೀಸರ್ ನೋಡಿದ್ರೆ, ರಿಷಬ್ ಶೆಟ್ಟಿ ತುಂಬಾನೇ ಹಿಂದಕ್ಕೆ ಹೋಗಿ ಕಥೆಯನ್ನು ಹೇಳುವುದಕ್ಕೆ ಹೊರಟಿದ್ದಾರೆ. ಹೀಗಾಗಿ ಸಪ್ತಮಿ ಗೌಡ ಪಾತ್ರ ಅಧ್ಯಾಯ 1ರಲ್ಲಿ ಬರುತ್ತಾ? ಅನ್ನೋದು ಅನುಮಾನ ಹುಟ್ಟಿಸಿದೆ.

'ಕಾಂತಾರ ಅಧ್ಯಾಯ 1' ಫಸ್ಟ್ ಲುಕ್ ಟೀಸರ್ನಲ್ಲಿ ಕದಂಬ ರಾಜವಂಶದ ಜೊತೆ ಈ ಕಥೆಯ ಲಿಂಕ್ ಇದೆಯೆಂಬ ಸುಳಿವು ನೀಡಿದ್ದಾರೆ. ಹೀಗಾಗಿ ಸಿಕ್ಕಾಪಟ್ಟೆ ಫ್ಲ್ಯಾಶ್ ಬ್ಯಾಕ್ ಸ್ಟೋರಿ ನೋಡುವುದಕ್ಕೆ ಸಿಗಬಹುದು. ಈ ದೃಶ್ಯಗಳಲ್ಲಿ ಸಪ್ತಮಿ ಗೌಡ ಇರೋದು ಅನುಮಾನ ಎಂಬ ನಿರ್ಧಾರಕ್ಕೆ ಅಭಿಮಾನಿಗಳೇ ಬಂದಂತೆ ಇದೆ. ಈ ಸೋಶಿಯಲ್ ಮೀಡಿಯಾದಲ್ಲೂ ಚರ್ಚೆಯಾಗುತ್ತಿದೆ.
ಇನ್ನು ರಿಷಬ್ ಶೆಟ್ಟಿ ಈ ಟೀಸರ್ನಲ್ಲಿ ದೈವಿಕ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಾರಣಕ್ಕೆ ಕಥೆ ಯಾವ ಕಾಲ ಘಟ್ಟದಲ್ಲಿ ಆರಂಭ ಆಗುತ್ತೆ ಅನ್ನೋದು ಅಭಿಮಾನಿಗಳಿಗೆ ಅಂದಾಜು ಸಿಕ್ಕಿಲ್ಲ. ಹೀಗಾಗಿ 'ಕಾಂತಾರ ಅಧ್ಯಾಯ 1'ರಲ್ಲಿ ಸಪ್ತಮಿ ಗೌಡ ಇರೋದು ಬಹುತೇಕ ಅನುಮಾನ ಅಂತಲೇ ಚರ್ಚೆ ಮಾಡುತ್ತಿದ್ದಾರೆ. ಆದರೆ, ರಿಷಬ್ ಶೆಟ್ಟಿ ಕತೆ ಅದ್ಹೇಗೆ ಹೆಣೆದಿದ್ದಾರೋ..? ಎಲ್ಲವೂ ಕಥೆಯ ಮೇಲೆ ನಿರ್ಧಾರಿಸಿದೆ.
ಅಲ್ಲದೆ 'ಕಾಂತಾರ ಅಧ್ಯಾಯ 1'ರ ಮುಹೂರ್ತದ ಬಳಿಕ ರಿಷಬ್ ಶೆಟ್ಟಿ ಕೂಡ ಪಾತ್ರ ವರ್ಗದ ಬಗ್ಗೆ ಸುಳಿವು ನೀಡಿಲ್ಲ. ಯಾರನ್ನೂ ಆಯ್ಕೆ ಮಾಡಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ರಾಜ್ಯದ ಬೇರೆ ಬೇರೆ ಭಾಗದ ರಂಗಭೂಮಿ ಕಲಾವಿದರನ್ನು ಸಿನಿಮಾದಲ್ಲಿ ಬಳಸಿಕೊಳ್ಳಲಾಗುತ್ತೆ ಎಂದು ಹೇಳಿದ್ದಾರೆ. ಜೊತೆಗೆ ಟೆಕ್ನಿಕಲ್ ಟೀಮ್ ಮಾತ್ರ ಅವರನ್ನೇ ಉಳಿಸಿಕೊಂಡಿದ್ದಾಗಿ ಹೇಳಿದ್ದಾರೆ. ಹೀಗಾಗಿ ಸಪ್ತಮಿ ಗೌಡ 'ಕಾಂತಾರ ಅಧ್ಯಾಯ 1'ರಲ್ಲಿ ಇರೋದು ಬಹುತೇಕ ಅನುಮಾನ ಅಂತಲೇ ಸದ್ಯಕ್ಕೆ ಬಿಂಬಿತವಾಗುತ್ತಿದೆ.


Click it and Unblock the Notifications











