'ರಾಮಾಯಣ' ಸರಣಿ ಬಳಿಕ ತೆಲುಗು ಪೌರಾಣಿಕ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್?
ದಶಕಗಳ ಹಿಂದೆ ಪೌರಾಣಿಕ ಹಾಗೂ ಐತಿಹಾಸಿಕ ಸಿನಿಮಾಗಳ ದರ್ಬಾರ್ ಜೋರಾಗಿತ್ತು. ಬಳಿಕ ಆಕ್ಷನ್ ಸಿನಿಮಾಗಳ ಟ್ರೆಂಡ್ ಹೆಚ್ಚಾಗಿದ್ದು ಗೊತ್ತೇಯಿದೆ. ಕಳೆದೊಂದು ದಶಕಗಳಲ್ಲಿ ಪೌರಾಣಿಕ, ಐತಿಹಾಸಿಕ ಚಿತ್ರಗಳ ಆರ್ಭಟ ಶುರುವಾಗಿದೆ. ಪ್ಯಾನ್ ಇಂಡಿಯಾ ಟ್ರೆಂಡ್ ಹಾಗೂ ತಂತ್ರಜ್ಞಾನದ ಅಭಿವೃದ್ಧಿ ನಮ್ಮ ಪುರಾಣಗಳು, ಮಹಾಕಾವ್ಯಾಗಳು, ಐತಿಹಾಸಿಕ ಘಟನೆಗಳು, ಕಥೆಗಳನ್ನು ಮತ್ತೆ ತೆರೆಮೇಲೆ ನೋಡುವಂತೆ ಮಾಡಿದೆ.
'ರಾಮಾಯಣ' ಸರಣಿ ಸಿನಿಮಾಗಳಲ್ಲಿ ಯಶ್ ನಟಿಸುತ್ತಿದ್ದಾರೆ. ರಾವಣನಾಗಿ ಅಬ್ಬರಿಸುವುದರ ಜೊತೆ ನಿರ್ಮಾಪಕನಾಗಿ ಕೂಡ ಕೈ ಜೋಡಿಸಿದ್ದಾರೆ. ಅದಕ್ಕೂ ಮುನ್ನ 'ಟಾಕ್ಸಿಕ್' ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದ್ದಾರೆ. ಮಾರ್ಚ್ 19ಕ್ಕೆ ಈ ಸಿನಿಮಾ ತೆರೆಗೆ ಬರಲಿದೆ. ದೀಪಾವಳಿಗೆ 'ರಾಮಾಯಣ' ಚಿತ್ರದ ಮೊದಲ ಭಾಗ ಬಿಡುಗಡೆ ಆಗಲಿದೆ. ಮುಂದಿನ ವರ್ಷ ದೀಪಾವಳಿಗೆ 2ನೇ ಭಾಗ ತೆರೆಗಪ್ಪಳಿಸಲಿದೆ.

ಈ 3 ಸಿನಿಮಾಗಳ ಬಳಿಕ ಯಶ್ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಕೆಲವರಲ್ಲಿದೆ. 'ರಾಮಾಯಣ' ಸರಣಿ ಬಳಿಕ ಮತ್ತೊಂದು ಪೌರಾಣಿಕ ಚಿತ್ರದಲ್ಲಿ ಯಶ್ ನಟಿಸುತ್ತಿದ್ದಾರೆ ಎನ್ನುವ ಗುಸುಗುಸು ಫಿಲ್ಮ್ ನಗರ್ನಲ್ಲಿ ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಇದೇ ಈಗ ಹಾಟ್ ಟಾಪಿಕ್ ಆಗಿದೆ. ತೆಲುಗು ನಿರ್ದೇಶಕರೊಬ್ಬರು ಯಶ್ ಜೊತೆ ಸಿನಿಮಾ ಮಾಡಲು ಮಾತುಕತೆ ನಡೆಸುತ್ತಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ.
ಬರೀ ಆಕ್ಷನ್ ಸಿನಿಮಾಗಳಲ್ಲಿ ನಟಿಸುತ್ತಾ ಬಂದ ಯಶ್ 'ರಾಮಾಯಣ' ಚಿತ್ರದ ರಾವಣನ ಪಾತ್ರ ಒಪ್ಪಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಇದು ಮತ್ತಷ್ಟು ಇಂತಹ ಪಾತ್ರಗಳಿಗೆ ಅವರನ್ನು ಪ್ರೇರೇಪಿಸುವ ಸಾಧ್ಯತೆ ದಟ್ಟವಾಗಿದೆ. ಎಕ್ಸೈಟಿಂಗ್ ಅನ್ನಿಸುವಂತಹ ಪಾತ್ರಗಳನ್ನು ಯಶ್ ಒಪ್ಪಿಕೊಳ್ಳುತ್ತಾರೆ. ಸದ್ಯ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾಗಳು ನಿರ್ಮಾಣವಾಗ್ತಿದೆ. ಹಾಗಾಗಿ ಪರಭಾಷೆಯ ತಂತ್ರಜ್ಞರು, ಕಲಾವಿದರ ಜೊತೆ ಕೈ ಜೋಡಿಸುವುದರಲ್ಲಿ ಅಚ್ಚರಿ ಏನಿಲ್ಲ.

ದಶಕಗಳ ಹಿಂದೆ ತೆಲುಗಿನಲ್ಲಿ ಸಾಕಷ್ಟು ಪೌರಾಣಿಕ ಹಾಗೂ ಐತಿಹಾಸಿಕ ಸಿನಿಮಾಗಳು ನಿರ್ಮಾಣವಾಗುತ್ತಿದ್ದವು. ಎನ್ಟಿಆರ್, ನಾಗೇಶ್ವರ ರಾವ್, ಎಸ್. ವಿ ರಂಗಾರಾವ್ ರೀತಿಯ ಕಲಾವಿದರು ಇಂತಹ ಪಾತ್ರಗಳಲ್ಲಿ ಸೊಗಸಾಗಿ ನಟಿಸುತ್ತಿದ್ದರು. ಕನ್ನಡದಲ್ಲಿ ಅಣ್ಣಾವ್ರು ಸಾಕಷ್ಟು ಪೌರಾಣಿಕ ಹಾಗೂ ಐತಿಹಾಸಿಕ ಪಾತ್ರಗಳಲ್ಲಿ ನಟಿಸಿ ಗೆದ್ದಿದ್ದರು. ರಾಮಾಯಣ ಕಾವ್ಯವನ್ನು ಆಧರಿಸಿ ಬಾಲಿವುಡ್ನಲ್ಲಿ 'ಆದಿಪುರುಷ್' ಸಿನಿಮಾ ನಿರ್ಮಾಣವಾಗಿತ್ತು. ಶ್ರೀರಾಮನಾಗಿ ಪ್ರಭಾಸ್ ನಟಿಸಿದ್ದು ಗೊತ್ತೇಯಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಗೆಲ್ಲಲಿಲ್ಲ.
7 ವರ್ಷಗಳ ಹಿಂದೆ ಕನ್ನಡದಲ್ಲಿ 'ಕುರುಕ್ಷೇತ್ರ' ಸಿನಿಮಾ ನಿರ್ಮಾಣವಾಗಿತ್ತು. ದುರ್ಯೋಧನನಾಗಿ ದರ್ಶನ್ ನಟಿಸಿದ್ದರು. ಇಂತಹ ಪ್ರಯತ್ನಗಳು ಮತ್ತೆ ಶುರುವಾಗಿದೆ. ಕಾಲ್ಪನಿಕ ಕಥಾಹಂದರದ 'ಜೈ ಹನುಮಾನ್' ಚಿತ್ರದಲ್ಲಿ ರಿಷಬ್ ಶೆಟ್ಟಿ ನಟಿಸುತ್ತಿದ್ದಾರೆ. ತೆಲುಗು ನಿರ್ದೇಶಕ ಪ್ರಶಾಂತ್ ವರ್ಮ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ತೆಲುಗು ಪೌರಾಣಿಕ ಚಿತ್ರದಲ್ಲಿ ಯಶ್ ನಟಿಸುವ ಬಗ್ಗೆ ಅಧಿಕೃತವಾಗಿ ಯಾರು ಮಾತನಾಡಿಲ್ಲ. 'ಕೆಜಿಎಫ್'- 2 ಬಳಿಕ ಯಶ್ ಮುಂದಿನ ಸಿನಿಮಾ ಯಾವುದು ಎನ್ನುವ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಅವರೊಟ್ಟಿಗೆ ಸಿನಿಮಾ ಮಾಡ್ತಾರೆ, ಈ ಕಥೆಯಲ್ಲಿ ನಟಿಸ್ತಾರೆ ಅಂತೆಲ್ಲಾ ಊಹಾಪೋಹಗಳು ಕೇಳಿಬಂದಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿ ನನ್ನ ಸಿನಿಮಾ ಬಗ್ಗೆ ನಾನೇ ಮಾತನಾಡುವರೆಗೂ ಯಾವುದನ್ನು ನಂಬಲು ಹೋಗಬೇಡಿ. ಏನಾದರೂ ಇದ್ದರೆ ನಾನೇ ಹೇಳ್ತೀನಿ ಎಂದಿದ್ದರು.
ಸದ್ಯ ರಾಕಿಂಗ್ ಸ್ಟಾರ್ ಅಭಿಮಾನಿಗಳ ಕಣ್ಣು ಮಾರ್ಚ್ 19ರ ಮೇಲೆ ನೆಟ್ಟಿದೆ. ಬಾಲಿವುಡ್ 'ಧುರಂಧರ್- 2' ಸಿನಿಮಾ ಎದುರು ಆ ದಿನ 'ಟಾಕ್ಸಿಕ್' ಚಿತ್ರ ತೆರೆಗೆ ಬರಲಿದೆ. ದೊಡ್ಡಮಟ್ಟದಲ್ಲಿ ಬಾಕ್ಸಾಫೀಸ್ ಕ್ಲ್ಯಾಶ್ ನಿರೀಕ್ಷಿಸಲಾಗುತ್ತಿದೆ.


Click it and Unblock the Notifications











